ಪದ್ಯ ೯: ದೂತರನ್ನು ರಾಜನು ಹೇಗೆ ಸನ್ಮಾನಿಸಿದನು?

ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಬಹಳ ಹರುಷದ
ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು
ಲಾಲಿಸುತ ಸರ್ವಾಂಗ ಹರುಷದೊ
ಳಾಳೆ ಜನಪ ಪಸಾಯಿತವ ದೂ
ತಾಳಿಗಿತ್ತನು ಸುಲಿದರವದಿರು ರಾಯನೋಲಗವ (ವಿರಾಟ ಪರ್ವ, ೧೦ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜನು ಈ ಸುದ್ದಿಯನ್ನು ಕೇಳಿ ವಿರಾಟನು ಬಹಳ ಹಿಗ್ಗಿದನು. ಅವನ ಕಣ್ಣುಗಳು ಅರಳಿದವು. ದೇಹವು ಅತೀವ ರೋಮಾಂಚನಗೊಂಡಿತು, ಹರ್ಷದ ಭರದಲ್ಲಿ ಮನಸ್ಸು ದಿಕ್ಕುತೋಚದಂತಾಯಿತು. ಸುದ್ದಿಯನ್ನು ಕೇಳಿ ಸಂಪೂರ್ಣ ಹರ್ಷದಿಂದ ದೂತರಿಗೆ ಹೇರಳವಾಗಿ ಉಡುಗೊರೆಗಳನ್ನು ನೀಡಿದನು. ದೂತರು ರಾಜನ ಓಲಗವನ್ನೇ ಸೂರೆಗೊಂಡರು.

ಅರ್ಥ:
ಕೇಳು: ಆಲಿಸು; ಮಿಗೆ: ಮತ್ತು, ಅಧಿಕ; ಹಿಗ್ಗು: ಹರ್ಷಿಸು; ತನು: ದೇಹ; ಪುಳಕಾಳಿ: ರೋಮಾಂಚನ; ತಳಿತ: ಚಿಗುರು; ಹರುಷ: ಸಂತಸ; ಬಹಳ: ತುಂಬ; ದಾಳಿ: ಆಕ್ರಮಣ; ಮನ: ಮನಸ್ಸು; ಮುಂದುಗೆಡು: ದಿಕ್ಕು ತೋಚದಂತಾಗು; ಕಂಗಳು: ಕಣ್ಣು; ಅರಳು: ಅಗಲವಾಗು, ಸಂತೋಷಗೊಳ್ಳು; ಲಾಲಿಸು: ಅಕ್ಕರೆಯನ್ನು ತೋರಿಸು; ಸರ್ವಾಂಗ: ಎಲ್ಲಾ; ಆಳೆ: ಪೋಷಿಸು; ಜನಪ: ರಾಜ; ಪಸಾಯ: ಉಡುಗೊರೆ; ದೂತಾಳಿ: ಸೇವಕರ ಗುಂಪು; ಸುಲಿ: ಬಿಚ್ಚು, ತೆಗೆ; ರಾಯ: ರಾಜ; ಓಲಗ: ದರ್ಬಾರು;

ಪದವಿಂಗಡಣೆ:
ಕೇಳಿ+ ಮಿಗೆ +ಹಿಗ್ಗಿದನು +ತನು +ಪುಳ
ಕಾಳಿ+ ತಳಿತುದು +ಬಹಳ +ಹರುಷದ
ದಾಳಿಯಲಿ +ಮನ +ಮುಂದುಗೆಟ್ಟುದು +ಕಂಗಳ್+ಅರಳಿದವು
ಲಾಲಿಸುತ +ಸರ್ವಾಂಗ +ಹರುಷದೊಳ್
ಆಳೆ +ಜನಪ +ಪಸಾಯಿತವ +ದೂ
ತಾಳಿಗಿತ್ತನು +ಸುಲಿದರ್+ಅವದಿರು +ರಾಯನ್+ಓಲಗವ

ಅಚ್ಚರಿ:
(೧) ಪುಳುಕಾಳಿ, ದಾಳಿ, ದೂತಾಳಿ – ಪ್ರಾಸ ಪದಗಳು
(೨) ರಾಜನ ಹರ್ಷದ ಸ್ಥಿತಿಯನ್ನು ಹೇಳುವ ಪರಿ – ಕೇಳಿ ಮಿಗೆ ಹಿಗ್ಗಿದನು ತನು ಪುಳಕಾಳಿ ತಳಿತುದು ಬಹಳ ಹರುಷದ ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು

ಪದ್ಯ ೭: ದೂತರು ರಾಜನಿಗೆ ಏನೆಂದು ಬಿನ್ನೈಸಿದರು?

