ಪದ್ಯ ೨೦: ಕೃಪಾಚಾರ್ಯರಲ್ಲಿ ಮಕ್ಕಳು ಯಾವ ವಿದ್ಯೆಯನ್ನು ಕಲೆತರು?

ಆ ಕೃಪಾಚಾರಿಯನ ದೆಸೆಯಿಂ
ದೀ ಕುಮಾರರು ನಿಖಿಳ ತರ್ಕ
ವ್ಯಾಕರಣ ಮೊದಲೆನೆ ಚತುರ್ದಶ ವಿದ್ಯೆಗಳನರಿದು
ಲೋಕ ವೈದಿಕ ಮುಖ್ಯ ಸಕಲಕ
ಲಾಕುಶಲರಾದರು ಧನುಃ ಪ್ರವಿ
ವೇಕ ವಿಪುಣರನರಸುತ್ತಿದ್ದನು ಮತ್ತೆ ಗಾಂಗೇಯ (ಆದಿ ಪರ್ವ, ೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೃಪಚಾರ್ಯರಲ್ಲಿ ಕೌರವ ಪಾಂಡವರು ಹದಿನಾಲ್ಕು ವಿದ್ಯೆಗಳನ್ನು (ನಾಲ್ಕು ವೇದ, ಆರು ವೇದಾಂತ, ಧರ್ಮಶಾಸ್ತ್ರ, ಪುರಾಣ, ಮೀಮಾಂಸ, ನ್ಯಾಯ, ತರ್ಕ) ಕಲಿತರು. ಲೌಕಿಕ ವೈದಿಕ ಕಲೆಗಳಲ್ಲಿ ನಿಪುಣರಾದರು. ಧರ್ನುವಿದ್ಯೆಯನ್ನು ಕಲಿಸಲು ಯಾರಾದರು ನಿಪುಣರಾದ ಗುರುಗಳನ್ನು ಭೀಷ್ಮನು ಹುಡುಕುತ್ತಿದ್ದನು.

ಅರ್ಥ:
ದೆಸೆ: ಕಾರಣ; ನಿಖಿಳ: ಎಲ್ಲಾ; ತರ್ಕ: ಆರು ದರ್ಶನಗಳಲ್ಲಿ ಒಂದು; ವ್ಯಾಕರಣ: ಭಾಷೆಯ ನಿಯಮಗಳನ್ನು ತಿಳಿಸುವ ಶಾಸ್ತ್ರ; ಮೊದಲು: ಮುಂತಾದ; ಚತುರ್ದಶ: ಹದಿನಾಲ್ಕು; ವಿದ್ಯೆ: ಜ್ಞಾನ; ಅರಿ: ತಿಳಿ; ಲೋಕ: ಜಗತ್ತು; ವೈದಿಕ: ವೇದಗಳಿಗೆ ಸಂಬಂಧಿಸಿದ; ಮುಖ್ಯ: ಪ್ರಮುಖ; ಸಕಲ: ಎಲ್ಲಾ; ಕಲೆ: ಲಲಿತವಿದ್ಯೆ, ಕುಶಲವಿದ್ಯೆ; ಕುಶಲ: ಪಾಂಡಿತ್ಯ; ಧನು: ಬಿಲ್ಲು; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ನಿಪುಣ: ಪಾರಂಗತ; ಅರಸು: ಹುಡುಕು; ಮತ್ತೆ: ಪುನಃ; ಗಾಂಗೇಯ: ಭೀಷ್ಮ;

ಪದವಿಂಗಡಣೆ:
ಆ+ ಕೃಪಾಚಾರಿಯನ +ದೆಸೆಯಿಂದ್
ಈ+ ಕುಮಾರರು +ನಿಖಿಳ +ತರ್ಕ
ವ್ಯಾಕರಣ+ ಮೊದಲೆನೆ+ ಚತುರ್ದಶ+ ವಿದ್ಯೆಗಳನರಿದು
ಲೋಕ +ವೈದಿಕ +ಮುಖ್ಯ +ಸಕಲ+ಕ
ಲಾ+ಕುಶಲರಾದರು +ಧನುಃ +ಪ್ರವಿ
ವೇಕ +ವಿಪುಣರನ್+ಅರಸುತ್ತಿದ್ದನು +ಮತ್ತೆ+ ಗಾಂಗೇಯ

ಪದ್ಯ ೧೧: ಎಲ್ಲಾ ಜೀವರಿಗೂ ಯಾವುದು ತಪ್ಪದೆ ಬರುತ್ತದೆ?

