ಪದ್ಯ ೭: ಅಶ್ವತ್ಥಾಮನ ವಾದವು ಹೇಗಿತ್ತು?

ಏನು ಗುರುಸುತ ಕಾರ್ಯದನುಸಂ
ಧಾನವೇನೆನೆ ವಾಯಸಂಗಳ
ನಾ ನಿಶಾಟನನಿರಿವುತದೆ ಗೂಡುಗಳನಬ್ಬರಿಸಿ
ಈ ನಿದರುಶನದಿಂದ ಪಾಂಡವ
ಸೇನೆಯನು ಕಗ್ಗೊಲೆಗೊಳಗೆ ಕೊಲ
ಲೇನು ಹೊಲ್ಲೆಹ ಮಾವ ಎಂದನು ಗುರುಸುತನು ಕೃಪಗೆ (ಗದಾ ಪರ್ವ, ೯ ಸಂಧಿ, ೭ ಪದ್ಯ)

ತಾತ್ಪರ್ಯ:
ಎಚ್ಚರಗೊಂಡ ಕೃಪನು, ಏನು ಅಶ್ವತ್ಥಾಮ, ನಿನ್ನ ಕೆಲಸವನ್ನು ಹೇಗೆ ಮಾಡುವೆ ಎಂದು ಕೇಳಲು, ಅಶ್ವತ್ಥಾಮನು ಕಾಗೆಗಳ ಗೂಡುಗಳನ್ನು ಮುರಿದು ಗೂಬೆಯು ಕಾಗೆಗಳನ್ನು ಕೊಲ್ಲುತ್ತಿದೆ, ಈ ನಿದರ್ಶನದಿಂದ ನಾನು ಪಾಂಡವಸೇನೆಯನ್ನು ಕೊಂದರೆ ತಪ್ಪೆನು ಎಂದು ಕೇಳಿದನು.

ಅರ್ಥ:
ಸುತ: ಮಗ; ಕಾರ್ಯ: ಕೆಲಸ; ಅನುಸಂಧಾನ: ಪರಿಶೀಲನೆ, ಏರ್ಪಾಡು; ವಾಯ: ಮೋಸ, ಕಪಟ; ಸಂಗ: ಜೊತೆ; ನಿಶಾಟ: ರಾತ್ರಿಯ ಆಟ; ನಿಶ: ರಾತ್ರಿ; ಇರಿ: ಚುಚ್ಚು; ಗೂಡು: ಮನೆ; ಅಬ್ಬರಿಸು: ಆರ್ಭಟಿಸು; ನಿದರುಶನ: ತೋರು; ಸೇನೆ: ಸೈನ್ಯ; ಕಗ್ಗೊಲೆ: ಸಾಯಿಸು; ಹೊಲ್ಲೆಹ: ದೋಷ;

ಪದವಿಂಗಡಣೆ:
ಏನು +ಗುರುಸುತ+ ಕಾರ್ಯದ್+ಅನುಸಂ
ಧಾನವೇನ್+ಎನೆ +ವಾಯಸಂಗಳನ್
ಆ+ ನಿಶಾಟನನ್+ಇರಿವುತದೆ +ಗೂಡುಗಳನ್+ಅಬ್ಬರಿಸಿ
ಈ +ನಿದರುಶನದಿಂದ +ಪಾಂಡವ
ಸೇನೆಯನು +ಕಗ್ಗೊಲೆಗೊಳಗೆ ಕೊಲಲ್
ಏನು +ಹೊಲ್ಲೆಹ +ಮಾವ +ಎಂದನು +ಗುರುಸುತನು +ಕೃಪಗೆ

ಅಚ್ಚರಿ:
(೧) ಗೂಬೆ ಎಂದು ಹೇಳಲು ನಿಶಾಟನ ಪದದ ಬಳಕೆ
(೨) ಕೃಪನನ್ನು ಮಾವ ಎಂದು ಅಶ್ವತ್ಥಾಮನು ಸಂಭೋದಿಸಿದುದು

ಪದ್ಯ ೫: ಆಲದ ಮರದಿಂದ ಕಾಗೆಗಳೇಕೆ ಬಿದ್ದವು?

