ಪದ್ಯ ೩೮: ಭೀಮನು ಕೋಪದ ನುಡಿಗಳು ಹೇಗಿದ್ದವು?

ತಿಂಬೆನೀತನ ಜೀವವನು ಪತಿ
ಯೆಂಬ ಗರಿವಿತನಿವನ ನೆತ್ತಿಯ
ತುಂಬು ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ
ಅಂಬುಜಾಕ್ಷಿಗೆ ಕೀಚಕನ ಬೇ
ಳಂಬವೀತನ ಕೂಟ ಭೂತ ಕ
ದಂಬ ತುಷ್ಟಿಯ ಮಾಡಬೇಹುದು ಸೆರಗ ಬಿಡಿಯೆಂದ (ವಿರಾಟ ಪರ್ವ, ೧೦ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೀಮನು ಕೋಪದಿಂದ, ವಿರಾತನ ಜೀವವನ್ನು ತಿನ್ನುತ್ತೇನೆ, ತಾನು ರಾಜನೆಂಬ ಗರ್ವ ಇವನ ನೆತ್ತಿಗೇರಿದೆ. ನೆತ್ತಿಯು ಮುರಿಯುವಂತೆ ಹೊಡೆದು, ಮತ್ಸ್ಯವಂಶವನ್ನು ಸಂಹರಿಸುತ್ತೇನೆ. ಕೀಚಕನಿಗೆ ದ್ರೌಪದಿಯ ಮೋಹ, ಇವನ ಈ ದುರ್ವರ್ತನೆಗಳು ಅಸಹನೀಯ, ಭೂತ ತೃಪ್ತಿಯನ್ನು ಮಾಡಿಸುತ್ತೇನೆ. ನನ್ನ ಉತ್ತರೀಯವನ್ನು ಬಿಡಿ, ತಡೆಯಬೇಡಿರಿ, ಎಂದು ಧರ್ಮಜನಿಗೆ ಹೇಳಿದನು.

ಅರ್ಥ:
ತಿಂಬೆ: ತಿನ್ನುತ್ತೇನೆ; ಜೀವ: ಪ್ರಾಣ; ಪತಿ: ಗಂಡ; ಗರ್ವ: ಅಹಂಕಾರ; ನೆತ್ತಿ: ತಲೆ; ಎರಗು: ಬಾಗು; ತರಿ: ಕಡಿ, ಕತ್ತರಿಸು, ಛೇದಿಸು; ಸಂತತಿ: ವಂಶ, ಪೀಳಿಗೆ; ಅಂಬುಜಾಕ್ಷಿ: ಕಮಲದಂತ ಕಣ್ಣು; ಬೇಳಂಬ: ವಿಡಂಬನೆ, ಅಣಕ; ಕೂಟ: ರಾಶಿ, ಸಮುದಾಯ; ತುಷ್ಟಿ: ತೃಪ್ತಿ, ಆನಂದ; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಬಿಡಿ: ತೊರೆ;

ಪದವಿಂಗಡಣೆ:
ತಿಂಬೆನ್+ಈತನ +ಜೀವವನು +ಪತಿ
ಯೆಂಬ +ಗರಿವಿತನ್+ಇವನ+ ನೆತ್ತಿಯ
ತುಂಬು +ಬಿಡಲ್+ಎರಗುವೆನು +ತರಿವೆನು +ಮತ್ಸ್ಯ+ಸಂತತಿಯ
ಅಂಬುಜಾಕ್ಷಿಗೆ +ಕೀಚಕನ+ ಬೇ
ಳಂಬವ್+ಈತನ +ಕೂಟ +ಭೂತ +ಕ
ದಂಬ +ತುಷ್ಟಿಯ +ಮಾಡಬೇಹುದು +ಸೆರಗ+ ಬಿಡಿಯೆಂದ

ಅಚ್ಚರಿ:
(೧) ಭೀಮನ ಕೋಪದ ನುಡಿ: ತಿಂಬೆನೀತನ ಜೀವವನು ಪತಿಯೆಂಬ ಗರಿವಿತನಿವನ ನೆತ್ತಿಯ
ತುಂಬು ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