ದೇವ ನಿಮ್ಮಯ ಶಿಷ್ಯನೇ ಪರಿ
ಭಾವಿಸೆನು ತಾನರಿದೆನಾದಡೆ
ದೇವಕೀಸುತನಾಣೆ ಬಿಟ್ಟೆನು ಸಂಜಯನ ವಧೆಯ
ನೀವು ಬಿಜಯಂಗೈವುದೆನೆ ಬದ
ರಾವಳಿಮಂದಿರಕೆ ತಿರುಗಿದ
ನಾ ವಿಗಡಮುನಿ ಖೇದಕಲುಷಿತ ಸಂಜಯನ ತಿಳುಹಿ (ಗದಾ ಪರ್ವ, ೩ ಸಂಧಿ, ೭ ಪದ್ಯ)
ತಾತ್ಪರ್ಯ:
ಸಾತ್ಯಕಿಯು ವ್ಯಾಸರನ್ನು ಕಂಡು, ದೇವ, ಸಂಜಯನು ನಿಮ್ಮ ಶಿಷ್ಯನೆಂಬುದನ್ನು ಶ್ರೀಕೃಷ್ಣನಾಣೆಗೂ ನಾನರಿಯೆ, ಸಂಜಯನ ವಧೆಯನ್ನು ಕೈಬಿಟ್ಟಿದ್ದೇನೆ, ನೀವು ದಯಮಾಡಿಸಿರಿ ಎನ್ನಲು, ವೇದವ್ಯಾಸರು ದುಃಖಿತನಾಗಿದ್ದ ಸಂಜಯನನ್ನು ಸಂತೈಸಿ ಬದರಿಕಾಶ್ರಮಕ್ಕೆ ಹಿಂತಿರುಗಿದರು.
ಅರ್ಥ:
ದೇವ: ಭಗವಂತ; ಶಿಷ್ಯ: ವಿದ್ಯಾರ್ಥಿ; ಪರಿಭಾವಿಸು: ವಿಚಾರಮಾಡು; ಅರಿ: ತಿಳಿ; ಆಣೆ: ಪ್ರಮಾಣ; ಸುತ: ಮಗ; ಬಿಡು: ತೊರೆ; ವಧೆ: ಸಾವು; ಬಿಜಯಂಗೈ: ದಯಮಾಡಿಸು; ಮಂದಿರ: ಆಲಯ; ತಿರುಗು: ಹಿಂದಿರುಗು; ವಿಗಡ: ಶೌರ್ಯ, ಭಯಂಕರ; ಮುನಿ: ಋಷಿ; ಖೇದ: ದುಃಖ; ಕಲುಷಿತ: ಅಪವಿತ್ರವಾದ, ರೋಷಗೊಂಡ; ತಿಳುಹು: ತಿಳಿಸು, ಸಂತೈಸು;
ಪದವಿಂಗಡಣೆ:
ದೇವ +ನಿಮ್ಮಯ +ಶಿಷ್ಯನೇ +ಪರಿ
ಭಾವಿಸೆನು +ತಾನ್+ಅರಿದೆನಾದಡೆ
ದೇವಕೀಸುತನಾಣೆ +ಬಿಟ್ಟೆನು +ಸಂಜಯನ +ವಧೆಯ
ನೀವು +ಬಿಜಯಂಗೈವುದ್+ಎನೆ +ಬದ
ರಾವಳಿಮಂದಿರಕೆ+ ತಿರುಗಿದನ್
ಆ +ವಿಗಡಮುನಿ +ಖೇದ+ಕಲುಷಿತ+ ಸಂಜಯನ +ತಿಳುಹಿ
ಅಚ್ಚರಿ:
(೧) ವ್ಯಾಸರನ್ನು ಕರೆದ ಪರಿ – ವಿಗಡಮುನಿ, ದೇವ
(೨) ಸಂಜಯನ ಸ್ಥಿತಿಯನ್ನು ವಿವರಿಸುವ ಪರಿ – ಖೇದಕಲುಷಿತ
(೩) ದೇವ ಪದದ ಬಳಕೆ – ದೇವ, ದೇವಕೀಸುತ