ಪದ್ಯ ೬೦: ದ್ರೌಪದಿಯ ಸ್ಥಿತಿ ಹೇಗಿತ್ತು?

ಜನನವೇ ಪಾಂಚಾಲರಾಯನ
ಮನೆ ಮನೋವಲ್ಲಭರದಾರೆನೆ
ಮನುಜಗಿನುಜರು ಗಣ್ಯರೇ ಗೀರ್ವಾಣರಿಂ ಮಿಗಿಲು
ಎನಗೆ ಬಂದೆಡರೀ ವಿರಾಟನ
ವನಿತೆಯರುಗಳ ಮುಡಿಯ ಕಟ್ಟುವ
ತನುವ ತಿಗುರುವ ಕಾಲನೊತ್ತುವ ಕೆಲಸದುತ್ಸಾಹ (ವಿರಾಟ ಪರ್ವ, ೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ದ್ರೌಪದಿಯು ತನ್ನ ಬಾಳನ್ನು ಒಮ್ಮೆ ನೋಡಿಕೊಳ್ಳುತ್ತಾ, ನಾನು ಜನಿಸಿದುದು ಪಾಂಚಾಲ ರಾಜನ ಮಗಳಾಗಿ, ನನ್ನ ಗಂಡಂದಿರು ಮನುಜಗಿನುಜರಿರಲಿ, ದೇವತೆಗಳಿಗೂ ಮಿಗಿಲು, ಹೀಗಿದ್ದರೂ ನನ್ನ ಪಾಲಿಗೆ ಬಂದುದೇನು, ವಿರಾಟನ ರಾನಿಯರ ಮುಡಿಯನ್ನು ಕಟ್ಟುವುದು, ಸುಗಂಧದ್ರವ್ಯವನ್ನು ಲೇಪಿಸುವುದು, ಕಾಲನ್ನೊತ್ತುವುದು, ಇದರಿಂದ ನಾನು ಉತ್ಸಾಹಗೊಳ್ಳಬೇಕು ಎಂದು ಮರುಗಿದಳು.

ಅರ್ಥ:
ಜನನ: ಹುಟ್ಟು; ರಾಯ: ರಾಜ; ಮನೆ: ಆಲಯ; ಮನ: ಮನಸ್ಸು; ವಲ್ಲಭ: ಗಂಡ, ಪತಿ; ಮನುಜ: ಮನುಷ್ಯ; ಗಣ್ಯ: ಶ್ರೇಷ್ಠ; ಗೀರ್ವಾಣ: ದೇವತೆ, ಸುರ; ಮಿಗಿಲು: ಹೆಚ್ಚು; ಬಂದು: ಒದಗಿದು; ವನಿತೆ: ಹೆಣ್ಣು; ಮುಡಿ: ತಲೆ, ಶಿರ; ಕಟ್ಟು: ಬಂಧಿಸು; ತನು: ದೇಹ; ತಿಗುರು: ಸುಗಂಧ ವಸ್ತು, ಪರಿಮಳದ್ರವ್ಯ; ಕಾಲು: ಪಾದ; ಒತ್ತು: ಲಟ್ಟಿಸು; ಕೆಲಸ: ಕಾರ್ಯ; ಉತ್ಸಾಹ: ಆಸಕ್ತಿ;

ಪದವಿಂಗಡಣೆ:
ಜನನವೇ +ಪಾಂಚಾಲ+ರಾಯನ
ಮನೆ +ಮನೋ+ವಲ್ಲಭರ್+ಅದಾರ್+ಎನೆ
ಮನುಜಗಿನುಜರು+ ಗಣ್ಯರೇ+ ಗೀರ್ವಾಣರಿಂ +ಮಿಗಿಲು
ಎನಗೆ+ ಬಂದೆಡರ್+ಈ+ ವಿರಾಟನ
ವನಿತೆಯರುಗಳ +ಮುಡಿಯ +ಕಟ್ಟುವ
ತನುವ +ತಿಗುರುವ +ಕಾಲನೊತ್ತುವ +ಕೆಲಸದುತ್ಸಾಹ

ಅಚ್ಚರಿ:
(೧) ಆಡು ಪದದ ಬಳಕೆ – ಮನುಜಗಿನುಜ

ಪದ್ಯ ೨೬: ಕೃಷ್ಣನು ಸಾಲ್ವ ರಾಜನನ್ನು ಹೇಗೆ ಸಂಹಾರಮಾಡಿದನು?

