ಪದ್ಯ ೭: ಸಾತ್ಯಕಿಯು ವ್ಯಾಸರಿಗೆ ಏನು ಹೇಳಿದ?

ದೇವ ನಿಮ್ಮಯ ಶಿಷ್ಯನೇ ಪರಿ
ಭಾವಿಸೆನು ತಾನರಿದೆನಾದಡೆ
ದೇವಕೀಸುತನಾಣೆ ಬಿಟ್ಟೆನು ಸಂಜಯನ ವಧೆಯ
ನೀವು ಬಿಜಯಂಗೈವುದೆನೆ ಬದ
ರಾವಳಿಮಂದಿರಕೆ ತಿರುಗಿದ
ನಾ ವಿಗಡಮುನಿ ಖೇದಕಲುಷಿತ ಸಂಜಯನ ತಿಳುಹಿ (ಗದಾ ಪರ್ವ, ೩ ಸಂಧಿ, ೭ ಪದ್ಯ)

ತಾತ್ಪರ್ಯ:
ಸಾತ್ಯಕಿಯು ವ್ಯಾಸರನ್ನು ಕಂಡು, ದೇವ, ಸಂಜಯನು ನಿಮ್ಮ ಶಿಷ್ಯನೆಂಬುದನ್ನು ಶ್ರೀಕೃಷ್ಣನಾಣೆಗೂ ನಾನರಿಯೆ, ಸಂಜಯನ ವಧೆಯನ್ನು ಕೈಬಿಟ್ಟಿದ್ದೇನೆ, ನೀವು ದಯಮಾಡಿಸಿರಿ ಎನ್ನಲು, ವೇದವ್ಯಾಸರು ದುಃಖಿತನಾಗಿದ್ದ ಸಂಜಯನನ್ನು ಸಂತೈಸಿ ಬದರಿಕಾಶ್ರಮಕ್ಕೆ ಹಿಂತಿರುಗಿದರು.

ಅರ್ಥ:
ದೇವ: ಭಗವಂತ; ಶಿಷ್ಯ: ವಿದ್ಯಾರ್ಥಿ; ಪರಿಭಾವಿಸು: ವಿಚಾರಮಾಡು; ಅರಿ: ತಿಳಿ; ಆಣೆ: ಪ್ರಮಾಣ; ಸುತ: ಮಗ; ಬಿಡು: ತೊರೆ; ವಧೆ: ಸಾವು; ಬಿಜಯಂಗೈ: ದಯಮಾಡಿಸು; ಮಂದಿರ: ಆಲಯ; ತಿರುಗು: ಹಿಂದಿರುಗು; ವಿಗಡ: ಶೌರ್ಯ, ಭಯಂಕರ; ಮುನಿ: ಋಷಿ; ಖೇದ: ದುಃಖ; ಕಲುಷಿತ: ಅಪವಿತ್ರವಾದ, ರೋಷಗೊಂಡ; ತಿಳುಹು: ತಿಳಿಸು, ಸಂತೈಸು;

ಪದವಿಂಗಡಣೆ:
ದೇವ +ನಿಮ್ಮಯ +ಶಿಷ್ಯನೇ +ಪರಿ
ಭಾವಿಸೆನು +ತಾನ್+ಅರಿದೆನಾದಡೆ
ದೇವಕೀಸುತನಾಣೆ +ಬಿಟ್ಟೆನು +ಸಂಜಯನ +ವಧೆಯ
ನೀವು +ಬಿಜಯಂಗೈವುದ್+ಎನೆ +ಬದ
ರಾವಳಿಮಂದಿರಕೆ+ ತಿರುಗಿದನ್
ಆ +ವಿಗಡಮುನಿ +ಖೇದ+ಕಲುಷಿತ+ ಸಂಜಯನ +ತಿಳುಹಿ

ಅಚ್ಚರಿ:
(೧) ವ್ಯಾಸರನ್ನು ಕರೆದ ಪರಿ – ವಿಗಡಮುನಿ, ದೇವ
(೨) ಸಂಜಯನ ಸ್ಥಿತಿಯನ್ನು ವಿವರಿಸುವ ಪರಿ – ಖೇದಕಲುಷಿತ
(೩) ದೇವ ಪದದ ಬಳಕೆ – ದೇವ, ದೇವಕೀಸುತ

ಪದ್ಯ ೨೫: ಪಟ್ಟಾಭಿಷೇಕದ ನಂತರ ಕೌರವನ ಸ್ಥಿತಿ ಹೇಗಿತ್ತು?

ಆದುದುತ್ಸವ ಕರ್ಣಮರಣದ
ಖೇದವಕ್ಕಿತು ಹಗೆಗೆ ಕಾಲ್ವೊಳೆ
ಯಾದ ವೀರರಸಾಬ್ಧಿ ನೆಲೆದಪ್ಪಿತ್ತು ನಿಮಿಷದಲಿ
ಬೀದಿವರಿದುದು ಬಿಂಕ ನನೆಕೊನೆ
ವೋದುದಾಶಾಬೀಜ ಲಜ್ಜೆಯ
ಹೋದ ಮೂಗಿಗೆ ಕದಪ ಹೊಯ್ದನು ನಿನ್ನ ಮಗನೆಂದ (ಶಲ್ಯ ಪರ್ವ, ೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಪಟ್ಟಾಭಿಷೇಕವಾಗಲು, ಕೌರವನಿಗೆ ಕರ್ಣಾವಸಾನದಿಮ್ದಾಗುವ ದುಃಖವು ಮಾಯವಾಯಿತು. ಶತ್ರುಗಳು ಬತ್ತಿಸಿ ಕಾಲುಹೊಳೆಯಾಗಿಸಿದ್ದ ವೀರರಸವು ಸಮುದ್ರವಾಯಿತು. ಹೆಮ್ಮೆ ಹಬ್ಬಿತು. ಆಶೆಯ ಬೀಜ ಮೊಳೆಯಿತು. ಮೂಗನ್ನು ಕಳೆದುಕೊಂಡಂತಾಗಿದ್ದ ನಾಚಿಕೆಯ ಕೆನ್ನೆಗೆ ಹೊಡೆದನು.

