ಪದ್ಯ ೬೪: ಕೌರವರು ಯಾರ ಬಿಡಾರಕ್ಕೆ ಬಂದರು?

ಇವರು ಬಂದರು ದಕ್ಷಿಣದ ದೆಸೆ
ಗವರ ಪಾಳೆಯಕಾಗಿ ಸುತ್ತಲು
ಸವಡಿಗತ್ತಲೆಯಾಯ್ತು ಘನರೋಷಾಂಧಕಾರದಲಿ
ಇವರು ಮನದಲಿ ಕುಡಿದರಹಿತಾ
ರ್ಣವವರಿವರಿಗೆ ಗೋಚರವೆ ಪಾಂ
ಡವರು ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ಆ ಮೂವರೂ ದಕ್ಷಿಣ ದಿಕ್ಕಿನೆಡೆಗೆ ಹೊರಟರು. ಪಾಂಡವರ ಪಾಳೆಯದ ಕಡೆಗೆ ನಡೆದರು. ಕತ್ತಲು ದಟ್ಟಯಿಸಿದಂತೆ ಇವರ ಘನರೋಷಾಂಧಕಾರವೂ ದಟ್ಟಯಿಸಿತು. ಪಾಂಡವಸೇನಾ ಸಮುದ್ರವನ್ನು ಇವರು ಮನಸ್ಸಿನಲ್ಲೇ ಕುಡಿದರು. ಆದರೆ ಶ್ರೀಕೃಷ್ಣನ ಕರುಣೆಯಿಂದ ಪಾಂಡವರು ಇವರಿಗೆ ಸಿಲುಕುವರೇ!

ಅರ್ಥ:
ಬಂದು: ಆಗಮಿಸು; ದೆಸೆ: ದಿಕ್ಕು; ಪಾಳೆಯ: ಬೀಡು; ಸುತ್ತಲು: ಬಳಸಿಕೊಂಡು; ಸವಡಿ: ಜೊತೆ, ಜೋಡಿ; ಕತ್ತಲೆ: ಅಂಧಕಾರ; ಘನ: ದೊಡ್ಡ, ಗಾಢ; ರೋಷ: ಕೋಪ; ಅಂಧಕಾರ: ಕತ್ತಲೆ; ಮನ: ಮನಸ್ಸು; ಕುದಿ: ಮರಳು, ಸಂಕಟಪಡು; ಕುಡಿ: ಪಾನಮಾಡು; ಅಹಿ: ವೈರಿ; ಆರ್ಣವ: ಯುದ್ಧ; ಗೋಚರ: ಕಾಣುವುದು, ಮಾಡಬಹುದಾದ; ಕರುಣೆ: ದಯೆ;

ಪದವಿಂಗಡಣೆ:
ಇವರು +ಬಂದರು +ದಕ್ಷಿಣದ +ದೆಸೆಗ್
ಅವರ+ ಪಾಳೆಯಕಾಗಿ +ಸುತ್ತಲು
ಸವಡಿ+ಕತ್ತಲೆಯಾಯ್ತು +ಘನ+ರೋಷಾಂಧಕಾರದಲಿ
ಇವರು +ಮನದಲಿ+ ಕುಡಿದರ್+ಅಹಿತ
ಅರ್ಣವವರ್+ಇವರಿಗೆ +ಗೋಚರವೆ +ಪಾಂ
ಡವರು +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಸವಡಿಗತ್ತಲೆಯಾಯ್ತು ಘನರೋಷಾಂಧಕಾರದಲಿ

ಪದ್ಯ ೬೦: ದುರ್ಯೋಧನನು ಅಶ್ವತ್ಥಾಮನ ಪ್ರಮಾಣಕ್ಕೆ ಏನೆಂದು ಹೇಳಿದನು?

ಅಕಟ ಮರುಳೇ ಗುರುಸುತನ ಮತಿ
ವಿಕಳತನವನು ಕೃಪನು ಕೃತವ
ರ್ಮಕರು ಕಂಡಿರೆ ಪಾಂಡವರ ತಲೆ ತನಗೆ ಗೋಚರವೆ
ಬಕನ ಧರ್ಮಸ್ಥಿತಿಯವೊಲು ದೇ
ವಕಿಯ ಮಗ ಕಾದಿಹನಲೇ ಕೌ
ಳಿಕದ ಸಿದ್ಧನ ಕೃತಿಯನಾರಿಗೆ ಮೀರಬಹುದೆಂದ (ಗದಾ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರೆಸುತ್ತಾ, ಕೃಪ, ಕೃತವರ್ಮ, ನೀವು ಅಶ್ವತ್ಥಾಮನ ಮರಳುತನದ ಮಾತುಗಳನ್ನು ಕೇಳಿದ್ದೀರೇ? ಪಾಂಡವರ ತಲೆ ಅವನಿಗೆ ಸಿಕ್ಕೀತೇ? ಕೃಷ್ಣನು ಬಕಧ್ಯಾನ ಮಾಡುತ್ತಾ ಅವರನ್ನು ಕಾದುಕೋಂಡಿದ್ದಾನೆ, ಆ ಕಪಟಸಿದ್ಧನ ಮಾಟವನ್ನು ಯಾರು ಮೀರಬಲ್ಲರು ಎಂದು ಹೇಳಿದನು.

