ಪದ್ಯ ೬೮: ದ್ರೋಣನ ರಚನೆಯನ್ನು ಕೃಷ್ಣನು ಯಾರಿಗೆ ಹೇಳಿದನು?

ಬೀಳುಕೊಂಡುದು ರಾಜಸಭೆ ತ
ಮ್ಮಾಲಯಕೆ ಸೈಂಧವನು ಚಿಂತಾ
ಲೋಲನಿರ್ದನು ಮರಣಜೀವನ ಜಾತ ಸಂಶಯನು
ಕೋಲಗುರುವಿನ ವಿವಿಧ ರಚನೆಯ
ಕೇಳಿದನು ನಸುನಗುತ ಪಾರ್ಥಗೆ
ಹೇಳಿದನು ಕರುಣದಲಿ ಗದುಗಿನ ವೀರನಾರಯಣ (ದ್ರೋಣ ಪರ್ವ, ೮ ಸಂಧಿ, ೬೮ ಪದ್ಯ
)

ತಾತ್ಪರ್ಯ:
ರಾಜಸಭೆಯು ವಿಸರ್ಜಿಸಿತು. ಸೈಂಧವನು ತನ್ನ ಅರಮನೆಗೆ ಬಂದು ನಾಳೆ ನಾನು ಸಾಯುತ್ತೇನೋ, ಬದುಕುವೆನೋ ಎಂಬ ಸಂಶಯವು ಅವನಲ್ಲಿ ಹುಟ್ಟಿತು. ಶ್ರೀಕೃಷ್ಣನು ತನ್ನ ಬೇಹುಗಾರರಿಂದ ದ್ರೋಣನ ವ್ಯೂಹ ರಚನೆಯನ್ನು ನಸುನಗುತ್ತಾ ಕೇಳಿ ಅರ್ಜುನನಿಗೆ ಅದನ್ನು ಕರುಣೆಯಿಮ್ದ ಹೇಳಿದನು.

ಅರ್ಥ:
ಬೀಳುಕೊಂಡು: ತೆರಳು; ರಾಜಸಭೆ: ಓಲಗ; ಆಲಯ: ಮನೆ; ಚಿಂತಾಲೋಲ: ಚಿಂತೆಯಲ್ಲಿ ಮಗ್ನನಾಗಿ; ಲೋಲ: ಪ್ರೀತಿ; ಮರಣ; ಸಾವು: ಜೀವನ: ಪ್ರಾಣ; ಜಾತ: ಹುಟ್ಟಿದ; ಸಂಶಯ: ಅನುಮಾನ; ಕೋಲ: ಬಾಣ; ಗುರು: ಆಚಾರ್ಯ; ವಿವಿಧ: ಹಲವಾರು; ರಚನೆ: ನಿರ್ಮಾಣ; ಕೇಳು: ಆಲಿಸು; ನಸುನಗು: ಹಸನ್ಮುಖ; ಹೇಳು: ತಿಳಿಸು; ಕರುಣೆ: ದಯೆ;

ಪದವಿಂಗಡಣೆ:
ಬೀಳುಕೊಂಡುದು +ರಾಜಸಭೆ +ತ
ಮ್ಮಾಲಯಕೆ +ಸೈಂಧವನು +ಚಿಂತಾ
ಲೋಲನಿರ್ದನು +ಮರಣ+ಜೀವನ +ಜಾತ +ಸಂಶಯನು
ಕೋಲಗುರುವಿನ +ವಿವಿಧ +ರಚನೆಯ
ಕೇಳಿದನು +ನಸುನಗುತ+ ಪಾರ್ಥಗೆ
ಹೇಳಿದನು +ಕರುಣದಲಿ +ಗದುಗಿನ+ ವೀರನಾರಯಣ

ಅಚ್ಚರಿ:
(೧) ಕೇಳಿದನು, ಹೇಳಿದನು – ಪ್ರಾಸ ಪದ
(೨) ಸೈಂಧವನ ಸಂಶಯ – ಸೈಂಧವನು ಚಿಂತಾಲೋಲನಿರ್ದನು ಮರಣಜೀವನ ಜಾತ ಸಂಶಯನು