ಬಹು ವಿಪತ್ತಿನ ಶರಕೆ ಜೋಡೆಂ
ದಿಹುದಲಾ ಸುವಿವೇಕಗತಿ ನಿ
ರ್ದಹಿಸದೇ ಶೋಕಾಗ್ನಿ ಧರ್ಮದ್ರುಮದ ಬೇರುಗಳ
ಅಹಿತರೇ ಜನಿಸಿದಡೆ ಸುತರೆನ
ಬಹುದೆ ದುರ್ಯೋಧನನು ಹಗೆ ನಿನ
ಗಿಹಪರದ ಸುಖಗತಿಗೆ ಸಾಧನ ಧರ್ಮಸುತನೆಂದ (ಗದಾ ಪರ್ವ, ೧೧ ಸಂಧಿ, ೧೨ ಪದ್ಯ)
ತಾತ್ಪರ್ಯ:
ವ್ಯಾಸರು ತಮ್ಮ ನುಡಿಯನ್ನು ಮುಂದುವರಿಸುತ್ತಾ, ವಿಪತ್ತೆಂಬ ಬಾನಕ್ಕೆ ವಿವೇಕವೆನ್ನುವುದೇ ರಕ್ಶಣೆಯ ಕವಚ. ಶೋಕಾಗ್ನಿಗೆ ತುತ್ತಾದರೆ ಧರ್ಮವೆಮ್ಬ ವೃಕ್ಷದ ಬೇರುಗಳೂ ಉರಿದು ಹೋಗುತ್ತವೆ. ಶತ್ರುಗಳೇ ಸಮ್ತಾನವಾದರೆ ಅವರನ್ನು ಮಕ್ಕಳೆನ್ನಬಹುದೇ? ದುರ್ಯೋಧನನು ನಿನ್ನ ಶತ್ರು. ಈ ಲೋಕ ಪರಲೋಕಗಲ ಸುಖಕ್ಕೆ ಯುಧಿಷ್ಠಿರನೇ ಸಾಧನ ಎಂದು ಬೋಧಿಸಿದರು.
ಅರ್ಥ:
ಬಹು: ಬಹಳ; ವಿಪತ್ತು: ತೊಂದರೆ; ಶರ: ಬಾಣ; ಜೋಡು: ಜೊತೆ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಗತಿ: ವೇಗ; ದಹಿಸು: ಸುಡು; ಶೋಕ: ದುಃಖ; ಅಗ್ನಿ: ಬೆಂಕಿ; ದ್ರುಮ: ಮರ, ವೃಕ್ಷ; ಬೇರು: ಬುಡ; ಅಹಿತ: ಶತ್ರು; ಜನಿಸು: ಹುಟ್ಟು; ಸುತ: ಮಕ್ಕಳು; ಹಗೆ: ವೈರಿ; ಇಹಪರ: ಈ ಲೋಕ ಮತ್ತು ಪರಲೋಕ; ಸುಖ: ಸಂತಸ, ನೆಮ್ಮದಿ; ಗತಿ: ಗಮನ, ಸಂಚಾರ; ಸಾಧನ: ಕಾರಣ, ಹೇತು, ನಿಮಿತ್ತ; ಸುತ: ಮಗ;
ಪದವಿಂಗಡಣೆ:
ಬಹು +ವಿಪತ್ತಿನ+ ಶರಕೆ+ ಜೋಡೆಂದ್
ಇಹುದಲಾ +ಸುವಿವೇಕಗತಿ +ನಿ
ರ್ದಹಿಸದೇ +ಶೋಕಾಗ್ನಿ +ಧರ್ಮದ್ರುಮದ +ಬೇರುಗಳ
ಅಹಿತರೇ +ಜನಿಸಿದಡೆ +ಸುತರ್+ಎನ
ಬಹುದೆ +ದುರ್ಯೋಧನನು +ಹಗೆ +ನಿನಗ್
ಇಹಪರದ +ಸುಖಗತಿಗೆ +ಸಾಧನ +ಧರ್ಮಸುತನೆಂದ
ಅಚ್ಚರಿ:
(೧) ಲೋಕ ನೀತಿ – ಅಹಿತರೇ ಜನಿಸಿದಡೆ ಸುತರೆನಬಹುದೆ
(೨) ಯುಧಿಷ್ಠಿರನನ್ನು ಹೊಗಳುವ ಪರಿ – ನಿನಗಿಹಪರದ ಸುಖಗತಿಗೆ ಸಾಧನ ಧರ್ಮಸುತ
(೩) ರೂಪಕದ ಪ್ರಯೋಗ – ವಿಪತ್ತಿನ ಶರಕೆ ಜೋಡೆಂದಿಹುದಲಾ ಸುವಿವೇಕಗತಿ