ಅರ್ಥ:
ಉತ್ಸವ: ಸಮಾರಂಭ; ಮರಣ: ಸಾವು; ಖೇದ: ದುಃಖ; ಹಗೆ: ವೈರ; ಹೊಳೆ: ನದಿ, ತೊರೆ; ವೀರ: ಶೂರ; ಅಬ್ಧಿ: ಸಾಗರ; ನೆಲೆ: ಸ್ಥಾನ; ತಪ್ಪು: ಸುಳ್ಳಾಗು; ನಿಮಿಷ: ಕ್ಷಣಮಾತ್ರ; ಬೀದಿ: ಮಾರ್ಗ; ಬಿಂಕ: ಸೊಕ್ಕು; ನನೆ: ಮೊಗ್ಗು; ಬೀಜ: ಧಾನ್ಯದ ಕಾಳು; ಲಜ್ಜೆ: ನಾಚಿಕೆ, ಸಿಗ್ಗು; ಮೂಗು: ನಾಸಿಕ; ಕದಪ: ಗಲ್ಲ; ಹೊಯ್ದು: ಹೊಡೆ; ಮಗ: ಸುತ;

ಪದವಿಂಗಡಣೆ:
ಆದುದ್+ಉತ್ಸವ +ಕರ್ಣ+ಮರಣದ
ಖೇದವಕ್ಕಿತು +ಹಗೆಗೆ +ಕಾಲ್ವೊಳೆ
ಯಾದ +ವೀರ+ರಸಾಬ್ಧಿ +ನೆಲೆ+ತಪ್ಪಿತ್ತು +ನಿಮಿಷದಲಿ
ಬೀದಿವರಿದುದು +ಬಿಂಕ +ನನೆಕೊನೆವ್
ಓದುದ್+ಆಶಾಬೀಜ +ಲಜ್ಜೆಯ
ಹೋದ +ಮೂಗಿಗೆ +ಕದಪ+ ಹೊಯ್ದನು +ನಿನ್ನ +ಮಗನೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಕಾಲ್ವೊಳೆಯಾದ ವೀರರಸಾಬ್ಧಿ ನೆಲೆದಪ್ಪಿತ್ತು ನಿಮಿಷದಲಿ

ಪದ್ಯ ೧೦: ಧೃತರಾಷ್ಟ್ರನು ಸಂಜಯನಿಗೆ ಏನು ಹೇಳಿದ?

ಹೋಗಲಿನ್ನಾ ಮಾತು ಖೂಳರು
ತಾಗಿ ಬಾಗರು ಸುಕೃತ ದುಷ್ಕೃತ
ಭೋಗವದು ಮಾಡಿದರಿಗಪ್ಪುದು ಖೇದ ನಮಗೇಕೆ
ಈಗಲೀ ಕದನದಲಿ ವಜ್ರಕೆ
ಬೇಗಡೆಯ ಮಾಡಿದನದಾವನು
ತಾಗಿ ದ್ರೋಣನ ಮುರಿವ ಪರಿಯನು ರಚಿಸಿ ಹೇಳೆಂದ (ದ್ರೋಣ ಪರ್ವ, ೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಹೋಗಲಿ ದುಷ್ಟರಾದ ನನ್ನ ಮಕ್ಕಳು ಯುದ್ಧವನ್ನು ಆರಂಭಿಸಿದ್ದಾರೆ, ಅವರು ನಮ್ಮ ಮಾತನ್ನು ಒಪ್ಪುವುದಿಲ್ಲ. ಪುಣ್ಯಪಾಪಗಳನ್ನು ಮಾಡಿದವರಿಗೆ ಅದಕ್ಕನುಸಾರವಗಿ ಫಲವನ್ನುಣ್ಣುವುದು ತಪ್ಪುವುದಿಲ್ಲ. ಈ ಯುದ್ಧದಲ್ಲಿ ವಜ್ರದಲ್ಲಿ ರಂದ್ರವನ್ನು ಕೊರೆದು ದ್ರೋಣನನ್ನು ಹೇಗೆ ಸಂಹರಿಸಿದರು ಎನ್ನುವುದನ್ನು ಹೇಳು ಎಂದು ಧೃತರಾಷ್ಟ್ರನು ಸಂಜಯನಿಗೆ ಕೇಳಿದನು.

