ಪದ್ಯ ೬೭: ಧೃತರಾಷ್ಟ್ರ ಗಾಂಧಾರಿಯ ಬಳಿ ಯಾವ ವಿಷಯವನ್ನು ತೋಡಿಕೊಂಡ?

ಪೋಗು ನೀನೆಂದವನ ಕಳುಹಿದ
ನಾಗ ಮನದೊಳಗಧಿಕ ಚಿಂತಾ
ಸಾಗರದೊಳೋರಂತೆ ಮುಳುಗಿದನಂದು ಧೃತರಾಷ್ಟ್ರ
ಈಗಳಿನ ಸವಿಗಳುಪಿ ಮೇಲಣ
ತಾಗನರಿಯನು ಕಂದನಿದಕಿ
ನ್ನೇಗುವೆನು ಗಾಂಧಾರಿ ನೀ ಹೇಳೆಂದನಾ ಭೂಪ (ಸಭಾ ಪರ್ವ, ೧೩ ಸಂಧಿ, ೬೭ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ದುರ್ಯೋಧನನನ್ನು ಹೋಗೆಂದು ಹೇಳಿ ಚಿಂತೆಯ ಸಾಗರದ ನೀರಿನಲ್ಲಿ ಒದ್ದೆಯಾಗಿ ಅದರಲ್ಲೇ ಮುಳುಗಿದನು. ನನ್ನ ಮಗ ಈಗಿನ ರುಚಿಯನ್ನು ಸವಿಯಲು ಮನಸ್ಸನ್ನಿಟ್ಟನೇ ಹೊರತು ಮುಂದೆ ಬೀಳುವ ಪೆಟ್ಟನ್ನು ಇವನು ಅರಿತಿಲ್ಲ. ಗಾಂಧಾರಿ ಇದನ್ನು ನಾನು ಹೇಗೆ ಸಹಿಸಿಕೊಳ್ಳಲಿ ಹೇಳು ಎಂದು ತನ್ನ ಚಿಂತೆಯನ್ನು ಪತ್ನಿಗೆ ಹೇಳಿದನು.

ಅರ್ಥ:
ಪೋಗು: ಹೋಗು; ಕಳುಹು: ಕಳಿಸಿ, ಬೀಳ್ಕೊಟ್ಟು; ಮನ: ಮನಸ್ಸು; ಅಧಿಕ: ಹೆಚ್ಚು; ಚಿಂತೆ: ಯೋಚನೆ; ಸಾಗರ: ಸಮುದ್ರ; ಊರು: ಒದ್ದೆಯಾಗು; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ಗಳಿಗೆ: ಸಮಯ; ಸವಿ: ಸಂತೋಷ; ಮೇಲಣ: ಮುಂದೆ; ಅರಿ: ತಿಳಿ; ಕಂದ: ಮಗ; ಏಗು: ಸಾಗಿಸು, ನಿಭಾಯಿಸು; ಭೂಪ: ರಾಜ;

ಪದವಿಂಗಡಣೆ:
ಪೋಗು +ನೀನೆಂದ್+ಅವನ +ಕಳುಹಿದನ್
ಆಗ+ ಮನದೊಳಗ್ +ಅಧಿಕ +ಚಿಂತಾ
ಸಾಗರದೊಳ್+ಊರಂತೆ +ಮುಳುಗಿದನ್+ಅಂದು +ಧೃತರಾಷ್ಟ್ರ
ಈಗಳಿನ +ಸವಿಗಳುಪಿ+ ಮೇಲಣ
ತಾಗನ್+ಅರಿಯನು +ಕಂದನ್+ಇದಕಿನ್
ಏಗುವೆನು +ಗಾಂಧಾರಿ+ ನೀ +ಹೇಳೆಂದನಾ +ಭೂಪ

ಅಚ್ಚರಿ:
(೧) ಧೃತರಾಷ್ಟ್ರನ ಕುರುಡು ಪ್ರೀತಿ – ಕಂದ ಎಂದು ಸಂಭೋದಿಸುವ ಬಗೆ
(೨) ಚಿಂತೆಯ ಘಾಢತೆ – ಮನದೊಳಗಧಿಕ ಚಿಂತಾ ಸಾಗರದೊಳೋರಂತೆ ಮುಳುಗಿದನಂದು ಧೃತರಾಷ್ಟ್ರ