ರಾಯ ಕೇಳೈ ಬಲದ ಬಾಹೆಯ
ನಾಯಕರು ಜಾರಿದರು ವಾಮದ
ಜೇಯ ಸುಭಟರು ಸಿಡಿದು ತರಹರಿಸಿದರು ದೂರದಲಿ
ರಾಯ ಕಂಡನು ಬಳಿಕ ಬಲದ ಪ
ಲಾಯನದ ಪರಿವಿಡಿಯನಸುವಿನ
ಬೀಯಕಿವರಂಜಿದರೆನುತ ಮೂದಲಿಸಿದನು ನೃಪರ (ಗದಾ ಪರ್ವ, ೧ ಸಂಧಿ, ೧೭ ಪದ್ಯ)
ತಾತ್ಪರ್ಯ:
ಎಲೈ ಧೃತರಾಷ್ಟ್ರ ಕೇಳು, ಬಲಪಕ್ಕದ ಸೇನಾನಾಯಕರು ಓಡಿದರು. ತಾವು ಅಜೇಯರೆಂದು ಕೊಚ್ಚಿಕೊಳ್ಳುವ ಸುಭಟರು ದೂರಕ್ಕೋಡಿ ಸುಧಾರಿಸಿಕೊಂಡರು ದುರ್ಯೋಧನನು ತನ್ನ ಸೈನ್ಯದ ಪಲಾಯನವನ್ನು ನೋಡಿ, ಇವರು ಪ್ರಾಣದ ಹಾನಿಗೆ ಅಂಜಿದರು ಎಂದು ರಾಜರನ್ನು ಮೂದಲಿಸಿದನು.
ಅರ್ಥ:
ರಾಯ: ರಾಜ; ಕೇಳು: ಆಲಿಸು; ಬಲ: ಸೈನ್ಯ; ಬಾಹೆ: ಹೊರಗೆ; ನಾಯಕ: ಒಡೆಯ; ಜಾರು: ಬೀಳು; ವಾಮ: ಎಡಭಾಗ; ಅಜೇಯ: ಗೆಲ್ಲಲಾಗದುದು; ಸುಭಟ: ಪರಾಕ್ರಮಿ; ಸಿಡಿ: ಸೀಳು; ತರಹರಿಸು: ತಡಮಾಡು; ಕಳವಳಿಸು; ದೂರ: ಆಚೆ; ಕಂಡು: ನೋಡು; ಬಳಿಕ: ನಂತರ; ಪಲಾಯನ: ಓಡು; ಪರಿವಿಡಿ: ವ್ಯವಸ್ಥಿತವಾದ ಕ್ರಮ, ಅನುಕ್ರಮ; ಅಸು: ಪ್ರಾಣ; ಬೀಯ: ವ್ಯಯ, ನಷ್ಟ; ಅಂಜು: ಹೆದರು; ಮೂದಲಿಸು: ಹಂಗಿಸು; ನೃಪ: ರಾಜ;
ಪದವಿಂಗಡಣೆ:
ರಾಯ+ ಕೇಳೈ +ಬಲದ +ಬಾಹೆಯ
ನಾಯಕರು +ಜಾರಿದರು +ವಾಮದ್
ಅಜೇಯ +ಸುಭಟರು +ಸಿಡಿದು +ತರಹರಿಸಿದರು +ದೂರದಲಿ
ರಾಯ +ಕಂಡನು +ಬಳಿಕ +ಬಲದ +ಪ
ಲಾಯನದ +ಪರಿವಿಡಿಯನ್+ಅಸುವಿನ
ಬೀಯಕ್+ಇವರ್+ಅಂಜಿದರ್+ಎನುತ +ಮೂದಲಿಸಿದನು +ನೃಪರ
ಅಚ್ಚರಿ:
(೧) ಹಂಗಿಸುವ ಪರಿ – ಅಸುವಿನ ಬೀಯಕಿವರಂಜಿದರೆನುತ ಮೂದಲಿಸಿದನು ನೃಪರ