ಪದ್ಯ ೩೨: ವ್ಯಾಸರು ಯಾವ ಆಶ್ರಮಕ್ಕೆ ಮರಳಿದರು?

ಎನಲು ಯೋಜನಗಂಧಿ ನಿಜ ನಂ
ದನನ ನುಡಿಯೇ ವೇದಸಿದ್ಧವಿ
ದೆನುತ ಸೊಸೆಯರು ಸಹಿತ ನಡೆದಳು ವರ ತಪೋವನಕೆ
ಮುನಿಪನತ್ತಲು ಬದರಿಕಾ ನಂ
ದನಕೆ ಮರಳಿದನಿತ್ತ ಗಂಗಾ
ತನುಜ ಸಲಹಿದನಖಿಳ ಪಾಂಡವ ಕೌರವ ವ್ರಜವ (ಆದಿ ಪರ್ವ, ೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಯೋಜನಗಮ್ಧಿಯು ವೇದವ್ಯಾಸರು ತನ್ನ ಮಗ ಹೇಳಿದ ಮಾತು ವೇದವಾಕ್ಯವೆಂದು ಒಪ್ಪಿ ತನ್ನ ಸೊಸೆಯಂದಿರ ಜೊತೆಗೆ ತಪೋವನಕ್ಕೆ ಹೊರಟು ಹೋದಳು. ವೇದವ್ಯಾಸರು ಬದರಿಕಾಶ್ರಮಕ್ಕೆ ಹಿಂದಿರುಗಿದರು. ಭೀಷ್ಮನು ಕೌರವ ಪಾಂಡವರನ್ನು ರಕ್ಷಿಸಿದನು.

ಅರ್ಥ:
ನಿಜ: ತನ್ನ, ದಿಟ; ನಂದನ: ಮಗ; ನುಡಿ: ಮಾತು; ಸಿದ್ಧ: ಸಾಧಿಸಿದ, ಅಣಿ; ಸೊಸೆ: ಮಗನ ಹೆಂಡತಿ; ಸಹಿತ: ಜೊತೆ; ನಡೆ: ಚಲಿಸು; ವರ: ಶ್ರೇಷ್ಠ; ತಪೋವನ: ಆಶ್ರಮ; ಮುನಿಪ: ಋಷಿ; ನಂದನ: ತೋಟ, ಉದ್ಯಾನ; ಮರಳು: ಹಿಂದಿರುಗು; ತನುಜ: ಮಗ; ಸಲಹು: ರಕ್ಶಿಸು; ಅಖಿಳ: ಎಲ್ಲಾ; ವ್ರಜ: ಗುಂಪು;

ಪದವಿಂಗಡಣೆ:
ಎನಲು+ ಯೋಜನಗಂಧಿ +ನಿಜ +ನಂ
ದನನ +ನುಡಿಯೇ +ವೇದಸಿದ್ಧವಿ
ದೆನುತ +ಸೊಸೆಯರು +ಸಹಿತ +ನಡೆದಳು +ವರ +ತಪೋವನಕೆ
ಮುನಿಪನ್+ಅತ್ತಲು +ಬದರಿಕಾ +ನಂ
ದನಕೆ +ಮರಳಿದನ್+ಇತ್ತ +ಗಂಗಾ
ತನುಜ+ ಸಲಹಿದನ್+ಅಖಿಳ +ಪಾಂಡವ +ಕೌರವ +ವ್ರಜವ

ಅಚ್ಚರಿ:
(೧) ನ ಕಾರದ ತ್ರಿವಳಿ ಪದ – ನಿಜ ನಂದನನ ನುಡಿಯೇ
(೨) ನಿಜನಂದನ, ಬದರಿಕಾ ನಂದನಕೆ- ನಂದನ ಪದದ ಬಳಕೆ

ಪದ್ಯ ೧೨: ಭೀಷ್ಮನ ಬಗ್ಗೆ ಪಾಂಡವ ಸೈನ್ಯದವರು ಏನೆಂದು ದೂರಿದರು?

