ಪದ್ಯ ೧೭: ಧರ್ಮಜನನ್ನು ಯಾರು ಕರೆಸಿಕೊಂಡರು?

ಹದುಳವಿಟ್ಟನು ಭೀಮನನು ನಿ
ರ್ಮದನು ಮತ್ಸ್ಯನಪುರಿಗೆ ಯತಿವೇ
ಷದಲಿ ಬಂದನು ಹೊನ್ನಸಾರಿಯ ಚೀಲ ಕಕ್ಷದಲಿ
ಇದಿರೊಳಾನತರಾಯ್ತು ಕಂಡವ
ರುದಿತ ತೇಜಃಪುಂಜದಲಿ ಸೊಂ
ಪೊದವಿ ಬರಲು ವಿರಾಟ ಕಾಣಿಸಿಕೊಂಡು ಬೆಸಗೊಂಡ (ವಿರಾಟ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನನ್ನು ಸಂತೈಸಿ ಧರ್ಮರಾಯನು ಯತಿವೇಷದಿಂದ ಮತ್ಸ್ಯನಗರಕ್ಕೆ ಬಂದನು. ಅವನು ಬಂಗಾರದ ಪಗಡೆಯ ಚೀಲವನ್ನು ಕಂಕುಳಿನಲ್ಲಿ ಅವಚಿಕೊಂಡಿದ್ದನು. ಅವನ ತೇಜಸ್ಸನ್ನು ನೋಡಿ ಎದುರಿನಲ್ಲಿ ಕಂಡವರು ನಮಸ್ಕರಿಸಿದರು. ವಿರಾಟನು ಅವನನ್ನು ಕರೆಸಿಕೊಂಡು ಕೇಳಿದನು.

ಅರ್ಥ:
ಹದುಳ: ಸೌಖ್ಯ, ಕ್ಷೇಮ; ನಿರ್ಮದ: ಅಹಂಕಾರವಿಲ್ಲದ; ಪುರಿ: ಊರು; ಯತಿ: ಋಷಿ; ವೇಷ: ರೂಪ; ಬಂದು: ಆಗಮಿಸು; ಹೊನ್ನು: ಚಿನ್ನ; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಚೀಲ: ಸಂಚಿ; ಕಕ್ಷ: ಕಂಕಳು; ಇದಿರು: ಎದುರು; ಆನತ: ನಮಸ್ಕರಿಸಿದವನು; ಕಂಡು: ನೋದು; ಉದಿತ: ಹುಟ್ಟುವ; ತೇಜ: ಕಾಂತಿ; ಪುಂಜ: ಸಮೂಹ, ಗುಂಪು; ಸೊಂಪು: ಸೊಗಸು, ಚೆಲುವು; ಒದಗು: ಲಭ್ಯ, ದೊರೆತುದು; ಕಾಣಿಸು: ಗೋಚರಿಸು; ಬೆಸ: ಕೆಲಸ, ಕಾರ್ಯ, ಅಪ್ಪಣೆ;

ಪದವಿಂಗಡಣೆ:
ಹದುಳವಿಟ್ಟನು+ ಭೀಮನನು +ನಿ
ರ್ಮದನು +ಮತ್ಸ್ಯನ+ಪುರಿಗೆ +ಯತಿ+ವೇ
ಷದಲಿ +ಬಂದನು +ಹೊನ್ನ+ಸಾರಿಯ +ಚೀಲ +ಕಕ್ಷದಲಿ
ಇದಿರೊಳ್+ಆನತರ್+ಆಯ್ತು +ಕಂಡವರ್
ಉದಿತ +ತೇಜಃ+ಪುಂಜದಲಿ +ಸೊಂ
ಪೊದವಿ +ಬರಲು +ವಿರಾಟ +ಕಾಣಿಸಿಕೊಂಡು +ಬೆಸಗೊಂಡ

ಅಚ್ಚರಿ:
(೧) ಧರ್ಮಜನನ್ನು ಕರೆದ ಪರಿ – ನಿರ್ಮದನು, ಉದಿತ ತೇಜಃಪುಂಜ

ಪದ್ಯ ೭೮: ಶಿಶುಪಾಲನ ಅಂತ್ಯದ ಬಳಿಕ ಯಾರು ತನ್ನ ನಿಜಸ್ಥಾನವನ್ನು ಸೇರಿದರು?