ಏನನೆಂದೆವು ಹಿಂದೆ ಧರ್ಮ ನಿ
ಧಾನವನು ಕಯ್ಯೊಡನೆ ಮರೆದೆಯಿ
ದೇನು ನಿನ್ನಯ ಮತಿಯ ವಿಭ್ರಮೆ ನಮ್ಮ ಹೇಳಿಕೆಗೆ
ಭಾನುಮತಿಯನು ತಿಳುಹು ನಿನ್ನಯ
ಮಾನಿನಿಯ ಸಂತೈಸು ಸಂಸಾ
ರಾನುಗತಿ ತಾನಿದು ಚತುರ್ದಶ ಜಗದ ಜೀವರಿಗೆ (ಗದಾ ಪರ್ವ, ೧೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಹಿಂದೆ ನಾವು ಬೋಧಿಸಿದ ಧರ್ಮ ಮಾರ್ಗವು ನೆನಪಿದೆಯಾ? ಅದನ್ನು ಕೇಳಿದೊಡನೆ ಮರೆತುಬಿಟ್ಟೆ. ಈಗ ನಾವಾಡಿದುದನ್ನು ಕೇಳಿ ಮೂರ್ಛೆಹೋದೆ. ಹೀಗೆ ಮಾಡಿದರೆ ಹೇಗೆ? ಭಾನುಮತಿ, ಗಾಂಧಾರಿಯನ್ನು ಯಾರು ಸಮಾಧಾನಪಡಿಸುವವರು? ಇದೇನು ನಿಮಗೆ ಮಾತ್ರ ಬಂದುದಲ್ಲ. ಹದಿನಾಲ್ಕು ಲೋಕಗಲ ಜಿವರಿಗೂ ಹುಟ್ಟುಸಾವಿನಂತೆ, ಸುಖ ದುಃಖಗಳೂ ತಪ್ಪದೆ ಬರುತ್ತವೆ ಎಂದು ವ್ಯಾಸರು ಹೇಳಿದರು.

ಅರ್ಥ:
ಹಿಂದೆ: ಗತಕಾಲ; ಧರ್ಮ: ಧಾರಣ ಮಾಡಿದುದು; ನಿಧಾನ: ವಿಳಂಬ, ಸಾವಕಾಶ; ಒಡನೆ: ಕೂಡಲೆ; ಮರೆತೆ: ಜ್ಞಾಪಕದಿಂದ ದೂರಮಾಡು; ಮತಿ: ಬುದ್ಧಿ; ವಿಭ್ರಮ: ಅಲೆದಾಟ, ಸುತ್ತಾಟ; ಹೇಳಿಕೆ: ನುಡಿ; ತಿಳುಹು: ತಿಳಿಸು; ಮಾನಿನಿ: ಹೆಣ್ಣು; ಸಂತೈಸು: ಸಮಾಧಾನ ಪಡಿಸು; ಸಂಸಾರ: ಬಂಧುಜನ; ಅನುಗತಿ: ಸಾವು; ಚತುರ್ದಶ: ಹದಿನಾಲ್ಕು; ಜಗ: ಪ್ರಪಂಚ; ಜೀವರು: ಜೀವಿ;

