ಪದ್ಯ ೫: ಅರ್ಜುನನು ಏನೆಂದು ಘೋಷಿಸಿದನು?

ಶಿವಶಿವಾ ಬಳಲಿದುದು ಬಲವಗಿ
ದವಗಡಿಸಿದುದು ನಿದ್ದೆ ನೂಕದು
ಬವರವುಬ್ಬಿದ ತಿಮಿರವಳಿಯಲಿ ಸಾಕು ರಣವೆನುತ
ದಿವಿಜಪತಿಸುತನೆದ್ದು ಸೇನಾ
ನಿವಹದಲಿ ಸಾರಿದನು ಲಗ್ಗೆಯ
ರವವ ನಿಲಿಸಿದನಖಿಳ ಘನಗಂಭೀರನಾದದಲಿ ಪಾರ್ಥ (ದ್ರೋಣ ಪರ್ವ, ೧೭ ಸಂಧಿ, ೫ ಪದ್ಯ)

ತಾತ್ಪರ್ಯ:
ಶಿವಶಿವಾ ಸೈನ್ಯವು ಹೋರಾಡಿ ಬಳಲಿದೆ, ನಿದ್ದೆಯ ಕಾಟ ಹೆಚ್ಚಿದೆ, ಕತ್ತಲು ಹೋಗುವವರೆಗೂ ಯುದ್ಧಬೇಡ, ಎಂದು ಚಿಂತಿಸಿ ಸೈನ್ಯಕ್ಕೆ ಲಗ್ಗೆಯನ್ನು ನಿಲ್ಲಿಸಿ ಎಂದು ಅರ್ಜುನನು ಗಂಭೀರ ಘೋಷ ಮಾಡಿದನು.

ಅರ್ಥ:
ಬಳಲು: ಆಯಾಸಗೊಳ್ಳು; ಅವಗಡಿಸು: ಕಡೆಗಣಿಸು; ನಿದ್ದೆ: ಶಯನ; ನೂಕು: ತಳ್ಳು; ಬವರ: ಕಾಳಗ, ಯುದ್ಧ; ಉಬ್ಬು: ಹೆಚ್ಚಾಗು; ತಿಮಿರ: ಕತ್ತಲೆ; ಸಾಕು: ನಿಲ್ಲು ರಣ: ಯುಚ್ಛ; ದಿವಿಜಪತಿ: ದೇವತೆಗಳ ಒಡೆಯ (ಇಂದ್ರ); ಸುತ: ಪುತ್ರ; ಎದ್ದು: ಮೇಲೇಳು; ನಿವಹ: ಗುಂಪು; ಸಾರು: ಹತ್ತಿರಕ್ಕೆ ಬರು; ಲಗ್ಗೆ: ಆಕ್ರಮಣ; ರವ: ಶಬ್ದ; ನಿಲಿಸು: ನಿಲ್ಲು; ಘನ: ಗಟ್ಟಿ; ಗಂಭೀರ: ಆಳವಾದ, ಗಹನವಾದ; ನಾದ: ಶಬ್ದ;

ಪದವಿಂಗಡಣೆ:
ಶಿವಶಿವಾ +ಬಳಲಿದುದು +ಬಲವಗಿದ್
ಅವಗಡಿಸಿದುದು +ನಿದ್ದೆ +ನೂಕದು
ಬವರವ್+ಉಬ್ಬಿದ +ತಿಮಿರವಳಿಯಲಿ +ಸಾಕು +ರಣವೆನುತ
ದಿವಿಜಪತಿಸುತನ್+ಎದ್ದು +ಸೇನಾ
ನಿವಹದಲಿ +ಸಾರಿದನು +ಲಗ್ಗೆಯ
ರವವ+ ನಿಲಿಸಿದನ್+ಅಖಿಳ +ಘನಗಂಭೀರ+ನಾದದಲಿ +ಪಾರ್ಥ

ಅಚ್ಚರಿ:
(೧) ಅರ್ಜುನನನ್ನು ದಿವಿಜಪತಿಸುತ ಎಂದು ಕರೆದಿರುವುದು
(೨) ಬವರ, ರಣ – ಸಮಾನಾರ್ಥಕ ಪದಗಳು