ಅರ್ಥ:
ಹೋಗಲಿ: ಬಿಡು; ಮಾತು: ನುಡಿ; ಖೂಳ: ದುಷ್ಟ; ತಾಗು: ಮುಟ್ಟು; ಬಾಗು: ಎರಗು; ಸುಕೃತ: ಒಳ್ಳೆಯ ಕೆಲಸ; ದುಷ್ಕೃತ: ಕೆಟ್ಟ ಕೆಲಸ; ಭೋಗ: ಸುಖವನ್ನು ಅನುಭವಿಸುವುದು, ಹೊಂದುವುದು; ಅಪ್ಪು: ಆಲಿಂಗಿಸು, ಸಂಭವಿಸು; ಖೇದ: ದುಃಖ; ಕದನ: ಯುದ್ಧ; ವಜ್ರ:ಗಟ್ಟಿಯಾದ; ಬೇಗಡೆ: ಕಾಗೆ ಬಂಗಾರ; ಮುರಿ: ಸೀಳು; ಪರಿ: ರೀತಿ; ರಚಿಸು: ನಿರ್ಮಿಸು; ಹೇಳು: ತಿಳಿಸು;

ಪದವಿಂಗಡಣೆ:
ಹೋಗಲಿನ್ನ್+ಆ+ ಮಾತು +ಖೂಳರು
ತಾಗಿ +ಬಾಗರು +ಸುಕೃತ +ದುಷ್ಕೃತ
ಭೋಗವದು +ಮಾಡಿದರಿಗ್+ಅಪ್ಪುದು +ಖೇದ +ನಮಗೇಕೆ
ಈಗಲೀ +ಕದನದಲಿ +ವಜ್ರಕೆ
ಬೇಗಡೆಯ +ಮಾಡಿದನ್+ಅದಾವನು
ತಾಗಿ +ದ್ರೋಣನ +ಮುರಿವ+ ಪರಿಯನು +ರಚಿಸಿ +ಹೇಳೆಂದ

ಅಚ್ಚರಿ:
(೧) ಸುಕೃತ, ದುಷ್ಕೃತ – ವಿರುದ್ಧ ಪದಗಳು;

ಪದ್ಯ ೨೧: ಭೀಷ್ಮರು ಧರ್ಮಜನನ್ನು ಹೇಗೆ ಸಮಾಧಾನ ಪಡಿಸಿದರು.

ಖೇದವೇಕೆಲೆ ಮಗನೆ ನಿನ್ನೋ
ಪಾದಿಯಲಿ ಸುಚರಿತ್ರನಾವನು
ಮೇದಿನಿಯೊಳಾ ಮಾತು ಸಾಕೈ ಕ್ಷತ್ರಧರ್ಮವನು
ಆದರಿಸುವುದೆ ಧರ್ಮ ನಿನಗಪ
ವಾದ ಪಾತಕವಿಲ್ಲ ಸುಕೃತ
ಕ್ಕೀ ದಯಾಂಬುಧಿ ಕೃಷ್ಣ ಹೊಣೆ ನಿನಗಂಜಲೇಕೆಂದ (ಭೀಷ್ಮ ಪರ್ವ, ೧೦ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೀಷ್ಮನು ಧರ್ಮಜನನ್ನು ಸಮಾಧಾನಪಡಿಸಿ, ಮಗನೇ, ಏಕೆ ದುಃಖಿಸುವೆ? ನಿನ್ನಂತಹ ಸುಚರಿತ್ರರು, ಸನ್ಮಾರ್ಗದಲ್ಲಿ ನಡೆಯುವವರು ಯಾರಿದ್ದಾರೆ? ಆ ಮಾತು ಸಾಕು, ಕ್ಷತ್ರಿಯ ಧರ್ಮವನ್ನು ಆಚರಿಸಬೇಕಾದುದೇ ಕರ್ತವ್ಯ. ನಿನಗೆ ಅಪವಾದ ಹೊರವು ಪಾಪ ಬರುವುದಿಲ್ಲ. ನಿನ್ನ ಪುಣ್ಯ ಪಾಪಗಳ ಹೊಣೆಯು ದಯಾನಿಧಿಯಾದ ಶ್ರೀಕೃಷ್ಣನ ಮೇಲಿದೆ ಎಂದು ಭೀಷ್ಮರು ಹೇಳಿದರು.

ಅರ್ಥ:
ಖೇದ: ದುಃಖ; ಮಗ: ಸುತ; ಉಪಾಧಿ: ಧರ್ಮದ ವಿಷಯವಾಗಿ ಮಾಡುವ ಚಿಂತನೆ; ಸುಚರಿತ್ರ: ಒಳ್ಳೆಯ ನಡತೆಯುಳ್ಳವ; ಮೇದಿನಿ: ಭೂಮಿ; ಸಾಕು: ನಿಲ್ಲಿಸು; ಕ್ಷತ್ರ: ಕ್ಷತ್ರಿಯ; ಧರ್ಮ: ಧಾರಣೆ ಮಾಡಿದುದು; ಆದರಿಸು: ಗೌರವಿಸು; ಅಪವಾದ: ನಿಂದನೆ; ಪಾತಕ: ಪಾಪ; ಸುಕೃತ: ಒಳ್ಳೆಯ ನಡತೆ; ದಯಾಂಬುಧಿ: ಕರುಣಾಸಾಗರ; ಹೊಣೆ: ಜವಾಬ್ದಾರಿ; ಅಂಜು: ಹೆದರು;

