ಆದಡಾ ಭೀಷ್ಮಾದಿ ಸುಭಟರು
ಕಾದಿ ನೆಗ್ಗಿದ ಕಳನ ಹೊಗುವಡೆ
ಕೈದುಕಾರರ ಕಾಣೆನೀ ಮಾದ್ರೇಶ ಹೊರತಾಗಿ
ಈ ದುರಂತರ ಸಮರಜಯ ನಿನ
ಗಾದಡೊಳ್ಳಿತು ಶಲ್ಯನಲಿ ಸಂ
ಪಾದಿಸಿರೆ ಸೇನಾಧಿಪತ್ಯವನರಸ ಕೇಳೆಂದ (ಶಲ್ಯ ಪರ್ವ, ೧ ಸಂಧಿ, ೨೩ ಪದ್ಯ)
ತಾತ್ಪರ್ಯ:
ಕೃಪಾಚಾರ್ಯರು ಮುಂದುವರೆಸುತ್ತಾ, ಹಾಗಾದರೆ ಭೀಷ್ಮನೇ ಮೊದಲಾದ ಸುಭಟರು ಕುಸಿದ ರಣರಂಗವನ್ನು ಹೊಗಲು ಶಲ್ಯನನ್ನು ಬಿಟ್ಟರೆ ಇನ್ನಾವ ಆಯುಧಪಾಣಿಗಳೂ ನನಗೆ ಕಾಣುತ್ತಿಲ್ಲ. ಈ ಕೊನೆಯಿಲ್ಲದ ಯುದ್ಧದಲ್ಲಿ ಶಲ್ಯನಿಂದ ನೀನು ಜಯಿಸಿದರೆ ಒಳ್ಳೆಯದು, ಅವನಿಗೇ ಸೇನಾಧಿಪತ್ಯವನ್ನು ಕೊಡು ಎಂದು ಹೇಳಿದರು.
ಅರ್ಥ:
ಸುಭಟ: ಪರಾಕ್ರಮಿ; ಕಾದು: ಹೋರಾಡು; ನೆಗ್ಗು: ಕುಗ್ಗು, ಕುಸಿ; ಕಳ: ರಣರಂಗ; ಹೊಗು: ತೆರಳು; ಕೈದುಕಾರ: ಆಯುಧವನ್ನು ಹಿಡಿದವ; ಕಾಣು: ತೋರು; ಹೊರತು: ಅಲ್ಲದೆ, ವಿನಾ; ದುರಂತ: ದುರ್ಘಟನೆ; ಸಮರ: ಯುದ್ಧ; ಜಯ: ಗೆಲುವು; ಒಳ್ಳಿತು: ಸೂಕ್ತವಾದುದು; ಸಂಪಾದಿಸು: ಪಡೆ; ಅಧಿಪತ್ಯ: ಒಡೆಯತನ; ಅರಸ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ಆದಡ್+ಆ+ ಭೀಷ್ಮಾದಿ +ಸುಭಟರು
ಕಾದಿ +ನೆಗ್ಗಿದ +ಕಳನ +ಹೊಗುವಡೆ
ಕೈದುಕಾರರ +ಕಾಣೆನ್+ಈ+ ಮಾದ್ರೇಶ +ಹೊರತಾಗಿ
ಈ +ದುರಂತರ+ ಸಮರ+ಜಯ +ನಿನಗ್
ಆದಡ್+ಒಳ್ಳಿತು +ಶಲ್ಯನಲಿ +ಸಂ
ಪಾದಿಸಿರೆ +ಸೇನಾಧಿಪತ್ಯವನ್+ಅರಸ +ಕೇಳೆಂದ
ಅಚ್ಚರಿ:
(೧) ಆದಡ್ – ೧, ೫ ಸಾಲಿನ ಮೊದಲ ಪದ
(೨) ಕೈದುಕಾರ, ಸುಭಟ – ಸಾಮ್ಯಾರ್ಥ ಪದ