ಹರಿಯ ಕುಲಿಶದ ಧಾಳಿಯಲಿ ಕುಲ
ಗಿರಿಗಳಿಬ್ಬಗಿಯಾದವೊಲು ಮಂ
ದರದ ಘಾರಾಘಾರಿಯಲಿ ಬಾಯ್ವಿಡುವ ಕಡಲಂತೆ
ಅರಿವರೂಥಿನಿ ಕೆದರಿ ತಳಿತವು
ತುರಗ ಕರಿ ರಥ ಪಾಯದಳ ಬಲ
ಹೊರಳಿಯೊಡೆದುದು ಹೊದರು ತಗ್ಗಿತು ಹೂಣಿಗರ ಮನದ (ದ್ರೋಣ ಪರ್ವ, ೧೨ ಸಂಧಿ, ೧೯ ಪದ್ಯ)
ತಾತ್ಪರ್ಯ:
ಇಂದ್ರನ ವಜ್ರಾಯುಧದ ದಾಳಿಯಿಂದ ಕುಲಗಿರಿಗಳು ಸೀಳಿದಮ್ತೆ ಮಂದರದಿಮ್ದ ಕಡೆದಾಗ ಸಮುದ್ರವು ಬಾಯಿಬಿಟ್ಟಂತೆ ಶತ್ರು ಸೈನ್ಯವು ಕೆದರಿತು. ಚತುರಂಗ ಸೈನ್ಯವು ಚೆಲ್ಲಾಪಿಲ್ಲಿಯಾಯಿತು. ಸಾಹಸಿಗರ ಮನಸ್ಸಿನ ಆವೇಗ ತಗ್ಗಿ ಹೋಯಿತು.
ಅರ್ಥ:
ಹರಿ: ಇಂದ್ರ; ಕುಲಿಶ: ವಜ್ರಾಯುಧ; ಧಾಳಿ: ಆಕ್ರಮಣ; ಕುಲಗಿರಿ: ದೊಡ್ಡ ಬೆಟ್ಟ; ಇಬ್ಬಗಿ: ಎರಡು ಭಾಗವಾಗು; ಮಂದರ: ಬೆಟ್ಟದ ಹೆಸರು; ಘಾರಘಾರಿ: ಕಡೆತದಿಂದ ಉಂಟಾದ ಹಿಂಸೆ; ಕಡಲು: ಸಾಗರ; ಅರಿ: ಶತ್ರು; ವರೂಥ: ತೇರು, ರಥ; ಕೆದರು: ಹರಡು, ಚದರಿಸು; ತಳಿತ: ಚಿಗುರು; ತುರಗ: ಅಶ್ವ; ಕರಿ: ಆನೆ; ರಥ: ಬಂಡಿ; ಪಾಯದಳ: ಸೈನಿಕ; ಬಲ: ಸೈನ್ಯ, ಶಕ್ತಿ; ಹೊರಳು: ಉರುಳು, ತಿರುಗು; ಹೊದರು: ಗುಂಪು, ಸಮೂಹ; ತಗ್ಗು: ಕಡಿಮೆಯಾಗು; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ, ಸಾಹಸಿ; ಮನ: ಮನಸ್ಸು;
ಪದವಿಂಗಡಣೆ:
ಹರಿಯ +ಕುಲಿಶದ +ಧಾಳಿಯಲಿ +ಕುಲ
ಗಿರಿಗಳ್+ಇಬ್ಬಗಿಯಾದವೊಲು +ಮಂ
ದರದ+ ಘಾರಾಘಾರಿಯಲಿ +ಬಾಯ್ವಿಡುವ +ಕಡಲಂತೆ
ಅರಿ+ವರೂಥಿನಿ+ ಕೆದರಿ+ ತಳಿತವು
ತುರಗ +ಕರಿ +ರಥ +ಪಾಯದಳ +ಬಲ
ಹೊರಳಿ+ಒಡೆದುದು +ಹೊದರು +ತಗ್ಗಿತು +ಹೂಣಿಗರ +ಮನದ
ಅಚ್ಚರಿ:
(೧) ಉಪಮಾನದ ಪ್ರಯೋಗ – ಹರಿಯ ಕುಲಿಶದ ಧಾಳಿಯಲಿ ಕುಲಗಿರಿಗಳಿಬ್ಬಗಿಯಾದವೊಲು ಮಂ
ದರದ ಘಾರಾಘಾರಿಯಲಿ ಬಾಯ್ವಿಡುವ ಕಡಲಂತೆ