ಪದ್ಯ ೩೦: ಕರ್ಣನು ದುರ್ಯೋಧನನಿಗೆ ಯಾವ ವಿನೋದವನ್ನು ನೋಡಲು ಹೇಳಿದನು?

ಆದಡಮರವಿರೋಧಿಯಸುವನು
ಸೇದುವೆನು ಸರಿಸದಲಿ ನಿಂದರೆ
ನಾದುವೆನು ನಿಟ್ಟೊಡಲ ರಕುತದಲಖಿಳ ದಿಗುತಟವ
ಕಾದುವೆನು ನಮ್ಮವರು ಕಳಚಿದ
ಕೈದುವನು ಕೈವಶವಮಾಡಿ ವಿ
ನೋದವನು ನೀವ್ ನೋಡಿ ಎಂದನು ಕರ್ಣನರಸಂಗೆ (ದ್ರೋಣ ಪರ್ವ, ೧೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ಹಾಗಾದರೆ ಈ ರಾಕ್ಷಸನ ಪ್ರಾಣವನ್ನು ಹೀರುತ್ತೇನೆ, ನನ್ನೆದುರು ಸರಿಸಮಾನವಾಗಿ ನಿಮ್ತರೆ ಇವನ ದೈತ್ಯದೇಹದ ರಕ್ತವನ್ನು ಎಲ್ಲಾ ದಿಕ್ಕುಗಳಲ್ಲೂ ಚೆಲ್ಲುತ್ತೇನೆ, ನಮ್ಮವರು ಕಳೆದುಕೊಂಡ ಆಯುಧಗಳು ಮತ್ತೆ ಕೈವಶವಾಗುವಂತೆ ಯುದ್ಧಮಾಡುತ್ತೇನೆ, ಈ ವಿನೋದವನ್ನು ನೀವು ನೋಡಿರಿ ಎಂದು ಕರ್ಣನು ಹೇಳಿದನು.

ಅರ್ಥ:
ಅಮರ: ದೇವತೆ; ವಿರೋಧಿ: ವೈರಿ; ಅಸು: ಪ್ರಾಣ; ಸೇದು: ಸೆಳೆ, ದೋಚು; ಸರಿಸ: ರೀತಿ, ಕ್ರಮ; ನಿಂದು: ನಿಲ್ಲು; ನಾದು: ಕಲಸು; ಒಡಲು: ದೇಹ; ರಕುತ: ನೆತ್ತರು; ಅಖಿಳ: ಎಲ್ಲಾ; ದಿಗುತಟ: ದಿಕ್ಕು; ಕಾದು: ಹೋರಾಡು; ಕಳಚು: ತೆಗೆ, ಬೇರ್ಪಡಿಸು; ಕೈದು: ಆಯುಧ; ವಶ: ಅಧೀನ; ವಿನೋದ: ಹರ್ಷ; ನೋಡು: ವೀಕ್ಷಿಸು; ಅರಸು: ರಾಜ;

ಪದವಿಂಗಡಣೆ:
ಆದಡ್+ಅಮರ+ವಿರೋಧಿ+ಅಸುವನು
ಸೇದುವೆನು +ಸರಿಸದಲಿ +ನಿಂದರೆ
ನಾದುವೆನು+ ನಿಟ್ಟೊಡಲ+ ರಕುತದಲ್+ಅಖಿಳ +ದಿಗುತಟವ
ಕಾದುವೆನು +ನಮ್ಮವರು +ಕಳಚಿದ
ಕೈದುವನು +ಕೈವಶವಮಾಡಿ+ ವಿ
ನೋದವನು +ನೀವ್ +ನೋಡಿ +ಎಂದನು +ಕರ್ಣನ್+ಅರಸಂಗೆ

ಅಚ್ಚರಿ:
(೧) ಘಟೋತ್ಕಚನನ್ನು ಅಮರವಿರೋಧಿ ಎಂದು ಕರೆದಿರುವುದು
(೨) ಕಾದು, ನಾದು, ಕೈದು – ಪ್ರಾಸ ಪದಗಳು

ಪದ್ಯ ೨೧: ಅರ್ಜುನನೆದುರು ಎಷ್ಟು ಸೈನ್ಯ ನಾಶವಾಯಿತು?

