ಪದ್ಯ ೨೦: ಪಾಂಡವರು ಹೇಗೆ ದುಃಖಿಸಿದರು?

ಬೊಪ್ಪ ದೇಸಿಗರಾದೆವೈ ವಿಧಿ
ತಪ್ಪಿಸಿತಲಾ ನಮ್ಮ ಭಾಗ್ಯವ
ನೊಪ್ಪಿಸಿದೆ ನೀನಾರಿಗೆಮ್ಮನು ಪೂರ್ವಕಾಲದಲಿ
ಮುಪ್ಪಿನಲಿ ನಿನಗೀಯವಸ್ಥೆಯಿ
ದೊಪ್ಪುದೇ ಹೇರಡವಿಯಲಿ ಮಲ
ಗಿಪ್ಪುದೇಕೆಂದೊರಲಿ ಮರುಗಿದರಾ ಕುಮಾರಕರು (ಆದಿ ಪರ್ವ, ೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ಅಪ್ಪಾ, ನಾವು ಅನಾಥರಾದೆವು. ನಮ್ಮ ಭಾಗ್ಯವನ್ನು ವಿಧಿಯು ಸೆಳೆದುಕೊಂಡಿತು. ನಮ್ಮನ್ನು ಯಾರಿಗೊಪ್ಪಿಸಿ ಹೋದೆ? ಈ ಮುಪ್ಪಿನಲ್ಲಿ ಅಡವಿಯಲ್ಲಿ ಹೀಗೆ ಮಲಗಿರುವುದೇಕೆ? ನಿನಗೆ ಇದು ಒಪ್ಪುತ್ತದೆಯೇ? ಎಂದು ಪಾಂಡವರು ದುಃಖಿಸಿದರು.

ಅರ್ಥ:
ಬೊಪ್ಪ: ಅಪ್ಪ, ತಂದೆ; ದೇಸಿಗ: ಅನಾಥ; ವಿಧಿ: ನಿಯಮ; ತಪ್ಪಿಸು: ಅಡ್ಡಿಮಾಡು; ಭಾಗ್ಯ: ಶುಭ; ಒಪ್ಪಿಸು: ಸಮರ್ಪಿಸು; ಪೂರ್ವ: ಹಿಂದೆ; ಕಾಲ: ಸಮಯ; ಮುಪ್ಪು: ವಯಸ್ಸಾದ ಸ್ಥಿತಿ; ಅವಸ್ಥೆ: ಸ್ಥಿತಿ; ಒಪ್ಪು: ಸರಿಹೊಂದು; ಹೇರಡವಿ: ದಟ್ಟವಾದ ಕಾಡು; ಮಲಗು: ನಿದ್ರಿಸು; ಒರಲು: ಅರಚು; ಮರುಗು: ತಳಮಳ, ಸಂಕಟ; ಕುಮಾರಕರು: ಮಕ್ಕಳು;

ಪದವಿಂಗಡಣೆ:
ಬೊಪ್ಪ +ದೇಸಿಗರಾದೆವೈ +ವಿಧಿ
ತಪ್ಪಿಸಿತಲಾ +ನಮ್ಮ+ ಭಾಗ್ಯವನ್
ಒಪ್ಪಿಸಿದೆ +ನೀನಾರಿಗ್+ಎಮ್ಮನು +ಪೂರ್ವ+ಕಾಲದಲಿ
ಮುಪ್ಪಿನಲಿ +ನಿನಗೀ+ಅವಸ್ಥೆ+ಇದ್
ಒಪ್ಪುದೇ +ಹೇರಡವಿಯಲಿ +ಮಲ
ಗಿಪ್ಪುದ್+ಏಕೆಂದ್+ಒರಲಿ +ಮರುಗಿದರಾ+ ಕುಮಾರಕರು

ಅಚ್ಚರಿ:
(೧) ದುಃಖವನ್ನು ವಿವರಿಸುವ ಪರಿ – ದೇಸಿಗರಾದೆವೈ ವಿಧಿತಪ್ಪಿಸಿತಲಾ ನಮ್ಮ ಭಾಗ್ಯವ

ಪದ್ಯ ೧: ಧರ್ಮಜನು ಏನೆಂದು ಚಿಂತಿಸಿದನು?

