ಪದ್ಯ ೫೮: ಶಲ್ಯನು ಯುಧಿಷ್ಠಿರನನ್ನು ಹೇಗೆ ಹಂಗಿಸಿದನು?

ಎಸು ಯುಧಿಷ್ಠಿರ ಹಲಗೆ ಖಡ್ಗವ
ಕುಸುರಿದರಿಯಾ ಚಾಪವಿದ್ಯಾ
ಕುಶಲನೆಂಬರಲೈ ತನುತ್ರ ರಥಂಗಳಿಲ್ಲೆಮಗೆ
ಅಸುವ ತಡೆವರೆ ರಣಪಲಾಯನ
ವೆಸೆವುದೇ ಕ್ಷತ್ರಿಯರಿಗತಿಸಾ
ಹಸಿಕನಾದಡೆ ನಿಲ್ಲೆನುತ ಮೂದಲಿಸಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ಎಲವೋ ಯುಧಿಷ್ಠಿರ, ಬಾಣಗಳಿಂದ ನನ್ನ ಖಡ್ಗ ಗುರಾಣಿಗಳನ್ನು ಕತ್ತರಿಸಿಹಾಕು, ನೀನು ಬಿಲ್ಲು ವಿದ್ಯೆಯಲ್ಲಿ ಚತುರನೆನ್ನುತ್ತಾರೆ, ನನಗೆ ಕವಚವಿಲ್ಲ, ರಥವಿಲ್ಲ. ಪ್ರಾಣವನ್ನುಳಿಸಿಕೊಳ್ಳಲು ಓಡಿ ಹೋಗುವುದೊಂದೇ ದಾರಿ. ಕ್ಷತ್ರಿಯನಾದುದರಿಂದ ಓಡಿ ಹೋಗುವಂತಿಲ್ಲ. ನಿನ್ನಲ್ಲಿ ಸಾಹಸವಿದ್ದುದೇ ಆದರೆ ನಿಲ್ಲು ಎಂದು ಶಲ್ಯನು ಮೂದಲಿಸಿದನು.

ಅರ್ಥ:
ಹಲಗೆ: ಒಂದು ಬಗೆಯ ಗುರಾಣಿ; ಎಸು: ಬಾಣ ಪ್ರಯೋಗ; ಖಡ್ಗ: ಕತ್ತಿ; ಕುಸುರಿ: ಸೂಕ್ಷ್ಮವಾದ; ಅರಿ: ಸೀಳು; ಚಾಪ: ಬಿಲ್ಲು ಕುಶಲ: ಚಾತುರ್ಯ; ತನುತ್ರ: ಕವಚ; ರಥ: ಬಂಡಿ; ಅಸು: ಪ್ರಾಣ; ತಡೆ: ನಿಲ್ಲು; ರಣ: ಯುದ್ಧಭೂಮಿ; ಪಲಾಯನ: ಓಡು; ಸಾಹಸಿ: ಪರಾಕ್ರಮಿ; ಮೂದಲಿಸು: ಹಂಗಿಸು;

ಪದವಿಂಗಡಣೆ:
ಎಸು+ ಯುಧಿಷ್ಠಿರ +ಹಲಗೆ +ಖಡ್ಗವ
ಕುಸುರಿದ್+ಅರಿ+ಆ +ಚಾಪವಿದ್ಯಾ
ಕುಶಲನೆಂಬರಲೈ +ತನುತ್ರ +ರಥಂಗಳಿಲ್ಲ್+ಎಮಗೆ
ಅಸುವ +ತಡೆವರೆ +ರಣ+ಪಲಾಯನವ್
ಎಸೆವುದೇ +ಕ್ಷತ್ರಿಯರಿಗ್+ಅತಿ+ಸಾ
ಹಸಿಕನಾದಡೆ +ನಿಲ್ಲೆನುತ +ಮೂದಲಿಸಿದನು +ಶಲ್ಯ

ಅಚ್ಚರಿ:
(೧) ಎಸು, ಅಸು – ಪ್ರಾಸ ಪದ
(೨) ಹಲಗೆ, ಖಡ್ಗ, ಚಾಪ – ಆಯುಧಗಳನ್ನು ಹೆಸರಿಸುವ ಶಬ್ದ
(೩) ಕ್ಷತ್ರಿಯರ ಧರ್ಮ – ಅಸುವ ತಡೆವರೆ ರಣಪಲಾಯನವೆಸೆವುದೇ ಕ್ಷತ್ರಿಯರಿಗ್

ಪದ್ಯ ೧೦: ಘಟೋತ್ಕಚನ ಯುದ್ಧವು ಹೇಗೆ ನಡೆದಿತ್ತು?