ಪದವಿಂಗಡಣೆ:
ಖೇದವ್+ಏಕೆಲೆ +ಮಗನೆ +ನಿನ್ನ
ಉಪಾದಿಯಲಿ +ಸುಚರಿತ್ರನ್+ಆವನು
ಮೇದಿನಿಯೊಳ್+ಆ+ ಮಾತು +ಸಾಕೈ+ ಕ್ಷತ್ರ+ಧರ್ಮವನು
ಆದರಿಸುವುದೆ +ಧರ್ಮ +ನಿನಗ್+ಅಪ
ವಾದ +ಪಾತಕವಿಲ್ಲ+ ಸುಕೃತಕ್+
ಈ+ ದಯಾಂಬುಧಿ +ಕೃಷ್ಣ +ಹೊಣೆ +ನಿನಗ್+ಅಂಜಲೇಕೆಂದ

ಅಚ್ಚರಿ:
(೧) ಧರ್ಮಜನಿಗೆ ಯಾವುದು ಧರ್ಮ? – ಕ್ಷತ್ರಧರ್ಮವನು ಆದರಿಸುವುದೆ ಧರ್ಮ
(೨) ಧರ್ಮಜನಿಗೆ ಅಭಯವನ್ನು ಹೇಳುವ ಪರಿ – ನಿನಗಪವಾದ ಪಾತಕವಿಲ್ಲ

ಪದ್ಯ ೧೦: ಕೌರವನ ಸಿರಿ ಏಕೆ ಸೂರೆಗೊಂಡಿತು?

ವೀರಭಟ ಭಾಳಾಕ್ಷ ಭೀಷ್ಮನು
ಸಾರಿದನು ಧಾರುಣಿಯನಕಟಾ
ಕೌರವನ ಸಿರಿ ಸೂರೆಯೋದುದೆ ಹಗೆಗೆ ಗೆಲವಾಯ್ತೆ
ಆರನಾವಂಗದಲಿ ಬರಿಸದು
ಘೋರ ವಿಧಿ ಶಿವಶಿವ ಎನುತ್ತಾ
ಸಾರಥಿಯು ಕಡುಖೇದದಲಿ ತುಂಬಿದನು ಕಂಬನಿಯ (ಭೀಷ್ಮ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ವೀರಭಟರಲ್ಲಿ ಶಿವನಾದ ಭೀಷ್ಮನು ಭೂಮಿಯಲ್ಲಿ ಶರಶಯ್ಯೆಯ ಮೇಲೆ ಮಲಗಿದನು. ಕೌರವನ ಐಶ್ವರ್ಯವು ಸೂರೆಯಾಯಿತೇ! ವೈರಿಗೆ ಗೆಲುವಾಯಿತೇ! ಘೋರ ವಿಧಿಯು ಯಾರಿಗೆ ಯಾವ ಗತಿಯನ್ನು ತರುವುದೋ ಯಾರು ಬಲ್ಲರು ಶಿವ ಶಿವಾ ಎನ್ನುತ್ತಾ ಭೀಷ್ಮನ ಸಾರಥಿಯು ಕಡು ದುಃಖದಿಂದ ನೊಂದು ಕಂಬನಿ ಹರಿಸಿದನು.

ಅರ್ಥ:
ವೀರ: ಶೂರ; ಭಟ: ಸೈನಿಕ; ಭಾಳಾಕ್ಷ: ಹಣೆಯಲ್ಲಿ ಕಣ್ಣಿರುವ (ಶಿವ); ಸಾರು: ಡಂಗುರ ಹೊಡೆಸು; ಧಾರುಣಿ: ಭೂಮಿ; ಅಕಟ: ಅಯ್ಯೋ; ಸಿರಿ: ಐಶ್ವರ್ಯ; ಸೂರೆ: ಕೊಳ್ಳೆ, ಲೂಟಿ; ಹಗೆ: ವೈರ; ಗೆಲವು: ಜಯ; ಬರಿಸು: ತುಂಬು; ಘೋರ: ಭಯಂಕರವಾದ; ವಿಧಿ: ನಿಯಮ; ಸಾರಥಿ: ಸೂತ; ಕಡು: ತುಂಬ; ಖೇದ: ದುಃಖ; ತುಂಬು: ಭರ್ತಿಯಾಗು; ಕಂಬನಿ: ಕಣ್ಣೀರು;

ಪದವಿಂಗಡಣೆ:
ವೀರಭಟ +ಭಾಳಾಕ್ಷ +ಭೀಷ್ಮನು
ಸಾರಿದನು +ಧಾರುಣಿಯನ್+ಅಕಟಾ
ಕೌರವನ +ಸಿರಿ +ಸೂರೆಯೋದುದೆ +ಹಗೆಗೆ +ಗೆಲವಾಯ್ತೆ
ಆರನ್+ಆವಂಗದಲಿ+ ಬರಿಸದು
ಘೋರ +ವಿಧಿ +ಶಿವಶಿವ+ ಎನುತ್ತಾ
ಸಾರಥಿಯು +ಕಡು+ಖೇದದಲಿ +ತುಂಬಿದನು +ಕಂಬನಿಯ

ಅಚ್ಚರಿ:
(೧)ಭೀಷ್ಮರನ್ನು ಶಿವನಿಗೆ ಹೋಲಿಸುವ ಪರಿ – ವೀರಭಟ ಭಾಳಾಕ್ಷ ಭೀಷ್ಮನು
(೨) ವಿಧಿಯ ಘೋರ ಆಟ – ಆರನಾವಂಗದಲಿ ಬರಿಸದು ಘೋರ ವಿಧಿ ಶಿವಶಿವ

ಪದ್ಯ ೯: ಧೃತರಾಷ್ಟ್ರನೇಕೆ ವ್ಯಥೆಪಟ್ಟನು?

