ದೇವ ದುಂದುಭಿರವದ ಗಗನದ
ಹೂವಳೆಯ ಪುರದ ಸಮಸ್ತ ಜ
ನಾವಳಿಯ ಜಯಜೀಯ ನಿರ್ಘೋಷದ ಗಡಾವಣೆಯ
ದೇವಕಿಯ ವಸುದೇವ ರುಕುಮಿಣಿ
ದೇವಿಯಾದಿಯ ಹರುಷದಾವಿ
ರ್ಭಾವ ಮಿಗೆ ನಿಜಪುರವ ಹೊಕ್ಕನು ವೀರನಾರಾಯಣ (ಗದಾ ಪರ್ವ, ೧೩ ಸಂಧಿ, ೧೫ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ದ್ವಾರಕೆಯನ್ನು ಸೇರುತ್ತಿರಲು, ದೇವ ನಗಾರಿಗಳು ಮೊಳಗಿದವು. ಆಕಾಶದಿಮ್ದ ಹೂಮಳೆಗಳು ಸುರಿದವು. ಜನರೆಲ್ಲರೂ ಜೀಯಾ ಎಂದು ಜಯಕಾರ ಕೂಗಿದರು. ದೇವಕಿ, ವಸುದೇವ, ರುಕ್ಮಿಣೀ ದೇವಿ ಮೊದಲಾದವರ ಹರುಷವು ಹೆಚ್ಚಿತು.
ಅರ್ಥ:
ದೇವ: ಭಗವಂತ; ದುಂದುಭಿ: ಒಂದು ಬಗೆಯ ಚರ್ಮ ವಾದ್ಯ, ನಗಾರಿ; ರವ: ಶಬ್ದ; ಗಗನ: ಆಗಸ; ಹೂವಳೆ: ಹೂವಿನ ಮಳೆ; ಪೂರ: ತುಂಬ; ಸಮಸ್ತ: ಎಲ್ಲಾ; ಜನಾವಳಿ: ಜನರ ಗುಂಪು; ಜಯ: ಉಘೆ; ಜೀಯ: ಒಡೆಯ; ಘೋಷ: ಕೂಗು; ಗಡಾವಣೆ: ಗಟ್ಟಿಯಾದ ಶಬ್ದ; ಹರುಷ: ಸಂತಸ; ಆವಿರ್ಭಾವ: ಹುಟ್ಟುವುದು; ಪುರ: ಊರು; ಹೊಕ್ಕು: ಸೇರು;
ಪದವಿಂಗಡಣೆ:
ದೇವ +ದುಂದುಭಿ+ರವದ +ಗಗನದ
ಹೂವಳೆಯ +ಪುರದ +ಸಮಸ್ತ+ ಜ
ನಾವಳಿಯ +ಜಯ+ಜೀಯ +ನಿರ್ಘೋಷದ +ಗಡಾವಣೆಯ
ದೇವಕಿಯ +ವಸುದೇವ +ರುಕುಮಿಣಿ
ದೇವಿ+ಆದಿಯ +ಹರುಷದ್+ಆವಿ
ರ್ಭಾವ +ಮಿಗೆ +ನಿಜಪುರವ +ಹೊಕ್ಕನು+ ವೀರನಾರಾಯಣ
ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಜನಾವಳಿಯ ಜಯಜೀಯ
(೨) ರವ, ನಿರ್ಘೋಷ – ಸಾಮ್ಯಾರ್ಥ ಪದ