ಪದವಿಂಗಡಣೆ:
ಏನನೆಂದೆವು +ಹಿಂದೆ +ಧರ್ಮ +ನಿ
ಧಾನವನು +ಕಯ್ಯೊಡನೆ +ಮರೆದೆ+
ಇದೇನು +ನಿನ್ನಯ +ಮತಿಯ +ವಿಭ್ರಮೆ +ನಮ್ಮ +ಹೇಳಿಕೆಗೆ
ಭಾನುಮತಿಯನು +ತಿಳುಹು +ನಿನ್ನಯ
ಮಾನಿನಿಯ +ಸಂತೈಸು +ಸಂಸಾ
ರಾನುಗತಿ+ ತಾನಿದು +ಚತುರ್ದಶ +ಜಗದ +ಜೀವರಿಗೆ

ಅಚ್ಚರಿ:
(೧) ಲೋಕ ನೀತಿ – ಸಂಸಾರಾನುಗತಿ ತಾನಿದು ಚತುರ್ದಶ ಜಗದ ಜೀವರಿಗೆ

ಪದ್ಯ ೨೩: ಉತ್ತರೆಯ ಗರ್ಭವನ್ನು ಯಾವುದು ರಕ್ಷಿಸಲು ಅಣಿಯಾಯಿತು?

ಜಗವ ಹೂಡುವ ಮೇಣ್ ಚತುರ್ದಶ
ಜಗದ ಜೀವರನೂಡಿಯುಣಿಸುವ
ಜಗವನಂತರ್ಭಾವದಲಿ ಬಲಿಸುವ ಗುಣತ್ರಯದ
ಸೊಗಡು ತನ್ನ ಸಹಸ್ರಧಾರೆಯ
ಝಗೆಯೊಳೆನಿಪ ಮಹಾಸುದರ್ಶನ
ಬಿಗಿದು ಸುತ್ತಲು ವೇಢೆಯಾಯ್ತುತ್ತರೆಯ ಗರ್ಭದಲಿ (ಗದಾ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಜಗತ್ತನ್ನು ಸೃಷ್ಟಿಸಿ, ಹದಿನಾಲ್ಕು ಲೋಕಗಳ ಜೀವರನ್ನು ಸಲಹುವ, ಸಂಹರಿಸುವ ಮಾಯೆಯ ತ್ರಿಗುಣಗಲ ವಾಸನೆಯನ್ನು ತನ್ನ ಸಾವಿರ ಧಾರೆಗಳ ಬೆಳಕಿನಲ್ಲಿ ಧರಿಸುವ ಸುದರ್ಶನ ಚಕ್ರವು ಉತ್ತರೆಯ ಗರ್ಭವನ್ನಾವರಿಸಿ ರಕ್ಷಿಸಲನುವಾಯಿತು.

ಅರ್ಥ:
ಜಗ: ಜಗತ್ತು; ಹೂಡು: ಅಣಿಗೊಳಿಸು, ಸಿದ್ಧಪಡಿಸು; ಮೇಣ್: ಅಥವ; ಚತುರ್ದಶ: ಹದಿನಾಲ್ಕು; ಜೀವ: ಪ್ರಾಣ; ಊಡು: ಆಧಾರ, ಆಶ್ರಯ; ಉಣಿಸು: ತಿನ್ನಿಸು; ಭಾವ: ಭಾವನೆ, ಚಿತ್ತವೃತ್ತಿ; ಬಲಿಸು: ಗಟ್ಟಿಪಡಿಸು; ಗುಣ: ನಡತೆ, ಸ್ವಭಾವ; ತ್ರಯ: ಮೂರು; ಸೊಗಡು: ಕಂಪು, ವಾಸನೆ; ಸಹಸ್ರ: ಸಾವಿರ; ಧಾರೆ: ವರ್ಷ; ಝಗೆ: ಹೊಳಪು, ಪ್ರಕಾಶ; ಸುದರ್ಶನ: ವಿಷ್ಣುವಿನ ಕೈಯಲ್ಲಿರುವ ಆಯುಧಗಳಲ್ಲಿ ಒಂದು, ಚಕ್ರಾಯುಧ; ಬಿಗಿ: ಭದ್ರವಾಗಿರುವುದು; ಸುತ್ತಲು: ಎಲ್ಲಾ ಕಡೆ; ವೇಢೆ: ಆಕ್ರಮಣ; ಗರ್ಭ: ಹೊಟ್ಟೆ;