ಭಾಗ ಬೀತುದು ರಜನಿಯಲಿ ಸರಿ
ಭಾಗವಿದ್ದುದು ಮೇಲೆ ತತ್ ಕ್ಷಣ
ಗೂಗೆ ಬಂದುದದೊಂದು ವಟಕುಜದಗ್ರಭಾಗದಲಿ
ಕಾಗೆಗಳ ಗೂಡುಗಳ ಹೊಯ್ದು ವಿ
ಭಾಗಿಸಿತು ತುಂಡದಲಿ ಬಿದ್ದವು
ಕಾಗೆ ಸುಭಟನ ಸಮ್ಮುಖದಲಿ ಸಹಸ್ರಸಂಖ್ಯೆಯಲಿ (ಗದಾ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ಅರ್ಧರಾತ್ರಿಯಾಯಿತು. ಆಗ ಗೂಬೆಯೊಂದು ಆಲದ ಮರದ ಮೇಲೆ ಬಂದು ಕುಳಿತುಕೊಂಡಿತು. ಮರದಲ್ಲಿದ್ದ ಕಾಗೆಗಲ ಗೂಡುಗಲನ್ನು ಕೊಯ್ದು ಕಾಗೆಗಳನ್ನು ಕೊಕ್ಕಿನಿಂದ ಕುಕ್ಕಲು, ಕಾಗೆಗಳು ಸಹಸ್ರ ಸಂಖ್ಯೆಯಲ್ಲಿ ಕೆಳಗೆ ಬಿದ್ದವು.

ಅರ್ಥ:
ಭಾಗ: ಅಂಶ, ಪಾಲು; ಬೀತುದು: ಕಳೆದುದು; ರಜನಿ: ರಾತ್ರಿ; ಕ್ಷಣ: ಸಮಯ; ಗೂಗೆ: ಗೂಬೆ; ಬಂದು: ಆಗಮಿಸು; ವಟಕುಜ: ಆಲದ ಮರ; ಅಗ್ರ: ಮೇಲೆ; ಕಾಗೆ: ಕಾಕ; ಗೂಡು: ಮನೆ; ಹೊಯ್ದು: ಹೊಡೆ; ವಿಭಾಗಿಸು: ಒಡೆ, ಸೀಳು; ತುಂಡ: ಹಕ್ಕಿಗಳ ಕೊಕ್ಕು, ಚಂಚು; ಬಿದ್ದು: ಬೀಳು, ಕುಸಿ; ಸುಭಟ: ಪರಾಕ್ರಮಿ; ಸಹಸ್ರ: ಸಾವಿರ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಭಾಗ +ಬೀತುದು +ರಜನಿಯಲಿ +ಸರಿ
ಭಾಗವಿದ್ದುದು +ಮೇಲೆ +ತತ್ +ಕ್ಷಣ
ಗೂಗೆ +ಬಂದುದದ್+ಒಂದು +ವಟಕುಜದ್+ಅಗ್ರ+ಭಾಗದಲಿ
ಕಾಗೆಗಳ +ಗೂಡುಗಳ +ಹೊಯ್ದು +ವಿ
ಭಾಗಿಸಿತು +ತುಂಡದಲಿ +ಬಿದ್ದವು
ಕಾಗೆ +ಸುಭಟನ +ಸಮ್ಮುಖದಲಿ +ಸಹಸ್ರ+ಸಂಖ್ಯೆಯಲಿ

ಅಚ್ಚರಿ:
(೧) ಭಾಗ, ಸರಿಭಾಗ, ವಿಭಾಗಿಸಿ, ಅಗ್ರಭಾಗ; – ಭಾಗ ಪದದ ಬಳಕೆ

ಪದ್ಯ ೩೧: ಭೀಮನು ಯಾರನ್ನು ಬೇಟೆಯಾಡಿದನು?

