ಪದ್ಯ ೫೧: ಅರ್ಜುನನ ಬಾಣಗಳು ಶತ್ರುಗಳ ಮೇಲೆ ಯಾವ ಪ್ರಭಾವ ಮಾಡಿದವು?

ಮುರಿದುದಸುರರ ಮಾಯೆ ಕಾಹಿ ನೊ
ಳೆರೆದ ರಸದವೊಲವರು ನಿಜದಲಿ
ತರುಬಿ ನಿಂದರು ತೂಳಿದರು ಗಜಹಯರಥೌಘದಲಿ
ತರಿದವುಗಿದವು ತುಂಡಿಸಿದವಗಿ
ದೆರಗಿದವು ಸೀಳಿದವು ಕೊಯ್ದವು
ಕೊರೆದು ಕುಪ್ಪಳಿಸಿದವು ನಿಮಿಷಕೆ ಶರವರಿವ್ರಜವ (ಅರಣ್ಯ ಪರ್ವ, ೧೩ ಸಂಧಿ, ೫೧ ಪದ್ಯ)

ತಾತ್ಪರ್ಯ:
ಅಸುರರ ಮಾಯೆಯು ಮಾಯವಾಗಲು, ಅಚ್ಚಿಗೆ ಹಾಕಿದ ರಸದಂತೆ ರಾಕ್ಶಸರ ನಿಜ ಸ್ವರೂಪವನ್ನು ಪಡೆದರು. ಚತುರಂಗ ಸೈನ್ಯದೊಡನೆ ನನ್ನನ್ನು ತಡೆದು ನಿಲ್ಲಿಸಿದರು. ನಾನು ಪ್ರಯೋಗಿಸಿದ ಬಾಣಗಳು ಶತ್ರು ರಾಕ್ಷಸರನ್ನು ತರಿದವು,ಚುಚ್ಚಿದವು, ಕಡಿದವು, ಅಪ್ಪಳಿಸಿದವು, ಸೀಳಿದವು, ಕೊಯ್ದವು ಕೊರೆದು ಕುಪ್ಪಳಿಸಿದವು.

ಅರ್ಥ:
ಮುರಿ: ಸೀಳು; ಅಸುರ: ರಾಕ್ಷಸ; ಮಾಯೆ: ಇಂದ್ರಜಾಲ, ಗಾರುಡಿ; ಕಾಹಿ: ರಕ್ಷಿಸುವವ; ಎರೆ: ಸುರಿ, ಹೊಯ್ಯು; ರಸ: ಸಾರ; ನಿಜ: ತನ್ನ, ದಿಟ; ತರುಬು: ತಡೆ, ನಿಲ್ಲಿಸು; ತೂಳು: ಆವೇಶ, ಉನ್ಮಾದ; ಗಜ: ಆನೆ; ಹಯ: ಕುದುರೆ; ರಥ: ಬಂಡಿ; ಔಘ: ಗುಂಪು; ತರಿ: ಕಡಿ, ಕತ್ತರಿಸು; ಉಗಿ: ಹೊರಹಾಕು; ತುಂಡಿಸು: ಕತ್ತರಿಸು; ಎರಗು: ಬಾಗು; ಸೀಳು: ಕತ್ತರಿಸು; ಕೊಯ್ದು: ಕತ್ತರಿಸು; ಕೊರೆ: ಚೂರು, ಇರಿ; ಕುಪ್ಪಳಿಸು: ಜಿಗಿದು ಬೀಳು; ನಿಮಿಷ: ಕ್ಷಣ, ಕಾಲದ ಪ್ರಮಾಣ; ಶರ: ಬಾಣ; ಅರಿ: ವೈರಿ; ವ್ರಜ: ಗುಂಪು;