ಪದವಿಂಗಡಣೆ:
ಜಗವ +ಹೂಡುವ +ಮೇಣ್ +ಚತುರ್ದಶ
ಜಗದ +ಜೀವರನ್+ಊಡಿ+ಉಣಿಸುವ
ಜಗವನ್+ಅಂತರ್ಭಾವದಲಿ +ಬಲಿಸುವ +ಗುಣ+ತ್ರಯದ
ಸೊಗಡು +ತನ್ನ +ಸಹಸ್ರ+ಧಾರೆಯ
ಝಗೆಯೊಳೆನಿಪ+ ಮಹಾಸುದರ್ಶನ
ಬಿಗಿದು +ಸುತ್ತಲು +ವೇಢೆಯಾಯ್ತ್+ಉತ್ತರೆಯ +ಗರ್ಭದಲಿ

ಅಚ್ಚರಿ:
(೧) ಜಗ – ೧-೩ ಸಾಲಿನ ಮೊದಲ ಪದ
(೨) ಸುದರ್ಶನದ ವಿವರ – ಸಹಸ್ರಧಾರೆಯ ಝಗೆಯೊಳೆನಿಪ ಮಹಾಸುದರ್ಶನ

ಪದ್ಯ ೬೪: ಧರ್ಮಜನು ಅರ್ಜುನನಿಗೆ ಯಾವ ಆಶೆಯನ್ನು ತೋಡಿಕೊಂಡನು?

ಶಿವನಘಾಟದ ಶರ ಚತುರ್ದಶ
ಭುವನ ಭಂಜನವಿದು ಮದೀಯಾ
ಹವಕೆ ಹೂಣಿಗನಾಯ್ತಲೇ ಹೇರಾಳ ಸುಕೃತವಿದು
ಎವಗೆ ತೋರಿಸಬೇಹುದೀಶಾಂ
ಭವಮಹಾಸ್ತ್ರ ಪೌಢಕೇಳೀ
ವಿವರಣವ ಕಾಂಬರ್ತಿಯಾಯ್ತೆಂದನು ಧನಂಜಯಗೆ (ಅರಣ್ಯ ಪರ್ವ, ೧೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ಅಸಮಾನವಾದ ಪಾಶುಪತಾಸ್ತ್ರವು ಹದಿನಾಲ್ಕು ಲೋಕಗಳನ್ನು ಸುಡಬಲ್ಲದು, ಇದು ನಮ್ಮ ಸಮರಸಾಧನವಾದುದು ಮಹಾಪುಣ್ಯವೇ ಸರಿ. ಈ ಪಾಶುಪತಾಸ್ತ್ರದ ಪ್ರೌಢ ವಿಧಾನವನ್ನು ನೋಡಬೇಕೆಂಬಾಶೆಯಾಗಿದೆ, ತೋರಿಸು ಎಂದು ಧರ್ಮಜನು ಕೇಳಿದನು.

ಅರ್ಥ:
ಶಿವ: ಶಂಕರ; ಅಘಾಟ: ಅದ್ಭುತ, ಅತಿಶಯ; ಶರ: ಬಾಣ; ಚತುರ್ದಶ: ಹದಿನಾಲ್ಕು; ಭುವನ: ಲೋಕ; ಭಂಜನ: ನಾಶಕಾರಿ; ಆಹವ: ಯುದ್ಧ; ಹೂಣಿಗ: ಬಿಲ್ಲುಗಾರ; ಹೇರಾಳ: ಬಹಳ; ಸುಕೃತ: ಒಳ್ಳೆಯ ಕಾರ್ಯ; ಎವಗೆ: ನನಗೆ; ತೋರಿಸು: ನೋಡು, ಗೋಚರಿಸು; ಮಹಾಸ್ತ್ರ: ದೊಡ್ಡ ಶಸ್ತ್ರ; ಪ್ರೌಢ: ಶ್ರೇಷ್ಠ; ವಿವರಣ: ವಿಚಾರ; ಕಾಂಬು: ನೋಡು;

