ಪದ್ಯ ೧೫: ಬಂಡಿಗಳಲ್ಲಿ ಏನನ್ನು ತುಂಬಲಾಯಿತು?

ಕರವತಿಗೆ ಹೊಂಗಳಸ ಹೊಂಗೊ
ಪ್ಪರಿಗೆ ದೀಪಸ್ತಂಭ ಹೇಮದ
ಸರಪಣಿಯ ಮಣಿಮಯದ ಜಂತ್ರದ ಜೀವಪುತ್ರಿಗಳ
ಮರಕತದ ಮಧುಪಾತ್ರೆ ನೀಲದ
ಕರಗ ವೈಡೂರಿಯದ ಪಡಿಗವ
ಚರರು ತಂದೊಟ್ಟಿದರು ಬಂಡಿಗೆ ಭಾರಸಂಖ್ಯೆಯಲಿ (ಗದಾ ಪರ್ವ, ೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ನೀರಿನ ಬುದ್ದಲಿಗಳು, ಬಂಗಾರದ ಕಲಶ ಕೊಪ್ಪರಿಗೆಗಳು, ದೀಪದ ಕಂಬಗಳು, ಬಂಗಾರದ ಸರಪಣಿಹಾಕಿದ ಯಂತ್ರಚಾಲಿತ ಗೊಂಬೆಗಳು, ಮರಕತದ ಮಧುಪಾತ್ರೆಗಳು, ನೀಲದ ಕಲಶ, ವೈಢೂರ್ಯದ ತಟ್ಟೆಗಳನ್ನು ದೂತರು ತಂದು ಬಂಡಿಗಳಲ್ಲಿ ತುಂಬಿದರು.

ಅರ್ಥ:
ಕರ: ಹಸ್ತ; ಹೊಂಗಳಸ: ಚಿನ್ನದ ಕುಂಭ; ಉಪ್ಪರಿಗೆ: ಮಹಡಿ, ಸೌಧ; ದೀಪ: ಸೊಡರು; ಸ್ತಂಭ: ಕಂಬ; ಹೇಮ: ಚಿನ್ನ; ಸರಪಣಿ: ಸಂಕೋಲೆ, ಶೃಂಖಲೆ; ಮಣಿ: ಬೆಲೆಬಾಳುವ ರತ್ನ; ಜಂತ್ರ: ಯಂತ್ರ, ವಾದ್ಯ; ಜೀವ: ಉಸಿರಾಡುವ ದೇಹ; ಜೀವಪುತ್ರಿ: ಗೊಂಬೆ; ಮರಕತ: ನವರತ್ನಗಳಲ್ಲಿ ಒಂದು, ಪಚ್ಚೆ; ಮಧು: ಜೇನು; ನೀಲ: ಉದ್ದ, ದೊಡ್ಡ; ಕರಗ: ಕಲಶ; ವೈಡೂರಿಯ: ನವರತ್ನಗಳಲ್ಲಿ ಒಂದು; ಪಡಿಗ: ಪಾತ್ರೆ; ಚರರು: ದೂತರು; ಒಟ್ಟು: ಸೇರಿಸು; ಬಂಡಿ: ರಥ; ಭಾರ: ದೊಡ್ಡ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಕರವತಿಗೆ +ಹೊಂಗಳಸ +ಹೊಂಗ್
ಉಪ್ಪರಿಗೆ +ದೀಪಸ್ತಂಭ +ಹೇಮದ
ಸರಪಣಿಯ+ ಮಣಿಮಯದ +ಜಂತ್ರದ +ಜೀವಪುತ್ರಿಗಳ
ಮರಕತದ +ಮಧುಪಾತ್ರೆ +ನೀಲದ
ಕರಗ+ ವೈಡೂರಿಯದ +ಪಡಿಗವ
ಚರರು +ತಂದೊಟ್ಟಿದರು +ಬಂಡಿಗೆ +ಭಾರ+ಸಂಖ್ಯೆಯಲಿ

ಅಚ್ಚರಿ:
(೧) ಹೊಂಗಳಸ ಹೊಂಗೊಪ್ಪರಿಗೆ – ಪದಗಳ ಬಳಕೆ
(೨) ಯಂತ್ರದ ಗೊಂಬೆ ಎಂದು ಹೇಳಲು – ಜಂತ್ರದ ಜೀವಪುತ್ರಿಗಳ

ಪದ್ಯ ೫೪: ಭೀಮನ ಆಕ್ರಮಣ ಹೇಗಿತ್ತು?

