ಬಿಲುದುಡುಕಿ ರಿಪುಭಟನೊಡನೆ ಮುಂ
ಕೊಳಿಸಿದನು ದುರ್ಜಯನು ಹಿಮ್ಮೆ
ಟ್ಟೆಲವೊ ಪವನಜ ನಿಂದಡರಿವೆನು ನಿನ್ನೊಡಲನೆನುತ
ಒಲುಮೆಯೊಡಹುಟ್ಟಿದರ ಬಯಕೆಯ
ಸಲಿಸುವರೆ ನಾವಲ್ಲದೆ ಕುರು
ಕುಲ ಲಲಾಮರು ತಪ್ಪಿ ನುಡಿಯರೆನುತ್ತ ಮಂಡಿಸಿದ (ದ್ರೋಣ ಪರ್ವ, ೧೩ ಸಂಧಿ, ೩೯ ಪದ್ಯ)
ತಾತ್ಪರ್ಯ:
ದುರ್ಜಯನು ಬಿಲ್ಲನ್ನು ಹಿಡಿದು ಭೀಮನನ್ನು ಇದಿರಿಸಿದನು. ಭೀಮಾ ಹಿಮ್ಮೆಟ್ಟು ನಿಂತರೆ ನಿನ್ನ ದೇಹವನ್ನು ತುಂಡು ಮಾಡುತ್ತೇನೆ. ಭೀಮನು ಪ್ರೀತಿಯ ತಮ್ಮಂದಿರ ಬಯಕೆಯನ್ನು ಸಲ್ಲಿಸುವವರೇ ನಾವು, ಕುರುಕುಲ ತಿಲಿಕರು ತಪ್ಪಿ ನುಡಿಯುವವರಲ್ಲ ಎನ್ನುತ್ತ ಮಂಡಿಹಚ್ಚಿ ಕುಳಿತನು.
ಅರ್ಥ:
ಬಿಲು: ಬಿಲ್ಲು, ಧನು; ತುಡುಕು: ಹೋರಾಡು, ಸೆಣಸು; ರಿಪು: ವೈರಿ; ಭಟ: ಸೈನಿಕ; ಮುಂಕೊಳಿಸು: ಇದಿರು; ಹಿಮ್ಮೆಟ್ಟು: ಹಿಂದೆ ಸರಿ; ಪವನಜ: ಭೀಮ; ನಿಂದು: ನಿಲ್ಲು; ಅಡರು: ಆಸರೆ; ಒಡಲು: ದೇಹ; ಒಲುಮೆ: ಪ್ರೀತಿ; ಒಡಹುಟ್ಟಿ: ಜೊತೆಯಲ್ಲಿ ಜನಿಸಿದ, ಸಹೋದರ; ಬಯಕೆ: ಆಸೆ; ಸಲಿಸು: ಪೂರೈಸು, ಒಪ್ಪಿಸು; ಕುಲ: ವಂಶ; ಲಲಾಮ: ಶ್ರೇಷ್ಠ, ತಿಲಕ; ತಪ್ಪು: ಸರಿಯಿಲ್ಲದು; ನುಡಿ: ಮಾತು; ಮಂಡಿಸು: ಕೂಡು;
ಪದವಿಂಗಡಣೆ:
ಬಿಲು+ತುಡುಕಿ +ರಿಪುಭಟನೊಡನೆ +ಮುಂ
ಕೊಳಿಸಿದನು +ದುರ್ಜಯನು +ಹಿಮ್ಮೆಟ್ಟ್
ಎಲವೊ +ಪವನಜ +ನಿಂದಡ್+ಅರಿವೆನು +ನಿನ್ನೊಡಲನೆನುತ
ಒಲುಮೆ+ಒಡಹುಟ್ಟಿದರ+ ಬಯಕೆಯ
ಸಲಿಸುವರೆ +ನಾವಲ್ಲದೆ +ಕುರು
ಕುಲ +ಲಲಾಮರು +ತಪ್ಪಿ+ ನುಡಿಯರ್+ಎನುತ್ತ +ಮಂಡಿಸಿದ
ಅಚ್ಚರಿ:
(೧) ಭೀಮನೆದುರು ಗರ್ಜಿಸಿದ ಪರಿ – ಹಿಮ್ಮೆಟ್ಟೆಲವೊ ಪವನಜ ನಿಂದಡರಿವೆನು ನಿನ್ನೊಡಲನೆನುತ