ಅಕಟ ಮರುಳೇ ಗುರುಸುತನ ಮತಿ
ವಿಕಳತನವನು ಕೃಪನು ಕೃತವ
ರ್ಮಕರು ಕಂಡಿರೆ ಪಾಂಡವರ ತಲೆ ತನಗೆ ಗೋಚರವೆ
ಬಕನ ಧರ್ಮಸ್ಥಿತಿಯವೊಲು ದೇ
ವಕಿಯ ಮಗ ಕಾದಿಹನಲೇ ಕೌ
ಳಿಕದ ಸಿದ್ಧನ ಕೃತಿಯನಾರಿಗೆ ಮೀರಬಹುದೆಂದ (ಗದಾ ಪರ್ವ, ೮ ಸಂಧಿ, ೬೦ ಪದ್ಯ)
ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರೆಸುತ್ತಾ, ಕೃಪ, ಕೃತವರ್ಮ, ನೀವು ಅಶ್ವತ್ಥಾಮನ ಮರಳುತನದ ಮಾತುಗಳನ್ನು ಕೇಳಿದ್ದೀರೇ? ಪಾಂಡವರ ತಲೆ ಅವನಿಗೆ ಸಿಕ್ಕೀತೇ? ಕೃಷ್ಣನು ಬಕಧ್ಯಾನ ಮಾಡುತ್ತಾ ಅವರನ್ನು ಕಾದುಕೋಂಡಿದ್ದಾನೆ, ಆ ಕಪಟಸಿದ್ಧನ ಮಾಟವನ್ನು ಯಾರು ಮೀರಬಲ್ಲರು ಎಂದು ಹೇಳಿದನು.
ಅರ್ಥ:
ಅಕಟ: ಅಯ್ಯೋ; ಮರುಳ: ಮೂಢ, ದಡ್ಡ; ಸುತ: ಮಗ; ಮತಿ: ಬುದ್ಧಿ; ವಿಕಳ: ಭ್ರಮೆ, ಭ್ರಾಂತಿ; ಕಂಡು: ನೋಡು; ತಲೆ: ಶಿರ; ಗೋಚರ: ಕಾಣು, ತೋರು; ಬಕ: ಕಪಟಿ, ವಂಚಕ, ಕೃಷ್ಣನಿಂದ ಹತನಾದ ಒಬ್ಬ ರಾಕ್ಷಸ; ಧರ್ಮ: ಧಾರಣೆ ಮಾಡಿದುದು; ಸ್ಥಿತಿ: ಅವಸ್ಥೆ; ಮಗ: ಸುತ; ಕಾದಿಹ: ರಕ್ಷಿಸು; ಕೌಳಿಕ: ಕಟುಕ, ಮೊಸ; ಸಿದ್ಧ: ಅಲೌಕಿಕ ಸಾಮರ್ಥ್ಯವುಳ್ಳವನು; ಕೃತಿ: ಕಾರ್ಯ; ಮೀರು: ಉಲ್ಲಂಘಿಸು;
ಪದವಿಂಗಡಣೆ:
ಅಕಟ+ ಮರುಳೇ +ಗುರುಸುತನ +ಮತಿ
ವಿಕಳತನವನು +ಕೃಪನು +ಕೃತವ
ರ್ಮಕರು +ಕಂಡಿರೆ +ಪಾಂಡವರ +ತಲೆ +ತನಗೆ+ ಗೋಚರವೆ
ಬಕನ +ಧರ್ಮಸ್ಥಿತಿಯವೊಲು +ದೇ
ವಕಿಯ +ಮಗ +ಕಾದಿಹನಲೇ +ಕೌ
ಳಿಕದ +ಸಿದ್ಧನ+ ಕೃತಿಯನ್+ ಆರಿಗೆ +ಮೀರಬಹುದೆಂದ
ಅಚ್ಚರಿ:
(೧) ಕೃಷ್ಣನ ಸಾಮರ್ಥ್ಯವನ್ನು ಹೇಳುವ ಪರಿ – ಬಕನ ಧರ್ಮಸ್ಥಿತಿಯವೊಲು ದೇವಕಿಯ ಮಗ ಕಾದಿಹನಲೇ