ಪದವಿಂಗಡಣೆ:
ಶಿವನ್+ಅಘಾಟದ +ಶರ +ಚತುರ್ದಶ
ಭುವನ +ಭಂಜನವಿದು +ಮದೀಯ
ಆಹವಕೆ+ ಹೂಣಿಗನ್+ಆಯ್ತಲೇ +ಹೇರಾಳ +ಸುಕೃತವಿದು
ಎವಗೆ+ ತೋರಿಸಬೇಹುದ್+ಈಶಾಂ
ಭವ+ಮಹಾಸ್ತ್ರ +ಪೌಢ+ಕೇಳ್+ಈ
ವಿವರಣವ+ ಕಾಂಬರ್ತಿಯಾಯ್ತೆಂದನು +ಧನಂಜಯಗೆ

ಅಚ್ಚರಿ:
(೧) ಪಾಶುಪತಾಸ್ತ್ರದ ಹಿರಿಮೆ – ಶಿವನಘಾಟದ ಶರ ಚತುರ್ದಶ ಭುವನ ಭಂಜನವಿದು

ಪದ್ಯ ೩೮: ಅರ್ಜುನ ಮತ್ತು ರಾಕ್ಷಸರ ನಡುವೆ ಹೇಗೆ ಯುದ್ಧ ನಡೆಯಿತು?

ಝಗಝಗಿಪ ಬಾಣಾಗ್ನಿ ಭುಗುಭುಗು
ಭುಗಿಲೆನಲು ದಿವ್ಯಾಸ್ತ್ರ ತತಿಯಲಿ
ಹೊಗೆಯ ತೋರಿಸಿದೆನು ಚತುರ್ದಶ ಭುವನ ಭವನದಲಿ
ವಿಗಡರದ ಲೆಕ್ಕಿಸದೆ ಲೋಟಿಸಿ
ಮಗುಚಿದರು ಮದ್ಬಾಣ ಮಹಿಮೆಯ
ನೊಗಡಿಸಿತು ಕಾಲಾಗ್ನಿ ಕಾಲಾಂತಕರಿಗಾ ಸಮರ (ಅರಣ್ಯ ಪರ್ವ, ೧೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಆಗ ನಾನು ಭುಗುಭುಗಿಸುವ ಜ್ವಾಲೆಯನ್ನುಳ್ಳ ದಿವ್ಯಾಸ್ತ್ರಗಳಿಂದ ಹದಿನಾಲ್ಕು ಲೋಕಗಳನ್ನು ಆವರಿಸುವ ಹೊಗೆಯನ್ನುಂಟು ಮಾಡಿದೆನು. ವೀರರಾದ ರಾಕ್ಷಸರು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ನನ್ನ ಬಾನಗಳನ್ನು ಹೊಡೆದುರುಳಿಸಿದರು. ಕಾಲಾಗ್ನಿಗೂ ಕಾಲಯಮನಿಗೂ ನಡೆಯಬಹುದಾದ ಯುದ್ಧದಮ್ತೆ ನನ್ನ ಮತ್ತು ಅಸುರರ ನಡುವೆ ಯುದ್ಧ ನಡೆಯಿತು.

ಅರ್ಥ:
ಝಗಝಗಿಸು: ಕಾಂತಿಯುಕ್ತವಾಗಿ ಹೊಳೆ; ಬಾಣ: ಸರಳು; ಅಗ್ನಿ: ಬೆಂಕಿ; ಭುಗುಭುಗಿಲು: ಭುಗು ಎಂದು ಶಬ್ದ ಮಾಡು; ದಿವ್ಯಾಸ್ತ್ರ: ಶ್ರೇಷ್ಠವಾದ ಶಸ್ತ್ರ; ತತಿ: ಸಮೂಹ; ಹೊಗೆ: ಧೂಮ; ತೋರಿಸು: ಪ್ರದರ್ಶಿಸು; ಭುವನ: ಲೋಕ; ಭವನ: ಆಲಯ; ವಿಗಡ: ಶೌರ್ಯ, ಪರಾಕ್ರಮ; ಲೆಕ್ಕಿಸು: ಎಣಿಸು; ಲೋಟಿಸು: ಉರುಳಿಸು, ಬೀಳಿಸು; ಮಗುಚು: ಹಿಂದಿರುಗಿಸು, ಮರಳಿಸು; ಮಹಿಮೆ: ಶ್ರೇಷ್ಠತೆ; ಒಗಡಿಸು: ಧಿಕ್ಕರಿಸು, ಹೇಸು; ಕಾಲಾಗ್ನಿ: ಪ್ರಳಯಕಾಲದ ಬೆಂಕಿ; ಕಾಲಾಂತಕ: ಶಿವ; ಸಮರ: ಯುದ್ಧ;