ಖೇದವೇಕೆಂದೇನು ಮಕ್ಕಳು
ಬೀದಿಗರುವಾದರು ವನಾಂತದ
ಲಾದ ಚಿತ್ತವ್ಯಥೆಯ ಕೇಳಿದು ಬೆಂದುದೆನ್ನೊಡಲು
ಆ ದಿವಾಕರನಂತೆ ನಿಚ್ಚಲು
ಕಾದುದುದಯಾಸ್ತಂಗಳಲಿದನು
ಜಾದಿ ಖಳರೊಡನಟವಿಗೋಟಲೆಯೆಂದು ಬಿಸುಸುಯ್ದ (ಅರಣ್ಯ ಪರ್ವ, ೧೮ ಸಂಧಿ, ೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನ ನೋವನ್ನು ಹೇಳುತ್ತಾ, ದುಃಖವೇಕೆಂದು ಕೇಳುವಿರಾ? ಮಕ್ಕಳು ಬೀದಿಯಲ್ಲಿ ಅಲೆಯುವ ಬಿಟ್ಟಿ ಕರುಗಳಂತೆ ಅನಾಥರಾದರು. ಕಾಡಿನಲ್ಲಿ ಅವರಿಗೊದಗಿದ ಸಂಕಟವನ್ನು ಕೇಳಿ ನನ್ನ ದೇಹ ಸಂಕಟಪಟ್ಟಿತು. ಉದಯ ಮತ್ತು ಮುಳುಗುವ ಪ್ರತಿದಿನವೂ ಮಂದೇಹರೊಡನೆ ಹೋರವ ಸೂರ್ಯನಂತೆ ಇವರು ಬೆಳಗಾದರೆ ಬೈಗಾದರೆ ರಾಕ್ಷಸರೊಡನೆ ಹೋರಾಡಬೇಕಾಗಿ ಬಂದಿದೆ ಎಂದು ನಿಟ್ಟುಸಿರಿಟ್ಟನು.

ಅರ್ಥ:
ಖೇದ: ದುಃಖ; ಮಕ್ಕಳು: ತನುಜ; ಬೀದಿ: ದಾರಿ; ಕರು: ಹಸುವಿನ ಮರಿ; ವನ: ಕಾಡು; ಅಂತ: ಅಂಚು, ಸಮೀಪ; ಚಿತ್ತ: ಮನಸ್ಸು; ವ್ಯಥೆ: ದುಃಖ; ಕೇಳು: ಆಲಿಸು; ಬೇಯು: ಸಂಕಟಕ್ಕೊಳಗಾಗು; ಒಡಲು: ದೇಹ; ದಿವಾಕರ: ಸೂರ್ಯ; ನಿಚ್ಚ: ನಿತ್ಯ; ಕಾದು: ಹೋರಾಡು; ಉದಯ: ಹುಟ್ಟು; ಅಸ್ತಂಗತ: ಮುಳುಗು; ಜಾದಿ: ಜಾಜಿಗಿಡ ಮತ್ತು ಅದರ ಹೂವು; ಖಳ: ದುಷ್ಟ; ಅಟವಿ: ಕಾದು; ಕೋಟಲೆ: ತೊಂದರೆ; ಬಿಸುಸುಯ್: ನಿಟ್ಟುಸಿರು;

ಪದವಿಂಗಡಣೆ:
ಖೇದವೇಕೆಂದೇನು+ ಮಕ್ಕಳು
ಬೀದಿ+ಕರುವಾದರು+ ವನಾಂತದ
ಲಾದ +ಚಿತ್ತ+ವ್ಯಥೆಯ +ಕೇಳಿದು +ಬೆಂದುದ್+ಎನ್ನೊಡಲು
ಆ +ದಿವಾಕರನಂತೆ +ನಿಚ್ಚಲು
ಕಾದುದ್+ಉದಯ+ಅಸ್ತಂಗಳಲ್+ಇದನು
ಜಾದಿ +ಖಳರೊಡನ್+ಅಟವಿ+ಕೋಟಲೆಯೆಂದು +ಬಿಸುಸುಯ್ದ

ಅಚ್ಚರಿ:
(೧) ಮಕ್ಕಳು ಅನಾಥರಾದರು ಎಂದು ಹೇಳುವ ಪರಿ – ಮಕ್ಕಳು ಬೀದಿಗರುವಾದರು
(೨) ಉಪಮಾನದ ಪ್ರಯೋಗ – ಆ ದಿವಾಕರನಂತೆ ನಿಚ್ಚಲು ಕಾದುದುದಯಾಸ್ತಂಗಳಲಿದನು
ಜಾದಿ ಖಳರೊಡನಟವಿಗೋಟಲೆ

ಪದ್ಯ ೭: ಧೃತರಾಷ್ಟ್ರನು ಏಕೆ ದುಃಖಿಸಿದನು?

