ತರಣಿಬಿಂಬದ ಮರಿಯೊ ಕೌಸ್ತುಭ
ವರಮಣಿಯ ಖಂಡದ ಕಣಿಯೊ ಮ
ರ್ತ್ಯರಿಗೆ ಮಗನಿವನಲ್ಲ ಮಾಯಾಬಾಲಕನೊ ಮೇಣು
ಇರಿಸಿ ಹೋದವಳಾವಳೋ ಶಿಶು
ವರನ ತಾಯ್ ನಿರ್ಮೋಹೆಯೈ ಹರ
ಹರ ಮಹಾದೇವೆನುತ ತೆಗೆದಪ್ಪಿದನು ಬಾಲಕನ (ಆದಿ ಪರ್ವ, ೩ ಸಂಧಿ, ೨೪ ಪದ್ಯ)
ತಾತ್ಪರ್ಯ:
ಆ ಸೂತನು ಇದು ಸೂರ್ಯಬಿಂಬದ ಮರಿಯೋ, ಕೌಸ್ತುಭ ಮಣಿಯ ತುಂಡೋ ಇರಬೇಕು. ಇವನು ಯಾವ ಮನುಷ್ಯನ ಮಗನೂ ಅಲ್ಲ , ಮಾಯಾಬಾಲಕನಿದ್ದರೂ ಇರಬಹುದು. ಇಮ್ತಹ ಉತ್ತಮವಾದ ಮಗುವನ್ನು ಪುತ್ರಮೋಹವಿಲ್ಲದ ಯಾವ ತಾಯಿಯು ಇಲ್ಲಿ ಇಟ್ಟು ಹೋದಳೋ, ಶಿವಶಿವಾ ಮಹಾದೇವಾ ಎನ್ನುತ್ತಾ ಆ ಮಗುವನ್ನೆತ್ತಿ ಅಪ್ಪಿಕೊಂಡನು.
ಅರ್ಥ:
ತರಣಿ: ಸೂರ್ಯ; ಬಿಂಬ: ಪ್ರಕಾಶ; ಮರಿ: ಚಿಕ್ಕವ; ಕೌಸ್ತುಭ: ಬೆಲೆಬಾಳುವ ಹರಳು; ವರ: ಶ್ರೇಷ್ಠ; ಮಣಿ: ರತ್ನ; ಖಂಡ: ಚೂರು; ಕಣಿ: ಆಕರ, ನೆಲೆ; ಮರ್ತ್ಯ: ಮನುಷ್ಯ; ಮಗ: ಪುತ್ರ; ಮಾಯಾ: ಗಾರುಡಿ; ಬಾಲಕ: ಹುಡುಗ; ಮೇಣು: ಇನ್ನು, ಹಾಗೂ; ಇರಿಸು: ಇಡು; ಹೋಗು: ತೆರಳು; ಶಿಶು: ಪಾಪು; ನಿರ್ಮೋಹೆ: ಆಸೆ ಇಲ್ಲದ; ಅಪ್ಪು: ಆಲಂಗಿಸು; ಬಾಲಕ: ಹುಡುಗ;
ಪದವಿಂಗಡಣೆ:
ತರಣಿಬಿಂಬದ +ಮರಿಯೊ +ಕೌಸ್ತುಭ
ವರಮಣಿಯ +ಖಂಡದ +ಕಣಿಯೊ +ಮ
ರ್ತ್ಯರಿಗೆ + ಮಗನಿವನಲ್ಲ +ಮಾಯಾ+ಬಾಲಕನೊ +ಮೇಣು
ಇರಿಸಿ+ ಹೋದವಳ್+ಆವಳೋ +ಶಿಶು
ವರನ +ತಾಯ್ +ನಿರ್ಮೋಹೆಯೈ+ ಹರ
ಹರ +ಮಹಾದೇವ್+ಎನುತ +ತೆಗೆದಪ್ಪಿದನು +ಬಾಲಕನ
ಅಚ್ಚರಿ:
(೧) ಮಗುವನ್ನು ವರ್ಣಿಸುವ ಪರಿ – ತರಣಿಬಿಂಬದ ಮರಿಯೊ ಕೌಸ್ತುಭವರಮಣಿಯ ಖಂಡದ ಕಣಿಯೊ