ಪದವಿಂಗಡಣೆ:
ಝಗಝಗಿಪ +ಬಾಣಾಗ್ನಿ +ಭುಗುಭುಗು
ಭುಗಿಲೆನಲು +ದಿವ್ಯಾಸ್ತ್ರ +ತತಿಯಲಿ
ಹೊಗೆಯ +ತೋರಿಸಿದೆನು+ ಚತುರ್ದಶ +ಭುವನ +ಭವನದಲಿ
ವಿಗಡರ್+ಅದ +ಲೆಕ್ಕಿಸದೆ +ಲೋಟಿಸಿ
ಮಗುಚಿದರು +ಮದ್ಬಾಣ +ಮಹಿಮೆಯನ್
ಒಗಡಿಸಿತು +ಕಾಲಾಗ್ನಿ +ಕಾಲಾಂತಕರಿಗಾ+ ಸಮರ

ಅಚ್ಚರಿ:
(೧) ಮ ಕಾರದ ಪದ – ಮಗುಚಿದರು ಮದ್ಬಾಣ ಮಹಿಮೆಯನ್
(೨) ಜೋಡಿ ಪದ – ಝಗಝಗಿಪ, ಭುಗುಭುಗು

ಪದ್ಯ ೯೮: ಪಾಶುಪತಾಸ್ತ್ರದ ಮಹತ್ವವೇನು?

ಸವಡಿನುಡಿಯುಂಟೇ ಚತುರ್ದಶ
ಭುವನದಾಹವ ದಕ್ಷವೀ ಬಾ
ಣವನು ಕೊಟ್ಟೆನು ಮಗನೆ ಬೊಮ್ಮಶಿರೋಮಹಾಶರವ
ದಿವಿಜ ದನುಜ ಭುಜಂಗಮಾದಿಗ
ಳವಗಡಿಸಲುರೆ ಹೆಚ್ಚುವುದು ಸಂ
ಭವಿಸಿದಾಹುತಿಯೆಂದು ಶರವುದ್ದಂಡ ಬಲವೆಂದ (ಅರಣ್ಯ ಪರ್ವ, ೭ ಸಂಧಿ, ೯೮ ಪದ್ಯ)

ತಾತ್ಪರ್ಯ:
ಆರ್ಜುನನ ಬೇಡಿಕೆಯನ್ನು ಕೇಳಿ, ಕೊಟ್ಟ ಮಾತಿಗೆ ಎರಡುಂಟೆ ಅರ್ಜುನ ಎಂದು ಹೇಳುತ್ತಾ, ಹದಿನಾಲ್ಕು ಲೋಕಗಳನ್ನು ಯುದ್ಧದಲ್ಲಿ ಮಣಿಸುವ ಶಕ್ತಿಯುಳ್ಳ ಬ್ರಹ್ಮ ಶಿರೋಸ್ತ್ರವನ್ನು ಕೊಡುವೆ, ದೇವ ದೈತ್ಯ ಸರ್ಪಗಳೆ ಮೊದಲಾದವರು ಎದುರಿಸಿದರೂ ಇದು ಆ ಶಕ್ತಿಗಿಂತ ಹೆಚ್ಚಾಗಿ ಇದಿರು ನಿಂತವರನ್ನು ಮಣಿಸುತ್ತದೆ, ನೀನು ಉದ್ದೇಶಿಸಿದುದೇ ಇದಕ್ಕೆ ಆಹುತಿ, ಅಷ್ಟು ಬಲಶಾಲಿಯಾದ ಅಸ್ತ್ರವಿದು ಎಂದು ಅರ್ಜುನನಿಗೆ ಹೇಳಿದನು.