ಮರಳಿ ಮರಳಿ ಯುಧಿಷ್ಠಿರನ ಮನ
ದಿರವ ಭೀಮನ ಖತಿಯ ಪಾರ್ಥನ
ಪರಿಯ ನಕುಲನ ನಿಲವನಾ ಸಹದೇವನಾಯತವ
ತರಳೆಯುಬ್ಬೆಯನಾ ಪುರೋಹಿತ
ವರನ ಖೇದವನಾ ಮುನೀಂದ್ರರ
ಪರಗತಿಯನಡಿಗಡಿಗೆ ಕೇಳಿದು ಮರುಗಿದನು ನೃಪತಿ (ಅರಣ್ಯ ಪರ್ವ, ೧೮ ಸಂಧಿ, ೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಚಿಂತೆ, ಭೀಮನ ಕೋಪ, ಅರ್ಜುನನ ರೀತಿ, ನಕುಲನ ನಿಲುಮೆ, ಸಹದೇವನ ಸಿದ್ಧತೆ, ದ್ರೌಪದಿಯ ಉದ್ವೇಗ, ಧೌಮ್ಯನ ದುಃಖ, ಪರಿವಾರದ ಬ್ರಾಹ್ಮಣರ ತಪಸ್ಸು, ಇವುಗಳನ್ನು ಧೃತರಾಷ್ಟ್ರನು ಮತ್ತೆ ಮತ್ತೆ ವಿಚಾರಿಸಿ ತಿಳಿದುಕೊಂಡು ಕೊರಗಿದನು.

ಅರ್ಥ:
ಮರಳಿ: ಹಿಂದಿರುಗು, ಪುನಃ; ಮನ: ಮನಸ್ಸು; ಇರವು: ಸ್ಥಿತಿ; ಖತಿ: ಕೋಪ; ಪರಿ: ರೀತಿ; ನಿಲವು: ಸ್ಥಿತಿ, ಅವಸ್ಥೆ; ಆಯತ: ನೆಲೆ; ತರಳೆ: ಹೆಣ್ಣು, ಬಾಲೆ; ಉಬ್ಬೆ: ಉದ್ವೇಗ; ಪುರೋಹಿತ: ಧಾರ್ಮಿಕ ವ್ರತವನ್ನು ಮಾಡಿಸುವವ; ಖೇದ: ದುಃಖ; ಮುನಿ: ಋಷಿ; ಪರಗತಿ: ಮೋಕ್ಷ; ಅಡಿಗಡಿಗೆ: ಮತ್ತೆ ಮತ್ತೆ; ಕೇಳು: ಆಲಿಸು; ಮರುಗು: ಕೊರಗು; ನೃಪತಿ: ರಾಜ;

ಪದವಿಂಗಡಣೆ:
ಮರಳಿ +ಮರಳಿ +ಯುಧಿಷ್ಠಿರನ +ಮನ
ದಿರವ +ಭೀಮನ +ಖತಿಯ +ಪಾರ್ಥನ
ಪರಿಯ +ನಕುಲನ +ನಿಲವನ್+ಆ+ ಸಹದೇವನ್+ಆಯತವ
ತರಳೆ+ಉಬ್ಬೆಯನ್+ಆ+ ಪುರೋಹಿತ
ವರನ+ ಖೇದವನ್+ಆ+ ಮುನೀಂದ್ರರ
ಪರಗತಿಯನ್+ಅಡಿಗಡಿಗೆ +ಕೇಳಿದು +ಮರುಗಿದನು+ ನೃಪತಿ

ಅಚ್ಚರಿ:
(೧) ೧ ಸಾಲಿನ ಮೊದಲನೇ ಮತ್ತು ಕೊನೆ ಪದ ಮ ಕಾರವಾಗಿರುವುದು

ಪದ್ಯ ೫: ಬ್ರಾಹ್ಮಣನು ಧೃತರಾಷ್ಟ್ರಂಗೆ ಏನು ಹೇಳಿದನು?

ವಿವಿಧ ವನ ಪರಿಯಟಣದಾಯಾ
ಸವನು ತತ್ಪರಿಸರದ ಕಂಟಕ
ನಿವಹವನು ದಾನವರ ದಕ್ಕಡತನದ ದಟ್ಟಣೆಯ
ಅವಚಿದಾಪತ್ತಿನ ಮನಃ ಖೇ
ದವನು ಖೋಡಿಯ ಖತಿಯ ಲಜ್ಜಾ
ವಿವರಣವನರುಹಿದನು ಧೃತರಾಷ್ಟ್ರಾವನೀಶಂಗೆ (ಅರಣ್ಯ ಪರ್ವ, ೧೮ ಸಂಧಿ, ೫ ಪದ್ಯ)

ತಾತ್ಪರ್ಯ:
ಹಲವಾರು ಕಾಡುಗಳಲ್ಲಿ ತಿರುಗಾಡಿದ ಆಯಾಸ, ಅಲ್ಲಿ ಒದಗಿದ ತೊಂದರೆಗಳು, ರಾಕ್ಷಸರ ಪರಾಕ್ರಮ ಮತ್ತು ಅವರಿಂದೊದಗಿದ ಕಾಟ, ಆಪತ್ತು ಬಂದು ಅವಚಿದಾಗ ಉಂಟಾದ ದುಃಖ, ತಮಗೊದಗಿದ ದುಸ್ಥಿತಿಗೆ ಉಂಟಾದ ಕೋಪ, ಲಜ್ಜೆ, ಇವುಗಳಿಂದ ಪಾಂಡವರು ಬೆಂಡಾದುದನ್ನು ಬ್ರಾಹ್ಮಣನು ಧೃತರಾಷ್ಟ್ರಂಗೆ ಹೇಳಿದನು.