ಅಳಿದುದೈನೂರರಸುಗಳು ಮು
ಮ್ಮುಳಿತವಾಯ್ತೈವತ್ತು ಸಾವಿರ
ಬಲುಗುದುರೆ ನುಗ್ಗಾದುದೊಬೈನೂರು ಭದ್ರಗಜ
ಅಳಿದುದಕೆ ಕೊಲೆಕೊತ್ತುವಡೆದ
ಗ್ಗಳ ಪದಾತಿಗೆ ಗಣನೆಯೆಲ್ಲೀ
ಬಲದ ಮೈವಶವವರ ಕೈವಶವೇನು ಹೊಸತೆಂದ (ದ್ರೋಣ ಪರ್ವ, ೧೦ ಸಂಧಿ, ೨೧ ಪದ್ಯ)

ತಾತ್ಪರ್ಯ:
ಐನೂರು ರಾಜರು, ಐವತ್ತು ಸಾವಿರ ಕುದುರೆಗಳು, ಒಂಬೈನೂರು ಆನೆಗಳು ಪ್ರಾಣ ಬಿಟ್ಟವು, ಸತ್ತ ಪದಾತಿಗಳ, ಗಾಯಗೊಂಡವರ ಲೆಕ್ಕ ಹೇಳುವವರಾರು? ಕೌರವರ ಮೈವಶ, ಪಾಂಡವರ ಕೈಚಳಕ ಹೊಸದಾಗಿ ಹೇಳಬೇಕೇ ಎಂದು ಸಂಜಯನು ಕೇಳಿದನು.

ಅರ್ಥ:
ಅಳಿ: ನಾಶ; ಅರಸು: ರಾಜ; ಮುಮ್ಮುಳಿತ: ರೂಪಗೆಟ್ಟು ನಾಶವಾಗು; ಸಾವಿರ: ಸಹಸ್ರ; ಬಲು: ಶಕ್ತಿ; ಕುದುರೆ: ಅಶ್ವ; ನುಗ್ಗು: ತಳ್ಳು; ಭದ್ರ: ಗಟ್ಟಿ; ಗಜ: ಆನೆ; ಕೊಲೆ: ಸಾವು; ಅಗ್ಗಳ: ಶ್ರೇಷ್ಠ; ಪದಾತಿ: ಸೈನಿಕ; ಗಣನೆ: ಎಣಿಕೆ; ಬಲ: ಸೈನ್ಯ; ಮೈ: ತನು, ದೇಹ; ವಶ: ಅಧೀನ, ಅಂಕೆ; ಕೈ: ಕರ, ಹಸ್ತ; ಹೊಸತು: ನವೀನ;

ಪದವಿಂಗಡಣೆ:
ಅಳಿದುದ್+ಐನೂರ್+ಅರಸುಗಳು+ ಮು
ಮ್ಮುಳಿತವಾಯ್ತ್+ಐವತ್ತು +ಸಾವಿರ
ಬಲು+ಕುದುರೆ +ನುಗ್ಗಾದುದ್+ಒಬೈನೂರು +ಭದ್ರಗಜ
ಅಳಿದುದಕೆ +ಕೊಲೆಕೊತ್ತುವಡೆದ್
ಅಗ್ಗಳ +ಪದಾತಿಗೆ +ಗಣನೆಯೆಲ್ಲೀ
ಬಲದ +ಮೈವಶವ್+ಅವರ+ ಕೈವಶವೇನು+ ಹೊಸತೆಂದ

ಅಚ್ಚರಿ:
(೧) ಮೈವಶ, ಕೈವಶ – ಪದದ ಬಳಕೆ
(೨) ಅಳಿ, ಮುಮ್ಮುಳಿ, ನುಗ್ಗಾದುದು – ನಾಶವಾದವು ಎಂದು ಹೇಳುವ ಪದಗಳು

ಪದ್ಯ ೩೭: ವ್ಯಾಸರು ಯಾರ ಕಥೆಯನ್ನು ಹೇಳಲು ಪ್ರಾರಂಭಿಸಿದರು?