ಕಾಲಯಮನೋ ಭೀಷ್ಮನೋ ಫಡ
ಮೇಳವೇ ಮಝ ಭಾಪು ಮಾರಿಯ
ತಾಳಿಗೆಗೆ ತುತ್ತಾದವೇ ತಡವೇಕೆ ತೆಗೆಯೆನುತ
ಆಳು ಮುರಿದುದು ಮೋಹರದ ಭೂ
ಪಾಲಕರು ಹುರಿಯೊಡೆದು ದೊರೆಗಳ
ಮೇಲೆ ಬಿಸುಟರು ವೀರಗಂಗಾತನುಜನುಪಟಳವ (ಭೀಷ್ಮ ಪರ್ವ, ೬ ಸಂಧಿ, ೧೨ ಪದ್ಯ)

ತಾತ್ಪರ್ಯ:
ಪಾಂಡವ ಸೇನಾನಾಯಕರು ಭೀಷ್ಮರ ಠೀವಿಯನ್ನು ನೋಡುತ್ತಾ, ಇವನೇನು ಭೀಷ್ಮನೋ, ಪ್ರಳಯಕಾಲದ ಯಮನೋ, ಭಲೇ ನಾವಿಂದು ಮಾರಿಗೆ ಬಲಿಯಾದ ಹಾಗಾಯಿತು, ನಾವೆಲ್ಲಿ ಅವನೆಲ್ಲಿ, ಎನ್ನುತ್ತಾ ಹೋಗಿ ತಮ್ಮ ದೊರೆಗಳಿಗೆ ಭೀಷ್ಮನ ಪರಾಕ್ರಮದ ತಾಪ ನಮಗೆ ಬಹಳ ದುಸ್ಸಾಧ್ಯವಾಗಿದೆ ಎಂದು ದೂರಿದರು.

ಅರ್ಥ:
ಕಾಲ: ಪ್ರಳಯಕಾಲ, ಸಮಯ; ಯಮ: ಮೃತ್ಯುದೇವತೆ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಮೇಳ: ಗುಂಪು; ಮಝ: ಕೊಂಡಾಟದ ಒಂದು ಮಾತು; ಭಾಪು: ಭಲೇ; ಮಾರಿ: ಕ್ಷುದ್ರ ದೇವತೆ; ತಾಳಿಗೆ: ಗಂಟಲು; ತುತ್ತು: ಆಹಾರ; ತಡ: ನಿಧಾನ; ತೆಗೆ: ಹೊರತರು; ಆಳು: ಸೈನಿಕ; ಮುರಿ: ಸೀಳು; ಮೋಹರ: ಯುದ್ಧ; ಭೂಪಾಲಕ: ರಾಜ; ಹುರಿ: ನಾಶವಾಗು; ದೊರೆ: ರಾಜ; ಒಡೆ: ಸೀಳು; ಬಿಸುಟು: ಹೊರಹಾಕು; ವೀರ: ಶೂರ; ತನುಜ: ಮಗ; ಉಪಟಳ: ಹಿಂಸೆ, ಕಿರುಕುಳ;

ಪದವಿಂಗಡಣೆ:
ಕಾಲಯಮನೋ +ಭೀಷ್ಮನೋ +ಫಡ
ಮೇಳವೇ+ ಮಝ+ ಭಾಪು+ ಮಾರಿಯ
ತಾಳಿಗೆಗೆ +ತುತ್ತಾದವೇ +ತಡವೇಕೆ+ ತೆಗೆಯೆನುತ
ಆಳು+ ಮುರಿದುದು +ಮೋಹರದ+ ಭೂ
ಪಾಲಕರು +ಹುರಿಯೊಡೆದು+ ದೊರೆಗಳ
ಮೇಲೆ +ಬಿಸುಟರು +ವೀರ+ಗಂಗಾತನುಜನ್+ಉಪಟಳವ

ಅಚ್ಚರಿ:
(೧) ತ ಕಾರದ ಸಾಲು ಪದ – ತಾಳಿಗೆಗೆ ತುತ್ತಾದವೇ ತಡವೇಕೆ ತೆಗೆಯೆನುತ
(೨) ಪ ವರ್ಗದ ಸಾಲು ಪದಗಳು – ಭೀಷ್ಮನೋ ಫಡ ಮೇಳವೇ ಮಝ ಭಾಪು ಮಾರಿಯ
(೩) ಭೂಪಾಲಕ, ದೊರೆ – ಸಮನಾರ್ಥಕ ಪದ

ಪದ್ಯ ೩೦: ಧರ್ಮಜನು ಮುಂದೆ ಯಾರ ಬಳಿ ಬಂದನು?