ಹರಿಗೊರಳ ಚೌಧಾರೆಯಲಿ ಧ್ರು
ಧುರಿಸಿ ನೂಕಿತು ರಕುತವದರೊಳು
ಮಿರುಪ ತೇಜಃಪುಂಜವುಕ್ಕಿತು ಹೊದರ ಹೊಳಹಿನಲಿ
ತುರುಗುವೆಳಗಿನ ಜೋಕೆಯಲಿ ಜಗ
ವರಿಯೆ ಬಂದು ಮುರಾರಿಯಂಘ್ರಿಯೊ
ಳೆರಗಿ ನಿಂದುದು ನಿಜನೆಲೆಗೆ ವಿಜಯಾಭಿಧಾನದಲಿ (ಸಭಾ ಪರ್ವ, ೧೧ ಸಂಧಿ, ೭೮ ಪದ್ಯ)

ತಾತ್ಪರ್ಯ:
ಸುದರ್ಶನ ಚಕ್ರವು ಶಿಶುಪಾಲನ ಕಂಠವನ್ನು ಸೀಳಿತು, ಅವನ ಕಂಠದಿಂದ ಹೊರಹೊಮ್ಮಿದ ರಕ್ತವು ನಾಲ್ಕೂ ದಿಕ್ಕುಗಳಿಗೆ ಚೆಲ್ಲಿ ಉಕ್ಕಿ ಹರಿಯಿತು. ಅದರೊಳಗಿನಿಂದ ಮಹಾಪ್ರಕಾಶಮಾನವಾದ ಒಂದು ಬೆಳಕಿನ ಮೊತ್ತವು ಉಕ್ಕಿ ಬಂದು, ಎಲ್ಲರೂ ನೋಡುವಂತೆ ಶ್ರೀಕೃಷ್ಣನ ಪಾದಕ್ಕೆ ನಮಸ್ಕರಿಸಿತು, ವಿಷ್ಣುವಿನ ದ್ವಾರಪಾಲಕನಾದ ವಿಜಯನು ತನ್ನ ನೆಲೆಗೇ ಬಂದು ಸೇರಿದನು.

ಅರ್ಥ:
ಹರಿ: ಸೀಳು; ಕೊರಳು: ಕಂಠ; ಚೌಧಾರೆ: ನಾಲ್ಕು ಕಡೆಯ ಪ್ರವಾಹ; ಧುರುಧುರಿಸು: ಉಕ್ಕಿ ಹರಿ; ನೂಕು: ತಳ್ಳು; ರಕುತ: ರುಧಿರ, ನೆತ್ತರು; ಮಿರುಪು: ಹೊಳಪು; ತೇಜ: ಕಾಂತಿ; ಪುಂಜ: ಸಮೂಹ, ಗುಂಪು; ಉಕ್ಕು: ಹೆಚ್ಚಾಗು; ಹೊದರ: ಪೊದೆ, ಹಿಂಡಲು; ಹೊಳಹು: ಕಾಂತಿ, ಪ್ರಕಾಶ; ತುರುಗು: ಸಂದಣಿಸು, ಒತ್ತಿಬಂದು; ಬೆಳಗು: ಪ್ರಕಾಶ; ಜೋಕೆ: ಎಚ್ಚರಿಕೆ, ಜಾಗರೂಕತೆ; ಜಗ: ಪ್ರಪಂಚ; ಅರಿ: ತಿಳಿ; ಬಂದು: ಆಗಮಿಸು; ಮುರಾರಿ: ಕೃಷ್ಣ; ಅಂಘ್ರಿ: ಪಾದ; ಎರಗು: ಬಾಗು, ನಮಸ್ಕರಿಸು; ನಿಂದು: ನಿಲ್ಲು; ನಿಜನೆಲೆ: ಸ್ವಂತ ಜಾಗ; ಅಭಿಧಾನ: ಹೆಸರು;

ಪದವಿಂಗಡಣೆ:
ಹರಿ+ಕೊರಳ+ ಚೌಧಾರೆಯಲಿ +ಧುರು
ಧುರಿಸಿ+ ನೂಕಿತು +ರಕುತವ್+ಅದರೊಳು
ಮಿರುಪ+ ತೇಜಃಪುಂಜವ್+ಉಕ್ಕಿತು+ ಹೊದರ+ ಹೊಳಹಿನಲಿ
ತುರುಗು+ಬೆಳಗಿನ+ ಜೋಕೆಯಲಿ +ಜಗವ್
ಅರಿಯೆ +ಬಂದು +ಮುರಾರಿ+ಅಂಘ್ರಿಯೊಳ್
ಎರಗಿ+ ನಿಂದುದು +ನಿಜನೆಲೆಗೆ+ ವಿಜಯ+ಅಭಿಧಾನದಲಿ