ಅರ್ಥ:
ವಿವಿಧ: ಹಲವಾರು; ವನ: ಕಾಡು; ಪರಿಯಟಣ: ತಿರುಗಾಡು; ಆಯಾಸ; ದಣಿವು; ಪರಿಸರ: ಆವರಣ, ಪ್ರದೇಶ; ಕಂಟಕ: ತೊಂದರೆ; ನಿವಹ: ಗುಂಪು; ದಾನವ: ರಾಕ್ಷಸ; ದಕ್ಕಡ: ಸಮರ್ಥ, ಬಲಶಾಲಿ; ದಟ್ಟಣೆ: ಸಾಂದ್ರತೆ; ಅವಚು: ಅಪ್ಪಿಕೊಳ್ಳು, ಆವರಿಸು; ಆಪತ್ತು: ತೊಂದರೆ; ಮನ: ಮನಸ್ಸು; ಖೇದ: ದುಃಖ; ಖೋಡಿ: ದುರುಳತನ; ಖತಿ: ಕೋಪ, ಅಳಲು; ಲಜ್ಜೆ: ನಾಚಿಕೆ; ವಿವರಣ: ವಿಸ್ತಾರ, ವಿಚಾರ; ಅರುಹು: ತಿಳಿಸು; ಅವನೀಶ: ರಾಜ;

ಪದವಿಂಗಡಣೆ:
ವಿವಿಧ+ ವನ +ಪರಿಯಟಣದ್+ಆಯಾ
ಸವನು +ತತ್ಪರಿಸರದ +ಕಂಟಕ
ನಿವಹವನು +ದಾನವರ +ದಕ್ಕಡತನದ +ದಟ್ಟಣೆಯ
ಅವಚಿದ್+ಆಪತ್ತಿನ +ಮನಃ +ಖೇ
ದವನು +ಖೋಡಿಯ +ಖತಿಯ +ಲಜ್ಜಾ
ವಿವರಣವನ್+ಅರುಹಿದನು +ಧೃತರಾಷ್ಟ್ರ+ಅವನೀಶಂಗೆ

ಅಚ್ಚರಿ:
(೧) ದ ಕಾರದ ತ್ರಿವಳಿ ಪದ – ದಾನವರ ದಕ್ಕಡತನದ ದಟ್ಟಣೆಯ
(೨) ಖ ಕಾರದ ತ್ರಿವಳಿ ಪದ – ಖೇದವನು ಖೋಡಿಯ ಖತಿಯ

ಪದ್ಯ ೩೦: ಭೀಮನು ತನ್ನ ಸಂತಸವನ್ನು ಹೇಗೆ ವ್ಯಕ್ತಪಡಿಸಿದನು?

ತೀದುದೆಮಗೆ ವನಪ್ರವಾಸದ
ಖೇದವರ್ಜುನನಗಲಿಕೆಯ ದು
ರ್ಭೇದ ವಿಷವಿಂದಿಳಿದು ಹೋದುದು ಹರಮಹಾದೇವ
ಹೋದ ರಾಜ್ಯಭ್ರಂಶ ಬಹಳ ವಿ
ಷಾದ ಬೀತುದು ನಿಮ್ಮ ಕಾರು
ಣ್ಯೋದಯವು ನಮಗಾಯ್ತಲಾ ಚರಿತಾರ್ಥರಾವೆಂದ (ಅರಣ್ಯ ಪರ್ವ, ೧೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ನಮಗೆ ವನವಾಸದ ದುಃಖವು ತೀರಿತು, ಸಹಿಸಲಾಗದ ಅರ್ಜುನನ ಅಗಲಿಕೆಯ ವಿಷವೂ ಕಡಿಮೆಯಾಯಿತು, ರಾಜ್ಯವನ್ನು ಕಳೆದುಕೊಂಡ ಖೇದವು ಇಲ್ಲವಾಯಿತು, ನಿಮ್ಮ ದರ್ಶನದಿಂದ ನಾವು ಪಡೆಯಬೇಕಾದುದೆಲ್ಲವನ್ನೂ ಪಡೆದಂತಾಯಿತು ಎಂದು ಭೀಮನು ಹೇಳಿದನು.

ಅರ್ಥ:
ತೀದು: ತೀರಿತು; ವನ: ಕಾಡು; ಪ್ರವಾಸ: ಸಂಚಾರ; ಖೇದ; ದುಃಖ; ಅಗಲಿಕೆ: ಬೇರೆ ಹೋಗು, ತೊರೆ; ದುರ್ಭೇದ: ಒಡೆಯಲು ಕಷ್ಟವಾದ; ವಿಷ: ಗರಲ; ಇಳಿ: ಕಡಿಮೆಯಾಗು; ಹರ: ಶಿವ; ಮಹಾದೇವ: ಶಂಕರ; ರಾಜ್ಯಭ್ರಂಶ: ರಾಜ್ಯದ ಅಗಲಿಕೆ; ವಿಷಾದ: ದುಃಖ; ಬೀತು: ಕಳೆದುಹೋಯಿತು; ಕಾರುಣ್ಯ: ದಯೆ; ಚರಿತಾರ್ಥ: ಕೃತಾರ್ಥ, ಧನ್ಯ;

ಪದವಿಂಗಡಣೆ:
ತೀದುದ್+ಎಮಗೆ +ವನ+ಪ್ರವಾಸದ
ಖೇದವ್+ಅರ್ಜುನನ್+ಅಗಲಿಕೆಯ +ದು
ರ್ಭೇದ +ವಿಷವಿಂದ್+ಇಳಿದು +ಹೋದುದು +ಹರ+ಮಹಾದೇವ
ಹೋದ +ರಾಜ್ಯಭ್ರಂಶ +ಬಹಳ +ವಿ
ಷಾದ +ಬೀತುದು +ನಿಮ್ಮ +ಕಾರು
ಣ್ಯೋದಯವು +ನಮಗಾಯ್ತಲಾ +ಚರಿತಾರ್ಥರಾವೆಂದ

ಅಚ್ಚರಿ:
(೧) ಖೇದ, ವಿಷಾದ – ಸಾಮಾರ್ಥ ಪದ

ಪದ್ಯ ೫೨: ಅರ್ಜುನನ ಮನಸ್ಥಿತಿ ಹೇಗಿತ್ತು?