ಅರ್ಥ:
ಅಕಟ: ಅಯ್ಯೋ; ಮರುಳ: ಮೂಢ, ದಡ್ಡ; ಸುತ: ಮಗ; ಮತಿ: ಬುದ್ಧಿ; ವಿಕಳ: ಭ್ರಮೆ, ಭ್ರಾಂತಿ; ಕಂಡು: ನೋಡು; ತಲೆ: ಶಿರ; ಗೋಚರ: ಕಾಣು, ತೋರು; ಬಕ: ಕಪಟಿ, ವಂಚಕ, ಕೃಷ್ಣನಿಂದ ಹತನಾದ ಒಬ್ಬ ರಾಕ್ಷಸ; ಧರ್ಮ: ಧಾರಣೆ ಮಾಡಿದುದು; ಸ್ಥಿತಿ: ಅವಸ್ಥೆ; ಮಗ: ಸುತ; ಕಾದಿಹ: ರಕ್ಷಿಸು; ಕೌಳಿಕ: ಕಟುಕ, ಮೊಸ; ಸಿದ್ಧ: ಅಲೌಕಿಕ ಸಾಮರ್ಥ್ಯವುಳ್ಳವನು; ಕೃತಿ: ಕಾರ್ಯ; ಮೀರು: ಉಲ್ಲಂಘಿಸು;

ಪದವಿಂಗಡಣೆ:
ಅಕಟ+ ಮರುಳೇ +ಗುರುಸುತನ +ಮತಿ
ವಿಕಳತನವನು +ಕೃಪನು +ಕೃತವ
ರ್ಮಕರು +ಕಂಡಿರೆ +ಪಾಂಡವರ +ತಲೆ +ತನಗೆ+ ಗೋಚರವೆ
ಬಕನ +ಧರ್ಮಸ್ಥಿತಿಯವೊಲು +ದೇ
ವಕಿಯ +ಮಗ +ಕಾದಿಹನಲೇ +ಕೌ
ಳಿಕದ +ಸಿದ್ಧನ+ ಕೃತಿಯನ್+ ಆರಿಗೆ +ಮೀರಬಹುದೆಂದ

ಅಚ್ಚರಿ:
(೧) ಕೃಷ್ಣನ ಸಾಮರ್ಥ್ಯವನ್ನು ಹೇಳುವ ಪರಿ – ಬಕನ ಧರ್ಮಸ್ಥಿತಿಯವೊಲು ದೇವಕಿಯ ಮಗ ಕಾದಿಹನಲೇ

ಪದ್ಯ ೫೪: ಮುನಿವರ್ಯರು ಯಾರಿಗೆ ಕಾಣಿಸಿಕೊಂಡರು?

ವರಮುನೀಶ್ವರರವನಿಯಲಿ ಮೂ
ವರಿಗೆ ಗೋಚರವಾದರಿತ್ತಲು
ಮುರವಿರೋಧಿಗೆ ನರಗೆ ಕುರುಸೇನಾಧಿನಾಥಂಗೆ
ಅರಿಯರುಳಿದವರೀತನಿಂ ಸ
ತ್ಕರಿಸಿಕೊಂಡರು ನುಡಿದರಾ ಮುನಿ
ವರರು ಕಡಿದರು ಕೌರವಾನ್ವಯ ಕಲ್ಪಭೂರುಹವ (ದ್ರೋಣ ಪರ್ವ, ೧೮ ಸಂಧಿ, ೫೪ ಪದ್ಯ)

ತಾತ್ಪರ್ಯ:
ರಣಭೂಮಿಯಲ್ಲಿದವರಲ್ಲಿ ಮೂವರಿಗೆ ಮಾತ್ರ ಇವರು ಕಾಣಿಸಿಕೊಂಡರು. ಶ್ರೀಕೃಷ್ಣ, ಅರ್ಜುನ ಮತ್ತು ದ್ರೋಣರಿಗೆ. ಉಳಿದವರಿಗೆ ಇದು ತಿಳಿಯದು. ದ್ರೋಣನ ಸತ್ಕಾರವನ್ನು ಸ್ವೀಕರಿಸಿ ಅವನೊಡನೆ ಮಾತಾಡಿ ಅವರು ಕೌರವ ವಂಶವೆಂಬ ಕಲ್ಪವೃಕ್ಷವನ್ನು ಕಡಿದು ಹಾಕಿದರು.

ಅರ್ಥ:
ವರ: ಶ್ರೇಷ್ಠ; ಮುನಿ: ಋಷಿ; ಅವನಿ: ಭೂಮಿ; ಗೋಚರ: ಕಾಣು; ವಿರೋಧಿ: ವೈರಿ; ಮುರವಿರೋಧಿ: ಕೃಷ್ಣ; ನರ: ಅರ್ಜುನ; ಸೇನಾಧಿನಾಥ: ಸೇನಾಪತಿ; ಅರಿ: ತಿಳಿ; ಉಳಿದ: ಮಿಕ್ಕ; ಸತ್ಕರಿಸು: ಗೌರವಿಸು; ನುಡಿ: ಮಾತಾಡು; ಮುನಿ: ಋಷಿ; ಕಡಿ: ಸೀಳು; ಅನ್ವಯ: ವಂಶ; ಕಲ್ಪಭೂರುಹ: ಕಲ್ಪವೃಕ್ಷ;

