ಧಾತುಗೆಟ್ಟನು ಭೀಮ ಮುಸುಕಿತು
ಭೀತಿ ನಮ್ಮೆಲ್ಲರನು ದೈವ
ವ್ರಾತವಾತನ ಕೊಂಡು ಕೊನರಿತು ಹೊಯ್ದು ಹೂಮಳೆಯ
ಪಾತಕಕೆ ಪಡವಾಗದಮಲ
ಖ್ಯಾತಿ ನೋಯದೆ ವಿಜಯಸಿರಿ ರಾ
ಗಾತಿಯದಲಿ ನಮ್ಮ ರಮಿಸುವ ದೆಸೆಯ ಬೆಸಸೆಂದ (ಗದಾ ಪರ್ವ, ೭ ಸಂಧಿ, ೪೫ ಪದ್ಯ)
ತಾತ್ಪರ್ಯ:
ಅರ್ಜುನನು ಕೃಷ್ಣನೊಂದಿಗೆ ಮಾತನಾಡುತ್ತಾ, ಭೀಮನು ಬಲುಗುಂದಿ ಮೂರ್ಛಿತನಾಗಿದ್ದಾನೆ. ನಾವು ಭೀತರಾಗಿದ್ದೇವೆ. ದೇವತೆಗಳು ಹೂಮಳೆಗರೆದು ವೈರಿಯನ್ನು ಸಂಭಾವಿಸಿತು. ನಾವು ಪಾಪಕ್ಕೀಡಾಗದಿರುವೆವೇ? ನಮ್ಮ ಕೀರ್ತಿಗೆ ಭಂಗಬಾರದೇ? ವಿಜಯಲಕ್ಷ್ಮಿಯು ನಮ್ಮನ್ನು ವರಿಸುವ ಬಗೆಯೇನು ಎಂದು ಪ್ರಶ್ನಿಸಿದನು.
ಅರ್ಥ:
ಧಾತು: ತೇಜಸ್ಸು; ಕೆಟ್ಟು: ಹಾಳಾಗು; ಮುಸುಕು: ಮಂಕಾಗು, ಹೊದಿಕೆ; ಭೀತಿ: ಭಯ; ದೈವ: ದೇವತೆ, ಅಮರರು, ಭಗವಂತ; ವ್ರಾತ: ಗುಂಪು; ಕೊಂಡು: ಹೊಗಳು; ಕೊನರು: ಏಳಿಗೆಯಾಗು; ಹೊಯ್ದು: ಹೊಡೆ; ಹೂಮಳೆ: ಪುಷ್ಪವೃಷ್ಟಿ; ಪಾತಕ: ಪಾಪಿ, ದುಷ್ಟ; ಅಮಳ: ನಿರ್ಮಲ; ಖ್ಯಾತಿ: ಪ್ರಸಿದ್ಧ; ನೋವು: ಬೇನೆ, ಶೂಲೆ; ವಿಜಯ: ಗೆಲುವು; ಸಿರಿ: ಐಶ್ವರ್ಯ; ರಾಗ: ಪ್ರೀತಿ, ಮೋಹ, ಸಂತಸ; ರಮಿಸು: ಪ್ರೀತಿಸು; ದೆಸೆ: ದಿಕ್ಕು; ಬೆಸಸು: ಹೇಳು, ಆಜ್ಞಾಪಿಸು;
ಪದವಿಂಗಡಣೆ:
ಧಾತುಗೆಟ್ಟನು+ ಭೀಮ +ಮುಸುಕಿತು
ಭೀತಿ ನಮ್ಮೆಲ್ಲರನು+ ದೈವ
ವ್ರಾತವಾತನ +ಕೊಂಡು +ಕೊನರಿತು +ಹೊಯ್ದು +ಹೂಮಳೆಯ
ಪಾತಕಕೆ +ಪಡವಾಗದ್+ ಅಮಲ
ಖ್ಯಾತಿ+ ನೋಯದೆ +ವಿಜಯಸಿರಿ +ರಾ
ಗಾತಿಯದಲಿ +ನಮ್ಮ+ ರಮಿಸುವ +ದೆಸೆಯ +ಬೆಸಸೆಂದ
ಅಚ್ಚರಿ:
(೧) ಜೋಡಿ ಪದಗಳು – ಕೊಂಡು ಕೊನರಿತು; ಹೊಯ್ದು ಹೂಮಳೆಯ
(೨) ಗೆಲ್ಲುವ ಬಗೆಯನ್ನು ಕೇಳುವ ಪರಿ – ವಿಜಯಸಿರಿ ರಾಗಾತಿಯದಲಿ ನಮ್ಮ ರಮಿಸುವ ದೆಸೆಯ ಬೆಸಸೆಂದ