ಕಾದುದೀತನ ನಾಮವಾ ಪ್ರ
ಹ್ಲಾದನಾಸರು ಬೇಸರನು ಬಳಿ
ಕೀ ದಯಾಂಬುಧಿ ದನುಜಪತಿ ದಿಟ್ಟಿಸಿದ ಕಂಬದಲಿ
ಆದುದಾವಿರ್ಭಾವ ಸಿಡಿಲಿನ
ಸೋದರದ ಕಣ್ಣುಗಳ ಭಾಳದ
ಬೀದಿಗಿಚ್ಚಿನ ರೌದ್ರದಲಿ ನರಸಿಂಹ ರೂಪಾಗಿ (ಸಭಾ ಪರ್ವ, ೧೦ ಸಂಧಿ, ೪೩ ಪದ್ಯ)
ತಾತ್ಪರ್ಯ:
ಪ್ರಹ್ಲಾದನಿಗೆ ತಂದೆಯಿಂದಾದ ಹಿಂಸೆ ಬೇಸರಗಳನ್ನು ಶ್ರೀಹರಿಯ ನಾಮಸ್ಮರಣೆಯು ಕಳೆದವು. ಬಳಿಕ ಹಿರಣ್ಯಕಶಿಪುವು ಈ ಕಂಬದಲಿ ನಿನ್ನ ಶ್ರೀಹರಿಯನ್ನು ತೋರಿಸು ಎನ್ನುತ್ತಾ ದೃಷ್ಟಿಸಿದ ಕಂಬದಲ್ಲಿ ರೌದ್ರನಾದ ಶ್ರೀನರಸಿಂಹನ ಆವಿರ್ಭಾವವಾಯಿತು. ಆ ನರಸಿಂಹಸ್ವಾಮಿಯ ಕಣ್ನುಗಳು ಸಿಡಿಲಿನ ಸಹೋದರರಂತಿದ್ದವು, ಅವನ ಹಣೆಯ ಬೆಂಕಿಯು ಬೀದಿಯನ್ನೇ ಉರಿಸಿದವು.
ಅರ್ಥ:
ಕಾದು: ಹೋರಾದು; ನಾಮ: ಹೆಸರು; ಅಸುರ: ರಾಕ್ಷಸ; ಬೇಸರ: ಬೇಜಾರು, ದುಃಖ; ಬಳಿಕ: ನಂತರ; ದಯ: ಕರುಣೆ; ಅಂಬುಧಿ: ಸಾಗರ; ದನುಜ: ರಾಕ್ಷಸ; ಪತಿ: ಒಡೆಯ; ದಿಟ್ಟಿಸು: ನೋಡು; ಕಂಬ: ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ ಕಲ್ಲು; ಆವಿರ್ಭಾವ: ಪ್ರಕಟವಾಗುವುದು; ಸಿಡಿಲು: ಚಿಮ್ಮು; ಸಹೋದರ: ತಮ್ಮ/ಅಣ್ಣ; ಕಣ್ಣು: ನಯನ; ಭಾಳ: ಹಣೆ; ಬೀದಿ: ರಸ್ತೆ; ಕಿಚ್ಚು: ಬೆಂಕಿ; ರೌದ್ರ: ಭಯಂಕರ; ರೂಪ: ಆಕಾರ;
ಪದವಿಂಗಡಣೆ:
ಕಾದುದ್+ಈತನ +ನಾಮವ್+ಆ+ ಪ್ರ
ಹ್ಲಾದನ್+ಅಸರು +ಬೇಸರನು +ಬಳಿಕ್
ಈ+ ದಯಾಂಬುಧಿ +ದನುಜಪತಿ +ದಿಟ್ಟಿಸಿದ +ಕಂಬದಲಿ
ಆದುದ್+ಆವಿರ್ಭಾವ +ಸಿಡಿಲಿನ
ಸೋದರದ+ ಕಣ್ಣುಗಳ +ಭಾಳದ
ಬೀದಿ+ಕಿಚ್ಚಿನ +ರೌದ್ರದಲಿ +ನರಸಿಂಹ+ ರೂಪಾಗಿ
ಅಚ್ಚರಿ:
(೧) ದ ಕಾರದ ತ್ರಿವಳಿ ಪದ – ದಯಾಂಬುಧಿ ದನುಜಪತಿ ದಿಟ್ಟಿಸಿದ
(೨) ನರಸಿಂಹನ ವರ್ಣನೆ: ಆದುದಾವಿರ್ಭಾವ ಸಿಡಿಲಿನ ಸೋದರದ ಕಣ್ಣುಗಳ ಭಾಳದ
ಬೀದಿಗಿಚ್ಚಿನ ರೌದ್ರದಲಿ ನರಸಿಂಹ ರೂಪಾಗಿ