ಪದವಿಂಗಡಣೆ:
ವರ+ಮುನೀಶ್ವರರ್+ಅವನಿಯಲಿ +ಮೂ
ವರಿಗೆ +ಗೋಚರವಾದರ್+ಇತ್ತಲು
ಮುರವಿರೋಧಿಗೆ +ನರಗೆ +ಕುರು+ಸೇನಾಧಿನಾಥಂಗೆ
ಅರಿಯರ್+ಉಳಿದವರ್+ಈತನಿಂ +ಸ
ತ್ಕರಿಸಿಕೊಂಡರು +ನುಡಿದರಾ +ಮುನಿ
ವರರು +ಕಡಿದರು +ಕೌರವಾನ್ವಯ +ಕಲ್ಪಭೂರುಹವ

ಅಚ್ಚರಿ:
(೧) ಕೃಷ್ಣನನ್ನು ಮುರವಿರೋಧಿ, ದ್ರೋಣರನ್ನು ಕುರುಸೇನಾಧಿನಾಥ ಎಂದು ಕರೆದಿರುವುದು
(೨) ಕ ಕಾರದ ತ್ರಿವಳಿ ಪದ – ಕಡಿದರು ಕೌರವಾನ್ವಯ ಕಲ್ಪಭೂರುಹವ

ಪದ್ಯ ೪೮: ಭೀಮನನೆದುರು ಮಲ್ಲಯುದ್ಧಕ್ಕೆ ಮುಂದೆ ಯಾರು ಬಂದರು?

ಖತಿಯೊಳುರಿನೆಗೆದೆದ್ದು ಪಿಂಗಳ
ನತಿಶಯದ ಕುಶಲದಲಿ ವರಬಃಉ
ಪತಿಯೆ ಇತ್ತೈಸೆನುತ ಹೊಕ್ಕನು ತೋಳ ತೆಕ್ಕೆಯಲಿ
ಧೃತಿಗೆಡದೆ ಹೋರಿದರು ಸಾಧಕ
ದತಿಶಯದ ಬಲುಹಿನಲಿ ವರಭೂ
ಪತಿಯೆ ಗೋಚರವಲ್ಲ ಭೀಮನ ಬಲವ ಬಣ್ಣಿವೊಡೆ (ವಿರಾಟ ಪರ್ವ, ೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ಸಿಂಧುರ, ಗಜಸಿಂಗನ ಸಾವಿನಿಂದ ಅತೀವ ಕೋಪಗೊಂಡು, ಕೋಪಜ್ವಾಲೆ ಮೇಲೇಳಲು, ಪಿಂಗಳನೆಂಬ ಮಲ್ಲನು ಮೇಲೆದ್ದು ನೆಗೆದನು. ರಾಜ ನೋಡು ಎಂದು ಭೀಮನೊಡನೆ ಯುದ್ಧವನ್ನಾರಂಭಿಸಿದನು. ತಾವು ಮಾಡಿದ ಸಾಧನೆಯ ಸತ್ವದಿಂದ ತೋಳ ಬಲುಹಿನಿಂದ ಇಬ್ಬರೂ ಸೆಣಸಿದರು. ಜನಮೇಜಯ ರಾಜ ಭೀಮನ ಬಲವನ್ನು ನಾನು ಹೇಗೆ ವರ್ಣಿಸಲಿ.

ಅರ್ಥ:
ಖತಿ: ರೇಗುವಿಕೆ, ಕೋಪ; ಉರಿ: ಬೆಂಕಿ; ನೆಗೆ: ಜಿಗಿ; ಎದ್ದು: ಮೇಲೇಳು; ಅತಿಶಯ: ಹೆಚ್ಚು, ಅಧಿಕ; ಕುಶಲ: ಕೌಶಲ್ಯ, ಚಾತುರ್ಯ; ವರ: ಶ್ರೇಷ್ಠ; ಭೂಪತಿ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಹೊಕ್ಕು: ಸೇರು ತೋಳು: ಭುಜ; ತೆಕ್ಕೆ: ಅಪ್ಪುಗೆ, ಆಲಿಂಗನ; ಧೃತಿ: ಧೈರ್ಯ; ಹೋರು: ಜಗಳ, ಕಲಹ; ಸಾಧಕ: ಪರಿಶ್ರಮ; ಬಲುಹು: ಶಕ್ತಿ; ಗೋಚರ: ಕಾಣು; ಬಲ: ಶಕ್ತಿ; ಬಣ್ಣಿಸು: ವರ್ಣಿಸು;

ಪದವಿಂಗಡಣೆ:
ಖತಿಯೊಳ್+ಉರಿ+ನೆಗೆದ್+ಎದ್ದು +ಪಿಂಗಳನ್
ಅತಿಶಯದ +ಕುಶಲದಲಿ+ ವರಭೂ
ಪತಿಯೆ +ಚಿತ್ತೈಸೆನುತ +ಹೊಕ್ಕನು +ತೋಳ +ತೆಕ್ಕೆಯಲಿ
ಧೃತಿಗೆಡದೆ +ಹೋರಿದರು +ಸಾಧಕದ್
ಅತಿಶಯದ+ ಬಲುಹಿನಲಿ+ ವರಭೂ
ಪತಿಯೆ +ಗೋಚರವಲ್ಲ+ ಭೀಮನ +ಬಲವ +ಬಣ್ಣಿವೊಡೆ

ಅಚ್ಚರಿ:
(೧) ೨, ೫ ಸಾಲು ಸಾಮ್ಯವಾಗಿರುವ ಪರಿ – ಅತಿಶಯ, ವರಭೂಪತಿ ಪದಗಳು
(೨) ಜೋಡಿ ಪದಗಳು – ತೋಳ ತೆಕ್ಕೆಯಲಿ, ಭೀಮನ ಬಲವ ಬಣ್ಣಿವೊಡೆ

ಪದ್ಯ ೩: ಕೌರವನ ಸ್ತ್ರೀಯರ ಪರಿಸ್ಥಿತಿ ಹೇಗಿತ್ತು?

ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ ದಡ್ಡಿಯ
ಮೇಲುಬೀಯಗದಂಗರಕ್ಷೆಯ ಕಂಚುಕಿ ವ್ರಜದ
ಮೇಳವವದೇನಾಯ್ತೊ ಬೀದಿಯ
ಗಾಳುಮಂದಿಯ ನಡುವೆ ಕುರುಭೂ
ಪಾಲನರಸಿಯರಳುತ ಹರಿದರು ಬಿಟ್ಟಮಂಡೆಯಲಿ (ಅರಣ್ಯ ಪರ್ವ, ೨೧ ಸಂಧಿ, ೩ ಪದ್ಯ)

ತಾತ್ಪರ್ಯ:
ಕೌರವರ ರಾಣೀವಾಸವನ್ನು ಗಾಳಿಯೇ ಕಾಣದು, ಎಂದ ಮೇಲೆ ಸೂರ್ಯಕಿರಣಗಳ ಸೋಂಕೆಲ್ಲಿ? ಅವರು ಓಡಾಡುವ ಕಿರುಬಾಗಿಲ ಬೀಗ, ಅವರ ಅಂಗರಕ್ಷಕರು, ಕಂಚುಕಿಗಳು ಎಲ್ಲಿ? ಬೀದಿಯ ಜನಜಾಲದ ನಡುವೆ ಕೌರವರ ಅರಸಿಯರು ತಲೆಗೆದರಿಕೊಂಡು ಅಳುತ್ತಾ ಬಂದರು.

ಅರ್ಥ:
ಗಾಳಿ: ವಾಯು; ಅರಿ: ತಿಳಿ; ರವಿ: ಭಾನು; ಕಿರಣ: ಪ್ರಕಾಶ; ಬಾಲೆ: ಹೆಂಗಸು, ಸ್ತ್ರೀ; ಗೋಚರ: ತೋರು; ದಡ್ಡಿ: ಪಂಜರ; ಅಂಗರಕ್ಷೆ: ಕಾವಲುಗಾರ; ಕಂಚುಕಿ: ಅಂತಃಪುರದ ಅಧಿಕಾರಿ; ವ್ರಜ: ಗುಂಪು; ಮೇಳ: ಗುಂಪು; ಬೀದಿ: ಕೇರಿ; ಆಳು: ಸೇವಕ; ಮಂದಿ: ಜನ; ನಡುವೆ: ಮಧ್ಯೆ; ಭೂಪಾಲ: ರಾಜ; ಅರಸಿ: ರಾಣಿ; ಅಳು: ಆಕ್ರಂದನ; ಹರಿ: ಚಲಿಸು; ಬಿಟ್ಟ: ತೊರೆ; ಮಂಡೆ: ಶಿರ;

ಪದವಿಂಗಡಣೆ:
ಗಾಳಿ+ಅರಿಯದು +ರವಿಯ +ಕಿರಣಕೆ
ಬಾಲೆಯರು +ಗೋಚರವೆ+ ದಡ್ಡಿಯ
ಮೇಲುಬೀಯಗದ್+ಅಂಗರಕ್ಷೆಯ +ಕಂಚುಕಿ +ವ್ರಜದ
ಮೇಳವವದ್+ಏನಾಯ್ತೊ +ಬೀದಿಯಗ್
ಆಳುಮಂದಿಯ+ ನಡುವೆ +ಕುರು+ಭೂ
ಪಾಲನ್+ಅರಸಿಯರ್+ಅಳುತ +ಹರಿದರು +ಬಿಟ್ಟ+ಮಂಡೆಯಲಿ

ಅಚ್ಚರಿ:
(೧) ತಲೆಗೆದರಿಕೊಂಡು ಎಂದು ಹೇಳುವ ಪರಿ – ಬಿಟ್ಟಮಂಡೆಯಲಿ
(೨) ಅಂತಃಪುರದ ರಕ್ಷಣೆಯನ್ನು ವಿವರಿಸುವ ಪರಿ – ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ

ಪದ್ಯ ೨೦: ಮತ್ಸ್ಯಾವತಾರದ ಲೀಲೆ ಎಂತಹುದು?