ಆದರಾ ಮೃತ್ಯುವಿನ ಕೈವಶ
ವಾದವರನೆನಗರುಹ ಬೇಹುದು
ಮೇದಿನೀಶರೊಳೆಂದು ಬಿನ್ನಹ ಮಾಡಿದನು ನ್ರ್ಪತಿ
ಆ ದಯಾಳುಗಳರಸನಾ ಶೋ
ಕೋದಧಿಗೆ ವಡಬಾಗ್ನಿ ಸಮನೆನಿ
ಪಾದಿಯಲಿ ಷೋಡಶ ಮಹೀಶರ ಕಥೆಯ ವಿರಚಿಸಿದ (ದ್ರೋಣ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಎಲೈ ಮುನಿವರ್ಯರೇ, ಹಿಂದಿನ ರಾಜರಲ್ಲಿ ಮೃತ್ಯುವಿಗೆ ಕೈವಶರಾದ ರಾಜರಾರು? ಧರ್ಮಜನ ಪ್ರಶ್ನೆಯನ್ನು ಕೇಳಿದ ಪರಮದಯಾಳುವಾದ ವ್ಯಾಸರು ಹದಿನಾರು ರಾಜರ ಕಥೆಯನ್ನು ಹೇಳಿದನು. ಅವರ ಕಥೆಗಳು ಶೋಕವೆಂಬ ಕಾಡನ್ನು ನಿವಾರಿಸುವ ವಡಬಾಗ್ನಿಯಂತಿತ್ತು.

ಅರ್ಥ:
ಮೃತ್ಯು: ಮರಣ; ಕೈವಶ: ಬಂಧನ; ಅರುಹು: ಹೇಳು; ಬೇಹುದು: ಬೇಕು; ಮೇದಿನಿ: ಭೂಮಿ; ಮೇದಿನೀಶ: ರಾಜ; ಬಿನ್ನಹ: ಕೋರಿಕೆ; ನೃಪತಿ: ರಾಜ; ದಯಾಳು: ಕರುಣಾಸಾಗರ; ಅರಸ: ರಾಜ; ಶೋಕ: ದುಃಖ; ಉದಧಿ: ಸಮುದ್ರ; ವಡಬಾಗ್ನಿ: ಸಮದ್ರದಲ್ಲಿನ ಬೆಂಕಿ; ಷೋಡಶ: ಹದಿನಾರು; ಮಹೀಶ: ರಾಜ; ಕಥೆ: ಚರಿತ್ರೆ; ವಿರಚಿಸು: ತಿಳಿಸು, ರಚಿಸು; ಸಮ: ಸಮಾನವಾದ, ಸಾಟಿ; ಆದಿ: ಮೊದಲು;

ಪದವಿಂಗಡಣೆ:
ಆದರ್+ಆ+ ಮೃತ್ಯುವಿನ+ ಕೈವಶ
ವಾದವರನ್+ಎನಗ್+ಅರುಹ +ಬೇಹುದು
ಮೇದಿನೀಶರೊಳೆಂದು +ಬಿನ್ನಹ +ಮಾಡಿದನು+ನೃಪತಿ
ಆ +ದಯಾಳುಗಳ್+ಅರಸನಾ+ ಶೋಕ
ಉದಧಿಗೆ +ವಡಬಾಗ್ನಿ +ಸಮನೆನಿಪ
ಆದಿಯಲಿ +ಷೋಡಶ +ಮಹೀಶರ +ಕಥೆಯ +ವಿರಚಿಸಿದ

ಅಚ್ಚರಿ:
(೧) ಮಹೀಶ, ಮೇದಿನೀಶ, ನೃಪತಿ – ಸಮಾನಾರ್ಥಕ ಪದ

ಪದ್ಯ ೨: ಸೇವಕರು ಯಾರನ್ನು ನೋಡಿದರು?