ಅರ್ಥ:
ಸವಡಿ: ಸುಳ್ಳು; ನುಡಿ: ಮಾತು; ಚತುರ್ದಶ: ಹದಿನಾಲ್ಕು; ಭುವನ: ಲೋಕ; ಆಹವ: ಯುದ್ಧ; ದಕ್ಷ: ಸಮರ್ಥ; ಬಾಣ: ಶರ; ಕೊಟ್ಟೆ: ನೀಡು; ಮಗ: ಸುತ; ಬೊಮ್ಮ: ಬ್ರಹ್ಮ; ಮಹಾ: ಶ್ರೇಷ್ಠ; ಶರ: ಬಾಣ; ದಿವಿಜ: ದೇವತೆ; ದನುಜ: ದಾನವ, ರಾಕ್ಷಸ; ಭುಜಂಗ: ಹಾವು, ಉರಗ; ಆದಿ: ಮೊದಲಾದ; ಅವಗಡಿಸು: ಕಡೆಗಣಿಸು, ಸೋಲಿಸು; ಉರೆ: ಅತಿಶಯವಾಗಿ; ಹೆಚ್ಚು: ಜಾಸ್ತಿ; ಸಂಭವಿಸು: ಉಂಟಾಗು, ಒದಗಿಬರು; ಆಹುತಿ: ಬಲಿ; ಉದ್ದಂಡ: ಪ್ರಬಲವಾದ, ಶ್ರೇಷ್ಠ; ಬಲ: ಶಕ್ತಿ;

ಪದವಿಂಗಡಣೆ:
ಸವಡಿ+ನುಡಿಯುಂಟೇ +ಚತುರ್ದಶ
ಭುವನದ್+ಆಹವ+ ದಕ್ಷವ್+ಈ+ ಬಾ
ಣವನು +ಕೊಟ್ಟೆನು +ಮಗನೆ+ ಬೊಮ್ಮಶಿರೋ+ಮಹಾಶರವ
ದಿವಿಜ+ ದನುಜ+ ಭುಜಂಗಮ್+ಆದಿಗಳ್
ಅವಗಡಿಸಲ್+ಉರೆ +ಹೆಚ್ಚುವುದು +ಸಂ
ಭವಿಸಿದ್+ಆಹುತಿಯೆಂದು+ ಶರವ್+ಉದ್ದಂಡ+ ಬಲವೆಂದ

ಅಚ್ಚರಿ:
(೧) ಪಾಶುಪತಾಸ್ತ್ರ ಎಂದು ಹೇಳಲು – ಬೊಮ್ಮಶಿರೋಮಹಾಶರವ
(೨) ಪಾಶುಪತಾಸ್ತ್ರದ ಮಹಿಮೆ – ಸಂಭವಿಸಿದಾಹುತಿಯೆಂದು ಶರವುದ್ದಂಡ ಬಲವೆಂದ

ಪದ್ಯ ೯: ಶಿವನ ಪಾದಕ್ಕೆ ಯಾರು ಏನನ್ನು ಅರ್ಪಿಸಿದರು?

ಶ್ರುತವೆ ನಿಮಗಿದು ಮಾವ ಬಹಳಾ
ದ್ಭುತದ ರಥ ನಿರ್ಮಾಣ ದೇವ
ಪ್ರತತಿ ನೆರೆದುದು ನೆರೆ ಚತುರ್ದಶಭುವನವಾಸಿಗಳ
ಶತಮಖಬ್ರಹ್ಮಾದಿಗಳು ತ
ಮ್ಮತಿಶಯದ ತೇಜೋರ್ಧವನು ಪಶು
ಪತಿಯ ಪದಕೋಲೈಸಿದರು ಮಾದ್ರೇಶ ಕೇಳೆಂದ (ಕರ್ಣ ಪರ್ವ, ೭ ಸಂಧಿ, ೯ ಪದ್ಯ)