ಪದವಿಂಗಡಣೆ:
ಮುರಿದುದ್+ಅಸುರರ+ ಮಾಯೆ +ಕಾಹಿನೊಳ್
ಎರೆದ+ ರಸದವೊಲ್+ಅವರು+ ನಿಜದಲಿ
ತರುಬಿ+ ನಿಂದರು+ ತೂಳಿದರು+ ಗಜ+ಹಯ+ರಥ+ಔಘದಲಿ
ತರಿದವ್+ಉಗಿದವು +ತುಂಡಿಸಿದವ್+ಅಗಿದ್
ಎರಗಿದವು +ಸೀಳಿದವು +ಕೊಯ್ದವು
ಕೊರೆದು +ಕುಪ್ಪಳಿಸಿದವು+ ನಿಮಿಷಕೆ+ ಶರವ್+ಅರಿ+ವ್ರಜವ

ಅಚ್ಚರಿ:
(೧) ಆಯುಧಗಳ ಪ್ರಭಾವ – ತರಿದವುಗಿದವು ತುಂಡಿಸಿದವಗಿದೆರಗಿದವು ಸೀಳಿದವು ಕೊಯ್ದವು
ಕೊರೆದು ಕುಪ್ಪಳಿಸಿದವು ನಿಮಿಷಕೆ ಶರವರಿವ್ರಜವ

ಪದ್ಯ ೨೭: ಯಾಗದ ಭಾರವನ್ನು ಯಾರು ವಹಿಸಲು ಮುಂದಾದರು?

ಮುರುಕಿಸುವ ಮನ್ನೆಯರ ನಾಳವ
ಮುರಿವೆನಖಿಳ ದ್ವೀಪಪತಿಗಳ
ತೆರಿಸುವೆನು ಹೊರಿಸುವೆನು ನೆತ್ತಿಯಲವರ ವಸ್ತುಗಳ
ಕರುಬನೇ ಮಾಗಧನು ರಣದಲಿ
ತರಿವೆನಾತನ ನಿಮ್ಮ ಯಾಗದ
ಹೊರಿಗೆ ತನ್ನದು ಕರೆಸು ಋಷಿಗಳನೆಂದನಾ ಭೀಮ (ಸಭಾ ಪರ್ವ, ೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಈ ಯಾಗಕ್ಕೆ ವಿರೋಧಿಸುವ ರಾಜರುಗಳ ಗಂಟಲನಾಳವನ್ನು ಮುರಿಯುತ್ತೇನೆ, ಎಲ್ಲಾ ದ್ವೀಪಗಳ ರಾಜರಿಂದಲು ಕಪ್ಪವನ್ನು ಕೊಂಡು ಅವರ ನೆತ್ತಿಯಮೇಲೆಯೇ ಹೊರಿಸಿಕೊಂಡು ಬರುತ್ತೇನೆ. ಜರಾಸಂಧನು ಯಾಗಕ್ಕೆ ವಿರೋಧಿಯೇ? ಯುದ್ಧದಲ್ಲಿ ಅವನನ್ನು ಕತ್ತರಿಸಿ ಹಾಕುತ್ತೇನೆ. ನೀನು ಮಾಡುವ ರಾಜಸೂಯ ಯಾಗದ ಭಾರ ನನ್ನಮೇಲಿರಲಿ, ಯಾಗಕ್ಕೆ ನೆರವಾಗುವ ಋಷಿಗಳನ್ನು ಕರೆಸು ಎಂದು ಭೀಮನು ಯುಧಿಷ್ಠಿರನಿಗೆ ಅಭಯವನ್ನು ನೀಡಿದನು.