ದೃಗುಯುಗಳ ನೀರೇರಿದವು ಸೆರೆ
ಬಿಗಿದು ಹಲುಬಿದನಕಟ ಕಡು ದೇ
ಸಿಗನು ತಾ ತನ್ನೊಡನೆ ಫಲುಗುಣನೇಕೆ ಜನಿಸಿದನೊ
ಹಗೆಯ ಹರಿವಿಂಗೊಪ್ಪುಗೊಟ್ಟೆನು
ಮಗನಳಲು ಮಿಗೆ ಹೂಣೆ ಹೊಕ್ಕನು
ಮಗುಳಲರಿಯನು ತಮ್ಮನೆನುತವನೀಶ ಚಿಂತಿಸಿದ (ದ್ರೋಣ ಪರ್ವ, ೧೨ ಸಂಧಿ, ೧ ಪದ್ಯ)

ತಾತ್ಪರ್ಯ:
ಕೃಷ್ಣನ ಪಾಂಚಜನ್ಯ ಧ್ವನಿಯನ್ನು ಕೇಳಿ ಯುಧಿಷ್ಠಿರನ ಕಣ್ಣುಗಳಲ್ಲಿ ನೀರು ತುಂಇದವು. ಗಂಟಲು ಗದ್ಗದವಾಯಿತು. ನಾನು ಅನಾಥ, ಅರ್ಜುನನು ನನ್ನೊಡನೆ ಏಕೆ ಹುಟ್ತಿದನೋ ಏನೋ, ಮಗನ ಮರಣದಿಂದ ಅತಿಶಯ ದುಃಖಕ್ಕೆ ಪಕ್ಕಾಗಿ ಶತ್ರುಸೈನ್ಯದೊಳಕ್ಕೆ ಅವನು ಹೊಕ್ಕ, ನಾನೋ ಅವನನ್ನು ಕಳಿಸಿಕೊಟ್ಟೆ, ಅವನು ಹಿಂದಿರುಗಲಾರ ಎಂದು ಧರ್ಮಜನ ಚಿಂತಿಸಿದನು.

ಅರ್ಥ:
ದೃಗು: ಕಣ್ಣು; ಯುಗಳ: ಎರಡು; ನೀರು: ಜಲ; ಏರು: ಹೆಚಾಗು; ಸೆರೆ: ನರ, ಬಂಧನ; ಬಿಗಿ: ಬಂಧಿಸು; ಹಲುಬು: ದುಃಖಪಡು; ಅಕಟ: ಅಯ್ಯೋ; ಕಡು: ಬಹಳ; ದೇಸಿಗ: ದಿಕ್ಕಿಲ್ಲದವ, ಅನಾಥ; ಜನಿಸು: ಹುಟ್ಟು; ಹಗೆ: ವೈರಿ; ಹರಿ: ಚಲಿಸು, ಸೀಳು; ಒಪ್ಪು: ಒಪ್ಪಿಗೆ, ಸಮ್ಮತಿ; ಮಗ: ಸುತ; ಅಳಲು: ದುಃಖ; ಮಿಗೆ: ಹೆಚ್ಚು; ಹೂಣು: ಶಪಥಮಾಡು; ಹೊಕ್ಕು: ಸೇರು; ಮಗುಳ: ಹಿಂದಿರುಗು; ಅರಿ: ತಿಳಿ; ತಮ್ಮ; ಸಹೋದರ; ಅವನೀಶ: ರಾಜ; ಚಿಂತಿಸು: ಯೋಚಿಸು;

ಪದವಿಂಗಡಣೆ:
ದೃಗುಯುಗಳ +ನೀರೇರಿದವು+ ಸೆರೆ
ಬಿಗಿದು +ಹಲುಬಿದನ್+ಅಕಟ +ಕಡು +ದೇ
ಸಿಗನು +ತಾ +ತನ್ನೊಡನೆ +ಫಲುಗುಣನೇಕೆ+ ಜನಿಸಿದನೊ
ಹಗೆಯ+ ಹರಿವಿಂಗ್+ಒಪ್ಪು+ಕೊಟ್ಟೆನು
ಮಗನ್+ಅಳಲು +ಮಿಗೆ +ಹೂಣೆ +ಹೊಕ್ಕನು
ಮಗುಳಲ್+ಅರಿಯನು+ ತಮ್ಮನ್+ಎನುತ್+ಅವನೀಶ +ಚಿಂತಿಸಿದ

ಅಚ್ಚರಿ:
(೧) ಧರ್ಮಜನು ದುಃಖ ಪಟ್ಟ ಪರಿ – ದೃಗುಯುಗಳ ನೀರೇರಿದವು ಸೆರೆಬಿಗಿದು ಹಲುಬಿದನಕಟ ಕಡು ದೇ
ಸಿಗನು ತಾ

ಪದ್ಯ ೯೬: ಕೀಚಕನ ತಮ್ಮಂದಿರು ಹೇಗೆ ದುಃಖಿಸಿದರು?