ಅಚ್ಚರಿ:
(೧) ಚೌಧಾರೆ: ನಾಲ್ಕು ದಿಕ್ಕುಗಳಲ್ಲಿ ಎಂಬ ಪದದ ಬಳಕೆ
(೨) ಕಾಂತಿಯನ್ನು ವರ್ಣಿಸುವ ಬಗೆ – ಮಿರುಪ ತೇಜಃಪುಂಜವುಕ್ಕಿತು ಹೊದರ ಹೊಳಹಿನಲಿ ತುರುಗುವೆಳಗಿನ ಜೋಕೆಯಲಿ

ಪದ್ಯ ೨೧: ಹನುಮಂತ ಕರ್ಣನ ಗುಣಗಾನವನ್ನು ಹೇಗೆ ಮಾಡಿದ?

ಅರಸ ಕೇಳೈ ಕರ್ಣನೊಡಲಲಿ
ಪರಮತೇಜಃಪುಂಜವೊದೆದು
ಪ್ಪರಿಸಿ ಹಾಯ್ದುದು ಹೊಳೆದುದಿನಮಂಡಲದ ಮಧ್ಯದಲಿ
ಅರರೆ ಭಾಪುರೆ ಕರ್ಣ ಮಝ ಭಾ
ಪುರೆ ಭಟಾಗ್ರಣಿ ನಿನ್ನ ಸರಿದೊರೆ
ಯೆರಡು ಯುಗದಲಿ ಕಾಣೆನೆಂದಳಲಿದನು ಹನುಮಂತ (ಕರ್ಣ ಪರ್ವ, ೨೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಪರಮತೇಜಃಪುಂಜವೊಂದು ಕರ್ಣನ ದೇಹದಿಂದ ಹೊರಟು ಮೇಲಕ್ಕೆ ಹಾರಿ ಸೂರ್ಯಮಂಡಲದ ಮಧ್ಯವನ್ನು ಪ್ರವೇಶಿಸಿತು. ಇದನ್ನು ನೋಡುತ್ತಿದ್ದ ಆಂಜನೇಯನು, ಭಲೇ ಕರ್ಣ ಭಲೇ ಪರಾಕ್ರಮಿಗಳಲ್ಲಿ ಅಗ್ರಗಣ್ಯನಾದ ನಿನಗೆ ಸರಿಸಮಾನರಾದವರನ್ನು ನಾನು ಎರಡು ಯುಗಗಳಲ್ಲಿ ಕಾಣಲಿಲ್ಲ ಎಂದು ದುಃಖಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಒಡಲು: ದೇಹ; ಪರಮ: ಶ್ರೇಷ್ಠ; ತೇಜ: ಹೊಳಪು, ಕಾಂತಿ; ಪುಂಜ: ಸಮೂಹ, ಗುಂಪು; ಒದೆ: ತಳ್ಳು; ಉಪ್ಪರ: ಎತ್ತರ; ಹಾಯ್ದು: ಹಾರು; ಹೊಳೆ: ಪ್ರಕಾಶಿಸು; ದಿನಮಂಡಲ: ಸೂರ್ಯಮಂಡಲ; ಮಧ್ಯ: ನಡುವೆ; ಅರರೆ: ಓಹೋ; ಭಾಪುರೆ: ಭೇಷ್; ಮಝ: ಭಲೇ; ಭಟಾಗ್ರಣಿ: ಪರಾಕ್ರಮಿ, ಭಟರಲ್ಲಿ ಅಗ್ರಗಣ್ಯ; ಸರಿದೊರೆ: ಸಮಾನರು; ಯುಗ: ಕಾಲದ ಪ್ರಮಾಣ; ಕಾಣು: ತೋರು; ಅಳಲು: ದುಃಖಿಸು;

ಪದವಿಂಗಡಣೆ:
ಅರಸ+ ಕೇಳೈ +ಕರ್ಣನ್+ಒಡಲಲಿ
ಪರಮ+ತೇಜಃಪುಂಜವ್+ಒದೆದ್
ಉಪ್ಪರಿಸಿ +ಹಾಯ್ದುದು +ಹೊಳೆದು+ ದಿನಮಂಡಲದ+ ಮಧ್ಯದಲಿ
ಅರರೆ+ ಭಾಪುರೆ+ ಕರ್ಣ +ಮಝ +ಭಾ
ಪುರೆ +ಭಟಾಗ್ರಣಿ+ ನಿನ್ನ+ ಸರಿದೊರೆ
ಎರಡು +ಯುಗದಲಿ +ಕಾಣೆನೆಂದ್+ಅಳಲಿದನು +ಹನುಮಂತ

ಅಚ್ಚರಿ:
(೧) ಕರ್ಣನನ್ನು ಹೊಗಳುವ ಪದಗಳು – ಭಾಪುರೆ, ಮಝ, ಭಟಾಗ್ರಣಿ

ಪದ್ಯ ೨೩: ಆ ಶುದ್ಧಕಾಂತಿಯು ಯಾವ ಆಕಾರವಾಗಿ ತೋರಿತು?