ಅರ್ಥ:
ಮುರುಕಿಸು: ವಿರೋಧಿಸು; ಮನ್ನೆಯ: ಮೆಚ್ಚಿನ; ನಾಳ:ಶ್ವಾಸನಾಳ; ಮುರಿ: ಚೂರುಮಾಡು; ಅಖಿಳ: ಎಲ್ಲಾ; ದ್ವೀಪ: ನೀರಿನಿಂದ ಸುತ್ತುವರಿದ ಭೂಭಾಗ; ದ್ವೀಪಪತಿ: ರಾಜ; ತೆರಿಸು: ಬಿಚ್ಚು; ಹೊರು: ಭಾರವನ್ನು ಹೇರುವಂತೆ ಮಾಡು; ನೆತ್ತಿ: ತಲೆ, ಶಿರ; ವಸ್ತು: ಸಾಮಗ್ರಿ; ಕರುಬು: ಹೊಟ್ಟೆಕಿಚ್ಚುಪಡು; ರಣ: ಯುದ್ಧ; ತರಿ:ಕಡಿ; ಯಾಗ: ಕ್ರತು; ಹೊರೆ: ಭಾರ; ಕರೆ: ಬರೆಮಾಡು; ಋಷಿ: ಮುನಿ;

ಪದವಿಂಗಡಣೆ:
ಮುರುಕಿಸುವ +ಮನ್ನೆಯರ +ನಾಳವ
ಮುರಿವೆನ್+ಅಖಿಳ +ದ್ವೀಪಪತಿಗಳ
ತೆರಿಸುವೆನು +ಹೊರಿಸುವೆನು +ನೆತ್ತಿಯಲ್+ಅವರ+ ವಸ್ತುಗಳ
ಕರುಬನೇ +ಮಾಗಧನು +ರಣದಲಿಮ್ತರಿವೆನ್+ಆತನ +ನಿಮ್ಮ +ಯಾಗದ
ಹೊರಿಗೆ +ತನ್ನದು +ಕರೆಸು +ಋಷಿಗಳನ್+ಎಂದನಾ +ಭೀಮ

ಅಚ್ಚರಿ:
(೧) ಮುರಿ, ತರಿ, ತೆರಿ, ಹೊರಿ – ೨ನೇ ಅಕ್ಷರ “ರಿ”ಕಾರ ವಿರುವ ಪದಗಳು
(೨) ಅಭಯವನ್ನು ನೀಡುವ ಪರಿ – ನಿಮ್ಮ ಯಾಗದ ಹೊರೆ ತನ್ನದು, ಕರೆಸು ಋಷಿಗಳನು…

ಪದ್ಯ ೫: ಭೀಮನ ಮಾತೃವಾತ್ಸಲ್ಯದ ನಿದರ್ಶನವೇನು?

ತಳಿರ ತರಿದೊಟ್ಟಿದನು ತರುವಿನ
ನೆಳಲೊಳಗೆ ವಿಶ್ರಮಿಸಿದರು ತನು
ಬಳಲಿಕೆಯ ಭಾರಣೆಯ ಕಡು ಜೋಡಿಸಿದ ಝೋಂಪಿನಲಿ
ಝಳಕೆ ಕಂದಿದ ಮೈಯ ಬಾಡಿದ
ಲಲಿತವದನದ ಮಾಸಿ ಕೆದರಿದ
ತಲೆಯೊಳಿರೆ ತನ್ನೈವರನು ಕಂಡಳಲಿದನು ಭೀಮ (ಆದಿ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ತನ್ನ ತಾಯಿ,ಸೋದರರನ್ನು ಹೊತ್ತು ಬಹಳ ಯೋಜನಗಳನ್ನು ಸಾಗಿದ ನಂತರ, ಎಲ್ಲರೂ ಬಳಲಿದ್ದರು. ಆಗ ಕಾಡಿನ ಮರದ ನೆರಳಲ್ಲಿ ಚಿಗುರಿದ ಮರದ ರಂಬೆಗಳನ್ನು ತಂದು ಹಾಸಿ, ಅದರಮೇಲೆ ಎಲ್ಲರು ಕುಳಿತು ವಿಶ್ರಮಿಸುತ್ತಾ, ಬಳಲಿದ ದೇಹದ ಆಯಾಸಕ್ಕೆ ಅವರೆಲ್ಲರೂ ನಿದ್ರೆಯ ಝೋಂಪಿನಲ್ಲಿ ಮಲಗಿದರು. ಅವರೆಲ್ಲರ ದೇಹವು ಬಿಸಿಲಿನ ತಾಪಕ್ಕೆ ಕಂದಿತ್ತು, ಮುಖವು ಬಾಡಿತ್ತು, ತಲೆಕೂದಲು ಕೆದರಿತ್ತು, ಸ್ಥಿತಿಯನ್ನು ಕಂಡು, ತನ್ನವರ ಸ್ಥಿತಿ ಹೀಗಿರುವುದನ್ನು ಕಂಡು ಭೀಮನು ದುಃಖಿಸಿದನು.

