ಭುಜವನೊದರಿಸಿ ಸಿಂಹರವದಲಿ
ಗಜರಿ ಗದೆಯನು ತಿರುಹಿ ರಿಪು ಭೂ
ಭುಜರನರಸಿದನಳವಿಗಾಮ್ತರೆ ಕೊಂದನತಿಬಳರ
ತ್ರಿಜಗ ಮಝ ಭಾಪೆನಲು ಪವಮಾ
ನಜನು ತಿರುಗಿಟ್ಟಣಿಸೆ ಸೇನಾಂ
ಬುಜಕೆ ಕುಂಜರನಾದನೈ ಜನಮೇಜಯ ಕ್ಷಿತಿಪ (ಭೀಷ್ಮ ಪರ್ವ, ೫ ಸಂಧಿ, ೭ ಪದ್ಯ)
ತಾತ್ಪರ್ಯ:
ತೋಳನ್ನು ತಟ್ಟಿ, ಸಿಂಹನಾದ ಮಾಡಿ, ಗದೆಯನ್ನು ತಿರುವಿ ಶತ್ರು ರಾಜರನ್ನು ಹುಡುಕಿ ಯುದ್ಧದಲ್ಲಿ ಕೊಂದನು. ಭೀಮನು ಮತ್ತೆ ಆಕ್ರಮಿಸಿ ಶತ್ರುಸೇನಾ ಕಮಲವನಕ್ಕೆ ಮದದಾನೆಯಾದನು.
ಅರ್ಥ:
ಭುಜ: ತೋಳು; ಒದರು: ಕೊಡುವು; ಸಿಂಹ: ಕೇಸರಿ; ರವ: ಶಬ್ದ; ಗಜರಿ: ಗರ್ಜಿಸು; ಗದೆ: ಮುದ್ಗರ; ತಿರುಹಿ: ತಿರುಗಿಸು; ರಿಪು: ವೈರಿ; ಭೂಭುಜ: ಅರಸು; ಅರಸಿ: ಹುಡುಕಿ; ಅಳವಿ: ಯುದ್ಧ; ಕೊಂದು: ಸಾಯಿಸು; ಅತಿಬಲ: ಪರಾಕ್ರಮಿ; ತ್ರಿಜಗ: ಮೂರು ಲೋಕ; ಮಝ: ಭಲೇ; ಪವಮಾನಜ: ವಾಯು ಪುತ್ರ; ತಿರುಗು: ಅಲೆದಾಡು; ಸೇನ: ಸೈನ್ಯ; ಅಂಬುಜ: ಕಮಲ; ಕುಂಜರ: ಆನೆ; ಕ್ಷಿತಿಪ: ರಾಜ;
ಪದವಿಂಗಡಣೆ:
ಭುಜವನ್+ಒದರಿಸಿ +ಸಿಂಹ+ರವದಲಿ
ಗಜರಿ+ ಗದೆಯನು +ತಿರುಹಿ +ರಿಪು +ಭೂ
ಭುಜರನ್+ಅರಸಿದನ್+ಅಳವಿಗಾಂತರೆ +ಕೊಂದನ್+ಅತಿಬಳರ
ತ್ರಿಜಗ +ಮಝ +ಭಾಪೆನಲು +ಪವಮಾ
ನಜನು +ತಿರುಗಿಟ್ಟಣಿಸೆ +ಸೇನಾಂ
ಬುಜಕೆ +ಕುಂಜರನಾದನೈ+ ಜನಮೇಜಯ +ಕ್ಷಿತಿಪ
ಅಚ್ಚರಿ:
(೧) ಉಪಮಾನದ ಪ್ರಯೋಗ – ಪವಮಾನಜನು ತಿರುಗಿಟ್ಟಣಿಸೆ ಸೇನಾಂಬುಜಕೆ ಕುಂಜರನಾದನೈ