ಸೆರೆನರಂಗಳ ದರ್ಭೆ ಮಿದುಳಿನ
ಚರು ಕಪಾಲದ ಪಾತ್ರೆಯೆಲುವಿನ
ಬೆರಳ ಸಮಿಧೆ ವಿಶಾಳದನುಮಜ್ಜೆಗಳ ಪೃಷದಾಜ್ಯ
ಅರುಣಜಲದಾಜ್ಯಾಹುತಿಯ ವಿ
ಸ್ತರವ ವಿರಚಿಸಿ ನಿಗಮಮಂತ್ರೋ
ಚ್ಚರಣೆಯಲಿ ಪೂರ್ಣಾಹುತಿಗೆ ತನ್ನೊಡಲನೊಪ್ಪಿಸಿದ (ಗದಾ ಪರ್ವ, ೯ ಸಂಧಿ, ೨೨ ಪದ್ಯ)
ತಾತ್ಪರ್ಯ:
ಅಶ್ವತ್ಥಾಮನು ಯಜ್ಞಕ್ಕೆ ತನ್ನ ನರಗಳನ್ನೇ ದರ್ಭೆಯನ್ನಾಗಿಸಿದ, ಮಿದುಳೇ ಚರು, ಕಪಾಲವೇ ಪಾತ್ರೆ, ಬೆರಳಿನ ಎಲಬುಗಳು ಸಮಿತ್ತು, ಮಜ್ಜೆಯ ಪೃಷದಾಜ್ಯ, ರಕ್ತದ ತುಪ್ಪಗಳಿಂದ ಆಹುತಿಗಳನ್ನು ಕೊಟ್ಟು, ಪೂರ್ಣಾಹಿತಿಗೆ ತನ್ನ ದೇಹವನ್ನೇ ಒಪ್ಪಿಸಿದನು.
ಅರ್ಥ:
ಸೆರೆ: ನರ, ಬಂಧನ; ನರ: ಅವಯವಗಳಿಂದ ಸಂವೇದನೆಗಳನ್ನೂ, ಮೆದುಳಿನಿಂದ ಅವಯವಗಳಿಗೆ ಸೂಚನೆಗಳನ್ನು ಒಯ್ಯುವ ತಂತು, ಸೆರೆ; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಮಿದುಳು: ಮೆದುಳು, ಮಸ್ತಿಷ್ಕ; ಚರು: ನೈವೇದ್ಯ, ಹವಿಸ್ಸು; ಕಪಾಲ: ತಲೆಬುರುಡೆ; ಪಾತ್ರೆ: ಬಟ್ಟಲು; ಎಲುಬು: ಮೂಳೆ; ಬೆರಳು: ಅಂಗುಲಿ; ಸಮಿಧೆ: ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ವಿಶಾಲ: ದೊಡ್ಡದು, ಹಿರಿದು; ಆಜ್ಯ: ತುಪ್ಪ; ಅರುಣಜಲ: ರಕ್ತ; ಜಲ: ನೀರು; ಅರುಣ: ಕೆಂಪು; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ವಿಸ್ತರ: ವಿಶಾಲ; ವಿರಚಿಸು: ನಿರ್ಮಿಸು; ನಿಗಮ: ವೇದ, ಶ್ರುತಿ; ಮಂತ್ರ:ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಉಚ್ಚರಣೆ: ಹೇಳು; ಪೂರ್ಣಾಹುತಿ: ಯಜ್ಞಾದಿಗಳಲ್ಲಿ ದರ್ವಿ ಯಾ ಸವುಟನ್ನು ಪೂರ್ತಿಯಾಗಿ ತುಂಬಿಕೊಂಡು ಕೊಡುವ ಆಹುತಿ; ಒಡಲು: ದೇಹ; ಒಪ್ಪಿಸು: ಸಮರ್ಪಿಸು; ಮಜ್ಜೆ: ಅಸ್ಥಿಸಾರ, ಮೂಳೆಯ ಒಳಗಿನ ಸಾರವತ್ತಾದ ಭಾಗ;
ಪದವಿಂಗಡಣೆ:
ಸೆರೆ+ನರಂಗಳ+ ದರ್ಭೆ+ ಮಿದುಳಿನ
ಚರು +ಕಪಾಲದ +ಪಾತ್ರೆ+ಎಲುವಿನ
ಬೆರಳ +ಸಮಿಧೆ +ವಿಶಾಳದನುಮಜ್ಜೆಗಳ +ಪೃಷದಾಜ್ಯ
ಅರುಣಜಲದ್+ಆಜ್ಯ +ಆಹುತಿಯ +ವಿ
ಸ್ತರವ +ವಿರಚಿಸಿ +ನಿಗಮ+ಮಂತ್ರ
ಉಚ್ಚರಣೆಯಲಿ+ ಪೂರ್ಣಾಹುತಿಗ +ತನ್ನೊಡಲನ್+ಒಪ್ಪಿಸಿದ
ಅಚ್ಚರಿ:
(೧) ದೇಹವನ್ನೇ ಯಜ್ಞಕ್ಕೆ ಅನುವುಮಾಡಿದ ಪರಿ – ನಿಗಮಮಂತ್ರೋಚ್ಚರಣೆಯಲಿ ಪೂರ್ಣಾಹುತಿಗೆ ತನ್ನೊಡಲನೊಪ್ಪಿಸಿದ