ವರಿಸಿದೆನು ಭೀಮನನು ನೀವಾ
ದರಿಸುವಡೆ ಧರ್ಮವನು ದುರ್ಜನ
ಸರಣಿಯಲಿ ನೀವ್ ಬಹಡೆ ದಳಸಹಿತೈವರಿದಿರಹುದು
ತೆರಳುವವರಾವಲ್ಲ ನೀವ್ ಪತಿ
ಕರಿಸಿದುದೆ ನಮ್ಮಿಪ್ಪವೆನೆ ಮುರ
ಹರ ಯುಧಿಷ್ಠಿರನೃಪನನೆಕ್ಕಟಿಗರೆದು ಗರ್ಜಿಸಿದ (ಗದಾ ಪರ್ವ, ೫ ಸಂಧಿ, ೪೮ ಪದ್ಯ)
ತಾತ್ಪರ್ಯ:
ನೀವು ಧರ್ಮವನ್ನವಲಂಬಿಸಿದರೆ ಭೀಮನೊಡನೆ ಯುದ್ಧವನ್ನು ಹಿಡಿದೆ. ದುರ್ಜನರಂತೆ ನಡೆಯುವುದಾದರೆ ಸೇನಾ ಸಮೇತರಾಗಿ ನೀವೈವರೂ ಬರಬಹುದು. ಯಾವುದಕ್ಕೂ ನಾನು ಹಿಂಜರಿಯುವುದಿಲ್ಲ. ನೀವೇನನ್ನು ಒಪ್ಪಿಕೊಳ್ಳುವಿರೋ ಅದೇ ನಮ್ಮಿಷ್ಟ, ಎಂದು ದುರ್ಯೋಧನನು ಹೇಳಿದನು. ಆಗ ಧರ್ಮಜನನ್ನು ಶ್ರೀಕೃಷ್ಣನು ಒಂದು ಕಡೆ ಕರೆದು ಹೀಗೆಂದನು.
ಅರ್ಥ:
ವರಿಸು: ಬರುವಂತೆ ಮಾಡು, ಆರಿಸು; ಆದರಿಸು: ಗೌರವಿಸು; ದುರ್ಜನ: ದುಷ್ಟ; ಸರಣಿ: ಸಾಲು; ಬಹಡೆ: ಬರುತ್ತೀರ; ದಳ: ಸೈನ್ಯ; ಸಹಿತ: ಜೊತೆ; ಇದಿರು: ಎದುರು; ತೆರಳು: ಗಮಿಸು; ಪತಿಕರಿಸು: ಅಂಗೀಕರಿಸು; ಇಷ್ಟ: ಆಸೆ; ನೃಪ: ರಾಜ; ಮುರಹರ: ಕೃಷ್ಣ; ಎಕ್ಕಟಿ: ಒಬ್ಬಂಟಿಗ, ಏಕಾಕಿ; ಕರೆ: ಬರೆಮಾಡು; ಗರ್ಜಿಸು: ಕೂಗು;
ಪದವಿಂಗಡಣೆ:
ವರಿಸಿದೆನು +ಭೀಮನನು +ನೀವ್
ಆದರಿಸುವಡೆ +ಧರ್ಮವನು +ದುರ್ಜನ
ಸರಣಿಯಲಿ +ನೀವ್ +ಬಹಡೆ +ದಳಸಹಿತ್+ಐವರ್+ಇದಿರಹುದು
ತೆರಳುವವರಾವಲ್ಲ+ ನೀವ್ +ಪತಿ
ಕರಿಸಿದುದೆ +ನಮ್ಮಿಪ್ಪವ್+ಎನೆ+ ಮುರ
ಹರ+ ಯುಧಿಷ್ಠಿರ+ನೃಪನನ್+ಎಕ್ಕಟಿ+ಕರೆದು +ಗರ್ಜಿಸಿದ
ಅಚ್ಚರಿ:
(೧) ನೀವ್ ಪದದ ಬಳಕೆ – ೩ ಬಾರಿ ಪ್ರಯೋಗ