ಆದಡಮರವಿರೋಧಿಯಸುವನು
ಸೇದುವೆನು ಸರಿಸದಲಿ ನಿಂದರೆ
ನಾದುವೆನು ನಿಟ್ಟೊಡಲ ರಕುತದಲಖಿಳ ದಿಗುತಟವ
ಕಾದುವೆನು ನಮ್ಮವರು ಕಳಚಿದ
ಕೈದುವನು ಕೈವಶವಮಾಡಿ ವಿ
ನೋದವನು ನೀವ್ ನೋಡಿ ಎಂದನು ಕರ್ಣನರಸಂಗೆ (ದ್ರೋಣ ಪರ್ವ, ೧೬ ಸಂಧಿ, ೩೦ ಪದ್ಯ)
ತಾತ್ಪರ್ಯ:
ಹಾಗಾದರೆ ಈ ರಾಕ್ಷಸನ ಪ್ರಾಣವನ್ನು ಹೀರುತ್ತೇನೆ, ನನ್ನೆದುರು ಸರಿಸಮಾನವಾಗಿ ನಿಮ್ತರೆ ಇವನ ದೈತ್ಯದೇಹದ ರಕ್ತವನ್ನು ಎಲ್ಲಾ ದಿಕ್ಕುಗಳಲ್ಲೂ ಚೆಲ್ಲುತ್ತೇನೆ, ನಮ್ಮವರು ಕಳೆದುಕೊಂಡ ಆಯುಧಗಳು ಮತ್ತೆ ಕೈವಶವಾಗುವಂತೆ ಯುದ್ಧಮಾಡುತ್ತೇನೆ, ಈ ವಿನೋದವನ್ನು ನೀವು ನೋಡಿರಿ ಎಂದು ಕರ್ಣನು ಹೇಳಿದನು.
ಅರ್ಥ:
ಅಮರ: ದೇವತೆ; ವಿರೋಧಿ: ವೈರಿ; ಅಸು: ಪ್ರಾಣ; ಸೇದು: ಸೆಳೆ, ದೋಚು; ಸರಿಸ: ರೀತಿ, ಕ್ರಮ; ನಿಂದು: ನಿಲ್ಲು; ನಾದು: ಕಲಸು; ಒಡಲು: ದೇಹ; ರಕುತ: ನೆತ್ತರು; ಅಖಿಳ: ಎಲ್ಲಾ; ದಿಗುತಟ: ದಿಕ್ಕು; ಕಾದು: ಹೋರಾಡು; ಕಳಚು: ತೆಗೆ, ಬೇರ್ಪಡಿಸು; ಕೈದು: ಆಯುಧ; ವಶ: ಅಧೀನ; ವಿನೋದ: ಹರ್ಷ; ನೋಡು: ವೀಕ್ಷಿಸು; ಅರಸು: ರಾಜ;
ಪದವಿಂಗಡಣೆ:
ಆದಡ್+ಅಮರ+ವಿರೋಧಿ+ಅಸುವನು
ಸೇದುವೆನು +ಸರಿಸದಲಿ +ನಿಂದರೆ
ನಾದುವೆನು+ ನಿಟ್ಟೊಡಲ+ ರಕುತದಲ್+ಅಖಿಳ +ದಿಗುತಟವ
ಕಾದುವೆನು +ನಮ್ಮವರು +ಕಳಚಿದ
ಕೈದುವನು +ಕೈವಶವಮಾಡಿ+ ವಿ
ನೋದವನು +ನೀವ್ +ನೋಡಿ +ಎಂದನು +ಕರ್ಣನ್+ಅರಸಂಗೆ
ಅಚ್ಚರಿ:
(೧) ಘಟೋತ್ಕಚನನ್ನು ಅಮರವಿರೋಧಿ ಎಂದು ಕರೆದಿರುವುದು
(೨) ಕಾದು, ನಾದು, ಕೈದು – ಪ್ರಾಸ ಪದಗಳು