ಜಗದ ಜೀವರ ಕರ್ಮಬೀಜಾ
ಳಿಗಳ ಭೈತ್ರವ ತನ್ನ ಬಾಲಕೆ
ಬಿಗಿದು ನೀರಲಿ ನುಸುಳಿದನು ಮತ್ಸ್ಯಾವತಾರದಲಿ
ಬಗೆಯಲಾಹರಿ ಈತನೇ ದೃ
ಗ್ಯುಗಳ ಗೋಚರನಾದನರಸುವ
ನಿಗಮವೀತನ ಹೆಜ್ಜೆಗಾಣವು ಭೂಪ ಕೇಳೆಂದ (ಅರಣ್ಯ ಪರ್ವ, ೧೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ಎಲೈ ಜನಮೇಜಯ ರಾಜ, ಆಗ ಶ್ರೀಹರಿಯು ಜಗತ್ತಿನ ಎಲ್ಲಾ ಜೀವಿಗಳ ಕರ್ಮ ಬೀಜಗಳ ದೋಣಿಯನ್ನು ತನ್ನ ಬಾಲಕ್ಕೆ ಕಟ್ಟಿಕೊಂಡು, ಮತ್ಸ್ಯಾವತಾರದಲ್ಲಿ ನೀರನ್ನು ಹೊಕ್ಕನು. ವೇದಗಳು ಯಾರ ಹೆಜ್ಜೆಯನ್ನು ಕಂಡಿಲ್ಲವೋ ಅವನು ಕಣ್ಣಿಗೆ ಕಾಣಿಸಿಕೊಂಡನು.

ಅರ್ಥ:
ಜಗ: ಜಗತ್ತು, ಪ್ರಪಂಚ; ಜೀವ: ಉಸಿರಾಡುವ; ಕರ್ಮ: ಕಾರ್ಯ; ಬೀಜ: ಮೂಲವಸ್ತು; ಆಳಿ: ಗುಂಪು; ಭೈತ್ರ: ಹಡಗು; ಬಾಲ: ಪುಚ್ಛ; ಬಿಗಿ: ಬಂಧಿಸು; ನೀರು: ಜಲ; ನುಸುಳು: ತಪ್ಪಿಸಿಕೊಂಡು ಹೋಗು,ನುಣುಚಿಕೊಳ್ಳುವಿಕೆ; ಅವತಾರ: ದೇವತೆಗಳು ಭೂಮಿಯ ಮೇಲೆ ಹುಟ್ಟುವುದು; ಮತ್ಸ್ಯ: ಮೀನು; ಬಗೆ: ಆಲೋಚನೆ, ಅಭಿಪ್ರಾಯ; ದೃಗು: ದೃಕ್ಕು, ದೃಶ್ಯ; ಗೋಚರ: ಕಾಣಿಸಿಕೊಳ್ಳು; ಅರಸು: ಹುಡುಕು; ನಿಗಮ: ವೇದ; ಹೆಜ್ಜೆ: ಅಡಿ, ಪಾದ; ಕಾಣು: ತೋರು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಜಗದ +ಜೀವರ +ಕರ್ಮಬೀಜಾ
ಳಿಗಳ+ ಭೈತ್ರವ +ತನ್ನ +ಬಾಲಕೆ
ಬಿಗಿದು +ನೀರಲಿ +ನುಸುಳಿದನು +ಮತ್ಸ್ಯಾವತಾರದಲಿ
ಬಗೆಯಲಾ+ಹರಿ +ಈತನೇ +ದೃ
ಗ್ಯುಗಳ +ಗೋಚರನಾದನ್+ಅರಸುವ
ನಿಗಮವ್+ಈತನ +ಹೆಜ್ಜೆ+ಕಾಣವು +ಭೂಪ +ಕೇಳೆಂದ

ಅಚ್ಚರಿ:
(೧) ಮತ್ಸ್ಯಾವತಾರದ ಲೀಲೆ: ಕರ್ಮಬೀಜಾಳಿಗಳ ಭೈತ್ರವ ತನ್ನ ಬಾಲಕೆ ಬಿಗಿದು ನೀರಲಿ ನುಸುಳಿದನು ಮತ್ಸ್ಯಾವತಾರದಲಿ

ಪದ್ಯ ೩೬: ಭೀಮನು ಮತ್ತೆ ಹನುಮನ ಬಳೆ ಏನು ಬೇಡಿದನು?

ಅದರಿನೀ ದ್ವಾಪರದ ಕಡೆಯ
ಲ್ಲುದಿತ ಮಾನುಷ ಧರ್ಮ ಸಂಶಯ
ವಿದರೊಳೆಮ್ಮಯ ರೂಪು ಗೋಚರವಲ್ಲ ಮರ್ತ್ಯರಿಗೆ
ಇದು ನಿಧಾನವು ಭೀಮಯೆನೆ ತ
ತ್ಪದಯುಗಕೆ ಮಗುಳೆರಗಿ ನಿರ್ಬಂ
ಧದಲಿ ಬಿನ್ನಹ ಮಾಡಲಮ್ಮೆನು ತೋರಬೇಕೆಂದ (ಅರಣ್ಯ ಪರ್ವ, ೧೧ ಸಂಧಿ, ೩೬ ಪದ್ಯ)

ತಾತ್ಪರ್ಯ:
ದ್ವಾಪರಯುಗದ ಕೊನೆಯಲ್ಲಿರುವ ಮನುಷ್ಯರ ಧರ್ಮವು ಸಂಶಯಾಸ್ಪದ. ಈಗ ಮನುಷ್ಯರಿಗೆ ನಮ್ಮ ರೂಪವು ಕಾಣಿಸುವುದಿಲ್ಲ, ನಾನು ಇದ್ದುದನ್ನು ಇದ್ದಂತೆ ಹೇಳಿದ್ದೇನೆ ಎನ್ನಲು, ಭೀಮನು ಮತ್ತೆ ಹನುಮನ ಪಾದಯುಗಳಿಗೆ ನಮಸ್ಕರಿಸಿ, ನಾನು ನಿಮ್ಮನ್ನು ನಿರ್ಬಂಧಿಸಲಾರೆ, ಆದರೆ ನಿನ್ನ ರೂಪವನ್ನು ತೊರಿಸು ಎಂದು ಬೇಡಿದನು.

