ಸಿಡಿಲ ಕುಡುಹುಗಳಿಂದ ಕಮಲಜ
ಹೊಡೆಯಲಬುಜಭವಾಂಡ ಭೇರಿಯ
ಕಡುದನಿಗಳೆನಲೊದರಿದವು ನಿಸ್ಸಾಳ ಕೋಟಿಗಳು
ತುಡುಕಿದವು ತಂಬಟದ ದನಿ ಜಗ
ದಡಕಿಲನು ಫಡ ಕೌರವೇಂದ್ರನ
ತೊಡಕು ಬೇಡೆಂದೊದರುತಿದ್ದವು ಗೌರುಗಹಳೆಗಳು (ದ್ರೋಣ ಪರ್ವ, ೧ ಸಂಧಿ, ೪೭ ಪದ್ಯ)
ತಾತ್ಪರ್ಯ:
ಬ್ರಹ್ಮನು ಸಿಡಿಲಿನ ಕುಡದಿಂದ ಬ್ರಹ್ಮಾಂಡ ಭೇರಿಯನ್ನು ಬಾರಿಸಿದನೋ ಎಂಬಂತೆ ಸಿಸ್ಸಾಳಗಳು ಸದ್ದುಮಾಡಿದವು. ತಮಟೆಯ ಸದ್ದು ಜಗದಡಕಿಲನ್ನು ಅಲುಗಾಡಿಸಿದವು. ಕೌರವನ ಗೊಂದಲ ಬೇಡವೆಂದೇನೋ ಎಂಬಂತೆ ರಣಕಹಳೆಗಳು ಒದರಿದವು.
ಅರ್ಥ:
ಸಿಡಿಲು: ಅಶನಿ; ಕುಡುಹು: ಬರೆಹಾಕುವ ಕುಡ, ಗುಳ; ಕಮಲಜ: ಬ್ರಹ್ಮ; ಹೊಡೆ: ಸೀಳು; ಅಬುಜಭವಾಂಡ: ಬ್ರಹ್ಮಾಂಡ; ಭೇರಿ: ನಗಾರಿ, ದುಂದುಭಿ; ಕಡು: ತುಂಬ; ದನಿ: ಶಬ್ದ; ಒದರು: ಕೊಡಹು, ಜಾಡಿಸು; ನಿಸ್ಸಾಳ: ಚರ್ಮವಾದ್ಯ; ಕೋಟಿ: ಅಸಂಖ್ಯಾತ; ತುಡುಕು: ಹೋರಾಡು, ಸೆಣಸು; ತಂಬಟ: ತಮಟೆ, ಚಪ್ಪಟೆಯಾದ ಚರ್ಮವಾದ್ಯ; ದನಿ: ಶಬ್ದ; ಜಗ: ಪ್ರಪಂಚ; ಅಡಕು: ನಿಯಮ, ರಾಶಿ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ತೊಡಕು: ಗೋಜು, ಗೊಂದಲ; ಬೇಡ: ತೊರೆ; ಗೌರು: ಕರ್ಕಶ ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ;
ಪದವಿಂಗಡಣೆ:
ಸಿಡಿಲ +ಕುಡುಹುಗಳಿಂದ +ಕಮಲಜ
ಹೊಡೆಯಲ್+ಅಬುಜಭವಾಂಡ +ಭೇರಿಯ
ಕಡುದನಿಗಳ್+ಎನಲ್+ಒದರಿದವು +ನಿಸ್ಸಾಳ +ಕೋಟಿಗಳು
ತುಡುಕಿದವು +ತಂಬಟದ +ದನಿ +ಜಗದ್
ಅಡಕಿಲನು +ಫಡ +ಕೌರವೇಂದ್ರನ
ತೊಡಕು +ಬೇಡೆಂದ್+ಒದರುತಿದ್ದವು +ಗೌರು+ಕಹಳೆಗಳು
ಅಚ್ಚರಿ:
(೧) ರೂಪಕದ ಪ್ರಯೋಗ – ಸಿಡಿಲ ಕುಡುಹುಗಳಿಂದ ಕಮಲಜಹೊಡೆಯಲಬುಜಭವಾಂಡ ಭೇರಿಯ
ಕಡುದನಿಗಳೆನಲ್