ಸ್ವೇದ ಜಲದಲಿ ಮೀಂದು ಪುನರಪಿ
ಖೇದ ಪಂಕದೊಳದ್ದು ಬಹಳ ವಿ
ಷಾದ ರಜದಲಿ ಹೊರಳಿ ಭಯರಸ ನದಿಯೊಳೀಸಾಡಿ
ಮೈದೆಗೆದು ಮರನಾಗಿ ದೆಸೆಯಲಿ
ಬೀದಿವರಿವುತ ವಿವಿಧ ಭಾವದ
ಭೇದದಲಿ ಮನ ಮುಂದುಗೆಡುತ್ರಿದುದು ಧನಂಜಯನ (ಅರಣ್ಯ ಪರ್ವ, ೭ ಸಂಧಿ, ೫೨ ಪದ್ಯ)

ತಾತ್ಪರ್ಯ:
ಬೆವರಿನಲ್ಲಿ ಮಿಂದು, ದುಃಖದ ಕೆಸರಿನಲ್ಲಿ ಮುಳುಗಿ, ವಿಷಾದದ ಧೂಳಿನಲ್ಲಿ ಹೊರಳಾಡಿ, ಭಯದ ನದಿಯಲ್ಲಿ ಈಜಾಡಿ, ಹೊರ ಬಂದು ಯಾವ ಭಾವವೂ ಇಲ್ಲದೆ ಮರಗಟ್ಟಿನಿಂದು ದಿಕ್ಕು ದಿಕ್ಕಿಗೆ ನುಗ್ಗುತ್ತಾ ಅನೇಕ ಭಾವನೆಗಳನ್ನು ತಾಳುತ್ತಾ ಅರ್ಜುನನ ಮನಸ್ಸು ಮುಂದುಗೆಡುತ್ತಿತ್ತು.

ಅರ್ಥ:
ಸ್ವೇದ: ಬೆವರು; ಜಲ: ನೀರು; ಮಿಂದು: ಮುಳುಗು; ಪುನರಪಿ: ಮತ್ತೆ; ಖೇದ: ದುಃಖ; ಪಂಕ: ಕೆಸರು; ಅದ್ದು: ಮುಳುಗಿಸು; ಬಹಳ: ತುಂಬ; ವಿಷಾದ: ದುಃಖ; ರಜ: ಕೊಳೆ; ಹೊರಳು: ಉರುಳಾಡು; ಭಯ: ಅಂಜಿಕೆ; ರಸ: ಸಾರ; ನದಿ: ಸರೋವರ; ಈಸಾಡು: ಈಜು; ಮೈ: ತನು; ತೆಗೆ: ಹೊರತರು; ಮರ: ತರು; ದೆಸೆ: ದಿಕ್ಕು; ಬೀದಿ: ಮಾರ್ಗ; ಅರಿ: ತಿಳಿ; ವಿವಿಧ: ಹಲವಾರು; ಭಾವ: ಭಾವನೆ, ಚಿತ್ತವೃತ್ತಿ; ಭೇದ: ಮುರಿ, ಒಡೆ; ಮನ: ಮನಸ್ಸು; ಕೆಡು: ಹದಗೆಡು;

ಪದವಿಂಗಡಣೆ:
ಸ್ವೇದ+ ಜಲದಲಿ +ಮಿಂದು +ಪುನರಪಿ
ಖೇದ+ ಪಂಕದೊಳದ್ದು+ ಬಹಳ +ವಿ
ಷಾದ +ರಜದಲಿ +ಹೊರಳಿ +ಭಯರಸ+ ನದಿಯೊಳ್+ಈಸಾಡಿ
ಮೈ+ತೆಗೆದು +ಮರನಾಗಿ+ ದೆಸೆಯಲಿ
ಬೀದಿವ್+ಅರಿವುತ +ವಿವಿಧ +ಭಾವದ
ಭೇದದಲಿ +ಮನ +ಮುಂದುಗೆಡುತ್ತಿದುದು +ಧನಂಜಯನ

ಅಚ್ಚರಿ:
(೧) ಉಪಮಾನಗಳ ಬಳಕೆ – ಸ್ವೇದ ಜಲದಲಿ ಮೀಂದು ಪುನರಪಿ ಖೇದ ಪಂಕದೊಳದ್ದು ಬಹಳ ವಿಷಾದ ರಜದಲಿ ಹೊರಳಿ ಭಯರಸ ನದಿಯೊಳೀಸಾಡಿ ಮೈದೆಗೆದು ಮರನಾಗಿ
(೨) ಭೇದ, ಸ್ವೇದ, ಖೇದ, ವಿಷಾದ – ಪ್ರಾಸ ಪದಗಳು