ಅರಿನೃಪಾಲರ ನೂರು ಮಕ್ಕಳ
ಶಿರವನರಿದನು ಷಡುರಥರ ಮಿಗೆ
ಪರಿಭವಿಸಿದನು ರಿಪುಬಲವನಡಹಾಯ್ದಾನೆವರಿವರಿದು
ಧುರಕೆ ಹೆರತೆಗೆದೆಮ್ಮ ನಾಲ್ವರ
ಸರಿದು ಹೋದಭಿಮಾನವನು ಕಾ
ಯ್ದುರವಣಿಸಿ ಮಗನೇರಿದನು ವಾಸವನ ಗದ್ದುಗೆಯ (ದ್ರೋಣ ಪರ್ವ, ೮ ಸಂಧಿ, ೨೩ ಪದ್ಯ)
ತಾತ್ಪರ್ಯ:
ಕೌರವನ ನೂರು ಮಕ್ಕಳ ತಲೆಗಳನ್ನು ಕಡಿದನು. ಆರು ರಥದಲ್ಲಿ ಬಂದ ಮಹಾ ಪರಾಕ್ರಮಿಗಳನ್ನು ಸೋಲಿಸಿದನು. ಶತ್ರುಸೈನ್ಯದ ನಡುವೆ ಆನೆ ನುಗ್ಗಿದಂತೆ ನುಗ್ಗಿ ತಿರುಗಾಡಿ, ಯುದ್ಧಕ್ಕೆ ಹೋಗಲಾರದೆ ಸೋತು ಬಂದ ನಮ್ಮ ಗೌರವವನ್ನು ಕಾಪಾಡಿ ಇಂದ್ರನ ಸಿಂಹಾಸನವನ್ನೇರಿದನು ಎಂದು ಅಭಿಮನ್ಯುವಿನ ಬಗ್ಗೆ ಧರ್ಮಜನು ಹೇಳಿದನು.
ಅರ್ಥ:
ಅರಿ: ವೈರಿ; ನೃಪಾಲ: ರಾಜ; ನೂರು: ಶತ; ಮಕ್ಕಳು: ಸುತರು; ಶಿರ: ತಲೆ; ಅರಿ: ಸೀಳು; ಷಡು: ಆರು; ರಥ: ಬಂಡಿ; ಮಿಗೆ: ಅಧಿಕ; ಪರಿಭವ: ಸೋಲು; ರಿಪು: ವೈರಿ; ಬಲ: ಸೈನ್ಯ; ಅಡಹಾಯ್ದು: ಅಡ್ಡಬಂದು ಹೊಡೆ; ಆನೆ: ಗಜ; ಅರಿ: ಕತ್ತರಿಸು; ಧುರ: ಯುದ್ಧ; ಹೆರರ: ಬೇರೆಯವರ; ತೆಗೆ: ಹೊರತರು; ಸರಿ: ಹೋಗು, ಗಮಿಸು; ಅಭಿಮಾನ: ಗೌರವ; ಕಾಯ್ದು: ಕಾಪಾಡು; ಉರವಣಿಸು: ಆತುರಿಸು; ಮಗ: ಪುತ್ರ; ಏರು: ಮೇಲೆ ಹತ್ತು; ವಾಸವ: ಇಂದ್ರ; ಗದ್ದುಗೆ: ಪೀಠ;
ಪದವಿಂಗಡಣೆ:
ಅರಿ+ನೃಪಾಲರ +ನೂರು +ಮಕ್ಕಳ
ಶಿರವನ್+ಅರಿದನು +ಷಡುರಥರ+ ಮಿಗೆ
ಪರಿಭವಿಸಿದನು +ರಿಪುಬಲವನ್+ಅಡಹಾಯ್ದ್+ಆನೆವರಿವ್+ಅರಿದು
ಧುರಕೆ+ ಹೆರತೆಗೆದ್+ಎಮ್ಮ +ನಾಲ್ವರ
ಸರಿದು +ಹೋದ್+ಅಭಿಮಾನವನು +ಕಾ
ಯ್ದುರವಣಿಸಿ+ ಮಗನೇರಿದನು +ವಾಸವನ +ಗದ್ದುಗೆಯ
ಅಚ್ಚರಿ:
(೧) ಅಭಿಮನ್ಯುವಿನ ಪರಾಕ್ರಮ -ರಿಪುಬಲವನಡಹಾಯ್ದಾನೆವರಿವರಿದು
(೨) ಅರಿ, ರಿಪು – ಸಮಾನಾರ್ಥಕ ಪದಗಳು