ಏನಿದದ್ಭುತವೆನುತ ತಲೆಯನು
ತಾನೆ ಕೊಡಹಿದನಂಜಲಿಯನದ
ನೇನನೆಂಬೆನು ಕೃಷ್ಣರಾಯನ ಮಂತ್ರಶಕ್ತಿಯನು
ಆ ನರೇಂದ್ರನ ತಲೆ ಸಹಸ್ರವಿ
ಧಾನದಲಿ ಬಿರಿದುದು ಸುಯೋಧನ
ಸೇನೆ ಹರಿದುದು ಜರಿದುದರಿಭಟಧೈರ್ಯಗಿರಿನಿಕರ (ದ್ರೋಣ ಪರ್ವ, ೧೪ ಸಂಧಿ, ೪೪ ಪದ್ಯ)
ತಾತ್ಪರ್ಯ:
ಇದೇನಾಶ್ಚರ್ಯ ಎಂದುಕೊಂಡು ಆ ವೃದ್ಧಕ್ಷತ್ರನು ತಾನೇ ಬೊಗಸೆಯನ್ನು ಕೊಡವಿದನು. ಅದು ಕೆಳಕ್ಕೆ ಬಿದ್ದೊಡನೆ ಅವನ ತಲೆಯಲ್ಲಿ ಸಹಸ್ರ ಬಿರುಕುಗಳಾದವು. ವೃದ್ಧ ಕ್ಷತ್ರನೂ ಮಡಿದನು. ಕೃಷ್ಣನ ಉಪಾಯವು ಎಂಥದ್ದು! ಕೌರವ ಸೈನ್ಯ ಛಿದ್ರ ಛಿದ್ರವಾಯಿತು. ವೀರರು ಅಧೀನರಾದರು. ಪಡೆ ಹಿಮ್ಮೆಟ್ಟಿತ್ತು.
ಅರ್ಥ:
ಅದ್ಭುತ: ಆಶ್ಚರ್ಯ; ತಲೆ: ಶಿರ; ಕೊಡಹು: ತಳ್ಳು, ಬೀಳಿಸು; ಅಂಜಲಿ: ಕೈಬೊಗಸೆ; ರಾಯ: ರಾಜ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಶಕ್ತಿ: ಬಲ; ನರೇಂದ್ರ: ರಾಜ; ತಲೆ: ಶಿರ; ಸಹಸ್ರ: ಸಾವಿರ; ವಿಧಾನ: ಬಗೆ; ಬಿರಿ: ಸೀಳು; ಸೇನೆ: ಸೈನ್ಯ; ಹರಿ: ಚದುರು; ಜರಿ: ಅಳುಕು, ಹಿಂಜರಿ; ಅರಿ: ವೈರಿ; ಭಟ: ಸೈನ್ಯ; ಧೈರ್ಯ: ಎದೆಗಾರಿಕೆ, ಕೆಚ್ಚು; ಗಿರಿ: ಬೆಟ್ಟ; ನಿಕರ: ಗುಂಪು;
ಪದವಿಂಗಡಣೆ:
ಏನಿದ್+ಅದ್ಭುತವ್+ಎನುತ +ತಲೆಯನು
ತಾನೆ +ಕೊಡಹಿದನ್+ಅಂಜಲಿಯನ್+ಅದ
ನೇನನ್+ಎಂಬೆನು +ಕೃಷ್ಣರಾಯನ +ಮಂತ್ರ+ಶಕ್ತಿಯನು
ಆ +ನರೇಂದ್ರನ +ತಲೆ +ಸಹಸ್ರ+ವಿ
ಧಾನದಲಿ +ಬಿರಿದುದು +ಸುಯೋಧನ
ಸೇನೆ +ಹರಿದುದು +ಜರಿದುದ್+ಅರಿ+ಭಟ+ಧೈರ್ಯ+ಗಿರಿ+ನಿಕರ
ಅಚ್ಚರಿ:
(೧) ರೂಪಕದ ಪ್ರಯೋಗ – ಸೈನ್ಯದ ಧೈರ್ಯದ ಬೆಟ್ಟ ಅಲುಗಾಡಿತು ಎಂದು ಹೇಳುವ ಪರಿ – ಜರಿದುದರಿಭಟಧೈರ್ಯಗಿರಿನಿಕರ