ಎನೆ ಹಸಾದವೆನುತ್ತ ಯಮನಂ
ದನನು ಕಳುಹಿಸಿಕೊಂಡು ಗಂಗಾ
ತನುಜನುಚಿತೋಕ್ತಿಗಳ ನೆನೆದಡಿಗಡಿಗೆ ಪುಳಕಿಸುತ
ವಿನುತಮತಿ ನಡೆತರಲು ಸುಭಟರು
ತನತನಗೆ ತೊಲಗಿದರು ಪಾಂಡವ
ಜನಪ ಮೈಯಿಕ್ಕಿದನು ದ್ರೋಣನ ಚರಣಕಮಲದಲಿ (ಭೀಷ್ಮ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧರ್ಮಜನು ಭೀಷ್ಮನ ಮಾತುಗಳನ್ನು ಆಲಿಸಿ, ಮಹಾಪ್ರಸಾದ ವೆಂದು ತಿಳಿದು ಭೀಷ್ಮರಿಂದ ಬೀಳುಕೊಂಡು, ಆತನ ಮಾತನ್ನು ನೆನೆನೆನೆದು ರೋಮಾಂಚನಗೊಂಡನು. ಕೌರವ ಸೈನ್ಯದ ನಡುವೆ ಬರುತ್ತಿರಲು ಕೌರವ ವೀರರು ಅವನನ್ನು ತಡೆಯಲಿಲ್ಲ, ಅವನು ದ್ರೋಣರ ಬಳಿ ಬಂದು ಅವರಿಗೆ ವಂದಿಸಿದನು.

ಅರ್ಥ:
ಹಸಾದ: ಅನುಗ್ರಹ; ನಂದನ: ಮಗ; ಕಳುಹಿಸು: ತೆರಳು; ತನುಜ: ಮಗ; ಉಚಿತ: ಸರಿಯಾದ; ಉಕ್ತಿ: ಮಾತು; ನೆನೆದು: ಜ್ಞಾಪಿಸು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ; ಪುಳಕ: ರೋಮಾಂಚನ; ವಿನುತ: ಸ್ತುತಿಗೊಂಡ; ಮತಿ: ಬುದ್ಧಿ; ನಡೆ: ಚಲಿಸು; ಸುಭಟ: ಪರಾಕ್ರಮಿ; ತೊಲಗು: ದೂರ ಸರಿ; ಜನಪ: ರಾಜ; ಮೈಯಿಕ್ಕು: ನಮಸ್ಕರಿಸು; ಚರಣ: ಪಾದ; ಕಮಲ: ಪದ್ಮ;

ಪದವಿಂಗಡಣೆ:
ಎನೆ+ ಹಸಾದವೆನುತ್ತ+ ಯಮ+ನಂ
ದನನು +ಕಳುಹಿಸಿಕೊಂಡು +ಗಂಗಾ
ತನುಜನ್ + ಉಚಿತ+ಉಕ್ತಿಗಳ +ನೆನೆದ್+ಅಡಿಗಡಿಗೆ+ ಪುಳಕಿಸುತ
ವಿನುತ+ಮತಿ +ನಡೆತರಲು+ ಸುಭಟರು
ತನತನಗೆ +ತೊಲಗಿದರು+ ಪಾಂಡವ
ಜನಪ +ಮೈಯಿಕ್ಕಿದನು +ದ್ರೋಣನ +ಚರಣ+ಕಮಲದಲಿ

ಅಚ್ಚರಿ:
(೧) ತನತನಗೆ, ಅಡಿಗದಿ – ಪದಗಳ ಬಳಕೆ
(೨) ನಂದನ, ತನುಜ – ಸಮನಾರ್ಥಕ ಪದ

ಪದ್ಯ ೧೦೩: ಅರ್ಜುನನ ಕೀರ್ತಿ ಎಲ್ಲಿ ಪಸರಿಸಿತು?

