ಪದ್ಯ ೫೦: ಭೀಮನ ಅಸಹಾಯಕತೆಯೇನು?

ಅಂದು ದುಶ್ಯಾಸನನ ಕರುಳನು
ತಿಂದಡಲ್ಲದೆ ತಣಿವು ದೊರೆಕೊಳ
ದೆಂದು ಹಾಯ್ದೊಡೆ ಹಲುಗಿರಿದು ಮಾಣಿಸಿದ ಯಮಸೂನು
ಇಂದು ಕೀಚಕನಾಯನೆರಗುವೆ
ನೆಂದು ಮರನನು ನೋದಿದರೆ ಬೇ
ಡೆಂದ ಹದನನು ಕಂಡೆ ನೀನೆನಗುಂಟೆಯಪರಾಧ (ವಿರಾಟ ಪರ್ವ, ೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅಂದು ವಸ್ತ್ರಾಪಹರಣದ ಸಮಯದಲ್ಲಿ ದುಶ್ಯಾಸನನ ಕರುಳನ್ನು ಕಿತ್ತು ತಿನ್ನದ ಹೊರತು ತೃಪ್ತಿದೊರಕುವುದಿಲ್ಲವೆಂದು ನುಗ್ಗಿದರೆ ಅಣ್ಣನು ಹಲ್ಲು ಕಿರಿದು ತಪ್ಪಿಸಿದ. ಈ ದಿನ ಸಭೆಯಲ್ಲಿ ಕೀಚಕ ನಾಯಿಯನ್ನು ಬಡಿಯಬೇಕೆಂದು ಮರವನ್ನು ನೋಡಿದರೆ ಅಣ್ಣನು ಬೇಡವೆಂದುದನ್ನು ನೀನೇ ಕಂಡಿರುವೆ. ಹೀರಿಗುವಾಗ ನನ್ನಲ್ಲೇನು ತಪ್ಪಿದೆ ನೀನೇ ಹೇಳು ಎಂದು ಭೀಮನು ನೊಂದು ನುಡಿದನು.

ಅರ್ಥ:
ಅಂದು: ಹಿಂದೆ; ಕರುಳು: ಪಚನಾಂಗ; ತಿಂದು: ಉಣ್ಣು; ತಣಿವು: ತೃಪ್ತಿ, ಸಮಾಧಾನ; ದೊರಕು: ಪಡೆ; ಹಾಯ್ದು: ಹೊಡೆ; ಹಾಯಿ: ಮೇಲೆಬೀಳು; ಹಲುಗಿರಿ: ನಗು; ಮಾಣು: ತಪ್ಪಿಸು, ನಿಲ್ಲಿಸು; ನಾಯಿ: ಕುನ್ನಿ; ಎರಗು: ಬೀಳಿಸು; ಮರ: ತರು; ನೋಡು: ವೀಕ್ಷಿಸು; ಬೇಡ: ತ್ಯಜಿಸು; ಹದ: ರೀತಿ; ಕಂಡು: ನೋಡು; ಅಪರಾಧ: ತಪ್ಪು;

ಪದವಿಂಗಡಣೆ:
ಅಂದು +ದುಶ್ಯಾಸನನ +ಕರುಳನು
ತಿಂದಡಲ್ಲದೆ +ತಣಿವು +ದೊರೆಕೊಳ
ದೆಂದು +ಹಾಯ್ದೊಡೆ +ಹಲುಗಿರಿದು+ ಮಾಣಿಸಿದ +ಯಮಸೂನು
ಇಂದು+ ಕೀಚಕ+ನಾಯನ್+ಎರಗುವೆನ್
ಎಂದು +ಮರನನು+ ನೋದಿದರೆ+ ಬೇ
ಡೆಂದ +ಹದನನು +ಕಂಡೆ +ನೀನ್+ಎನಗುಂಟೆ+ಅಪರಾಧ

ಅಚ್ಚರಿ:
(೧) ಅಂದು, ಇಂದು, ಎಂದು – ಪ್ರಾಸ ಪದಗಳು

ಪದ್ಯ ೨೧: ಮದ್ರದೇಶದ ಜನರ ಗುಣ ಎಂತಹುದು?