ಆರು ಗತಿಯೆಮಗಕಟ ಕೀಚಕ
ವೀರ ದೇಸಿಗರಾದೆವಾವಿ
ನ್ನಾರ ಸೇರುವೆವೆನುತ ಹಲುಬಿದರವನ ತಕ್ಕೈಸಿ
ಕ್ರೂರ ಕರ್ಮರು ನಿನ್ನ ಕೊಂದವ
ರಾರು ಹಾಹಾಯೆನುತ ಹಲುಬಲು
ವಾರಿಜಾನನೆ ಮುಗುಳುನಗೆಯಲಿ ನೋಡಿದಳು ಖಳರ (ವಿರಾಟ ಪರ್ವ, ೩ ಸಂಧಿ, ೯೬ ಪದ್ಯ)

ತಾತ್ಪರ್ಯ:
ಕೀಚಕನ ತಮ್ಮಂದಿರು ಅವನ ದೇಹವನ್ನು ನೋಡಿ ದುಃಖತಪ್ತರಾಗಿ, ಅಯ್ಯೋ ವೀರ ಕೀಚಕನೇ, ನಮಗೆ ಇನ್ನಾರು ಗತಿ, ನಾವು ಅನಾಥರಾದೆವೆಂದು ದುಃಖಿಸಿ ಅವನ ದೇಹವನ್ನು ತಬ್ಬಿಕೊಂಡರು. ನಿನ್ನ ಕೊಂದ ಕ್ರೂರಿಗಳಾರು ಎನ್ನುತ್ತಾ ಹಾಹಾಕಾರ ಮಾಡುತ್ತಿರುವುದನ್ನು ದ್ರೌಪದಿಯು ನೋಡಿ ಮುಗುಳುನಗೆಯನ್ನು ಬೀರಿದಳು.

ಅರ್ಥ:
ಗತಿ: ಮಾರ್ಗ, ಸ್ಥಿತಿ; ಅಕಟ: ಅಯ್ಯೋ; ವೀರ: ಶೂರ; ದೇಸಿಗ:ದೇಶದ ನಿವಾಸಿ, ಅನಾಥ; ಸೇರು: ಜೊತೆ; ಹಲುಬು: ದುಃಖಪಡು; ತಕ್ಕೈಸು: ತಬ್ಬಿಕೊ; ಕ್ರೂರ: ದುಷ್ಟ; ಕರ್ಮ: ಕೆಲಸ; ಕೊಲ್ಲು: ಸಾಯಿಸು; ವಾರಿಜಾನನೆ: ಕಮಲದಂತ ಮುಖವುಳ್ಳವಳು (ದ್ರೌಪದಿ); ಮುಗುಳುನಗೆ: ಹಸನ್ಮುಖಿ; ನೋಡು: ವೀಕ್ಷಿಸು; ಖಳ: ದುಷ್ಟ;

ಪದವಿಂಗಡಣೆ:
ಆರು +ಗತಿ+ಎಮಗ್+ಅಕಟ +ಕೀಚಕ
ವೀರ +ದೇಸಿಗರಾದೆವಾವ್
ಇನ್ನಾರ +ಸೇರುವೆವೆನುತ +ಹಲುಬಿದರ್+ಅವನ +ತಕ್ಕೈಸಿ
ಕ್ರೂರ +ಕರ್ಮರು +ನಿನ್ನ +ಕೊಂದವ
ರಾರು +ಹಾಹಾ+ಎನುತ +ಹಲುಬಲು
ವಾರಿಜಾನನೆ +ಮುಗುಳುನಗೆಯಲಿ +ನೋಡಿದಳು +ಖಳರ

ಅಚ್ಚರಿ:
(೧) ದುಃಖವನ್ನು ಹೇಳುವ ಪರಿ – ಆರು ಗತಿಯೆಮಗಕಟ, ದೇಸಿಗರಾದೆವಾವ್