ಪದ್ಯ ೬೧: ಏತಕ್ಕಾಗಿ ಕರ್ಣನು ಧರ್ಮರಾಯನನ್ನು ಕೊಲ್ಲಲಿಲ್ಲ?

ಕೊಲುವಡವ್ವೆಗೆ ಕೊಟ್ಟ ಮಾತಿಂ
ಗಳುಕುವೆನು ನೀ ಹೋಗು ಹರಿಬಕೆ
ಮಲೆವರಾದರೆ ಕಳುಹು ಭೀಮಾರ್ಜುನರನಾಹವಕೆ
ಉಲುಕಿದರೆ ನಿನ್ನಾಣೆಯೆನುತ
ಗ್ಗಳಿಸಿ ನೃಪತಿಯ ಕೇಡನುಡಿದು ಪರ
ಬಲವ ಬರಹೇಳೆನುತ ನಿಂದನು ನುಡಿಸಿ ನಿಜಧನುವ (ಕರ್ಣ ಪರ್ವ, ೧೧ ಸಂಧಿ, ೬೧ ಪದ್ಯ)

ತಾತ್ಪರ್ಯ:
ಕರ್ಣನು ಯುಧಿಷ್ಠಿರನನ್ನು ಮತ್ತೂ ಹೀಯಾಳಿಸುತ್ತಾ, ನಿನ್ನನ್ನು ಕೊಲ್ಲುತ್ತಿದ್ದೆ ಆದರೆ ತಾಯಿಗೆ ಕೊಟ್ಟ ಮಾತಿಗೆ ಅಳುಕುತ್ತೇನೆ. ನೀನು ಹೋಗಿ ನಿನ್ನ ಪರವಾಗಿ ಭೀಮಾರ್ಜುನರನ್ನು ಯುದ್ಧಕ್ಕೆ ಕಳುಹಿಸು, ಸ್ವಲ್ಪ ಮಿಸುಕಿದರೂ ನಿನ್ನಾಣೆ ಎಂದು ಧರ್ಮಜನನ್ನು ಹೀಯಾಳಿಸಿ, ಜರಿದು, ಶತ್ರು ಸೈನ್ಯವು ಯುದ್ಧಕ್ಕೆ ಬರಹೇಳು ಎಂದು ಹೇಳುತ್ತಾ ತನ್ನ ಧನಸ್ಸನ್ನು ಹೆದೆಯೇರಿಸಿ ನಿಂತನು.

ಅರ್ಥ:
ಕೊಲು: ಕೊಲ್ಲು, ಸಾವು; ಅವ್ವೆ: ಅಮ್ಮ; ಕೊಟ್ಟು: ನೀಡು; ಮಾತು: ವಾಣಿ, ಆಣೆ; ಅಳುಕು: ಹೆದರು; ಹೋಗು: ತೆರಳು; ಹರಿಬ: ಕಾಳಗ, ಯುದ್ಧ; ಕಳುಹು: ಕಳಿಸು; ಆಹವ: ಕಾಳಗ; ಉಲುಕು: ಅಲ್ಲಾಡು; ಆಣೆ: ಪ್ರಮಾಣ; ಅಗ್ಗಳಿಕೆ: ಶ್ರೇಷ್ಠತೆ; ನೃಪತಿ: ರಾಜ; ಕೆಡೆ:ಹಾಳು; ನುಡಿ: ಮಾತು; ಕೆಡೆನುಡಿ: ಹೀಯಾಳಿಸುವ ಮಾತು; ಪರಬಲ: ವೈರಿಯ ಸೈನ್ಯ; ಬರಹೇಳು: ಕರೆ; ನುಡಿಸಿ: ಮಾತನಾಡಿಸಿ, ಪ್ರಯೋಗಿಸು; ಧನು: ಧನಸ್ಸು, ಬಿಲ್ಲು;

ಪದವಿಂಗಡಣೆ:
ಕೊಲುವಡ್+ಅವ್ವೆಗೆ +ಕೊಟ್ಟ+ ಮಾತಿಂಗ್
ಅಳುಕುವೆನು +ನೀ +ಹೋಗು +ಹರಿಬಕೆ
ಮಲೆವರಾದರೆ+ ಕಳುಹು +ಭೀಮಾರ್ಜುನರನ್+ಆಹವಕೆ
ಉಲುಕಿದರೆ+ ನಿನ್ನಾಣೆ+ಎನುಗ್
ಅಗ್ಗಳಿಸಿ +ನೃಪತಿಯ +ಕೇಡನುಡಿದು +ಪರ
ಬಲವ +ಬರಹೇಳೆನುತ+ ನಿಂದನು +ನುಡಿಸಿ +ನಿಜ+ಧನುವ

ಅಚ್ಚರಿ:
(೧) ಆಹವ, ಹರಿಬ; ಆಣೆ, ಕೊಟ್ಟಮಾತು – ಸಮನಾರ್ಥಕ ಪದ
(೨) ನ ಕಾರದ ತ್ರಿವಳಿ ಪದ – ನಿಂದನು ನುಡಿಸಿ ನಿಜಧನುವ