ರಣದೊಳೊಡೆಯನ ಜರೆದು ಜಾರುವ
ಗುಣಸಮುದ್ರರು ಮಾದ್ರದೇಶದ
ಭಣಿತೆ ತಾನದು ಬೇರೆ ನಡೆವಳಿಯಂಗವದು ಬೇರೆ
ಗಣಿಕೆಯರ ಮಧ್ಯದಲಿ ಮದ್ಯದ
ತಣಿವಿನಲಿ ತನಿಸೊಕ್ಕಿ ಬತ್ತಲೆ
ಕುಣಿವ ಭಂಗಿಯ ಭಂಡರೆಲವೋ ಶಲ್ಯ ಕೇಳೆಂದ (ಕರ್ಣ ಪರ್ವ, ೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕರ್ಣನು ಕೋಪದಿಂದ ಎಲವೋ ಶಲ್ಯ ನಿನ್ನ ಮಾದ್ರದೇಶದ ಜನರೆಂತಹವರು ಎಂದು ನಾನು ಹೇಳಬೇಕೆ, ನಿಮ್ಮ ದೇಶದವರು ಯುದ್ಧ ಸಮಯದಲ್ಲಿ ಒಡೆಯನನ್ನು ಜರಿದು ಜಾರಿಕೊಂಡು ಓಡಿ ಹೋಗುವವರು, ಅವರು ಮಾತನಾಡುವುದೇ ಒಂದು, ನಡತೆಯೇ ಮತ್ತೊಂದು, ಮದ್ಯವನ್ನು ಕಂಠಪೂರ್ತಿ ಕುಡಿದು ಅತಿಯಾಗಿ ಸೊಕ್ಕಿ ಗಣಿಕೆಯರ ನಡುವೆ ಬತ್ತಲೆಯಾಗಿ ಕುಣಿಯುವ ಭಂಡರು ನೀವು ಎಂದು ಕರ್ಣನು ಶಲ್ಯನನ್ನು ಜರಿದನು.

ಅರ್ಥ:
ರಣ: ಯುದ್ಧ; ಒಡೆಯ: ದೊರೆ; ಜರೆ: ಬಯ್ಯುವುದು, ತೆಗಳು; ಜಾರುವ: ನುಣುಚಿಕೊಳ್ಳು, ಹಾಳಾಗು; ಗುಣ: ಸ್ವಭಾವ; ಸಮುದ್ರ: ಸಾಗರ; ಭಣಿತೆ:ಸಂಭಾಷಣೆ; ಬೇರೆ: ಅನ್ಯ;ನಡೆವಳಿ: ನಡವಳಿಕೆ, ವರ್ತನೆ; ಗಣಿಕೆ: ಸೂಳೆ, ವೇಶ್ಯೆ; ಮಧ್ಯ: ನಡುವೆ; ತಣಿವು:ತೃಪ್ತಿ, ಸಮಾಧಾನ; ತನಿ: ಹೆಚ್ಚಾಗು, ಅತಿಶಯವಾಗು; ಸೊಕ್ಕು: ಅಮಲು, ಮದ; ಬತ್ತಲೆ: ನಗ್ನವಾಗಿ; ಕುಣಿ: ನರ್ತಿಸು; ಭಂಗಿ: ದೇಹದ ನಿಲುವು, ವಿನ್ಯಾಸ; ಭಂಡ:ನಾಚಿಕೆ ಇಲ್ಲದವನು; ಕೇಳು: ಆಲಿಸು;

ಪದವಿಂಗಡಣೆ:
ರಣದೊಳ್+ಒಡೆಯನ +ಜರೆದು +ಜಾರುವ
ಗುಣಸಮುದ್ರರು +ಮಾದ್ರದೇಶದ
ಭಣಿತೆ +ತಾನದು +ಬೇರೆ +ನಡೆವಳಿಯಂಗವದು +ಬೇರೆ
ಗಣಿಕೆಯರ +ಮಧ್ಯದಲಿ +ಮದ್ಯದ
ತಣಿವಿನಲಿ +ತನಿಸೊಕ್ಕಿ +ಬತ್ತಲೆ
ಕುಣಿವ +ಭಂಗಿಯ +ಭಂಡರ್+ಎಲವೋ +ಶಲ್ಯ +ಕೇಳೆಂದ

ಅಚ್ಚರಿ:
(೧) ಗುಣಸಮುದ್ರರು – ಜರೆದು ಜಾರುವ ಗುಣ ನಿಮ್ಮಲ್ಲಿ ಅಧಿಕವಾಗಿದೆ ಎಂದು ಹೇಳಲು ಬಳಸಿದ ಪದ
(೨) ನುಡಿದಂತೆ ನಡೆಯರು ಎಂದು ಹೇಳಲು – ಭಣಿತೆ ತಾನದು ಬೇರೆ ನಡೆವಳಿಯಂಗವದು ಬೇರೆ
(೩) ಜೋಡಿ ಪದಗಳು – ಮಧ್ಯದಲಿ ಮದ್ಯದ; ತಣಿವಿನಲಿ ತನಿಸೊಕ್ಕಿ; ಭಂಗಿಯ ಭಂಡರ್;