ಸರಳ ಸೊಂಪಿನ ಸೋಹಿನಲಿ ನಿರಿ
ಗರುಳ ದಾವಣಿವಲೆಗಳಲಿ ಸಂ
ಗರದ ಸುಭಟವ್ರಜದ ಮಧ್ಯದ ಗೂಡುವಲೆಗಳಲಿ
ಉರುಗದೆಯ ದಡಿವಲೆಯಲಸಿ ಮು
ದ್ಗರದ ಸಿಡಿವಲೆಗಳಲಿ ಸಮರದೊ
ಳರಿಮೃಗವ್ರಾತವನು ಭೀಮಕಿರಾತ ಕೈಕೊಂಡ (ದ್ರೋಣ ಪರ್ವ, ೧೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅಗಣಿತ ಬಾಣಗಳಿಂದ ಸೋವಿ, ಕರುಳುಗಳ ದಾವಣಿ ಬಲೆಯನ್ನು ಬೀಸಿ, ಮುಂಡದ ಗೂಡು ಬಲೆಗಳು, ಗದೆಯ ದಡಿವಲೆ, ಮುದ್ಗರದ ಸಿಡಿಬಲೆಗಳಲ್ಲಿ ಶತ್ರುಗಳೆಂಬ ಮೃಗಗಳನ್ನು ಭೀಮನೆಂಬ ಕಿರಾತನು ಬೇಟೆಯಾಡಿದನು.

ಅರ್ಥ:
ಸರಳು: ಬಾಣ; ಸೊಂಪು: ಸೊಗಸು, ಚೆಲುವು; ಸೋಹು: ಅಟ್ಟು, ಓಡಿಸು; ನಿರಿ: ಕೊಲ್ಲು, ಸಾಯಿಸು; ಕರುಳು: ಪಚನಾಂಗ; ದಾವಣಿ: ಮೂಗುದಾರ, ನಿಯಂತ್ರಣ; ಅಲೆ: ನಿವಾರಿಸು, ಚಲಿಸು; ಸಂಗರ: ಯುದ್ಧ; ಸುಭಟ: ಪರಾಕ್ರಮಿ; ವ್ರಜ: ಗುಂಪು; ಮಧ್ಯ: ನಡುವೆ; ಗೂಡು: ಪಂಜರ, ಮನೆ; ಉರು: ವಿಶೇಷವಾದ; ಗದೆ: ಮುದ್ಗರ; ದಡಿ: ಕೋಲು; ಅಸಿ: ಕತ್ತಿ; ಮುದ್ಗರ: ಗದೆ; ಸಿಡಿ: ಚಿಮ್ಮು; ಸಮರ: ಯುದ್ಧ; ಅರಿ: ವೈರಿ; ಮೃಗ: ಪ್ರಾಣಿ; ವ್ರಾತ: ಗುಂಪು; ಕಿರಾತ: ಬೇಡ;

ಪದವಿಂಗಡಣೆ:
ಸರಳ +ಸೊಂಪಿನ +ಸೋಹಿನಲಿ+ ನಿರಿ
ಕರುಳ+ ದಾವಣಿವ್+ಅಲೆಗಳಲಿ+ ಸಂ
ಗರದ +ಸುಭಟ+ವ್ರಜದ +ಮಧ್ಯದ +ಗೂಡುವ್+ಅಲೆಗಳಲಿ
ಉರು+ಗದೆಯ +ದಡಿವ್+ಅಲೆಯಲಸಿ+ ಮು
ದ್ಗರದ +ಸಿಡಿವ್+ಅಲೆಗಳಲಿ +ಸಮರದೊಳ್
ಅರಿ+ಮೃಗ+ವ್ರಾತವನು +ಭೀಮಕಿರಾತ +ಕೈಕೊಂಡ

ಅಚ್ಚರಿ:
(೧) ಭೀಮನನ್ನು ಭೀಮಕಿರಾತ ಎಂದು ಕರೆದಿರುವುದು
(೨) ಸ ಕಾರದ ತ್ರಿವಳಿ ಪದ – ಸರಳ ಸೊಂಪಿನ ಸೋಹಿನಲಿ