ಧರೆಯ ರಾಜ್ಯಸ್ಥಿತಿಗೆ ಸುತರವ
ತರಿಸುವರು ಗಾಂಧಾರಿಗಾ ಪು
ತ್ರರಿಗೆ ಸುತರಾ ಸುತರ ಸುತರಾ ಸುತರ ಸೂನುಗಳು
ಧರೆ ಪರಂಪರೆಯಿಂದಲತ್ತಲೆ
ಸರಿವುದೀ ನಿಮ್ಮಡಿಗೆ ದರ್ಭ್ರಾ
ಸ್ತರಣ ಸಮಿಧಾಧಾನವೇ ಕಡೆಗೆಂದಳಾ ಕುಂತಿ (ಆದಿ ಪರ್ವ, ೪ ಸಂಧಿ, ೨೮ ಪದ್ಯ)
ತಾತ್ಪರ್ಯ:
ಗಾಂಧಾರಿಗೆ ಮಕ್ಕಳು ಹುಟ್ಟಿ ರಾಜರಾಗುತ್ತಾರೆ. ಅವರ ಮಕ್ಕಳು, ಮಕ್ಕಳ ಮಕ್ಕಳು ಹೀಗೆಯೇ ಪರಂಪರೆಯಿಂದ ರಾಜ್ಯವು ಅವರಿಗೆ ಸೇರುತ್ತದೆ. ನಿಮಗೆ ದರ್ಭಾಸ್ತರಣ ಸಮಿಧಾಧಾನಗಳೇ ಗತಿ ಎಂದು ಕುಂತಿಯು ಹೀಳಿದಳು.
ಅರ್ಥ:
ಧರೆ: ಭೂಮಿ; ರಾಜ್ಯ: ರಾಷ್ಟ್ರ; ಸ್ಥಿತಿ: ಅವಸ್ಥೆ, ರೀತಿ; ಸುತ: ಮಕ್ಕಳು, ಮಗ; ಅವತರಿಸು: ಹುಟ್ಟು; ಪುತ್ರ: ಮಗ; ಸುತ: ಮಗ; ಸೂನು: ಮಕ್ಕಳು; ಪರಂಪರೆ: ಒಂದರ ನಂತರ ಮತ್ತೊಂದು ಬರುವುದು, ಸಾಲು, ಪರಿವಿಡಿ; ಅತ್ತ: ಆ ಕಡೆ; ಸರಿ: ಜಾರು; ಅಡಿ: ಪಾದ; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಸಮಿಧೆ: ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ಕಡೆ: ಕೊನೆ;
ಪದವಿಂಗಡಣೆ:
ಧರೆಯ +ರಾಜ್ಯಸ್ಥಿತಿಗೆ +ಸುತರ್+ಅವ
ತರಿಸುವರು +ಗಾಂಧಾರಿಗ್+ಆ+ ಪು
ತ್ರರಿಗೆ +ಸುತರ್+ಆ+ ಸುತರ +ಸುತರ್+ಆ +ಸುತರ +ಸೂನುಗಳು
ಧರೆ +ಪರಂಪರೆಯಿಂದಲ್+ಅತ್ತಲೆ
ಸರಿವುದ್+ಈ+ ನಿಮ್ಮಡಿಗೆ+ ದರ್ಭ್ರಾ
ಸ್ತರಣ+ ಸಮಿಧಾಧಾನವೇ +ಕಡೆಗೆಂದಳಾ +ಕುಂತಿ
ಅಚ್ಚರಿ:
(೧) ಸುತರ ಪದದ ಬಳಕೆ – ಪುತ್ರರಿಗೆ ಸುತರಾ ಸುತರ ಸುತರಾ ಸುತರ ಸೂನುಗಳು