ಪದ್ಯ ೧೩: ಸಂಜಯನು ಯಾರ ನಡಿಗೆಯನ್ನು ನೋಡಿದನು – ೬?

ಕಡಿವಡೆದ ಹಕ್ಕರಿಕೆ ರೆಂಚೆಯ
ತಡಿಗಳಲಿ ಕುಳ್ಳಿರ್ದು ಮೊಣಕಾ
ಲ್ಗಡಿಯ ಗಾಢವ್ರಣದ ನೆಣವಸೆಗೆಸರ ಬಳಿಬಳಿದು
ಗಡಣಹೆಣದೆರಹುಗಳೊಳಗೆ ಕಾ
ಲಿಡುತ ಸೋದಿಸಿ ಮುಂದೆ ಹೆಜ್ಜೆಯ
ನಿಡುತ ಪೈಸರವೋಗಿ ಮಾರ್ಗಶ್ರಮಕೆ ಬೆಮರುವನ (ಗದಾ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಮುರಿದ ತಡಿ ರಂಚೆಗಳಲ್ಲಿ ಕುಳಿತು ಮೊಣಕಾಲಿನಲ್ಲಾದ ಗಾಯಕ್ಕೆ ನೆಣದ ಕೆಸರನ್ನು ಬಳಿದು, ಒಟ್ಟಾಗಿ ಬಿದ್ದಿದ್ದ ಹೆಣಗಳ ನಡುವೆ ಜಾಗವನ್ನು ಹುಡುಕಿ ಕಾಲಿಟ್ಟು, ಮುಂದೆ ಹೆಜ್ಜೆಯನ್ನಿಡುವಾಗ ಓಲಾಡಿ ಮಾರ್ಗಶ್ರಮಕ್ಕೆ ಹೆದರುವವನೊಬ್ಬನನ್ನು ಸಂಜಯನು ನೋಡಿದನು.

ಅರ್ಥ:
ಕಡಿ: ಸೀಳು; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ತಡಿ: ಕುದುರೆಯ ಜೀನು; ಕುಳ್ಳಿರ್ದು: ಆಸೀನನಾಗು; ಗಾಢ: ಹೆಚ್ಚಳ, ಅತಿಶಯ; ವ್ರಣ: ಹುಣ್ಣು; ನೆಣ: ಕೊಬ್ಬು, ಮೇದಸ್ಸು; ಕೆಸರು: ರಾಡಿ, ಪಂಕ; ಬಳಿ: ಸವರು; ಗಡಣ: ಗುಂಪು; ಹೆಣ: ಜೀವವಿಲ್ಲದ ಶರೀರ; ಸೋದಿಸು: ಶುದ್ಧಿ ಮಾಡು; ಮುಂದೆ: ಎದುರು; ಹೆಜ್ಜೆ: ಪಾದ; ಪೈಸರ: ಕುಗ್ಗುವುದು; ಮಾರ್ಗ: ದಾರಿ; ಶರ್ಮ: ಆಯಾಸ; ಬೆಮರು: ಹೆದರು;

ಪದವಿಂಗಡಣೆ:
ಕಡಿವಡೆದ +ಹಕ್ಕರಿಕೆ +ರೆಂಚೆಯ
ತಡಿಗಳಲಿ +ಕುಳ್ಳಿರ್ದು +ಮೊಣಕಾ
ಲ್ಗಡಿಯ +ಗಾಢವ್ರಣದ+ ನೆಣವಸೆ+ಕೆಸರ +ಬಳಿಬಳಿದು
ಗಡಣ+ಹೆಣದ್+ಎರಹುಗಳೊಳಗೆ +ಕಾ
ಲಿಡುತ +ಸೋದಿಸಿ +ಮುಂದೆ +ಹೆಜ್ಜೆಯ
ನಿಡುತ +ಪೈಸರವೋಗಿ+ ಮಾರ್ಗಶ್ರಮಕೆ +ಬೆಮರುವನ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಹೆಜ್ಜೆಯನಿಡುತ ಪೈಸರವೋಗಿ ಮಾರ್ಗಶ್ರಮಕೆ ಬೆಮರುವನ