ಉಗಿದು ಬಿಲ್ಲಿನ ತಿರುವ ಕೊರಳಲಿ
ಬಿಗಿಯೆ ಭಯದಲಿ ದ್ರುಪದಸುತ ಬೆರ
ಳುಗಳ ಬಾಯಲಿ ಬೇಡಿಕೊಂಡನು ದ್ರೋಣನಂದನನ
ಉಗಿದಡಾಯ್ದದಲೆನ್ನ ಶಿರವನು
ತೆಗೆದು ಕಳೆಯೈ ಶಸ್ತ್ರಘಾತದಿ
ನುಗುಳಿಸಸುವನು ತನಗೆ ವೀರಸ್ವರ್ಗವಹುದೆಂದ (ಗದಾ ಪರ್ವ, ೯ ಸಂಧಿ, ೩೦ ಪದ್ಯ)
ತಾತ್ಪರ್ಯ:
ಅಶ್ವತ್ಥಾಮನು ತನ್ನ ಬಿಲ್ಲನ್ನು ತೆಗೆದು, ಅದರ ಹೆದೆಯನ್ನು ಧೃಷ್ಟದ್ಯುಮ್ನನ ಕೊರಳಿಗೆ ಬಿಗಿದನು. ಭಯಗೊಂಡ ಧೃಷ್ಟದ್ಯುಮ್ನನು ಬಾಯಲ್ಲಿ ಬೆರಳಿಟ್ಟುಕೊಂಡು ಅಶ್ವತ್ಥಾಮನಲ್ಲಿ ಬೇಡಿದನು, “ಕತ್ತಿಯನ್ನು ಹಿರಿದು ಕೊರಳನ್ನು ಕೊಯ್ದು ನನ್ನ ಶಿರವನ್ನು ತೆಗೆ, ಹಾಗಾದರೆ ನನಗೆ ವೀರಸ್ವರ್ಗ ದೊರೆಯುತ್ತದೆ” ಎಂದನು.
ಅರ್ಥ:
ಉಗಿ: ಹೊರಹಾಕು; ಬಿಲ್ಲು: ಚಾಪ; ತಿರುವು: ತಿರುಗಿಸು; ಕೊರಳು: ಗಂಟಲು; ಬಿಗಿ: ಭದ್ರವಾಗಿರುವುದು; ಭಯ: ಹೆದರು; ಸುತ: ಮಗ; ಬೆರಳು: ಅಂಗುಲಿ; ಬೇಡು: ಯಾಚಿಸು; ನಂದನ: ಮಗ; ಶಿರ: ತಲೆ; ತೆಗೆ: ಹೊರತರು; ಕಳೆ: ಬೀಡು, ತೊರೆ; ಶಸ್ತ್ರ: ಆಯುಧ; ಘಾತ: ಪೆಟ್ಟು; ಉಗುಳು: ಉಗಿ, ಹೊರಹಾಕು; ಅಸು: ಪ್ರಾಣ; ಸ್ವರ್ಗ: ನಾಕ;
ಪದವಿಂಗಡಣೆ:
ಉಗಿದು +ಬಿಲ್ಲಿನ +ತಿರುವ +ಕೊರಳಲಿ
ಬಿಗಿಯೆ +ಭಯದಲಿ +ದ್ರುಪದಸುತ +ಬೆರ
ಳುಗಳ +ಬಾಯಲಿ +ಬೇಡಿಕೊಂಡನು +ದ್ರೋಣ+ನಂದನನ
ಉಗಿದಡ್+ಆಯ್ದದಲ್+ಎನ್ನ+ ಶಿರವನು
ತೆಗೆದು +ಕಳೆಯೈ +ಶಸ್ತ್ರ+ಘಾತದಿನ್
ಉಗುಳಿಸ್+ಅಸುವನು +ತನಗೆ +ವೀರಸ್ವರ್ಗವ್+ಅಹುದೆಂದ
ಅಚ್ಚರಿ:
(೧) ಉಗಿ, ಬಿಗಿ – ಪ್ರಾಸ ಪದಗಳು
(೨) ಸುತ, ನಂದನ – ಸಮಾನಾರ್ಥಕ ಪದ
(೩) ಪ್ರಾಣ ತೆಗೆ ಎಂದು ಹೇಳುವ ಪರಿ – ಶಸ್ತ್ರಘಾತದಿ ನುಗುಳಿಸಸುವನು