ಹಿಂಡೊಡೆದು ಮುಂಗುಡಿಯ ತಾ ಕಯಿ
ಕೊಂಡು ದೂವಾಳಿಯಲಿ ರಥವನು
ಮಂಡಳಿಸಿ ಕೆಲ್ಲಯಿಸಿ ಲುಳಿಯಲಿ ಲಲಿತಪೇರಯವ
ಚಂಡಗತಿಚಾಳನೆಯಲುಬ್ಬಟೆ
ಗೊಂಡಿಸದೆ ವೇಡೆಯವ ಕೊಳ್ಳದೆ
ಗಾಂಡಿವಿಯ ಕೈಮನದ ಲಾಗನು ಪಡೆದನಸುರಾರಿ (ಭೀಷ್ಮ ಪರ್ವ, ೩ ಸಂಧಿ, ೩ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ರಥವನ್ನು ಪಾಂಡವ ಸೈನ್ಯದ ಮುಂಭಾಗಕ್ಕೆ ನಡೆಸಿ ತಂದು ಸುತ್ತಲೂ ನೋಡಿ ರಥವನ್ನು ಸುತ್ತು ನಡೆಸಿ, ವೇಗದಿಂದ ಮನೋಹರವಾಗಿ ಮುಂದುವರಿಸಿ, ಕುದುರೆಗಳ ಗತಿಯನ್ನು ಒಂದು ಚೌಕಟ್ಟಿನಲ್ಲೇ ಉಳಿಸಿಕೊಂಡು ಬರಲು, ಅರ್ಜುನನು ಇದನ್ನು ಅನುಮೋದಿಸಿದನು.
ಅರ್ಥ:
ಹಿಂದೆ: ಹಿಂಭಾಗ; ಮುಂಗುಡಿ: ಮುಂಭಾಗ; ಕೆಲ್ಲಯಿಸು: ಬೆದರು, ತುಂಡಾಗು; ಲುಳಿ: ರಭಸ, ವೇಗ; ಲಲಿತ: ಸುಂದರ; ಚಂಡ: ತೀಕ್ಷ್ಣವಾದ; ಗತಿ: ವೇಗ; ಚಾಳನೆ: ಮುಂದೆ ಸಾಗುವುದು; ಉಬ್ಬಟೆ: ಅತಿಶಯ, ಹಿರಿಮೆ; ವೇಡೆ: ಆಕ್ರಮಣ; ಗಾಂಡಿವಿ: ಅರ್ಜುನ; ಲಾಗ: ತ್ವರೆ, ಶೀಘ್ರತೆ; ಪಡೆ: ತೆಗೆದುಕೊ: ಅಸುರಾರಿ: ಕೃಷ್ಣ;
ಪದವಿಂಗಡಣೆ:
ಹಿಂಡೊಡೆದು +ಮುಂಗುಡಿಯ+ ತಾ +ಕಯಿ
ಕೊಂಡು +ದೂವಾಳಿಯಲಿ +ರಥವನು
ಮಂಡಳಿಸಿ+ ಕೆಲ್ಲಯಿಸಿ+ ಲುಳಿಯಲಿ +ಲಲಿತ+ಪೇರಯವ
ಚಂಡ+ಗತಿ+ಚಾಳನೆಯಲ್+ಉಬ್ಬಟೆ
ಗೊಂಡಿಸದೆ+ ವೇಡೆಯವ +ಕೊಳ್ಳದೆ
ಗಾಂಡಿವಿಯ+ ಕೈಮನದ +ಲಾಗನು +ಪಡೆದನ್+ಅಸುರಾರಿ
ಅಚ್ಚರಿ:
(೧) ಅರ್ಜುನನು ಒಪ್ಪಿದನು ಎಂದು ಹೇಳಲು – ಗಾಂಡಿವಿಯ ಕೈಮನದ ಲಾಗನು ಪಡೆದನಸುರಾರಿ