ನೆರೆ ಪರಿಚ್ಛೇದಿಸಿದ ಬಲ ಮು
ಕ್ಕುರಿಕಿತೋ ನಿಜಸೈನ್ಯಸಾಗರ
ಬರತುದೋ ಬಲುಗೈಗಳೆದೆಗಳ ಕೆಚ್ಚು ಕರಗಿತಲಾ
ಮುರಿದು ಬರುತಿದೆ ಸೃಂಜಯರು ಕೈ
ಮುರಿದರೇ ಪಾಂಚಾಲಭಟರೆಂ
ದೊರಲಿದುದು ಮಂತ್ರಿಗಳು ರಾಯನ ರಥದ ಬಳಸಿನಲಿ (ಗದಾ ಪರ್ವ, ೧ ಸಂಧಿ, ೩೦ ಪದ್ಯ)
ತಾತ್ಪರ್ಯ:
ದೃಢ ನಿರ್ಧಾರದಿಂದ ಶತ್ರು ಸೈನ್ಯವು ಮುತ್ತಲು ನಮ್ಮ ವೀರರ ಕೆಚ್ಚು ಕರಗಿಹೋಗಿ ನಮ್ಮ ಸೈನ್ಯಸಾಗರ ಬತ್ತುತ್ತಿದೆ. ಸೃಂಜಯರು ಪಾಂಚಾಲರು ಸೋತು ಬರುತ್ತಿದ್ದಾರೆ ಎಂದು ಧರ್ಮಜನ ರಥದ ಸುತ್ತಲಿದ್ದ ಮಂತ್ರಿಗಳು ಕೂಗಿಕೊಂಡರು.
ಅರ್ಥ:
ನೆರೆ: ಗುಂಪು; ಪರಿಚ್ಛೇದ: ಕತ್ತರಿಸುವುದು; ಬಲ: ಶಕ್ತಿ; ಮುಕ್ಕುರಿಸು: ಆತುರ ಪಡು; ನಿಜ: ದಿಟ, ತನ್ನ; ಸೈನ್ಯ: ಸೇನೆ; ಸಾಗರ: ಶರಧಿ; ಬರ: ಕ್ಷಾಮ, ಅಭಾವ; ಬಲು: ಬಹಳ; ಕೈ: ಹಸ್ತ; ಎದೆ: ಉರು; ಕೆಚ್ಚು: ಧೈರ್ಯ, ಸಾಹಸ; ಕರಗು: ಕಡಿಮೆಯಾಗು; ಮುರಿ: ಸೀಳು; ಭಟ: ಸೈನ್ಯ; ಒರಲು: ಅರಚು, ಕೂಗಿಕೊಳ್ಳು; ಮಂತ್ರಿ: ಸಚಿವ; ರಾಯ: ರಾಜ; ರಥ: ಬಂಡಿ; ಬಳಸು: ಆವರಿಸುವಿಕೆ, ಸುತ್ತುವರಿಯುವಿಕೆ;
ಪದವಿಂಗಡಣೆ:
ನೆರೆ +ಪರಿಚ್ಛೇದಿಸಿದ+ ಬಲ +ಮು
ಕ್ಕುರಿಕಿತೋ +ನಿಜಸೈನ್ಯಸಾಗರ
ಬರತುದೋ+ ಬಲು+ಕೈಗಳ್+ಎದೆಗಳ+ ಕೆಚ್ಚು +ಕರಗಿತಲಾ
ಮುರಿದು +ಬರುತಿದೆ +ಸೃಂಜಯರು +ಕೈ
ಮುರಿದರೇ +ಪಾಂಚಾಲ+ಭಟರೆಂದ್
ಒರಲಿದುದು +ಮಂತ್ರಿಗಳು +ರಾಯನ +ರಥದ +ಬಳಸಿನಲಿ
ಅಚ್ಚರಿ:
(೧) ಶಕ್ತಿಕುಂದಿತು ಎಂದು ಹೇಳುವ ಪರಿ – ನಿಜಸೈನ್ಯಸಾಗರ ಬರತುದೋ ಬಲುಗೈಗಳೆದೆಗಳ ಕೆಚ್ಚು ಕರಗಿತಲಾ