ಆದಡೆಲೆ ಭೂಪಾಲ ನರನೊಳು
ಕಾದಲೀಶಂಗರಿದು ನೀನಿದಿ
ರಾದಡಪಜವಾಗದಿದ್ದರೆ ನಮ್ಮ ಪುಣ್ಯವದು
ಕಾದಲಾಪರೆ ಮಗನೆ ಪರರಿಗೆ
ಭೇದಿಸುವರಳವಲ್ಲ ಕವಚವ
ನಾದಿಯದು ಕೊಳ್ಳೆಂದು ಕೊಟ್ಟನು ಗವಸಣಿಗೆದೆಗೆದು (ದ್ರೋಣ ಪರ್ವ, ೧೦ ಸಂಧಿ, ೪೬ ಪದ್ಯ)
ತಾತ್ಪರ್ಯ:
ದ್ರೋಣನು ಉತ್ತರಿಸುತ್ತಾ, ದೊರೆಯೇ, ಅರ್ಜುನನೊಡನೆ ಕಾದಲು ಶಿವನಿಗೂ ಆಗುವುದಿಲ್ಲ, ನಿನಗೆ ಸೋಲಾಗದಿದ್ದರೆ ನಮ್ಮ ಪುಣ್ಯ, ಇಷ್ಟು ಹೇಳಿದರೂ ನೀನು ಕಾದಲು ಹೊರಟರೆ, ಈ ಅನಾದಿಯಾದ ಕವಾವನ್ನು ತೆಗೆದುಕೋ, ಇದನ್ನು ಮುರಿಯಲು ಬೇರಾರಿಗೂ ಸಾಧ್ಯವಿಲ್ಲ ಎಂದು ಹೇಳಿ ಮುಚ್ಚಿದ್ದ ಗವಸಣಿಗೆಯನ್ನು ತೆಗೆದು ದುರ್ಯೋಧನನಿಗೆ ಕವಚವನ್ನು ಕೊಟ್ಟನು.
ಅರ್ಥ:
ಭೂಪಾಲ: ರಾಜ; ನರ: ಅರ್ಜುನ; ಕಾದು: ಹೋರಾಡು; ಈಶ: ಶಿವ; ಅರಿ: ತಿಳಿ; ಇದಿರು: ಎದುರು; ಅಪಜ: ಸೋಲು; ಪುಣ್ಯ: ಸದಾಚಾರ; ಮಗ: ಸುತ; ಪರರು: ಅನ್ಯರು; ಭೇದಿಸು: ಛಿದ್ರಪಡಿಸು; ಕವಚ: ಹೊದಿಕೆ; ಅನಾದಿ: ಮೊದಲು ಕೊನೆಯಿಲ್ಲದ; ಕೊಳ್ಳು: ಪಡೆ; ಕೊಡು: ನೀಡು; ಗವಸಣಿಗೆ: ಆನೆಯ ಹೊದಿಕೆ;
ಪದವಿಂಗಡಣೆ:
ಆದಡ್+ಎಲೆ+ ಭೂಪಾಲ +ನರನೊಳು
ಕಾದಲ್+ಈಶಂಗ್+ಅರಿದು +ನೀನ್+ಇದಿ
ರಾದಡ್+ಅಪಜವಾಗದಿದ್ದರೆ +ನಮ್ಮ +ಪುಣ್ಯವದು
ಕಾದಲಾಪರೆ +ಮಗನೆ +ಪರರಿಗೆ
ಭೇದಿಸುವರಳವಲ್ಲ +ಕವಚವ್
ಅನಾದಿಯದು +ಕೊಳ್ಳೆಂದು +ಕೊಟ್ಟನು +ಗವಸಣಿಗೆ+ತೆಗೆದು
ಅಚ್ಚರಿ:
(೧) ಅರ್ಜುನನ ಪರಾಕ್ರಮ – ನರನೊಳುಕಾದಲೀಶಂಗರಿದು