ಅರ್ಥ:
ಕಡೆ: ಕೊನೆ; ಉದಿತ: ಹುಟ್ಟಿದ; ಮಾನುಷ: ಮನುಷ್ಯರು; ಸಂಶಯ: ಅನುಮಾನ, ಸಂದೇಹ; ಧರ್ಮ: ಧಾರಣೆ ಮಾಡಿದುದು; ರೂಪ: ಆಕಾರ; ಗೋಚರ: ತೋರು; ಮರ್ತ್ಯ: ಮನುಷ್ಯ; ನಿಧಾನ: ವಿಳಂಬ, ನಿರ್ಧಾರ, ದೃಢ ಸಂಕಲ್ಪ; ಪದಯುಗ: ಎರಡು ಪಾದಗಳು; ಮಗುಳು: ಮತ್ತೆ; ಎರಗು: ನಮಸ್ಕರಿಸು; ನಿರ್ಬಂಧ: ಪಟ್ಟು ಹಿಡಿಯುವಿಕೆ, ದೃಢ ಸಂಕಲ್ಪ; ಬಿನ್ನಹ: ಕೋರಿಕೆ; ತೋರು: ಗೋಚರಿಸು;

ಪದವಿಂಗಡಣೆ:
ಅದರಿನ್+ಈ+ ದ್ವಾಪರದ +ಕಡೆಯಲ್
ಉದಿತ +ಮಾನುಷ +ಧರ್ಮ +ಸಂಶಯವ್
ಇದರೊಳ್+ಎಮ್ಮಯ +ರೂಪು +ಗೋಚರವಲ್ಲ+ ಮರ್ತ್ಯರಿಗೆ
ಇದು +ನಿಧಾನವು +ಭೀಮ+ಎನೆ+ ತತ್
ಪದಯುಗಕೆ+ ಮಗುಳೆರಗಿ+ ನಿರ್ಬಂ
ಧದಲಿ+ ಬಿನ್ನಹ +ಮಾಡಲಮ್ಮೆನು+ ತೋರಬೇಕೆಂದ

ಅಚ್ಚರಿ:
(೧) ಹನುಮನ ರೂಪವು ಏಕೆ ಕಾಣುವುದಿಲ್ಲ ವೆಂದು ಹೇಳುವ ಪರಿ – ದ್ವಾಪರದ ಕಡೆಯ
ಲ್ಲುದಿತ ಮಾನುಷ ಧರ್ಮ ಸಂಶಯವಿದರೊಳೆಮ್ಮಯ ರೂಪು ಗೋಚರವಲ್ಲ ಮರ್ತ್ಯರಿಗೆ

ಪದ್ಯ ೧೩೫: ಸತ್ಯಭಾಮೆ ಕೃಷ್ಣನನ್ನು ಏನೆಂದು ಪ್ರಶ್ನಿಸಿದಳು?

ಸತಿ ನೆಗಹಿದಳು ನೆತ್ತವನು ಗಣಿ
ಸುತಲಿ ನೋಡಿದಳೆಣಿಕೆಯೊಳಗಿ
ಲ್ಲತಿಶಯದ ನುಡಿಯಕ್ಷಯವದೆಂದೆಂಬ ವಾಕ್ಯವಿದು
ಮತಿಗೆ ಗೋಚರವಲ್ಲ ಈ ಸಂ
ಗತಿಗೆ ಬಾರದು ದೇವವಾಕ್ಯ
ಸ್ಥಿತಿಯ ಪಲ್ಲಟವೆನುತ ಮಿಗೆ ಬೆಸಗೊಂಡಳಾ ಹರಿಯ (ಸಭಾ ಪರ್ವ, ೧೫ ಸಂಧಿ, ೧೩೫ ಪದ್ಯ)

ತಾತ್ಪರ್ಯ:
ಕೃಷ್ಣನು ಅಕ್ಷಯ ಎಂಬ ಪದವನ್ನುಚ್ಚರಿಸಲು ತಬ್ಬಿಬ್ಬಾದ ಸತ್ಯಭಾಮೆ ದಾಳಗಳನ್ನು ಎತ್ತಿ ಎಲ್ಲಾ ಕಡೆಗೂ ನೋಡಿ, ಇದೇನು, ಇವುಗಳ ಯಾವ ಪಕ್ಕದಲ್ಲೂ ಅಕ್ಷಯವೆಂಬ ಮಾತನ್ನು ಬರೆದಿಲ್ಲ. ಆದರೂ ನೀನು ಅಕ್ಷಯವೆನ್ನುತಿರುವೆ, ನಿನ್ನ ಮಾತು ಹೀಗೇಕೆ ಬಂದಿತೆಂದು ಕೇಳಿದಳು.

