ಹರಿಯೆ ಚಿತ್ತಯಿಸೈಯಹಿಂಸಾ
ಪರಮಧರ್ಮವು ಎಂಬ ವಾಕ್ಯದ
ಸರಣಿ ಸಾರೋದ್ಧಾರವಲ್ಲಾ ಸಕಲದರುಶನಕೆ
ನೆರವಿಯಿನಿಬರ ತನ್ನವರ ಕೊರ
ಳರಿತದಲಿ ಕೊಕ್ಕರಿಸದಿರ್ದಡೆ
ನರಕದೊಳು ನೂರೊಂದು ಕುಲ ಮುಳುಗಾಡದಿರದೆಂದ (ಭೀಷ್ಮ ಪರ್ವ, ೩ ಸಂಧಿ, ೫೨ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನೇ ಕೇಳು, ಅಹಿಂಸೆಯೇ ಅತಿ ಶ್ರೇಷ್ಠವಾದ ಧರ್ಮ ಎಂಬುದು ಹಿಂದಿನಿಂದಲೂ ಎಲ್ಲ ದರ್ಶನಗಳ ಸಾರವಾಗಿದೆ. ತನ್ನವರನ್ನೂ, ಸಕಲ ಸೈನ್ಯವನ್ನೂ ಸಂಹರಿಸಿದರೆ ನೂರೊಂದು ಕುಲಗಳು ನರಕದಲ್ಲಿ ಮುಳುಗುವುದಿಲ್ಲವೇ ಎಂದು ಅರ್ಜುನನು ಪ್ರಶ್ನಿಸಿದನು.
ಅರ್ಥ:
ಹರಿ: ಕೃಷ್ಣ; ಚಿತ್ತಯಿಸು: ಗಮನವಿಟ್ಟು ಕೇಳು; ಅಹಿಂಸೆ: ನೋವಿಲ್ಲದ; ಪರಮ: ಶ್ರೇಷ್ಠ; ಧರ್ಮ: ನಡತೆ; ವಾಕ್ಯ: ನುಡಿ; ಸರಣಿ: ಹಾದಿ; ಸಾರ: ಸತ್ವ; ಉದ್ಧಾರ: ಮೇಲಕ್ಕೆ ಎತ್ತುವುದು; ಸಕಲ: ಎಲ್ಲಾ; ದರುಶನ: ಅವಲೋಕನ; ನೆರವಿ: ಗುಂಪು; ಇನಿಬರು: ಇಷ್ಟು ಜನ; ಕೊರಳು: ಗಂಟಲು;ಆರಿ: ಕತ್ತರಿಸು; ಕೊಕ್ಕರಿಸು: ಅಸಹ್ಯಪಡು; ನರಕ: ಅಧೋಲೋಕ; ಕುಲ: ವಂಶ; ಮುಳುಗು: ಮರೆಯಾಗು;
ಪದವಿಂಗಡಣೆ:
ಹರಿಯೆ +ಚಿತ್ತಯಿಸೈ+ಅಹಿಂಸಾ
ಪರಮಧರ್ಮವು +ಎಂಬ +ವಾಕ್ಯದ
ಸರಣಿ +ಸಾರ+ಉದ್ಧಾರವಲ್ಲಾ +ಸಕಲ+ದರುಶನಕೆ
ನೆರವಿ+ಇನಿಬರ+ ತನ್ನವರ+ ಕೊರಳ್
ಅರಿತದಲಿ +ಕೊಕ್ಕರಿಸದಿರ್ದಡೆ
ನರಕದೊಳು +ನೂರೊಂದು +ಕುಲ +ಮುಳುಗಾಡದಿರದೆಂದ
ಅಚ್ಚರಿ:
(೧) ಎಲ್ಲಾ ದರ್ಶನದ ಸಾರ: ಅಹಿಂಸಾ ಪರಮಧರ್ಮವು