ಏನನೆಂಬೆನು ಸಾಲ್ವಪುರದ ನ
ವೀನ ಮಾಯಾರಚನೆಯನು ನಮ
ಗಾನಲಸದಳವುಳಿದ ಗೀರ್ವಾಣರಿಗೆ ಗೋಚರವೆ
ದಾನವನ ಮಾಯಾಪುರದ ಸಂ
ಸ್ಥಾನಮರ್ಮವನರಿದು ಶರ ಸಂ
ಧಾನದಲಿ ಸಂಹರಿಸಿದೆವು ಸಾಲ್ವಾದಿ ರಿಪುಭಟರ (ಅರಣ್ಯ ಪರ್ವ, ೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ದ್ರೌಪದಿ ನಾನು ಏನೆಂದು ಹೇಳಲಿ, ಸಾಲ್ವ ನಗರದ ಮಾಯಾರಚನೆಯು ಅಮೋಘವಾಗಿತ್ತು, ನನಗೇ ಅದು ತಿಳಿಯಲಾಗಲಿಲ್ಲ, ಇನ್ನು ದೇವತೆಗಳಿಗೆ ಹೇಗೆ ತಿಳಿದೀತು? ನಾನು ಸಾಲ್ವನಗರದ ಮಾಯಾಮಯವಾದ ಹೊಂದಾಣಿಕೆಯ ಗುಟ್ಟನ್ನು ಕಂಡುಹಿಡಿದು ನಗರವನ್ನು ಗೆದ್ದು ಸಾಲ್ವನನ್ನು ಸಂಹರಿಸಿದೆನು.

ಅರ್ಥ:
ಪುರ: ಊರು; ನವೀನ: ಹೊಸ; ಮಾಯ: ಇಂದ್ರಜಾಲ; ರಚನೆ: ನಿರ್ಮಿಸು; ಅಸದಳ: ಅಸಾಧ್ಯ; ಉಳಿದ: ಮಿಕ್ಕ; ಗಿರ್ವಾಣ: ದೇವತೆ; ಗೋಚರ: ಕಾಣುವುದು; ದಾನವ: ರಾಕ್ಷಸ; ಸಂಸ್ಥಾನ: ರಾಜ್ಯ, ಪ್ರಾಂತ್ಯ; ಮರ್ಮ: ಒಳ ಅರ್ಥ, ಗುಟ್ಟು; ಸಂಹರಿಸು: ನಾಶಗೊಳಿಸು; ರಿಪು: ವೈರಿ; ಭಟ: ಸೈನ್ಯ; ಶರ: ಬಾಣ;

ಪದವಿಂಗಡಣೆ:
ಏನನೆಂಬೆನು +ಸಾಲ್ವ+ಪುರದ+ ನ
ವೀನ +ಮಾಯಾ+ರಚನೆಯನು +ನಮ
ಗಾನಲ್+ಅಸದಳವ್+ಉಳಿದ +ಗೀರ್ವಾಣರಿಗೆ+ ಗೋಚರವೆ
ದಾನವನ +ಮಾಯಾಪುರದ+ ಸಂ
ಸ್ಥಾನ+ಮರ್ಮವನ್+ಅರಿದು+ ಶರ+ ಸಂ
ಧಾನದಲಿ +ಸಂಹರಿಸಿದೆವು ಸಾಲ್ವಾದಿ ರಿಪುಭಟರ

ಅಚ್ಚರಿ:
(೧) ಸಾಲ್ವರಾಜನನ್ನು ಸಂಹರಿಸಿದ ಪರಿ – ಶರ ಸಂಧಾನದಲಿ ಸಂಹರಿಸಿದೆವು ಸಾಲ್ವಾದಿ ರಿಪುಭಟರ