ಎರಗಿದನು ಸಿಡಿಲಾಗಿ ಕಂಗಳೊ
ಳಿರುಕಿದನು ಮಿಂಚಾಗಿ ಮಳೆಯನು
ಕರೆದು ನಾದಿದನಾತಪತ್ರ ತನುತ್ರ ಸೀಸಕವ
ತುರುಕಿದನು ಹೊಗೆಯಾಗಿ ಮಿಗೆ ಬೊ
ಬ್ಬಿರಿದನೊಂದೆಡೆಯಲ್ಲಿ ಸುಭಟರ
ನೊರಲಿಸಿದನೊಂದೆಡೆಯಲೇನೆಂಬೆನು ಮಹಾರಣವ (ದ್ರೋಣ ಪರ್ವ, ೧೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ಸಿಡಿಲಾಗಿ ಹೊಡೆದನು, ಮಿಂಚಾಗಿ ಕಣ್ಣುಗಳ ಬಳಿ ಸುಳಿದಉ ಕಂಗೆಡಿಸಿದನು. ಮಳೆಯಾಗಿ ಸುರಿದು ಕೊಡೆ, ಕವಚ, ಶಿರಸ್ತ್ರಾಣಗಲನ್ನು ನೆನೆಸಿದನು. ಹೊಗೆಯಾಗಿ ಹೊಕ್ಕು ಉಸಿರುಗೆಡಿಸಿದನು. ಅಲ್ಲಲ್ಲಿ ನಿಮ್ತು ಭಯಂಕರವಾಗಿ ಬೊಬ್ಬಿರಿದನು. ಆ ಮಹಾಯುದ್ಧವನ್ನು ಹೇಗೆ ವರ್ಣಿಸಲಿ ಎಂದು ಸಂಜಯನು ವಿವರಿಸಿದನು.

ಅರ್ಥ:
ಎರಗು: ಬಾಗು; ಸಿಡಿಲು: ಚಿಮ್ಮು, ಸಿಡಿ; ಕಂಗಳು: ಕಣ್ಣು; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಮಿಂಚು: ಹೊಳಪು; ಮಳೆ: ವರ್ಷ; ಕರೆ: ಬರೆಮಾಡು; ನಾದು: ಕಲಸು; ಆತಪತ್ರ: ಕೊಡೆ, ಛತ್ರಿ; ತನುತ್ರ: ಕವಚ; ಸೀಸಕ: ಶಿರಸ್ತ್ರಾಣ; ತುರುಕು: ಒತ್ತಿ ತುಂಬು; ಹೊಗೆ: ಧೂಮ; ಮಿಗೆ: ಹೆಚ್ಚು; ಬೊಬ್ಬಿರಿ: ಕೂಗು, ಅರಚು; ಸುಭಟ: ಸೈನಿಕ; ಒರಲು: ಅರಚು, ಕೂಗಿಕೊಳ್ಳು; ಮಹಾರಣ: ಮಹಾಯುದ್ಧ;

ಪದವಿಂಗಡಣೆ:
ಎರಗಿದನು +ಸಿಡಿಲಾಗಿ +ಕಂಗಳೊಳ್
ಇರುಕಿದನು +ಮಿಂಚಾಗಿ +ಮಳೆಯನು
ಕರೆದು +ನಾದಿದನ್+ಆತಪತ್ರ +ತನುತ್ರ +ಸೀಸಕವ
ತುರುಕಿದನು +ಹೊಗೆಯಾಗಿ +ಮಿಗೆ +ಬೊ
ಬ್ಬಿರಿದನ್+ಒಂದೆಡೆಯಲ್ಲಿ +ಸುಭಟರನ್
ಒರಲಿಸಿದನ್+ಒಂದೆಡೆಯಲ್+ಏನೆಂಬೆನು +ಮಹಾರಣವ

ಅಚ್ಚರಿ:
(೧) ಸಿಡಿಲಾಗಿ, ಮಿಂಚಾಗಿ, ಹೊಗೆಯಾಗಿ – ಘಟೋತ್ಕಚನ ಮಾಯಾಯುದ್ಧದ ಪರಿ
(೨) ತನುತ್ರ, ಆತಪತ್ರ – ಪದಗಳ ಬಳಕೆ

ಪದ್ಯ ೩೫: ಭೀಮನು ಕರ್ಣನ ಬಾಣಗಳನ್ನು ಹೇಗೆ ಎದುರಿಸಿದನು?

