ಇಂದೆಮಗೆ ಸಿದ್ಧಿಸಿತು ನಾನಾ
ದಂದುಗಂ ಬಡುವಾ ತಪಃ ಫಲ
ವೆಂದೆನುತ ಕೈಮುಗಿದು ದೂರ್ವಾಸನನು ಕೌಶಿಕನ
ವಂದ್ಯವೇದವ್ಯಾಸಧೌಮ್ಯರ
ನಂದು ಕುಶಲವ ಕೇಳಿ ಧರ್ಮಜ
ಗೆಂದ ನಡೆಸೈ ಕ್ರಿಯೆಯನೆಂದಾಜ್ಞಾಪಿಸಿದನೊಲಿದು (ಅರಣ್ಯ ಪರ್ವ, ೩ ಸಂಧಿ, ೧೮ ಪದ್ಯ)
ತಾತ್ಪರ್ಯ:
ಜೈಮಿನಿ ಮುನಿಗಳು ಸಾರ್ಥಕ ಭಾವದಿಂದ, ಇಂದು ನಮಗೆ ನಮ್ಮ ತಪಗಳ ಫಲವು ದೊರಕಿತು, ಹಲವಾರು ಕಷ್ಟಗಳನ್ನು ಸಹಿಸುತ್ತಾ ಮಾಡಿದ ಎಲ್ಲಾ ತಪಸ್ಸು ಫಲಿಸಿತು ಎಂದು ಹೇಳಿ ಶ್ರೀಕೃಷ್ಣನಿಗೆ ನಮಸ್ಕರಿಸಿ, ದೂರ್ವಾಸ, ಕೌಶಿಕ, ವೇದವ್ಯಾಸ, ಧೌಮ್ಯರ ಕುಶಲವನ್ನು ವಿಚಾರಿಸಿ, ಧರ್ಮಜ, ಇನ್ನು ನೀನು ಶ್ರಾದ್ಧ ಕಾರ್ಯವನ್ನು ಪ್ರಾರಂಭಿಸು ಎಂದು ಅಪ್ಪಣೆ ನೀಡಿದರು.
ಅರ್ಥ:
ಇಂದು: ಇವತ್ತು; ಎಮಗೆ: ನಮಗೆ; ಸಿದ್ಧಿಸು: ಗುರಿಮುಟ್ಟುವಿಕೆ, ಮೋಕ್ಷ; ದಂದುಗ: ತೊಡಕು; ತಪ: ತಪಸ್ಸು; ಫಲ: ಪ್ರಯೋಜನ; ಕೈಮುಗಿ: ನಮಸ್ಕರಿಸು; ವಂದ್ಯ: ವಂದಿಸು, ಪೂಜನೀಯ; ಕುಶಲ: ಕ್ಷೇಮ; ಕೇಳು: ಆಲಿಸು; ನಡೆಸು: ಮುಂದುವರಿಸು; ಕ್ರಿಯೆ: ಕಾರ್ಯ; ಆಜ್ಞಾಪಿಸು: ಅಪ್ಪಣೆಯನ್ನು ನೀಡು; ಒಲಿ: ಪ್ರೀತಿ;
ಪದವಿಂಗಡಣೆ:
ಇಂದ್+ಎಮಗೆ +ಸಿದ್ಧಿಸಿತು+ ನಾನಾ
ದಂದುಗಂ +ಬಡುವಾ +ತಪಃ +ಫಲವ್
ಎಂದೆನುತ+ ಕೈಮುಗಿದು+ ದೂರ್ವಾಸನನು+ ಕೌಶಿಕನ
ವಂದ್ಯ+ವೇದವ್ಯಾಸ+ಧೌಮ್ಯರನ್
ಅಂದು +ಕುಶಲವ +ಕೇಳಿ +ಧರ್ಮಜಗ್
ಎಂದ +ನಡೆಸೈ +ಕ್ರಿಯೆಯನೆಂದ್+ಆಜ್ಞಾಪಿಸಿದನ್+ಒಲಿದು