ಮಗಗೆ ಪಡಿಬಲವಾಗಿ ಬಲು ಮಂ
ತ್ರಿಗಳನವನಿಪ ಬೀಳುಗೊಟ್ಟನು
ದುಗುಡದಿಂದಿರೆ ಹೊಳಲು ಕೈಸೂರೆಗಳ ಕಳಕಳದ
ಮೊಗದ ಹರುಷದಲಖಿಳ ದೂತಾ
ಳಿಗಳು ಬಂದುದು ಗುಡಿಯ ಕಟ್ಟಿಸು
ನಗರಿಯಲಿ ಕಳುಹಿದಿರುಗೊಳಿಸು ಕುಮಾರಕನನೆನುತ (ವಿರಾಟ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ಉತ್ತರನ ಸಹಾಯಕ್ಕಾಗಿ ಮಂತ್ರಿಗಳು, ಸೈನ್ಯವನ್ನು ವಿರಾಟನು ಕಳಿಸಿಕೊಟ್ಟು ದುಃಖಾಕ್ರಾಂತನಾಗಿರಲು, ಊರಿನಲ್ಲಿ ಕೋಲಾಹಲದ ಸದ್ದು ಕೇಳಿತು. ಪಟ್ಟಣದಲ್ಲಿ ಕೆಲವರು ಸೂರೆ ಮಾಡಲಾರಂಭಿಸಿದ್ದರು. ಬಹು ಬೇಗ ವಿರಾಟನ ಸಮ್ಮುಖಕ್ಕೆ ದೂತರು ಬಂದು, ಪ್ರಭೂ ಊರಿನಲ್ಲಿ ವಿಜಯ ಧ್ವಜವನ್ನು ಹಾರಿಸಿ, ಜಯಶಾಲಿಯಾಗಿ ಬರುತ್ತಿರುವ ರಾಜಪುತ್ರನನ್ನು ಎದಿರುಗೊಳ್ಳಲು ಕಳುಹಿಸಿ ಎಂದು ಬಿನ್ನೈಸಿಕೊಂಡರು.

ಅರ್ಥ:
ಮಗ: ಸುತ; ಪಡಿಬಲ: ಎದುರುಪಡೆ, ಶತ್ರುಸೈನ್ಯ; ಬಲು: ತುಂಬ; ಮಂತ್ರಿ: ಸಚಿವ; ಅವನಿಪ: ರಾಜ; ಬೀಳೂಗೊಡು: ಕಳುಹಿಸು; ದುಗುಡ: ದುಃಖ; ಹೊಳಲು: ಪಟ್ಟಣ, ನಗರ, ಪ್ರಕಾಶ; ಕೈಸೂರೆ: ಲೂಟಿ; ಕಳಕಳ: ಗೊಂದಲ, ಹೊಳೆವುದನ್ನು ವಿವರಿಸುವ ಪದ; ಮೊಗ: ಮುಖ; ಹರುಷ: ಸಂತಸ; ಅಖಿಳ: ಎಲ್ಲಾ; ದೂತಾಳಿ: ದೂತರ ಗುಂಪು; ಬಂದು: ಆಗಮಿಸು; ಗುಡಿ: ಮನೆ; ಕಟ್ಟು: ನಿರ್ಮಿಸು; ನಗರಿ: ಊರು; ಕಳುಹು: ತೆರಳು; ಇದಿರುಗೊಳಿಸು: ಎದುರುಗೊಳ್ಳು; ಕುಮಾರ: ಪುತ್ರ;

ಪದವಿಂಗಡಣೆ:
ಮಗಗೆ +ಪಡಿಬಲವಾಗಿ +ಬಲು +ಮಂ
ತ್ರಿಗಳನ್+ಅವನಿಪ+ ಬೀಳುಗೊಟ್ಟನು
ದುಗುಡದಿಂದಿರೆ +ಹೊಳಲು +ಕೈಸೂರೆಗಳ+ ಕಳಕಳದ
ಮೊಗದ+ ಹರುಷದಲ್+ಅಖಿಳ +ದೂತಾ
ಳಿಗಳು +ಬಂದುದು +ಗುಡಿಯ +ಕಟ್ಟಿಸು
ನಗರಿಯಲಿ +ಕಳುಹ್+ಇದಿರುಗೊಳಿಸು+ ಕುಮಾರಕನನೆನುತ

ಅಚ್ಚರಿ:
(೧) ಉತ್ತರನ ಪ್ರಶಂಸೆ ಮಾಡುವ ಪರಿ – ಗುಡಿಯ ಕಟ್ಟಿಸು ನಗರಿಯಲಿ ಕಳುಹಿದಿರುಗೊಳಿಸು ಕುಮಾರಕನನೆನುತ