ನಳಿನಮುಖಿ ಸುರಗಜದ ಮೇಲಿಂ
ದಿಳಿದು ಬಂದಳು ಸುರರ ಸಂ
ಕುಲದಿರದೆ ಕೈಗಳ ಮುಗಿದು ಗಂಗಾತನುಜಗಭಿನಮಿಸಿ
ಬಳಿಕ ಭೀಷ್ಮನ ನೇಮದಲಿ ನಿಜ
ನಿಳಯಕೈದಿದಳರ್ತಿಯಲಿ ಕಡು
ಗಲಿಯು ಪಾರ್ಥಗೆ ಕೀರ್ತಿಯಾಯಿತು ಮೂರುಲೋಕದಲಿ (ಆದಿ ಪರ್ವ, ೨೧ ಸಂಧಿ, ೧೦೩ ಪದ್ಯ)

ತಾತ್ಪರ್ಯ:
ಕುಂತಿಯು ತನ್ನ ಅರಮನೆಯ ಆವರಣಕ್ಕೆ ಬಂದು ಐರಾವತದಿಂದ ಕೆಳಗಿಳಿದಳು. ಅಲ್ಲಿ ನೆರೆದಿದ್ದ ಸಕಲ ದೇವತೆಗಳಿಗೆ ನಮಸ್ಕರಿಸಿ, ಭೀಷ್ಮರಿಗೂ ತನ್ನ ನಮಸ್ಕಾರಗಳನ್ನು ಸಲ್ಲಿಸಿ, ಅವರ ನಿಯಮದಂತೆ ತನ್ನ ಅರಮನೆಯನ್ನು ಸೇರಿದಳು. ಈ ವ್ರತವನ್ನು ಮಾಡಲು ಸ್ವರ್ಗದಿಂದ ಐರಾವತವನ್ನೇ ತರಿಸಿದ ಪರಾಕ್ರಮಿಯಾದ ಅರ್ಜುನನ ಕೀರ್ತಿ ಮೂರುಲೋಕಗಳಲ್ಲೂ ಹರಡಿತು.

ಅರ್ಥ:
ನಳಿನಮುಖಿ: ಕಮಲದಂತ ಮುಖದವಳು, ಸುಂದರಿ; ಸುರಗಜ: ಐರಾವತ; ಇಳಿ: ಕೆಳಕ್ಕೆ ಬಾ; ಸುರರು: ದೇವತೆಗಳು; ಸಂಕುಲ: ಸಮಸ್ತರಿಗೂ; ಕೈಮುಗಿದು: ನಮಸ್ಕರಿಸು; ಗಂಗಾಸುತ: ಭೀಷ್ಮ; ಅಭಿನಮಿಸಿ: ವಂದಿಸಿ;
ನೇಮ: ನಿಯಮ; ನಿಜನಿಳಯ: ತನ್ನ ಅರಮನೆ; ಐದು:ಹೊಂದು, ಸೇರು; ಅರ್ತಿ: ಸಂತೋಷ, ಪ್ರೀತಿ; ಕಡುಗಲಿ: ಪರಾಕ್ರಮಿ; ಪಾರ್ಥ: ಅರ್ಜುನ; ಕೀರ್ತಿ:ಯಶಸ್ಸು, ಖ್ಯಾತಿ; ಲೋಕ: ಜಗತ್ತು;

ಪದವಿಂಗಡಣೆ:
ನಳಿನಮುಖಿ +ಸುರಗಜದ+ ಮೇಲಿಂದ್
ಇಳಿದು +ಬಂದಳು +ಸುರರ+ ಸಂ
ಕುಲದಿರದೆ +ಕೈಗಳ+ ಮುಗಿದು+ ಗಂಗಾತನುಜಗ್+ಅಭಿನಮಿಸಿ
ಬಳಿಕ+ ಭೀಷ್ಮನ +ನೇಮದಲಿ +ನಿಜ
ನಿಳಯಕ್+ಐದಿದಳ್+ಅರ್ತಿಯಲಿ +ಕಡು
ಗಲಿಯು +ಪಾರ್ಥಗೆ +ಕೀರ್ತಿಯಾಯಿತು+ ಮೂರುಲೋಕದಲಿ

ಅಚ್ಚರಿ:
(೧) ತನ್ನ ಅರಮನೆಗೆ ಎನ್ನಲು – ನಿಜ ನಿಳಯ ಪದದ ಪ್ರಯೋಗ
(೨) ಗಂಗಾತನುಜ, ಭೀಷ್ಮ – ೩, ೪ ಸಾಲಿನಲ್ಲಿ ಪ್ರಯೋಗ