ಚೆಲ್ಲಿದವು ಗಜಯೂಥವಪ್ರತಿ
ಮಲ್ಲ ಭೀಮನ ಗದೆಯ ಘಾತಿಯ
ಘಲ್ಲಣೆಗೆ ಕಂಠಣಿಸಿದವು ಟೆಂಠಣಿಸುವಾನೆಗಳು
ಸೆಲ್ಲೆಹದ ಮಳೆಗರೆದು ಭೀಮನ
ಘಲ್ಲಿಸಿದರಾರೋಹಕರು ಬಲು
ಬಿಲ್ಲ ಜಂತ್ರದ ನಾಳಿಯಂಬಿನ ಸರಳ ಸಾರದಲಿ (ಗದಾ ಪರ್ವ, ೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಆನೆಗಳ ಸೇನೆಯು ಅಪ್ರತಿಮಲ್ಲ ಭೀಮನ ಗದೆಯ ಹೊಡೆತಕ್ಕೆ ಚದುರಿ ಓಡಿದವು. ಜೋದರು ಶಲ್ಯ, ನಾಳಿಯಂಬುಗಳನ್ನು ಬಿಟ್ಟು ಅವನನ್ನು ಪೀಡಿಸಿದರು.

ಅರ್ಥ:
ಚೆಲ್ಲು: ಹರಡು; ಗಜ: ಆನೆ; ಯೂಥ: ಗುಂಪು, ಹಿಂಡು; ಪ್ರತಿಮಲ್ಲ: ಎದುರಾಳಿ ವೀರ; ಗದೆ: ಮುದ್ಗರ; ಘಾತಿ: ಹೊಡೆತ; ಘಲ್ಲಣೆ: ಘಲ್ ಘಲ್ ಎಂಬ ಶಬ್ದ; ಕಂಟಿಸು: ಬಂಧಿಸು; ಟೆಂಠಣಿಸು: ನಡುಗು, ಕಂಪಿಸು; ಸೆಲ್ಲೆಹ: ಈಟಿ, ಭರ್ಜಿ; ಮಳೆ: ವರ್ಷ; ಘಲ್ಲಿಸು: ಪೀಡಿಸು; ಆರೋಹಕ: ಸವಾರ; ಜಂತ್ರ: ಯಂತ್ರ; ನಾಳಿ: ಒಂದು ಅಳತೆಯ ಪ್ರಮಾಣ; ಅಂಬು: ಬಾಣ; ಸರಳ: ಬಾಣ; ಸಾರ: ತಿರುಳು, ಗುಣ;

ಪದವಿಂಗಡಣೆ:
ಚೆಲ್ಲಿದವು +ಗಜಯೂಥವ್+ಅಪ್ರತಿ
ಮಲ್ಲ +ಭೀಮನ +ಗದೆಯ +ಘಾತಿಯ
ಘಲ್ಲಣೆಗೆ +ಕಂಠಣಿಸಿದವು +ಟೆಂಠಣಿಸುವ್+ಆನೆಗಳು
ಸೆಲ್ಲೆಹದ +ಮಳೆಗರೆದು +ಭೀಮನ
ಘಲ್ಲಿಸಿದರ್+ಆರೋಹಕರು +ಬಲು
ಬಿಲ್ಲ+ ಜಂತ್ರದ +ನಾಳಿ+ಅಂಬಿನ +ಸರಳ +ಸಾರದಲಿ

ಅಚ್ಚರಿ:
(೧) ಭೀಮನ ಮೇಲಿನ ಆಕ್ರಮಣ – ಸೆಲ್ಲೆಹದ ಮಳೆಗರೆದು ಭೀಮನ ಘಲ್ಲಿಸಿದರಾರೋಹಕರು
(೨) ಗ ಕಾರದ ತ್ರಿವಳಿ ಪದ – ಗದೆಯ ಘಾತಿಯ ಘಲ್ಲಣೆಗೆ