ಲಲಿತ ತೇಜಃಪುಂಜ ಮಿಗೆ ಥಳ
ಥಳಿಸಿತತಿದೂರದಲಿ ಬೆಳಗಿನ
ಗೊಳಸನುಡಿದಂತಾದುದಾಗಲೆ ತೋರಿತಾಕಾರ
ತಳಿತುದವಯವ ಶುದ್ಧವರ್ಣ
ಸ್ಥಳವು ನಿಮಿಷಕೆ ಮುನಿವರಾಕೃತಿ
ಹೊಳೆದುದಾಕ್ಷಣವೀತ ನಾರದನೆಂದುದಖಿಳಜನ (ಸಭಾ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಯಾವ ಮೂಲದಿಂದ ಆ ತೇಜಸ್ಸು ಬರುತ್ತಿದೆ ಎಂದು ಎಲ್ಲರು ಆ ದಿಕ್ಕಿನಕಡೆಗೆ ನೋಡುತ್ತಿರುವಾಗ, ಆ ಸುಂದರವಾದ ತೇಜಃಪುಂಜವು ಥಳಥಳನೆ ಹೊಳೆಯಿತು, ಆ ತೇಜಸ್ಸಿನ ಪಲ್ಲಟವಾಗಿ ಒಂದು ಆಕಾರ ತೋರಿತು. ಅವಯವಗಳು ಕಾಣಿಸಿದವು, ಶುದ್ಧವರ್ಣದ ಋಷಿಯೊಬ್ಬರು ಕಾಣಿಸಿದರು, ಅವರನ್ನು ನೋಡಿದೊಡನೆಯೆ ಇವರು ನಾರದರು ಎಂದು ಅಲ್ಲಿದ ಜನರು ಉದ್ಘೋಷಿಸಿದರು.

ಅರ್ಥ:
ಲಲಿತ: ಮನೋಹರವಾದ; ತೇಜ: ಕಾಂತಿ; ತೇಜಃಪುಂಜ: ಕಾಂತಿಯ ಸಮೂಹ; ಮಿಗೆ: ಅಧಿಕ, ಮತ್ತು; ಥಳಥಳಿಸು: ಪ್ರಕಾಶಿಸು;ದೂರ: ಹತ್ತಿರವಲ್ಲದ; ಬೆಳಗು: ಹಗಲು; ಒಳುನುಡಿ: ಗುಪ್ತವಾದ ಮಾತು; ತೋರಿತು: ಗೋಚರಿಸು; ಆಕಾರ: ರೂಪ; ಅವಯವ:ಅಂಗ; ಶುದ್ಧ: ನಿರ್ಮಲ; ವರ್ಣ: ಬಣ್ಣ; ಸ್ಥಳ: ಜಾಗ; ಮುನಿ: ಋಷಿ; ಆಕೃತಿ: ರೂಪ; ಹೊಳೆ: ಪ್ರಕಾಶಿಸು; ಅಖಿಳ: ಎಲ್ಲಾ; ಜನ: ಮನುಷ್ಯರು;

ಪದವಿಂಗಡಣೆ:
ಲಲಿತ +ತೇಜಃಪುಂಜ +ಮಿಗೆ +ಥಳ
ಥಳಿಸಿತ್+ಅತಿ+ದೂರದಲಿ +ಬೆಳಗಿನಗ್
ಒಳಸನುಡಿದಂತ್+ಆದುದ್+ಆಗಲೆ+ ತೋರಿತ್+ಆಕಾರ
ತಳಿತುದ್+ಅವಯವ +ಶುದ್ಧವರ್ಣ
ಸ್ಥಳವು +ನಿಮಿಷಕೆ+ ಮುನಿ+ವರಾಕೃತಿ
ಹೊಳೆದುದ್+ಆಕ್ಷಣ+ ವೀತ+ ನಾರದನೆಂದುದ್+ಅಖಿಳಜನ

ಅಚ್ಚರಿ:
(೧) ತೇಜಃಪುಂಜ, ಥಳಥಳಿಸು, ಹೊಳೆ – ಕಾಂತಿ, ಪ್ರಕಾಶಿಸು ಪದದ ಅರ್ಥ
(೨) ಆಕಾರ, ಆಕೃತಿ – ಸಮನಾರ್ಥಕ ಪದ

ಪದ್ಯ ೧೦: ಪಾಂಡವರು ಹೇಗೆ ಹೊಳೆದರು?