ಅರ್ಥ:
ತಳಿರು: ಚಿಗುರು; ತರಿ: ಕಡಿ, ಕತ್ತರಿಸು; ತರು: ಮರ; ನೆಳಲು: ನೆರಳು; ವಿಶ್ರಮ: ವಿಶ್ರಾಂತಿ, ವಿರಾಮ, ಶ್ರಮಪರಿಹಾರ; ತನು: ದೇಹ; ಬಳಲಿಕೆ: ಆಯಾಸ; ಭಾರಣೆ: ಭಾರ, ಹೊರೆ; ಕಡು: ತುಂಬ; ಜೋಡಿ: ಜೊತೆ; ಝೋಂಪು: ತೂಕಡಿಕೆ; ಝಳ: ಶಾಖ, ಉಷ್ಣತೆ; ಕಂದು: ಕಳೆಗುಂದು, ಬಣ್ಣಗೆಡು; ಮೈಯ: ದೇಹ; ಬಾಡು: ಸೊರಗು; ಲಲಿತ: ಚೆಲುವು, ಸೌಂದರ್ಯ; ವದನ: ಮುಖ; ಮಾಸು: ಮಲಿನವಾಗು, ಕಾಂತಿಗುಂದು; ಕೆದರು: ಚೆಲ್ಲಾಪಿಲ್ಲಿ, ಹರಡು; ತಲೆ: ಶಿರ; ಅಳಲು: ಅಳು, ಕೊರಗು;

ಪದವಿಂಗಡನೆ:
ತಳಿರ +ತರಿ+ದೊಟ್ಟಿದನು+ ತರುವಿನ
ನೆಳಲ್+ಒಳಗೆ+ ವಿಶ್ರಮಿಸಿದರು+ ತನು
ಬಳಲಿಕೆಯ+ ಭಾರಣೆಯ+ ಕಡು+ ಜೋಡಿಸಿದ+ ಝೋಂಪಿನಲಿ
ಝಳಕೆ+ ಕಂದಿದ+ ಮೈಯ +ಬಾಡಿದ
ಲಲಿತ+ವದನದ+ ಮಾಸಿ +ಕೆದರಿದ
ತಲೆ+ಯೊಳ್+ಇರೆ+ ತನ್ನ್+ಐವರನು+ ಕಂಡ್+ಅಳಲಿದನು+ ಭೀಮ

ಅಚ್ಚರಿ:
(೧) ಬಳಲಿದವರ ಲಕ್ಷಣ: ಝಳಕೆ ಕಂದಿದ ಮೈ, ಬಾಡಿದ ಲಲಿತ ವದನ, ಮಾಸಿ ಕೆದರಿದ ತಲೆ
(೨) “ತ” ಕಾರದ ಪದಗಳು: ತಳಿರ, ತರಿ, ತರು, ತನು, ತಲೆ, ತನ್ನ
(೩) ಮೈಯ್, ತನು – ಸಮಾನಾರ್ಥಕ ಪದ
(೪) “ಕ” ಕಾರದ ಪದಗಳು: ಕಡು, ಕಂದು, ಕಂಡ, ಕೆದರು