ಅವನಿಪನ ಖಂಡೆಯವ ನಕುಲನ
ಪವನಸುತನ ಕಠಾರಿಯನು ನೃಪ
ನಿವಹದಾಯುಧತತಿಯನೊಯ್ಯನೆ ತೆಗೆದು ಬೈಚಿಟ್ಟು
ಬವರದಲಿ ಸುತನಳಿದನೋ ಕೌ
ರವರ ಕೈವಶವಾದನೋ ಸಂ
ಭವಿಪ ಹದನೇನೆಂಬ ನೃಪತಿಯ ಕಂಡರೈತಂದು (ದ್ರೋಣ ಪರ್ವ, ೭ ಸಂಧಿ, ೨ ಪದ್ಯ)

ತಾತ್ಪರ್ಯ:
ಧರ್ಮಜನ ಖಡ್ಗ, ಭೀಮ ನಕುಲರ ಕಠಾರಿಗಳು, ಉಳಿದವರ ಆಯುಧಗಳನ್ನು ಮುಚ್ಚಿಟ್ಟರು. ಅಭಿಮನ್ಯುವು ಅಳಿದಣೊ, ಕೌರವರಿಗೆ ಸೆರೆಸಿಕ್ಕನೋ ಏನಾಯಿತು ಎಂದು ಕೊಳ್ಳುತ್ತಿದ್ದ ಧರ್ಮಜನನ್ನು ಕಂಡರು.

ಅರ್ಥ:
ಅವನಿಪ: ರಾಜ; ಖಂಡೆಯ: ಕತ್ತಿ, ಖಡ್ಗ; ಪವನಸುತ: ವಾಯುಪುತ್ರ (ಭೀಮ); ಕಠಾರಿ: ಚೂರಿ, ಕತ್ತಿ; ನೃಪ: ರಾಜ; ನಿವಹ: ಗುಂಪು; ಆಯುಧ: ಶಸ್ತ್ರ; ತತಿ: ಗುಂಪು; ಒಯ್ಯು: ತೆರಳು; ತೆಗೆ: ಹೊರತರು; ಬೈಚಿಟ್ಟು: ಮುಚ್ಚಿಟ್ಟು; ಬವರ: ಯುದ್ಧ; ಸುತ: ಪುತ್ರ; ಅಳಿ: ಮರಣ; ಸಂಭವಿಪ: ಸಾಧ್ಯತೆ, ಶಕ್ಯತೆ; ಹದ: ಸ್ಥಿತಿ; ನೃಪತಿ: ರಾಜ; ಕಂಡು: ನೋಡು; ಐತಂದು: ಬಂದು ಸೇರು;

ಪದವಿಂಗಡಣೆ:
ಅವನಿಪನ +ಖಂಡೆಯವ +ನಕುಲನ
ಪವನಸುತನ+ ಕಠಾರಿಯನು+ ನೃಪ
ನಿವಹದ್+ಆಯುಧ+ತತಿಯನ್+ಒಯ್ಯನೆ +ತೆಗೆದು +ಬೈಚಿಟ್ಟು
ಬವರದಲಿ +ಸುತನಳಿದನೋ +ಕೌ
ರವರ+ ಕೈವಶವಾದನೋ +ಸಂ
ಭವಿಪ +ಹದನೇನೆಂಬ+ ನೃಪತಿಯ +ಕಂಡರ್+ಐತಂದು

ಅಚ್ಚರಿ:
(೧) ಅವನಿಪ, ನೃಪ – ಸಮಾನಾರ್ಥಕ ಪದ

ಪದ್ಯ ೪೩: ದ್ರೋಣನನ್ನು ಎದುರಿಸಲು ಯಾರು ಮುಂದೆ ಬಂದರು?

ಎಲೆ ಯುಧಿಷ್ಠಿರ ಬಿಲ್ಲ ಹಿಡಿ ನರ
ಹುಳುಗಳಿವದಿರ ಕವಿಸಿ ಕಾಲವ
ಕೊಲುವುದೇ ಸಾಕಿನ್ನು ಕೈವಶವಾದೆ ನಿಲೆನುತ
ಅಳವಿಗಿಟ್ಟಣಿಸಲು ಶರಾಳಿಯ
ತುಳುಕಿ ಹೊಕ್ಕನು ಸತ್ಯಜಿತು ದಳ
ವುಳಿಸಿದರು ಚಿತ್ರಕ ಶತಾನೀಕಾದಿ ನಾಯಕರು (ದ್ರೋಣ ಪರ್ವ, ೨ ಸಂಧಿ, ೪೩ ಪದ್ಯ)