ದ್ರುಪದ ಗುಡಿಗಟ್ಟಿದನು ಕುಂತಿಯ
ವಿಪುಳ ಹರುಷವನೇನನೆಂಬೆನು
ದ್ರುಪದ ಯದು ಪರಿವಾರವುಲಿದುದು ಜಲಧಿ ಘೋಷದಲಿ
ಅಪದೆಸೆಯ ಮುಗಿಲೊಡೆದು ಹೊಳೆ ಹೊಳೆ
ದು ಪರಿಚರ ರವಿಯಂತೆ ತತ್ಕ್ಷಣ
ವಿಪುಳ ತೇಜಃಪುಂಜರೆಸೆದರು ಪಾಂಡುನಂದನರು (ಆದಿ ಪರ್ವ, ೧೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ದ್ರುಪದ ಸಂತೋಷಗೊಂಡನು, ಕುಂತಿಯ ಸಂತೋಷದ ಪರಿ ಹೇಗೆ ತಾನೆ ಹೇಳಲಿ, ದ್ರುಪದ ಮತ್ತು ಯದು ಪರಿವಾರದವರು ಸಮುದ್ರದಂತೆ ಘೋಷಮಾಡಿದರು. ದುರಾದೃಷ್ಟದ ದೆಸೆಯ ಮೋಡವು ಚದುರಿ ಅಂತರಿಕ್ಷದಲ್ಲಿ ಕಾಣುವ ಸೂರ್ಯನಂತೆ ಪಾಂಡವರು ಅತಿಶಯ ತೇಜಸ್ಸಿನಿಂದ ಹೊಳೆದರು.

ಅರ್ಥ:
ಗುಡಿಕಟ್ಟು: ಸಂತೋಷಗೊಳ್ಳು; ವಿಪುಳ: ಬಹಳ; ಹರುಷ: ಸಂತೋಷ; ಪರಿವಾರ: ವಂಶ; ಉಲಿ: ಕೂಗು, ಧ್ವನಿ; ಜಲಧಿ: ಸಮುದ್ರ; ಘೋಷ: ಗಟ್ಟಿಯಾದ ಶಬ್ದ; ಅಪದೆಸೆ: ದುರಾದೃಷ್ಟ; ಮುಗಿಲ್: ಮೋಡ, ಆಕಾಶ; ಒಡೆದು: ಚೂರಾಗು; ಹೊಳೆ: ಕಾಂತಿ; ಪರಿಚರ: ಸೇವಕ, ಆಳು; ರವಿ: ಸೂರ್ಯ; ತೇಜಸ್ಸು: ಕಾಂತಿ; ನಂದನ: ಮಕ್ಕಳು;

ಪದವಿಂಗಡಣೆ:
ದ್ರುಪದ +ಗುಡಿಗಟ್ಟಿದನು +ಕುಂತಿಯ
ವಿಪುಳ +ಹರುಷವನ್+ಏನನೆಂಬೆನು
ದ್ರುಪದ+ ಯದು +ಪರಿವಾರ+ವುಲಿದುದು +ಜಲಧಿ +ಘೋಷದಲಿ
ಅಪದೆಸೆಯ +ಮುಗಿಲೊಡೆದು +ಹೊಳೆ +ಹೊಳೆ
ದು +ಪರಿಚರ+ ರವಿಯಂತೆ +ತತ್ಕ್ಷಣ
ವಿಪುಳ +ತೇಜಃಪುಂಜರ್+ಎಸೆದರು +ಪಾಂಡು+ನಂದನರು

ಅಚ್ಚರಿ:
(೧) ದ್ರುಪದ – ೧,೩ ಸಾಲಿನ ಮೊದಲ ಪದ, ವಿಪುಳ – ೨, ೬ ಸಾಲಿನ ಮೊದಲ ಪದ
(೨) ಉಲಿ, ಘೋಷ – ಶಬ್ದ, ಧ್ವನಿಯ ಸಮನಾರ್ಥಕ ಪದ
(೩) ಹೊಳೆ, ತೇಜ – ಸಮನಾರ್ಥಕ ಪದ
(೪) ಸಂತೋಷದ ಕೂಗು ಹೇಗಿತ್ತು – ಜಲಧಿ ಘೋಷದಲಿ ಸಮುದ್ರದಂತೆ