ಅರ್ಥ:
ಸತಿ: ಹೆಂಡತಿ; ನೆಗಹು: ಮೇಲೆತ್ತು; ನೆತ್ತ: ಪಗಡೆಯ ದಾಳ; ಗಣಿ: ಮೂಲ ಸ್ಥಾನ; ನೋಡು: ವೀಕ್ಷಿಸು; ಎಣಿಕೆ: ಲೆಕ್ಕ; ಅತಿಶಯ: ಹೆಚ್ಚು; ನುಡಿ: ಮಾತು; ಅಕ್ಷಯ: ಕ್ಷಯವಿಲ್ಲದುದು, ಬರಿದಾ ಗದುದು; ವಾಕ್ಯ: ಮಾತು; ಮತಿ: ಬುದ್ಧಿ; ಗೋಚರ: ಕಾಣುವುದು; ಸಂಗತಿ: ವಿಷಯ; ಸ್ಥಿತಿ: ರೀತಿ, ಅವಸ್ಥೆ; ಪಲ್ಲಟ: ಬದಲಾವಣೆ, ಮಾರ್ಪಾಟು; ಮಿಗೆ: ಮತ್ತು, ಅಧಿಕವಾಗಿ; ಬೆಸ: ವಿಚಾರಿಸುವುದು, ಪ್ರಶ್ನಿಸುವುದು; ಹರಿ: ವಿಷ್ಣು, ಕೃಷ್ಣ;

ಪದವಿಂಗಡಣೆ:
ಸತಿ+ ನೆಗಹಿದಳು +ನೆತ್ತವನು +ಗಣಿ
ಸುತಲಿ +ನೋಡಿದಳ್+ಎಣಿಕೆಯೊಳಗಿಲ್ಲ್
ಅತಿಶಯದ +ನುಡಿ+ಅಕ್ಷಯವ್+ಅದೆಂದ್+ಎಂಬ +ವಾಕ್ಯವಿದು
ಮತಿಗೆ +ಗೋಚರವಲ್ಲ+ ಈ +ಸಂ
ಗತಿಗೆ+ ಬಾರದು +ದೇವ+ವಾಕ್ಯ
ಸ್ಥಿತಿಯ +ಪಲ್ಲಟವೆನುತ +ಮಿಗೆ +ಬೆಸಗೊಂಡಳಾ +ಹರಿಯ

ಅಚ್ಚರಿ:
(೧) ಸತಿ, ಮತಿ, ಗತಿ, ಸ್ಥಿತಿ – ಪ್ರಾಸ ಪದಗಳು
(೨) ಸತ್ಯಭಾಮೆಯ ಪ್ರಶ್ನೆ – ಅತಿಶಯದ ನುಡಿಯಕ್ಷಯವದೆಂದೆಂಬ ವಾಕ್ಯವಿದು

ಪದ್ಯ ೨೪: ನೀಚರಿಗೆ ಕೃಷ್ಣನನ್ನು ಏಕೆ ಬಿಗಿಯಲಾಗದು?

ಸೂಚಿಸುವ ಶ್ರುತಿನಿಚಯ ಬರೆಬರೆ
ನಾಚಿದವು ವೇದಾಂತ ನಿಚಯದ
ವಾಚನೆಗಳಳವಳಿದು ನಿಂದವು ನಿಜವ ಕಾಣಿಸದೆ
ಆಚರಿಸಲಳವಲ್ಲ ಮುನಿಗಳ
ಗೋಚರಕೆ ಮನಗುಡದ ಹರಿಯನು
ನೀಚರಿವದಿರು ಬಿಗಿಯಲಳವೇ ಭೂಪ ಕೇಳೆಂದ (ಉದ್ಯೋಗ ಪರ್ವ, ೧೦ ಸಂಧಿ, ೨೪ ಪದ್ಯ)

ತಾತ್ಪರ್ಯ:
ಇವನನ್ನು ಹೇಳಲೆಂದು ಹೊರಟ ವೇದಗಳು, ಬರುತ್ತಾ ಬರುತ್ತಾ ಅದು ಸಾಧ್ಯವಾಗದೆ ನಾಚಿಗೊಂಡವು. ಉಪನಿಷತ್ತುಗಳು ನಿಜವನ್ನು ಕಾಣಿಸದೆ ಶಕ್ತಿಗುಂದಿ ನಿಂತವು. ಕರ್ಮದಿಂದ ಇದನ್ನು ಪಡೆಯಲು ಸಾಧ್ಯವಿಲ್ಲ. ಮುನಿಗಳಿಗೆ ಇವನು ಕಾಣಿಸದಾದನು, ಇಂತಹವನನ್ನು ಈ ನೀಚರು ಕಟ್ಟಿಹಾಕಲು ಸಾಧ್ಯವೇ ಎಂದು ವಿದುರ ಕೇಳಿದ.

ಅರ್ಥ:
ಸೂಚಿಸು:ತೋರಿಸು; ಶ್ರುತಿ: ವೇದ; ನಿಚಯ: ರಾಶಿ, ಗುಂಪು; ಬರೆ:ಸೀಮಾ; ನಾಚು: ಅವಮಾನ ಹೊಂದು; ವೇದಾಂತ: ಉಪನಿಷತ್ತುಗಳು; ವಾಚನ: ಓದುವುದು, ಪಠಣ; ಅಳವಳಿ: ಶಕ್ತಿಗುಂದು; ನಿಂದು: ನಿಲ್ಲು; ನಿಜ: ದಿಟ; ಕಾಣಿಸು: ತೋರು; ಆಚರಿಸು: ಮಾಡು; ಮುನಿ: ಋಷಿ; ಗೋಚರ: ತೋರು; ಮನ: ಮನಸ್ಸು; ಹರಿ: ವಿಷ್ಣು; ನೀಚ: ಕೆಟ್ಟ, ದುಷ್ಟ; ಅರಿ: ತಿಳಿ; ಬಿಗಿ:ಕಟ್ಟು; ಅಳವು: ಶಕ್ತಿ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸೂಚಿಸುವ +ಶ್ರುತಿ+ನಿಚಯ +ಬರೆಬರೆ
ನಾಚಿದವು+ ವೇದಾಂತ +ನಿಚಯದ
ವಾಚನೆಗಳ್+ಅಳವಳಿದು +ನಿಂದವು +ನಿಜವ+ ಕಾಣಿಸದೆ
ಆಚರಿಸಲ್+ಅಳವಲ್ಲ +ಮುನಿಗಳ
ಗೋಚರಕೆ +ಮನಗುಡದ +ಹರಿಯನು
ನೀಚ್+ಅರಿವದಿರು +ಬಿಗಿಯಲ್+ಅಳವೇ +ಭೂಪ +ಕೇಳೆಂದ

