ಪದ್ಯ ೩೩: ಕುರುಸೇನೆಯ ಸ್ಥಿತಿ ಏನಾಯಿತು?

ಹರಿಬದಲಿ ಹೊಕ್ಕೆರಡು ಸಾವಿರ
ತುರಗ ಬಿದ್ದವು ನೂರು ಮದಸಿಂ
ಧುರಕೆ ಗಂಧನವಾಯ್ತು ಪಯದಳವೆಂಟು ಸಾವಿರದ
ಬರಹ ತೊಡೆದುದು ನೂರು ರಥ ರಿಪು
ಶರದೊಳಕ್ಕಾಡಿತು ವಿಡಂಬದ
ಕುರುಬಲಾಂಬುಧಿ ಕೂಡೆ ಬರತುದು ನೃಪತಿ ಕೇಳೆಂದ (ಗದಾ ಪರ್ವ, ೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎಲೈ ರಾಜ ಧೃತರಾಷ್ಟ್ರನೇ ಕೇಳು, ಸಹದೇವನ ಮೇಲೆ ನುಗ್ಗಿದ ಎರಡುಸಾವಿರ ಕುದುರೆಗಳು, ನುರು ಆನೆಗಳು, ಎಂಟು ಸಾವಿರ ಕಾಲಾಳುಗಳು ಮಡಿದರು. ನೂರು ರಥಗಳು ಮುರಿದವು. ಕುರುಸೇನಾ ಸಮುದ್ರವು ಬತ್ತಿಹೋಯಿತು.

ಅರ್ಥ:
ಹರಿಬ: ಕೆಲಸ, ಕಾರ್ಯ; ಹೊಕ್ಕು: ಸೇರು; ಸಾವಿರ: ಸಹಸ್ರ; ತುರಗ: ಕುದುರೆ; ಬಿದ್ದು: ಬೀಳು, ಕುಸಿ; ನೂರು: ಶತ; ಮದ: ಅಹಂಕಾರ; ಸಿಂಧುರ: ಆನೆ, ಗಜ; ಗಂಧನ: ಅಳಿವು, ಕೊಲೆ; ಪಯದಳ: ಕಾಲಾಳು; ಬರ: ಕ್ಷಾಮ; ತೊಡೆ: ಬಳಿ, ಸವರು; ರಥ: ಬಂಡಿ; ರಿಪು: ವೈರಿ; ಶರ: ಬಾಣ; ವಿಡಂಬ: ಅನುಸರಣೆ; ಅಂಬುಧಿ: ಸಾಗರ; ಕೂಡೆ: ತಕ್ಷಣ; ಬರತುದು: ಬತ್ತಿಹೋಗು; ನೃಪತಿ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹರಿಬದಲಿ +ಹೊಕ್ಕ್+ಎರಡು +ಸಾವಿರ
ತುರಗ +ಬಿದ್ದವು +ನೂರು +ಮದ+ಸಿಂ
ಧುರಕೆ+ ಗಂಧನವಾಯ್ತು +ಪಯದಳವೆಂಟು +ಸಾವಿರದ
ಬರಹ +ತೊಡೆದುದು +ನೂರು +ರಥ +ರಿಪು
ಶರದೊಳಕ್+ಆಡಿತು +ವಿಡಂಬದ
ಕುರುಬಲಾಂಬುಧಿ +ಕೂಡೆ +ಬರತುದು +ನೃಪತಿ+ ಕೇಳೆಂದ

ಅಚ್ಚರಿ:
(೧) ಮಡಿದುದು ಎಂದು ಹೇಳಲು – ನೂರು ಮದಸಿಂಧುರಕೆ ಗಂಧನವಾಯ್ತು