ತಾತ್ಪರ್ಯ:
ದ್ರೋಣನು ಗರ್ಜಿಸುತ್ತಾ, ಎಲೇ ಯುಧಿಷ್ಠಿರ, ಬಿಲ್ಲನ್ನು ಹಿಡಿದು ಯುದ್ಧಕ್ಕೆ ಬಾ, ಈ ನರಹುಳುಗಲನ್ನು ನನ್ನ ಮೇಲೆ ಬಿಟ್ಟು ಕಾಲವನ್ನು ವ್ಯಯಮಾಡ ಬೇಡ. ಇನ್ನು ಸಾಕು, ನೀನು ನನಗೆ ಸೆರೆಸಿಕ್ಕೆ ನಿಲ್ಲು ಎನ್ನುತ್ತಾ ಯುದ್ಧಕ್ಕೆ ಬರಲು, ಸತ್ಯಜಿತು, ಚಿತ್ರಕ, ಶತಾನೀಕ ಮೊದಲಾದ ಯೋಧರು ದೋಣನನ್ನು ಇದಿರಿಸಿದರು.

ಅರ್ಥ:
ಬಿಲ್ಲು: ಚಾಪ; ಹಿಡಿ: ಗ್ರಹಿಸು; ನರ: ಮನುಷ್ಯ; ಹುಳು: ಕ್ಷುಲ್ಲಕ; ಇವದಿರು: ಇಷ್ಟುಜನ; ಕವಿಸು: ಮುಸುಕು, ದಟ್ಟವಾಗಿಸು; ಕಾಲ: ಸಮಯ; ಕೊಲು: ಸಾಯಿಸು, ಹಾಳುಮಾಡು; ಸಾಕು: ನಿಲ್ಲಿಸು; ಕೈವಶ: ಬಂಧನ; ನಿಲ್ಲು: ತಡೆ; ಅಳವಿ: ಶಕ್ತಿ, ಯುದ್ಧ; ಇಟ್ಟಣಿಸು: ದಟ್ಟವಾಗು, ಒತ್ತಾಗು; ಶರಾಳಿ: ಬಾಣಗಳ ಗುಂಪು; ತುಳುಕು: ಹೊರ ಚೆಲ್ಲು, ಕದಡು; ಹೊಕ್ಕು: ಸೇರು; ದಳ: ಗುಂಪು; ಉಳಿ: ಬಿಡು, ತೊರೆ; ಆದಿ: ಮೊದಲಾದ; ನಾಯಕ: ಒಡೆಯ;

ಪದವಿಂಗಡಣೆ:
ಎಲೆ +ಯುಧಿಷ್ಠಿರ +ಬಿಲ್ಲ +ಹಿಡಿ +ನರ
ಹುಳುಗಳ್+ಇವದಿರ +ಕವಿಸಿ +ಕಾಲವ
ಕೊಲುವುದೇ +ಸಾಕಿನ್ನು+ ಕೈವಶವಾದೆ +ನಿಲೆನುತ
ಅಳವಿಗ್+ಇಟ್ಟಣಿಸಲು +ಶರಾಳಿಯ
ತುಳುಕಿ +ಹೊಕ್ಕನು +ಸತ್ಯಜಿತು +ದಳ
ವುಳಿಸಿದರು +ಚಿತ್ರಕ +ಶತಾನೀಕಾದಿ +ನಾಯಕರು

ಅಚ್ಚರಿ:
(೧) ಯುಧಿಷ್ಠಿರನನ್ನು ಹಂಗಿಸುವ ಪರಿ – ಎಲೆ ಯುಧಿಷ್ಠಿರ ಬಿಲ್ಲ ಹಿಡಿ ನರಹುಳುಗಳಿವದಿರ ಕವಿಸಿ ಕಾಲವ
ಕೊಲುವುದೇ

ಪದ್ಯ ೩೮: ಅರ್ಜುನನು ಉತ್ತರನಿಗೆ ಹೇಗೆ ಧೈರ್ಯವನ್ನು ನೀಡಿದನು?

