ಘಾಯವಡೆದರು ಸುರಿವ ಸರಳಿಗೆ
ನಾಯಕರು ಮರಳಿದರು ಪೌರುಷ
ಮಾಯವಾಯಿತು ತನು ನಡುಗಿತಡಿಗಡಿಗೆ ಡೆಂಡಣಿಸಿ
ಕಾಯಗಟ್ಟಿತು ಭೀತಿ ಬಿರುದಿನ
ಬಾಯೆಣಿಕೆ ಬಯಲಾಯ್ತು ಜೀವದ
ಬೀಯಕಿವರಂಜಿದರು ನೆನೆದರು ಮನೆಯ ರಾಣಿಯರ (ಭೀಷ್ಮ ಪರ್ವ, ೮ ಸಂಧಿ, ೬೧ ಪದ್ಯ)
ತಾತ್ಪರ್ಯ:
ಕೌರವ ವೀರರು ಸುರಿಯುವ ಬಾಣಗಳಿಂದ ಗಾಯಗೊಂಡು ಹಿಂದಕ್ಕೆ ಹೋದರು. ಅವರ ಪೌರುಷ ಮಾಯವಾಯಿತು. ಅವರ ದೇಹಗಳು ನಡುಗಿದವು. ಹೆಜ್ಜೆ ಹೆಜ್ಜೆಗೂ ಅವರು ಆಚೆ ಈಚೆ ಬಾಗಿದರು. ಅವರ ಮೈ ಜಡವಾಯಿತು. ಭೀತಿ ಗಟ್ಟಿಯಾಯಿತು. ಅವರ ಕೀರ್ತಿದಾಹ ಬಯಲಾಯಿತು. ಪ್ರಾಣ ಹೋಗುವುದೆಂದು ಭೀತಿಗೊಂಡರು. ಮನೆಯಲ್ಲಿದ್ದ ತಮ್ಮ ರಾಣಿಯರನ್ನು ನೆನೆದರು.
ಅರ್ಥ:
ಘಾಯ: ಪೆಟ್ಟು; ಸುರಿ: ಮೇಲಿನಿಂದ ಬೀಳು, ವರ್ಷಿಸು; ಸರಳು: ಬಾಣ; ನಾಯಕ: ಒಡೆಯ; ಮರಳು: ಹಿಂದಿರುಗು; ಪೌರುಷ: ಪರಾಕ್ರಮ; ಮಾಯ: ಕಾಣದಾಗುವಿಕೆ; ತನು: ದೇಹ; ನಡುಗು: ಅಲುಗಾಡು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ; ಡೆಂಡಣಿಸು: ಕಂಪಿಸು; ಕಾಯ: ದೇಹ; ಕಟ್ಟು: ಬಂಧಿಸು; ಭೀತಿ: ಭಯ; ಬಿರುದು: ಗೌರವ ಸೂಚಕ ಪದ; ಬಾಯೆಣಿಕೆ: ದಾಹ; ಬಯಲು: ಶೂನ್ಯ, ವ್ಯರ್ಥ; ಜೀವ: ಪ್ರಾಣ; ಬೀಯ: ನಷ್ಟ; ಅಂಜು: ಹೆದರು; ನೆನೆ: ಜ್ಞಾಪಿಸಿಕೊಳ್ಳು; ಮನೆ: ಆಲಯ; ರಾಣಿ: ಅರಸಿ;
ಪದವಿಂಗಡಣೆ:
ಘಾಯವಡೆದರು +ಸುರಿವ +ಸರಳಿಗೆ
ನಾಯಕರು +ಮರಳಿದರು +ಪೌರುಷ
ಮಾಯವಾಯಿತು +ತನು +ನಡುಗಿತ್+ಅಡಿಗಡಿಗೆ +ಡೆಂಡಣಿಸಿ
ಕಾಯಗಟ್ಟಿತು +ಭೀತಿ +ಬಿರುದಿನ
ಬಾಯೆಣಿಕೆ +ಬಯಲಾಯ್ತು +ಜೀವದ
ಬೀಯಕ್+ಇವರ್+ಅಂಜಿದರು +ನೆನೆದರು +ಮನೆಯ +ರಾಣಿಯರ
ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಭೀತಿ ಬಿರುದಿನ ಬಾಯೆಣಿಕೆ ಬಯಲಾಯ್ತು