ನಳಿನನಾಭನು ಪಾಂಚಜನ್ಯವ
ಮೊಳಗಿದನು ನಿಜದೇವದತ್ತವ
ಸೆಳೆದು ಫಲುಗುಣನೂದಿದನು ಗಾಂಡಿವವನೊದರಿಸುತ
ಪ್ರಳಯ ದಿನದಲಿ ತಿವಿವ ಸಿಡಿಲ
ವ್ವಳಿಸುವಂತಿರೆ ರೌದ್ರರವ ಘುಳು
ಘುಳಿಸಿ ತಲ್ಲಣಿಸಿತ್ತು ಕೌರವ ರಾಯ ಪರಿವಾರ (ದ್ರೋಣ ಪರ್ವ, ೮ ಸಂಧಿ, ೪೧ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ಪಾಂಚಜನ್ಯ ಶಂಖವನ್ನು ಊದಿದನು. ಅರ್ಜುನನು ದೇವದತ್ತ ಶಂಖವನ್ನು ಊದಿದನು. ಅರ್ಜುನನು ಗಾಂಡಿವವನ್ನೆಳೆದುಕೊಂಡು ಧನುಷ್ಟಂಕಾರ ಮಾದಿದನು. ಈ ಭಯಂಕರ ಸದ್ದುಗಳು ಪ್ರಲಯಕಾಲದ ಸಿಡಿಲು ಮೊಳಗುವಂತೆ ಕಿವಿಯಲ್ಲಿ ಹೊಗಲು, ಕೌರವನ ಪರಿವಾರವು ಬೆದರಿತು.
ಅರ್ಥ:
ನಳಿನ: ಕಮಲ; ನಳಿನನಾಭ: ನಾಭಿಯಲ್ಲಿ ಕಮಲವನ್ನು ಧರಿಸಿದವ, ವಿಷ್ಣು; ಮೊಳಗು: ಧ್ವನಿ, ಸದ್ದು; ಸೆಳೆ: ಹಿಡಿ; ಊದು: ಬಾಯಿಯಿಂದ ಗಾಳಿಯನ್ನು ಹೊರಡಿಸು, ಉರುಬು; ಒದರು: ಕೊಡಹು, ಜಾಡಿಸು; ಪ್ರಳಯ: ಅಂತ್ಯ; ದಿನ: ವಾರ; ತಿವಿ: ಚುಚ್ಚು; ಸಿಡಿಲು: ಅಶನಿ; ಅವ್ವಳಿಸು: ತಟ್ಟು, ತಾಗು; ರೌದ್ರ: ಶಿವನ ರೂಪ; ರೌದ್ರರವ: ಭಯಂಕರ ಶಬ್ದ; ಘುಳು: ಶಬ್ದವನ್ನು ವಿವರಿಸುವ ಪದ; ತಲ್ಲಣ: ಅಂಜಿಕೆ, ಭಯ; ರಾಯ: ರಾಜ; ಪರಿವಾರ: ಪರಿಜನ;
ಪದವಿಂಗಡಣೆ:
ನಳಿನನಾಭನು+ ಪಾಂಚಜನ್ಯವ
ಮೊಳಗಿದನು +ನಿಜ+ದೇವದತ್ತವ
ಸೆಳೆದು +ಫಲುಗುಣನ್+ಊದಿದನು +ಗಾಂಡಿವವನ್+ಒದರಿಸುತ
ಪ್ರಳಯ +ದಿನದಲಿ +ತಿವಿವ +ಸಿಡಿಲ್
ಅವ್ವಳಿಸುವಂತಿರೆ+ ರೌದ್ರರವ+ ಘುಳು
ಘುಳಿಸಿ +ತಲ್ಲಣಿಸಿತ್ತು +ಕೌರವ+ ರಾಯ +ಪರಿವಾರ
ಅಚ್ಚರಿ:
(೧) ಪಾಂಚಜನ್ಯ, ದೇವದತ್ತ – ಕೃಷ್ಣಾರ್ಜುನರ ಶಂಖದ ಹೆಸರು
(೨) ಭಯದ ಶಬ್ದವನ್ನು ವರ್ಣಿಸುವ ಪರಿ – ರೌದ್ರರವ ಘುಳುಘುಳಿಸಿ ತಲ್ಲಣಿಸಿತ್ತು