ತುಡಕಬಹುದೇ ದೋಷಿ ಹಾವಿನ
ಕೊಡನ ನಿನಗಿವು ಕೈದುಗಳೆ ಬರ
ಸಿಡಿಲ ದಾವಣಿಯಾಗುತಿವೆ ಕೈಯಿಕ್ಕಲಂಜುವೆನು
ಬಿಡಿಸು ಸಾರಥಿಯೆನ್ನನೆನೆ ಫಡ
ನಡುಗದಿರು ಫಲುಗುಣನ ನೆನೆ ಕೈ
ದುಡುಕು ಕೈವಶವಹವು ತೆಗೆ ಸಾಕೆಂದನಾ ಪಾರ್ಥ (ವಿರಾಟ ಪರ್ವ, ೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಕಳ್ಳತನ ಮಾಡಿದವನು ಹಾವಿನ ಕೊಡದಲ್ಲಿ ಕೈಯಿಡಬಹುದೇ? ಇವು ಖಂಡಿತ ಆಯುಧಗಲಲ್ಲಿ, ಬರಸಿಡಿಲುಗಳನ್ನು ಕಟ್ಟಿ ಹಾಕಿರುವ ದಾವಣಿ. ಕೈಯಿಡಲು ಹೆದರುತ್ತೇನೆ, ಎಂದು ಉತ್ತರನು ಹೇಳಿದನು. ಅರ್ಜುನನು ಉತ್ತರನ ಮಾತನ್ನು ಕೇಳಿ, ಹೆದರಬೇಡ ಅರ್ಜುನನನ್ನು ನೆನೆದು ಕೈಯಿಟ್ಟರೆ ಅವೆಲ್ಲ ವಶವಾಗುತ್ತವೆ ಅವನ್ನು ಕೊಡು ಎಂದನು.

ಅರ್ಥ:
ತುಡುಕು: ತೆಗೆದುಕೊಳ್ಳು; ದೋಷಿ: ಆರೋಪಿ; ಹಾವು: ಉರಗ; ಕೊಡ: ಬಿಂದಿಗೆ; ಕೈ: ಹಸ್ತ; ಕೈದು: ಶಸ್ತ್ರ; ಬರಸಿಡಿಲು: ಅಕಾಲದಲ್ಲಿ ಬೀಳುವ ಸಿಡಿಲು, ಆಘಾತ; ದಾವಣಿ:ಕಟ್ಟು, ಬಂಧನ, ಸಮೂಹ; ಕೈ: ಹಸ್ತ; ಅಂಜು: ಹೆದರು; ಬಿಡಿಸು: ತೊರೆ; ಸಾರಥಿ: ಸೂತ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ನಡುಗು: ಅಲ್ಲಾಡು, ಹೆದರು; ಫಲುಗುಣ: ಅರ್ಜುನ; ನೆನೆ: ಜ್ಞಾಪಿಸಿಕೋ; ದುಡುಕು: ವಿಚಾರಣೆ ಮಾಡದೆ ಮುನ್ನುಗ್ಗು; ವಶ: ಅಧೀನ, ಅಂಕೆ; ತೆಗೆ: ಹೊರತರು; ಸಾಕು: ಇನ್ನು ಬೇಡ;

ಪದವಿಂಗಡಣೆ:
ತುಡಕಬಹುದೇ+ ದೋಷಿ +ಹಾವಿನ
ಕೊಡನ +ನಿನಗ್+ಇವು +ಕೈದುಗಳೆ +ಬರ
ಸಿಡಿಲ +ದಾವಣಿಯಾಗುತಿವೆ +ಕೈಯಿಕ್ಕಲ್+ಅಂಜುವೆನು
ಬಿಡಿಸು +ಸಾರಥಿ +ಎನ್ನನ್+ಎನೆ +ಫಡ
ನಡುಗದಿರು+ ಫಲುಗುಣನ +ನೆನೆ +ಕೈ
ದುಡುಕು +ಕೈವಶವಹವು+ ತೆಗೆ+ ಸಾಕೆಂದನಾ +ಪಾರ್ಥ

ಅಚ್ಚರಿ:
(೧) ಎನ್ನನೆನೆ, ನೆನೆ – ಪದಗಳ ಬಳಕೆ
(೨) ಉಪಮಾನದ ಪ್ರಯೋಗ – ತುಡಕಬಹುದೇ ದೋಷಿ ಹಾವಿನ ಕೊಡನ