ಅಚ್ಚರಿ:
(೧) ವೇದ, ಉಪನಿಷತ್ತು ಮತ್ತು ಮುನಿಗಳಿಗೆ ಗೋಚರಿಸದ ಕೃಷ್ಣ ಎಂದು ತಿಳಿಸುವ ಪದ್ಯ

ಪದ್ಯ ೨೩: ಅಹಂಕಾರಕ್ಕೆ ಮಕ್ಕಳಾರು?

ಪರಮತತ್ತ್ವವೆ ತದ್ವಚನಗೋ
ಚರವವಿದ್ಯಾಶಕ್ತಿ ಬೊಮ್ಮದ
ವರಮಹತ್ತೆಂದೆನಿಸಿತಾತನ ಮಗನಹಂಕಾರ
ಸ್ಪುರದಹಂಕಾರಕ್ಕೆ ಮಕ್ಕಳು
ಮೆರೆದರಿವರು ಭೂತವೆಸರೊಳು
ಹರಹಿದಾವನ ದೆಸೆಯೊಳುದಿಸಿದುದಾತ ನೋಡೀತ (ಉದ್ಯೋಗ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಇವನ ಮಾತೇ ಪರಮತತ್ತ್ವವು, ಇದು ಮಾತಿಗೆ ಸಿಲುಕದು, ಮಾತಿಗೆ ಸಿಲುಕುವುದು ಅವಿದ್ಯಾಶಕ್ತಿ. ಇದು ಬ್ರಹ್ಮನ ಮಹತತ್ವವೆನಿಸಿಕೊಂಡಿತು, ಈ ಮಹಾತತ್ವಕ್ಕೆ ಮಗನಾದವನೇ ಅಹಂಕಾರ, ಜಗತ್ತಿನಲ್ಲಿ ಈ ವಿಚಾರ ಯಾರ ದೆಸೆಯಿಂದಾಯಿತೋ ಅವನೇ ಇವನು (ಕೃಷ್ಣ) ಅಹಂಕಾರಕ್ಕೆ ಮಕ್ಕಳು ಪಂಚಮಹಾ ಭೂತಗಳು ಎಂದು ವಿವರ ಕೃಷ್ಣನ ಪರಮತತ್ವ ವಿಚಾರವನ್ನು ವಿವರಿಸಿದ.

ಅರ್ಥ:
ಪರಮ: ಶ್ರೇಷ್ಠ; ತತ್ತ್ವ: ಸಿದ್ಧಾಂತ; ವಚನ: ನುಡಿ, ಮಾತು; ಗೋಚರ: ಕಾಣುವ; ವಿದ್ಯ: ಜ್ಞಾನ; ಶಕ್ತಿ: ಬಲ; ಬೊಮ್ಮ: ಬ್ರಹ್ಮ; ವರ: ಅನುಗ್ರಹ; ಮಹತ್ತು: ಶ್ರೇಷ್ಠ; ಮಗ: ಸುತ; ಅಹಂಕಾರ: ದರ್ಪ; ಸ್ಪುರ: ಎದ್ದುಕಾಣುವ; ಮಕ್ಕಳು: ಸುತರು; ಮೆರೆ: ಹೊಳೆ; ಭೂತ: ಚರಾಚರಾತ್ಮಕ ಜೀವರಾಶಿ; ಹರಹು:ವಿಸ್ತಾರ, ವೈಶಾಲ್ಯ; ದೆಸೆ: ದಿಕ್ಕು; ಉದಿಸು: ಹುಟ್ಟು; ನೋಡು: ವೀಕ್ಷಿಸು;

ಪದವಿಂಗಡಣೆ:
ಪರಮ+ತತ್ತ್ವವೆ +ತದ್+ವಚನ+ಗೋ
ಚರವ್+ಅವಿದ್ಯಾಶಕ್ತಿ+ ಬೊಮ್ಮದ
ವರ+ಮಹತ್ತೆಂದ್+ಎನಿಸಿತ್+ಆತನ +ಮಗನ್+ಅಹಂಕಾರ
ಸ್ಪುರದ್+ಅಹಂಕಾರಕ್ಕೆ +ಮಕ್ಕಳು
ಮೆರೆದರ್+ಇವರು +ಭೂತವೆಸರೊಳು
ಹರಹಿದ್+ಆವನ +ದೆಸೆಯೊಳ್+ಉದಿಸಿದುದ್+ಆತ +ನೋಡೀತ