ತಾತ್ಪರ್ಯ:
ಬಹಳ ಅದ್ಭುತವಾದ ರಥದ ನಿರ್ಮಾಣವನ್ನು ನೀವು ಕೇಳಿದಿರಿ. ಮಾವ ತದನಂತರ ಎಲ್ಲಾ ದೇವತೆಗಳು, ಹದಿನಾಲ್ಕು ಲೋಕದ ಸಮಸ್ತರೊಡಗೂಡಿ ಅಲ್ಲಿ ಸೇರಿದರು. ಇಂದ್ರ ಬ್ರಹ್ಮಾದಿಗಳು ತಮ್ಮ ತೇಜಸ್ಸಿನ ಅರ್ಧವನ್ನು ಶಿವನ ಪಾದಗಳಿಗೆ ಅರ್ಪಿಸಿದರು.

ಅರ್ಥ:
ಶ್ರುತ: ಪ್ರಸಿದ್ಧವಾದ, ಕೇಳಿದ; ಮಾವ: ತಾಯಿಯ ತಮ್ಮ; ಬಹಳ: ತುಂಬ; ಅದ್ಭುತ: ಆಶ್ಚರ್ಯ; ರಥ: ಬಂಡಿ; ನಿರ್ಮಾಣ: ಕಟ್ಟುವುದು, ರಚನೆ; ದೇವ: ಸುರರ; ಪ್ರತತಿ: ಗುಂಪು, ಸಮೂಹ; ನೆರೆ: ಸೇರು; ನೆರೆ: ಗುಂಪು; ಚತುರ್ದಶ: ಹದಿನಾಲ್ಕು; ಭುವನ: ಲೋಕ, ಜಗತ್ತು;
ವಾಸಿ: ವಾಸಿಸುವ, ಜೀವಿಸುವ; ಶತ: ನೂರು; ಮಖ: ಯಜ್ಞ; ಶತಮಖ: ಇಂದ್ರ; ಆದಿ: ಮುಂತಾದ; ಅತಿಶಯ: ವಿಶೇಷವಾದ; ತೇಜಸ್ಸು: ಕಾಂತಿ, ಪ್ರಕಾಶ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಪಶುಪತಿ: ಶಂಕರ; ಪದ: ಚರಣ; ಓಲೈಸು: ಒಪ್ಪಿಸು, ಉಪಚರಿಸು; ಮಾದ್ರೇಶ: ಶಲ್ಯ; ಕೇಳು: ಆಲಿಸು;

ಪದವಿಂಗಡಣೆ:
ಶ್ರುತವೆ +ನಿಮಗಿದು +ಮಾವ +ಬಹಳ
ಅದ್ಭುತದ +ರಥ +ನಿರ್ಮಾಣ +ದೇವ
ಪ್ರತತಿ +ನೆರೆದುದು +ನೆರೆ +ಚತುರ್ದಶ+ಭುವನ+ವಾಸಿಗಳ
ಶತಮಖ+ಬ್ರಹ್ಮಾದಿಗಳು +ತಮ್ಮ್
ಅತಿಶಯದ +ತೇಜೋರ್ಧವನು+ ಪಶು
ಪತಿಯ +ಪದಕ್+ಓಲೈಸಿದರು +ಮಾದ್ರೇಶ +ಕೇಳೆಂದ

ಅಚ್ಚರಿ:
(೧) ಶ್ರುತ, ಕೇಳು – ಪದ್ಯದ ಮೊದಲ ಮತ್ತು ಕೊನೆ ಪದ
(೨) ಮಾದ್ರೇಶ, ಮಾವ – ಶಲ್ಯನನ್ನು ಕರೆದಿರುವ ಬಗೆ
(೩) ನೆರೆದುದು, ನೆರೆ – ನೆರೆ ಪದದ ಬಳಕೆ
(೪) ಇಂದ್ರನನ್ನು ಶತಮಖ ನೆಂದು ಕರೆದಿರುವುದು