ಶ್ರುತಿಪಠಣವೋ ತರ್ಪಣವೊ ಮೇ
ಣತಿಥಿ ಪೂಜೆಯೊ ಭೂತಯಜ್ಞವೊ
ಹುತವಹಾರಾಧನೆಯೊ ರಣವೀಯೈಯ್ದರೊಳಗೇನು
ಶ್ರುತಿ ತದರ್ಥಸ್ಮೃತಿಗಳಲಿ ಪಂ
ಡಿತರು ನಡೆವುದ ಮಾದು ಮೂರ್ಖರ
ಗತಿಯನನುಕರಿಸಿದರೆ ಬಳಿಕ ವಿಶೇಷವೇನೆಂದ (ದ್ರೋಣ ಪರ್ವ, ೧೮ ಸಂಧಿ, ೫೭ ಪದ್ಯ)
ತಾತ್ಪರ್ಯ:
ಭಾರಧ್ವಾಜರು ತಮ್ಮ ಮಾತನ್ನು ಮುಂದುವರೆಸುತ್ತಾ, ವೇದಾಧ್ಯಯ, ತರ್ಪಣ, ಅತಿಥಿ ಪೂಜೆ, ಭೂತಯಜ್ಞ, ಅಗ್ನಿಯ ಆರಾಧನೆ ಇವು ಬ್ರಾಹ್ಮಣರ ಮೂಲಭೂತ ಕರ್ತವ್ಯಗಳು. ಯುದ್ಧವೆಂಬುದು ಈ ಐದರಲ್ಲಿ ಯಾವುದು? ಶೃತಿ ವಿಹಿತ ಕರ್ಮ, ಅದನ್ನು ಅನುಸಂಧಾನ ಮಾಡುವ ಸ್ಮೃತಿ ವಿಧಿ ಇವುಗಳನ್ನು ಬಿಟ್ಟು, ಮೂರ್ಖರಂತೆ ವರ್ತಿಸಿದರೆ ಏನು ಮಾಡಲು ಸಾಧ್ಯ ಎಂದು ಕೇಳಿದನು.
ಅರ್ಥ:
ಶ್ರುತಿ: ವೇದ; ಪಠಣ: ಓದು; ತರ್ಪಣ: ತೃಪ್ತಿಪಡಿಸುವಿಕೆ; ಮೇಣ್: ಅಥವ; ಅತಿಥಿ: ಆಮಂತ್ರಣವಿಲ್ಲದೆ ಬರುವವ; ಪೂಜೆ: ಆರಾಧನೆ; ಭೂತ: ಜಗತ್ತಿನ ಪ್ರಾಣಿವರ್ಗ; ಯಜ್ಞ: ಯಾಗ; ಹುತವಹ: ಅಗ್ನಿ; ಆರಾಧನೆ: ಪೂಜೆ; ರಣ: ಯುದ್ಧ; ಶೃತಿ: ವೇದ; ಅರ್ಥ: ಅಭಿಪ್ರಾಯ; ಸ್ಮೃತಿ: ಧರ್ಮಶಾಸ್ತ್ರ; ಪಂಡಿತ: ವಿದ್ವಾಂಸ; ನಡೆ: ಚಲಿಸು; ಮೂರ್ಖ: ದಡ್ಡ; ಗತಿ: ಸ್ಥಿತಿ; ಅನುಕರಿಸು: ಹಿಂಬಾಲಿಸು; ಬಳಿಕ: ನಂತರ; ವಿಶೇಷ: ಅತಿಶಯತೆ, ವೈಶಿಷ್ಟ್ಯ; ಮಾದು: ನಿಂತುಹೋಗು;
ಪದವಿಂಗಡಣೆ:
ಶ್ರುತಿ+ಪಠಣವೋ+ ತರ್ಪಣವೊ+ ಮೇಣ್
ಅತಿಥಿ +ಪೂಜೆಯೊ +ಭೂತಯಜ್ಞವೊ
ಹುತವಹ+ಆರಾಧನೆಯೊ +ರಣವ್+ಈ+ಐದರೊಳಗೇನು
ಶ್ರುತಿ +ತದರ್ಥ+ಸ್ಮೃತಿಗಳಲಿ+ ಪಂ
ಡಿತರು +ನಡೆವುದ+ ಮಾದು+ ಮೂರ್ಖರ
ಗತಿಯನ್+ಅನುಕರಿಸಿದರೆ +ಬಳಿಕ+ ವಿಶೇಷವೇನೆಂದ
ಅಚ್ಚರಿ:
(೧) ಶ್ರುತಿ – ೧, ೪ ಸಾಲಿನ ಮೊದಲ ಪದ
(೨) ಪಂಡಿತ, ಮೂರ್ಖ – ವಿರುದ್ಧಾರ್ಥ ಪದ