ಪದ್ಯ ೨೬: ಕುರುಸೇನೆಯಲ್ಲಿ ಯಾವ ಆಶೆ ಕಡಿಮೆಯಾಗಿತ್ತು?

ಕಾಣಿಕೆಯನಿತ್ತಖಿಳ ಸುಭಟ
ಶ್ರೇಣಿ ಕಂಡುದು ನುಡಿಯ ಹಾಣಾ
ಹಾಣಿಗಳ ಭಾಷೆಗಳ ಹಕ್ಕಲು ವೀರರುಕ್ಕುಗಳ
ಪ್ರಾಣಚುಳಕೋದಕದ ಚೇಷ್ಟೆಯ
ಹೂಣಿಗರು ವಿಜಯಾಂಗನೋಪ
ಕ್ಷೀಣಮಾನಸರೊಪ್ಪಿದರು ಕುರುಪತಿಯ ಪರಿವಾರ (ಶಲ್ಯ ಪರ್ವ, ೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕುರುಸೇನೆಯ ಸುಭಟರೆಲ್ಲರೂ ಶಲ್ಯ್ನ ದರ್ಶನವನ್ನು ಪಡೆದುಕೊಂಡು ಕಾಣಿಕೆಯನ್ನು ಕೊಟ್ಟರು. ಹಾಣಾಹಾಣಿ ಯುದ್ಧವನ್ನು ಮಾಡಿ ಪರಸೇನೆಯ ವೀರರನ್ನು ಕಡಿದುಹಾಕುವ ವೀರಾಲಾಪವನ್ನು ಮಾಡಿದರು. ಶತ್ರುಸೈನ್ಯದಲ್ಲಿ ನುಗ್ಗಿ ವಿರೋಧಿ ಯೋಧರನ್ನು ಆಪೋಶನ ತೆಗೆದುಕೊಳ್ಳುವ ಆತುರವನ್ನು ತೋರಿದರು. ಆದರೆ ವಿಜಯದ ಆಶೆ ಅವರಲ್ಲಿ ಕಡಿಮೆಯಾಗಿತ್ತು.

ಅರ್ಥ:
ಕಾಣಿಕೆ: ಉಡುಗೊರೆ; ಇತ್ತು: ನೀಡು; ಅಖಿಳ: ಎಲ್ಲಾ; ಸುಭಟ: ಪರಾಕ್ರಮಿ; ಶ್ರೇಣಿ: ಗುಂಪು; ಕಂಡು: ನೋಡು; ನುಡಿ: ಮಾತು; ಹಾಣಾಹಾಣಿ: ಬೆರೆಸು, ಹಣೆ ಹಣೆಯ ಯುದ್ಧ; ಭಾಷೆ: ನುಡಿ; ಹಕ್ಕು: ಜವಾಬ್ದಾರಿ; ಉಕ್ಕು: ಹಿಗ್ಗುವಿಕೆ; ಪ್ರಾಣ: ಜೀವ; ಉದಕ: ನೀರು; ಚೇಷ್ಟೆ: ಅಂಗಾಂಗಗಳ ಚಲನೆ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ವಿಜಯ: ಗೆಲುವು; ಕ್ಷೀಣ: ನಾಶ, ಕೇಡು; ಮಾನಸ: ಮನಸ್ಸು; ಒಪ್ಪು: ಒಪ್ಪಿಗೆ, ಸಮ್ಮತಿ; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ಕಾಣಿಕೆಯನಿತ್ತ್+ಅಖಿಳ +ಸುಭಟ
ಶ್ರೇಣಿ +ಕಂಡುದು +ನುಡಿಯ +ಹಾಣಾ
ಹಾಣಿಗಳ+ ಭಾಷೆಗಳ +ಹಕ್ಕಲು +ವೀರರುಕ್ಕುಗಳ
ಪ್ರಾಣಚುಳಕ+ಉದಕದ +ಚೇಷ್ಟೆಯ
ಹೂಣಿಗರು+ ವಿಜಯಾಂಗನೋಪ
ಕ್ಷೀಣಮಾನಸರ್+ಒಪ್ಪಿದರು +ಕುರುಪತಿಯ +ಪರಿವಾರ

ಅಚ್ಚರಿ:
(೧) ಗೆಲುವಿನ ಆಸೆ ಕ್ಷೀಣಿಸಿತು ಎಂದು ಹೇಳಲು – ವಿಜಯಾಂಗನೋಪ ಕ್ಷೀಣಮಾನಸರೊಪ್ಪಿದರು
(೨) ವೀರರನ್ನು ವಿವರಿಸುವ ಪರಿ – ಪ್ರಾಣಚುಳಕೋದಕದ ಚೇಷ್ಟೆಯ ಹೂಣಿಗರು