ಪದ್ಯ ೩೭: ದುರ್ಯೋಧನನು ಯಾವ ವಿಷಯಕ್ಕೆ ಬೆದರಿದನು?

ಎನುತ ಸಂಜಯಸಹಿತ ಕೌರವ
ಜನಪ ಬಂದನು ತತ್ಸರೋವರ
ಕನಿಲನಿದಿರಾದನು ಸುಗಂಧದ ಶೈತ್ಯಪೂರದಲಿ
ತನುವಿಗಾಪ್ಯಾಯನದಿನಂತ
ರ್ಮನಕೆ ಪಲ್ಲಟವಾಯ್ತು ಭೀಮನ
ಜನಕನರಿದನು ತನ್ನ ಗುಪ್ತಸ್ಥಾನ ಸಂಗತಿಯ (ಗದಾ ಪರ್ವ, ೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ, ಕೌರವನು ಸಂಜಯನೊಡನೆ ಸರೋವರ ಬಳಿಗೆ ಬಂದನು. ಆಗ ಸುಗಂಧಪೂರಿತವಾದ ಹಿತಕರವಾದ ತಂಗಾಳಿ ಬೀಸಿ ದೇಹಕ್ಕೆ ಸಂತಸವಾದರೂ, ಭೀಮನ ತಂದೆಯು ತಾನಿರುವ ಗುಪ್ತಸ್ಥಾನವನ್ನರಿತನಂದು ಮನಸ್ಸು ಬೆದರಿತು.

ಅರ್ಥ:
ಸಹಿತ: ಜೊತೆ; ಜನಪ: ದೊರೆ; ಬಂದು: ಆಗಮಿಸು; ಸರೋವರ: ಸರಸಿ; ಅನಿಲ: ವಾಯು; ಇದಿರು: ಎದುರು; ಸುಗಂಧ: ಪರಿಮಳ; ಶೈತ್ಯ: ತಂಪು; ಪೂರ:ಬಹಳವಾಗಿ; ತನು: ದೇಹ; ಆಪ್ಯಾಯ: ಸಂತೋಷ, ಹಿತ; ಅಂತರ್ಮನ: ಅಂತಃಕರಣ; ಪಲ್ಲಟ: ಮಾರ್ಪಾಟು; ಜನಕ: ತಂದೆ; ಅರಿ: ತಿಳಿ; ಗುಪ್ತ: ರಹಸ್ಯ; ಸ್ಥಾನ: ಜಾಗ; ಸಂಗತಿ: ವಿಚಾರ;

ಪದವಿಂಗಡಣೆ:
ಎನುತ+ ಸಂಜಯ+ಸಹಿತ +ಕೌರವ
ಜನಪ+ ಬಂದನು +ತತ್ಸರೋವರಕ್
ಅನಿಲನ್+ಇದಿರಾದನು +ಸುಗಂಧದ +ಶೈತ್ಯ+ಪೂರದಲಿ
ತನುವಿಗ್+ಆಪ್ಯಾಯನದಿನ್+ಅಂತ
ರ್ಮನಕೆ +ಪಲ್ಲಟವಾಯ್ತು +ಭೀಮನ
ಜನಕನ್+ಅರಿದನು +ತನ್ನ +ಗುಪ್ತಸ್ಥಾನ +ಸಂಗತಿಯ

ಅಚ್ಚರಿ:
(೧) ಎರಡು ರೀತಿಯ ಅನುಭವ – ತನುವಿಗಾಪ್ಯಾಯನದಿನಂತರ್ಮನಕೆ ಪಲ್ಲಟವಾಯ್ತು
(೨) ಕೌರವ ಜನಪ, ಭೀಮನ ಜನಕ – ಪದಗಳ ಬಳಕೆ