ಬೇಯದೆನ್ನೆದೆ ಶೋಕವಹ್ನಿಯ
ಬಾಯಲಕಟಾ ಕರ್ಣ ಕೌರವ
ರಾಯನಳಿವಿನಲುಳಿವ ಪುತ್ರ ದ್ರೋಹಿಯಾರಿನ್ನು
ಸಾಯಿಸುವ ಸಾವಂಜಿತೆನಗೆ ಚಿ
ರಾಯು ತೊಡರಿಕ್ಕಿದೆನು ಮಾರ್ಕಂ
ಡೇಯ ಮುನಿಗೆಂದರಸ ಧೊಪ್ಪನೆ ಕೆಡೆದನವನಿಯಲಿ (ಶಲ್ಯ ಪರ್ವ, ೧ ಸಂಧಿ, ೩ ಪದ್ಯ)
ತಾತ್ಪರ್ಯ:
ಶೋಕಾಗ್ನಿಯಿಂದ ನನ್ನೆದೆ ಬೆಂದುಹೋಗಲೇ ಇಲ್ಲ. ಅಯ್ಯೋ ಕೌರವನ ಮರಣವಾದ ಮೇಲೆ ಉಳಿದ ಪುತ್ರದ್ರೋಹಿ ಯಾರು? ನಾನಲ್ಲವೇ? ಕೊಲ್ಲುವ ಸಾವು ನನಗೆ ಹೆದರಿ ಸುಮ್ಮನಾಯಿತೇ? ಮಾರ್ಕಂಡೇಯ ಮುನಿ ಜೊತೆಗೆ ಪಂಥಕಟ್ಟಿ ಅವನಿಗಿಂತ ಹೆಚ್ಚು ದಿನ ಬದುಕುವೆನೋ ಏನೋ ಎನ್ನುತ್ತಾ ಧೃತರಾಷ್ಟ್ರನು ಧೊಪ್ಪನೆ ಭೂಮಿಯ ಮೇಲೆ ಬಿದ್ದನು.
ಅರ್ಥ:
ಬೇಯು: ಸುಡು, ದಹಿಸು; ಸಂಕಟಕ್ಕೊಳಗಾಗು; ಎದೆ: ವಕ್ಷಸ್ಥಳ, ಹೃದಯ; ಶೋಕ: ದುಃಖ; ವಹ್ನಿ: ಬೆಂಕಿ; ಅಕಟಾ: ಅಯ್ಯೋ; ರಾಯ: ರಾಜ; ಅಳಿ: ನಾಶ; ಉಳಿವ: ಮಿಕ್ಕ; ಪುತ್ರ: ಸುತ; ದ್ರೋಹಿ: ಮೋಸಗಾರ, ಪಾಪಿ; ಸಾಯಿಸು: ಸಂಹರಿಸು; ಸಾವು: ಮರಣ; ಅಂಜು: ಹೆದರು; ಚಿರಾಯು: ಸಾವಿಲ್ಲದ; ತೊಡರು: ಸಂಕೋಲೆ, ಸರಪಳಿ; ಮುನಿ: ಋಷಿ; ಅರಸ: ರಾಜ; ಧೊಪ್ಪನೆ: ಕೂಡಲೆ, ಒಮ್ಮೆಲೆ; ಕೆಡೆ: ಕುಸಿ; ಅವನಿ: ಭೂಮಿ;
ಪದವಿಂಗಡಣೆ:
ಬೇಯದ್+ಎನ್ನೆದೆ +ಶೋಕ+ವಹ್ನಿಯ
ಬಾಯಲ್+ಅಕಟಾ +ಕರ್ಣ +ಕೌರವ
ರಾಯನ್+ಅಳಿವಿನಲ್+ಉಳಿವ +ಪುತ್ರ +ದ್ರೋಹಿಯಾರಿನ್ನು
ಸಾಯಿಸುವ +ಸಾವ್+ಅಂಜಿತ್+ಎನಗೆ +ಚಿ
ರಾಯು +ತೊಡರಿಕ್ಕಿದೆನು+ ಮಾರ್ಕಂ
ಡೇಯ +ಮುನಿಗೆಂದ್+ಅರಸ +ಧೊಪ್ಪನೆ +ಕೆಡೆದನ್+ಅವನಿಯಲಿ
ಅಚ್ಚರಿ:
(೧) ದುಃಖದ ತೀವ್ರತೆಯನ್ನು ವಿವರಿಸುವ ಪರಿ – ಸಾಯಿಸುವ ಸಾವಂಜಿತೆನಗೆ