ಬಳಲಿದವು ತೇಜಿಗಳು ಸಾರಥಿ
ಯಳುಕಿದನು ಶರಹತಿಗೆ ಭೀಮನ
ಬಲು ಪತಾಕೆ ತನುತ್ರ ರಥ ಕರ್ಣಾಸ್ತ್ರಮಯವಾಯ್ತು
ಹಿಳುಕ ಹೊದಿಸಿದನಖಿಲ ದೆಸೆಗಳ
ನಿಲುಕಲರಿದೆನೆ ನಿಮಿಷ ಮಾತ್ರಕೆ
ಕಳಚಿ ಕಳೆದನು ಭೀಮ ತೊಟ್ಟನು ಮತ್ತೆ ಮಾರ್ಗಣವ (ದ್ರೋಣ ಪರ್ವ, ೧೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಭೀಮನ ರಥದ ಕುದುರೆಗಳು ಬಳಲಿದವು. ಬಾಣಗಳ ಹೊಡೆತಕ್ಕೆ ಸಾರಥಿಯಾದ ವಿಶೋಕನು ಅಳುಕಿದನು. ಕವಚ ರಥಗಳು ಕರ್ಣಾಸ್ತ್ರಗಳಿಂದ ತುಂಬಿದವು. ಇನ್ನೇನು ಭೀಮನ ಕೈ ನಿಂತಿತೆನ್ನುವಷ್ಟರಲ್ಲಿ ಅವನು ಕರ್ಣನ ಬಾಣಗಳನ್ನೆಲ್ಲಾ ಖಂಡಿಸಿ, ಮತ್ತೆ ಬಾಣವನ್ನು ಹೂಡಿದನು.

ಅರ್ಥ:
ಬಳಲು: ಆಯಾಸ; ತೇಜಿ: ಕುದುರೆ; ಸಾರಥಿ: ಸೂತ; ಅಳುಕು: ಹೆದರು; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಬಲು: ದೊಡ್ಡ; ಪತಾಕೆ: ಬಾವುಟ; ತನುತ್ರ: ಕವಚ; ರಥ: ಬಂಡಿ; ಅಸ್ತ್ರ: ಶಸ್ತ್ರ, ಆಯುಧ; ಹಿಳುಕು: ಬಾಣದ ಹಿಂಭಾಗ; ಹೊದಿಸು: ಆವರಿಸು; ಅಖಿಲ: ಎಲ್ಲಾ; ದೆಸೆ: ದಿಕ್ಕು; ನಿಲುಕು: ಚಾಚುವಿಕೆ; ಅರಿ: ಸೀಳು; ನಿಮಿಷ: ಕ್ಷಣ; ಕಳಚು: ಬೇರ್ಪಡಿಸು; ಕಳೆ: ಬೀಡು, ತೊರೆ; ತೊಡು: ಧರಿಸು; ಮಾರ್ಗಣ: ಬಾಣ;

ಪದವಿಂಗಡಣೆ:
ಬಳಲಿದವು +ತೇಜಿಗಳು +ಸಾರಥಿ
ಅಳುಕಿದನು +ಶರಹತಿಗೆ +ಭೀಮನ
ಬಲು +ಪತಾಕೆ +ತನುತ್ರ +ರಥ +ಕರ್ಣಾಸ್ತ್ರಮಯವಾಯ್ತು
ಹಿಳುಕ +ಹೊದಿಸಿದನ್+ಅಖಿಲ +ದೆಸೆಗಳ
ನಿಲುಕಲ್+ಅರಿದೆನೆ +ನಿಮಿಷ +ಮಾತ್ರಕೆ
ಕಳಚಿ +ಕಳೆದನು +ಭೀಮ +ತೊಟ್ಟನು +ಮತ್ತೆ +ಮಾರ್ಗಣವ

ಅಚ್ಚರಿ:
(೧) ಕರ್ಣನ ಪರಾಕ್ರಮ – ಶರಹತಿಗೆ ಭೀಮನ ಬಲು ಪತಾಕೆ ತನುತ್ರ ರಥ ಕರ್ಣಾಸ್ತ್ರಮಯವಾಯ್ತು